ಹೆತ್ತವರ ಏಕೈಕ ಆಸರೆ ಇನ್ನಿಲ್ಲವಾಗಿದ್ದ ; ಪೊಲೀಸ್ ಆಗೋ ಕನಸು ಹೊತ್ತು ಹೋಮ್ ಗಾರ್ಡ್ ಆಗಿದ್ದ ! ದಿಕ್ಕೆಟ್ಟ ಕುಟುಂಬಕ್ಕೆ ಪೊಲೀಸರ ಅಭಯ!

08-07-21 06:01 pm       Mangalore Correspondent   ಕರಾವಳಿ

ಮೊನ್ನೆ ಜೂನ್ 30ಕ್ಕೆ ಆತನ ಕೋವಿಡ್ ಕರ್ತವ್ಯವೂ ಮುಗಿದು ಮರಳಿ ಆತನ ಫೋಟೋ ಸ್ಟುಡಿಯೋ ಕೆಲಸಕ್ಕೆ ಸೇರಿಕೊಳ್ಳುತ್ತಿದ್ದ. ಆದರೆ, ಜುಲೈ 29ರಂದು ರಾತ್ರಿ ಪಾಳಿಯ ಕರ್ತವ್ಯ ಮುಗಿಸಿ, ಠಾಣೆಯಿಂದ ನಿರ್ಗಮಿಸಿದ್ದ ರಾಕೇಶ್ ಮರಳಿ ಬಾರದ ಲೋಕಕ್ಕೆ ಪಯಣಿಸಿದ್ದಾನೆ.

ಮಂಗಳೂರು, ಜುಲೈ 8: ಆತನ ಹೆಸರು ರಾಕೇಶ್. ಕೋವಿಡ್ ಸಮಯದಲ್ಲಿ ಕರ್ತವ್ಯಕ್ಕೆಂದು ಮೂಲ್ಕಿ ಠಾಣೆಯಲ್ಲಿ ಹೋಮ್ ಗಾರ್ಡ್ ಆಗಿ ಸೇರಿಕೊಂಡಿದ್ದ ಯುವಕ. ಮೊನ್ನೆ ಜೂನ್ 30ಕ್ಕೆ ಆತನ ಕೋವಿಡ್ ಕರ್ತವ್ಯವೂ ಮುಗಿದು ಮರಳಿ ಆತನ ಫೋಟೋ ಸ್ಟುಡಿಯೋ ಕೆಲಸಕ್ಕೆ ಸೇರಿಕೊಳ್ಳುತ್ತಿದ್ದ. ಆದರೆ, ಜುಲೈ 29ರಂದು ರಾತ್ರಿ ಪಾಳಿಯ ಕರ್ತವ್ಯ ಮುಗಿಸಿ, ಠಾಣೆಯಿಂದ ನಿರ್ಗಮಿಸಿದ್ದ ರಾಕೇಶ್ ಮರಳಿ ಬಾರದ ಲೋಕಕ್ಕೆ ಪಯಣಿಸಿದ್ದಾನೆ.

ಹೌದು.. ಅಂದು ಬೆಳಗ್ಗೆ ಠಾಣೆಯಿಂದ ಬೇಗನೇ ನಿರ್ಗಮಿಸಿದ್ದ ರಾಕೇಶ್, ಉಡುಪಿಯ ತಂಗಿ ಮನೆಗೆಂದು ಕಾರಿನಲ್ಲಿ ಹೊರಟಿದ್ದ. ಆದರೆ ವಿಧಿಯಾಟವೇ ಬೇರೆಯಾಗಿತ್ತು. ತಾನೇ ಚಲಾಯಿಸುತ್ತಿದ್ದ ಕಾರು ಬೆಳಗ್ಗಿನ ಮಬ್ಬು ಬೆಳಕಿನಲ್ಲಿ ಟ್ಯಾಂಕರ್ ಹಿಂಬದಿಯಾಗಿ ಡಿಕ್ಕಿಯಾಗಿ ತೀವ್ರ ಗಾಯಗೊಂಡು ಆಸ್ಪತ್ರೆ ಸೇರಿದ್ದ. ಅದೇ ದಿನ ಸಂಜೆಗೆ ದುರಂತ ಸಾವು ಕಂಡಿದ್ದ. ರಾಕೇಶ್ ಹೆತ್ತವರ ಪಾಲಿಗೆ ಒಬ್ಬನೇ ಮಗ. ಇನ್ನೊಬ್ಬ ಮಗಳು ಮದುವೆಯಾಗಿ ಗಂಡನ ಮನೆ ಸೇರಿದ್ದಾಳೆ. ಬಡ ಹೆತ್ತವರ ಪಾಲಿಗೆ ಬೆಳಕಾಗಿದ್ದ ರಾಕೇಶ್ ಸಾವು ಮನೆಯವರನ್ನು ದಿಕ್ಕೆಡುವಂತೆ ಮಾಡಿದೆ.

ಮನೆಯ ಪರಿಸ್ಥಿತಿ ಕಂಡು ಮರುಗಿದ ಮಂಗಳೂರಿನ ಪೊಲೀಸರು ಈಗ ಹೆತ್ತವರಿಗೆ ಆಸರೆಯಾಗಲು ಮುಂದಾಗಿದ್ದು ವಿವಿಧ ಪೊಲೀಸ್ ಠಾಣೆಗಳ ಸಿಬಂದಿ ಸೇರಿ 5.26 ಲಕ್ಷ ರೂಪಾಯಿ ಹಣ ಸಂಗ್ರಹ ಮಾಡಿದ್ದಾರೆ. ಒಟ್ಟು ಸೇರಿದ ಹಣವನ್ನು ಇಂದು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಮೂಲ್ಕಿಯಲ್ಲಿರುವ ರಾಕೇಶ್ ಮನೆಗೆ ತೆರಳಿ, ಹೆತ್ತವರಿಗೆ ಹಸ್ತಾಂತರ ಮಾಡಿದ್ದಾರೆ.

ರಾಕೇಶ್ ಈ ಹಿಂದೆ ಶಿವಮೊಗ್ಗದಲ್ಲಿ ಮಾಲ್ ಒಂದರಲ್ಲಿ ಸುಪರ್ ವೈಸರ್ ಆಗಿದ್ದ. ಈ ನಡುವೆ, ಪಣಂಬೂರು ಠಾಣೆಯಲ್ಲಿ ಹೋಮ್ ಗಾರ್ಡ್ ಆಗಿ ಕೆಲ ಸಮಯ ಕರ್ತವ್ಯ ಮಾಡಿದ್ದ. ಆನಂತರ ದುಬೈಗೆ ತೆರಳಿ ಕೆಲಸ ಮಾಡಿದ್ದ ರಾಕೇಶ್ ಕಳೆದ ವರ್ಷ ಲಾಕ್ಡೌನ್ ಆದಬಳಿಕ ಊರಲ್ಲೇ ಉಳಿದಿದ್ದ. ಮೂಲ್ಕಿಯಲ್ಲಿ ಫೋಟೋ ಸ್ಟುಡಿಯೋದಲ್ಲಿ ಕೆಲಸ ಮಾಡುತ್ತಿದ್ದ ರಾಕೇಶನಿಗೆ ಪೊಲೀಸ್ ಕೆಲಸದ ಬಗ್ಗೆ ಭಾರೀ ಆಸಕ್ತಿಯಿತ್ತು. ಹೀಗಾಗಿ ಈ ಬಾರಿ ಲಾಕ್ಡೌನ್ ಸಂದರ್ಭದಲ್ಲಿ ಕೋವಿಡ್ ಕರ್ತವ್ಯಕ್ಕೆಂದು ಮಂಗಳೂರಿನಲ್ಲಿ ಕರೆದಿದ್ದ ಹೋಮ್ ಗಾರ್ಡ್ ಕರ್ತವ್ಯಕ್ಕೆ ರಾಕೇಶ್ ಸೇರಿದ್ದ. ಮೂರು ತಿಂಗಳ ಕೆಲಸದ ಅವಧಿ ಮುಗಿಯಲು ಒಂದು ದಿನ ಇರುವಾಗಲೇ ಡ್ಯೂಟಿ ಮುಗಿಸಿ ತೆರಳುವಷ್ಟರಲ್ಲಿ ರಾಕೇಶ್ ಇನ್ನಿಲ್ಲವಾಗಿದ್ದಾನೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಕಮಿಷನರ್ ಶಶಿಕುಮಾರ್, ಹೋಮ್ ಗಾರ್ಡ್ ಅಂದ್ರೆ ಪೊಲೀಸ್ ಇಲಾಖೆಯಲ್ಲಿ ಲೋವರ್ ಗ್ರೇಡ್. ಆದರೆ, ಸ್ವಯಂಪ್ರೇರಿತರಾಗಿ ಬಂದು ಪೊಲೀಸ್ ಕೆಲಸ ಮಾಡುವ ಇವರನ್ನು ನಾವು ಗೌರವಿಸಬೇಕು. ರಾಕೇಶ್ ಕಷ್ಟದಲ್ಲಿ ಬೆಳೆದು ಬಂದಿದ್ದ ಯುವಕ. ಮನೆಯಲ್ಲಿ ಏಕೈಕ ಮಗನಾಗಿದ್ದ. ತಂದೆ ಮುಂಬೈನಲ್ಲಿ ಏನೋ ಸಣ್ಣ ಕೆಲಸ ಮಾಡುತ್ತಿದ್ದಾರೆ. ಬಡ ಕುಟುಂಬಕ್ಕೆ ಪೊಲೀಸರು ನೆರವಾಗಿದ್ದು ದಿಟ್ಟ ಕೆಲಸ ಮಾಡಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೆ, ಈ ಹಣವನ್ನು ತಾಯಿ ಹೆಸರಲ್ಲಿ ಡಿಪಾಸಿಟ್ ಮಾಡಿಸಿ, ಹೆತ್ತವರ ಹೆಸರಲ್ಲಿ ಪ್ರತ್ಯೇಕ ಮೆಡಿಕ್ಲೈಮ್ ಇನ್ ಶೂರೆನ್ಸ್ ಮಾಡಿಸುವಂತೆ ಮೂಲ್ಕಿ ಠಾಣಾಧಿಕಾರಿಗೆ ಕಮಿಷನರ್ ಸೂಚನೆ ನೀಡಿದ್ದಾರೆ.

ಈ ಹಿಂದೆಯೂ ಆಸರೆಯಾಗಿದ್ದ ಕಮಿಷನರ್

ಶಶಿಕುಮಾರ್ ಈ ಹಿಂದೆ ಗುಲ್ಬರ್ಗದಲ್ಲಿ ಎಸ್ಪಿಯಾಗಿದ್ದ ವೇಳೆ ಪ್ರೊಬೇಶನರಿಯಲ್ಲಿದ್ದ ಪೊಲೀಸ್ ಸಿಬಂದಿಯೊಬ್ಬ ಮೃತಪಟ್ಟಾಗ ಆತನ ಪರ ನಿಂತಿದ್ದು ದೊಡ್ಡ ಸುದ್ದಿಯಾಗಿತ್ತು. ಪ್ರೊಬೇಶನರಿಯಲ್ಲಿದ್ದ ಕಾರಣಕ್ಕೆ ಆತನಿಗೆ ಪೊಲೀಸ್ ಗೌರವ ಕೊಡಬೇಕಿಲ್ಲ ಎಂದು ಅಲ್ಲಿನ ಇತರ ಅಧಿಕಾರಿಗಳು ನಿಶ್ಚಯಿಸಿದ್ದರು. ಆದರೆ, ಪೊಲೀಸ್ ಇಲಾಖೆ ಸೇರಿದ ಬಳಿಕ ಆತನೂ ಪೊಲೀಸರ ಕುಟುಂಬದ ಸದಸ್ಯ ಎಂದು ಮೇಲಧಿಕಾರಿಗಳ ಬಳಿ ಮಾತನಾಡಿ ಶಶಿಕುಮಾರ್ ಯುವಕನ ಶವಕ್ಕೂ ಪೊಲೀಸ್ ಗೌರವ ಮತ್ತು ಇತರ ಸವಲತ್ತು ಸಿಗುವಂತೆ ಮಾಡಿದ್ದರು. ಅಲ್ಲದೆ, ಯುವಕನ ಕುಟುಂಬಕ್ಕೆ ದಾನಿಗಳಿಂದ ಮತ್ತು ಪೊಲೀಸ್ ಇಲಾಖೆಯಿಂದಲೇ 62 ಲಕ್ಷ ರೂ. ನೆರವು ಸಂಗ್ರಹಿಸಿ ಕೊಟ್ಟಿದ್ದು ಎರಡು ವರ್ಷಗಳ ಹಿಂದೆ ಮುಖ್ಯಮಂತ್ರಿಯ ಗಮನ ಸೆಳೆದಿತ್ತು. ಆಗಿನ ಸಿಎಂ ಕುಮಾರಸ್ವಾಮಿ ಈ ಬಗ್ಗೆ ಟ್ವೀಟ್ ಮಾಡಿ ಎಸ್ಪಿ ಕಾರ್ಯದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದರು. 

Mangalore Police donates 5.26 Lakhs to Home Gaurd family who died of road accident in Mulki. Commissioner of police Shahsi Kumar along with his team visited his residence consoled their family and handed over the collected cash and donated it to their family.