ಸಿಎಂ ಯಾರೆಂದು ಹೇಳೋದು ಯೂತ್ ಕಾಂಗ್ರೆಸ್ ಕೆಲಸವಲ್ಲ ; ರಕ್ಷಾ ರಾಮಯ್ಯ ಟಾಂಗ್

13-07-21 02:37 pm       Mangalore Correspondent   ಕರಾವಳಿ

ಮುಂದಿನ ಸಿಎಂ ಯಾರೆಂದು ಹೇಳೋದು ಯೂತ್ ಕಾಂಗ್ರೆಸ್ ಕೆಲಸವಲ್ಲ.‌ ಪಕ್ಷ ಸಂಘಟನೆ ಅಷ್ಟೇ ಯೂತ್ ಕಾಂಗ್ರೆಸ್ ಜವಾಬ್ದಾರಿ ಎಂದು ಯುವ ಕಾಂಗ್ರೆಸ್ ರಾಜ್ಯಾದ್ಯಕ್ಷ ರಕ್ಷಾರಾಮಯ್ಯ ಹೇಳಿದ್ದಾರೆ. ‌

ಮಂಗಳೂರು, ಜುಲೈ 13: ಮುಂದಿನ ಸಿಎಂ ಯಾರೆಂದು ಹೇಳೋದು ಯೂತ್ ಕಾಂಗ್ರೆಸ್ ಕೆಲಸವಲ್ಲ.‌ ಪಕ್ಷ ಸಂಘಟನೆ ಅಷ್ಟೇ ಯೂತ್ ಕಾಂಗ್ರೆಸ್ ಜವಾಬ್ದಾರಿ. ನಾನು ಅದನ್ನು ಮಾಡುತ್ತಿದ್ದೇನೆ ಎಂದು ಯುವ ಕಾಂಗ್ರೆಸ್ ರಾಜ್ಯಾದ್ಯಕ್ಷ ರಕ್ಷಾರಾಮಯ್ಯ ಹೇಳಿದ್ದಾರೆ. ‌

ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿದ ರಕ್ಷಾರಾಮಯ್ಯರಿಗೆ ಮುಂದಿನ ಸಿಎಂ ಡಿಕೆಶಿ ಎಂದು ಮಹಮ್ಮದ್ ನಲಪ್ಪಾಡ್ ಹೇಳಿದ್ದಾರಲ್ವಾ ಎಂಬ ಪ್ರಶ್ನೆಯೇ ಪ್ರಮುಖವಾಗಿತ್ತು. ಈ ಪ್ರಶ್ನೆಗೆ ಉತ್ತರಿಸುವುದೇ ರಕ್ಷಾ ರಾಮಯ್ಯರಿಗೆ ಸಾಕು ಸಾಕಾಗಿತ್ತು. ಡಿ.ಕೆ. ಶಿವಕುಮಾರ್ ಮುಂದಿನ ಸಿಎಂ ಎಂದು ಮಹಮ್ಮದ್ ನಲಪಾಡ್ ಬಾಯ್ತಪ್ಪಿ ಹೇಳಿರಬೇಕು. ಅದು ಯುವ ಕಾಂಗ್ರೆಸ್ ಹೇಳಿಕೆಯಲ್ಲ. ಯೂತ್ ಕಾಂಗ್ರೆಸ್ ಅದನ್ನು ಹೇಳೋಕೂ ಆಗುವುದಿಲ್ಲ. ಯಾರು ಸಿಎಂ ಆಗಬೇಕೆಂದು ನಾಯಕರು ನಿರ್ಧರಿಸುತ್ತಾರೆ ಎಂದು ಹೇಳಿದರು. 

ಯುವ ಕಾಂಗ್ರೆಸ್ ನ ಮುಖ್ಯ ಕಾರ್ಯ ಪಕ್ಷ ಸಂಘಟಿಸುವುದು. ನಾಯಕರಿಗೆ ಬೆಂಬಲ ನೀಡುವುದು. ಯಾರು ಮುಂದಿನ ಮುಖ್ಯಮಂತ್ರಿ ಎನ್ನುವ ವಿಚಾರ ಯುವ ಕಾಂಗ್ರೆಸ್ ನಿರ್ಧರಿಸುವುದಲ್ಲ. ಅದರ ಅಗತ್ಯವೂ ಇಲ್ಲ ಎಂದರು. 

ನಿಮ್ಮನ್ನು ಡಿಸೆಂಬರ್ ವೇಳೆಗೆ ಬದಲಾಯಿಸುತ್ತಾರಂತೆ ಎಂಬ ಪ್ರಶ್ನೆಗೆ ಉತ್ತರಿಸಿದ ರಕ್ಷಾ ರಾಮಯ್ಯ, ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಕೊಟ್ಟಿದ್ದಾರೆ, ಅದನ್ನು ನಿಭಾಯಿಸುತ್ತೇನೆ. ಅದು ಎಷ್ಟು ಅವಧಿಗೆ ಎನ್ನುವುದು ಮುಖ್ಯ. ಒಂದು ತಿಂಗಳು ಕೊಟ್ಟರೂ, 6 ತಿಂಗಳು ಕೊಟ್ಟರೂ ಅಷ್ಟೇ. ಒಂದು ವರ್ಷ ಕೊಟ್ಟರೂ  ನಿಭಾಯಿಸುತ್ತೇನೆ. ನಮ್ಮ ಜವಾಬ್ದಾರಿಯನ್ನು ನಿರ್ವಹಣೆ ಮಾಡುವುದಷ್ಟೇ ನಮ್ಮ ಕೆಲಸ.‌

ರಾಜ್ಯ ಯುವ ಕಾಂಗ್ರೆಸ್ ಸಂಘಟನೆಯಲ್ಲಿ ಯಾವುದೇ ಬಣ ರಾಜಕೀಯ ಇಲ್ಲ. ನಾನು ಮತ್ತು ನಲಪಾಡ್ ಒಟ್ಟಿಗೆ ಇದ್ದೇವೆ. ನಾವು 12 ವರ್ಷದಿಂದ ಗೆಳೆಯರಾಗಿದ್ದೇವೆ. ಯುವ ಕಾಂಗ್ರೆಸ್ ನಲ್ಲಿ ಪ್ರತಿಯೊಬ್ಬರಿಗೂ ಅಧಿಕಾರ ಸಿಗುವಂತಾಗಬೇಕು. ಹಾಗಾಗಿ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ವರ್ಷಕ್ಕೆ ಒಬ್ಬರಂತೆ ನೇಮಿಸುವ ಮೂಲಕ ಎಲ್ಲರಿಗೂ ಅವಕಾಶ ಸಿಗುವಂತಾಗಬೇಕು ಎಂದು ಹೇಳಿದರು.‌

ಡಿ.ಕೆ ಶಿವಕುಮಾರ್ ಕಾರ್ಯಕರ್ತನಿಗೆ ಹಲ್ಲೆ ಮಾಡಿದ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ, ಅದು ನಮ್ಮ ಆತಂರಿಕ ವಿಚಾರ, ನಾವೆಲ್ಲ ಫ್ಯಾಮಿಲಿ ಮೆಂಬರ್ಸ್. ಅದರಲ್ಲಿ ಯಾವುದೇ ಗೊಂದಲ ಇಲ್ಲ. ಪಕ್ಷದ ನಾಯಕರು ಒಟ್ಟು ಸೇರಿ ಎಲ್ಲವನ್ನೂ ಸರಿ ಮಾಡುತ್ತಾರೆ ಎಂದರು ರಕ್ಷಾ ರಾಮಯ್ಯ.

ಸುದ್ದಿಗೋಷ್ಟಿಯಲ್ಲಿ ಕಾರ್ಯಕರ್ತರದ್ದೇ ಕಾರುಬಾರು 

ಯೂತ್ ಕಾಂಗ್ರೆಸ್ ಸುದ್ದಿಗೋಷ್ಟಿಯಲ್ಲಿ ಕಾರ್ಯಕರ್ತರದ್ದೇ ಕಾರುಬಾರು ಆಗಿತ್ತು. ಅತ್ತ ರಕ್ಷಾ ರಾಮಯ್ಯ ಸುದ್ದಿಗೋಷ್ಟಿ ನಡೆಸಬೇಕಾದರೆ, ಇತ್ತ ಕಾರ್ಯಕರ್ತರು ಒಳಗೆ ಬಂದು ಸೇರಿದ್ದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಸೂಚಿಸಿದರೂ, ಹೊರಗೆ ಹೋಗಲಿಲ್ಲ. ಕಾರ್ಯಕರ್ತರ ವರ್ತನೆ ಪತ್ರಕರ್ತರಿಗೆ ಇರಿಸು ಮುರಿಸು ಆಗಿತ್ತು. ಸುದ್ದಿಗೋಷ್ಟಿ ನಡೆಯುವ ಕೊಠಡಿಯ ಹೊರಭಾಗದಲ್ಲೂ ನೂರಾರು ಕಾರ್ಯಕರ್ತರು ಸೇರಿದ್ದರು. ಯಾವುದೇ ಕೋವಿಡ್ ಅಂತರ ಇಲ್ಲದೆ ಕಾರ್ಯಕರ್ತರು ಮುಗಿಬಿದ್ದು ಸುದ್ದಿಗೋಷ್ಟಿಗೆ ಪತ್ರಕರ್ತರು ಒಳಹೊಕ್ಕುವುದೇ ಕಷ್ಟವಾಗಿತ್ತು.

Naming the future CM is not youth congress work slams  Raksha Ramaiaha in Mangalore.