3ನೇ ಅಲೆ ಭೀತಿ ; ಕೇರಳ ಗಡಿಯಲ್ಲಿ ಮತ್ತೆ ಕಟ್ಟುನಿಟ್ಟು, 16 ಕಡೆಯೂ ಚೆಕ್ ಪೋಸ್ಟ್ ; ತಪಾಸಣೆ ಇಲ್ಲದೆ ಪ್ರವೇಶ ಇಲ್ಲ !

13-07-21 05:39 pm       Mangalore Correspondent   ಕರಾವಳಿ

ರಾಜ್ಯದಲ್ಲಿ ಕೊರೊನಾ ಮೂರನೇ ಅಲೆ ಎದುರಾಗುವ ಭೀತಿ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಕೇರಳದ ಕಾಸರಗೋಡಿಗೆ ಹೊಂದಿಕೊಂಡಿರುವ 16 ಗಡಿಗಳಲ್ಲಿಯೂ ಹೆಚ್ಚುವರಿ ಚೆಕ್ ಪೋಸ್ಟ್ ಹಾಕಲಾಗಿದೆ.

ಮಂಗಳೂರು, ಜುಲೈ 13: ರಾಜ್ಯದಲ್ಲಿ ಕೊರೊನಾ ಮೂರನೇ ಅಲೆ ಎದುರಾಗುವ ಭೀತಿ ಹಿನ್ನೆಲೆಯಲ್ಲಿ ಕೇರಳ ಮತ್ತು ಮಹಾರಾಷ್ಟ್ರ ಗಡಿಭಾಗದಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಸುವಂತೆ ರಾಜ್ಯದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಅದರಂತೆ, ದಕ್ಷಿಣ ಕನ್ನಡ ಜಿಲ್ಲೆಯಿಂದ ಕೇರಳದ ಕಾಸರಗೋಡಿಗೆ ಹೊಂದಿಕೊಂಡಿರುವ 16 ಗಡಿಗಳಲ್ಲಿಯೂ ಹೆಚ್ಚುವರಿ ಚೆಕ್ ಪೋಸ್ಟ್ ಹಾಕಲಾಗಿದೆ.

ಮಂಗಳೂರು ಕಮಿಷನರೇಟ್ ಒಳಪಟ್ಟ ಉಳ್ಳಾಲ ಮತ್ತು ಕೊಣಾಜೆ ಠಾಣೆ ವ್ಯಾಪ್ತಿಗೆ ಸೇರಿದ ತಲಪಾಡಿ, ನೆತ್ತಿಲಪದವು, ನಾರ್ಯ ಕ್ರಾಸ್, ನಂದರಪಡ್ಪು, ಮುದುಂಗಾರುಕಟ್ಟೆ, ತೌಡುಗೋಳಿ ಪ್ರದೇಶಗಳಲ್ಲಿ ಚೆಕ್ ಪೋಸ್ಟ್ ಹಾಕಿದ್ದು, ನಾಲ್ಕರಿಂದ 5 ಪೊಲೀಸರನ್ನು ಸ್ಥಳದಲ್ಲಿ ನಿಯೋಜನೆ ಮಾಡಲಾಗಿದೆ. ಒಳಭಾಗದ ಗಡಿಗಳಲ್ಲಿ ಬಿಗಿ ಕ್ರಮ ಕೈಗೊಳ್ಳಲಾಗಿದ್ದು, ಒಬ್ಬ ಎಸ್ಐ ಉಸ್ತುವಾರಿಯಲ್ಲಿ 24 ಗಂಟೆಯೂ ಪೊಲೀಸರ ನಿಯೋಜನೆ ಇರುತ್ತದೆ.

ಇಂದಿನಿಂದಲೇ ಹೊಸ ನಿಯಮ ಜಾರಿಯಾದ ಹಿನ್ನೆಲೆಯಲ್ಲಿ ಇಂದು ಮಂಗಳೂರು ನಗರ ಡಿಸಿಪಿ ಹರಿರಾಮ್ ಶಂಕರ್, ಗಡಿಭಾಗದ ಎಲ್ಲ ಚೆಕ್ ಪೋಸ್ಟ್ ಗಳಿಗೂ ಭೇಟಿ ನೀಡಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಹರಿರಾಮ್ ಶಂಕರ್, ಎಲ್ಲ ಚೆಕ್ ಪೋಸ್ಟ್ ಗಳಲ್ಲಿಯೂ ಟೆಸ್ಟಿಂಗ್ ಯೂನಿಟ್ ಇರಲಿದೆ. ಕೇರಳದಿಂದ ಕರ್ನಾಟಕ ಪ್ರವೇಶ ಮಾಡುವ ಮಂದಿ ಕಡ್ಡಾಯವಾಗಿ ಆರ್ ಟಿಪಿಸಿಆರ್ ನೆಗೆಟಿವ್ ಸರ್ಟಿಫಿಕೇಟ್ ಹೊಂದಿರಬೇಕು. ಅಥವಾ ಕನಿಷ್ಠ ಒಂದು ಡೋಸ್ ಲಸಿಕೆ ಪಡೆದಿರಬೇಕು. ಸ್ಥಳದಲ್ಲೇ ಕೋವಿಡ್ ತಪಾಸಣೆ ನಡೆಸಲು ಅವಕಾಶ ಇರುತ್ತದೆ. ಆದರೆ, ಅನಗತ್ಯ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ ಎಂದು ತಿಳಿಸಿದ್ದಾರೆ.

ಅದೇ ರೀತಿ ಮಂಗಳೂರು ಸೆಂಟ್ರಲ್ ಮತ್ತು ಜಂಕ್ಷನ್ ರೈಲ್ವೇ ನಿಲ್ದಾಣಗಳಲ್ಲಿಯೂ ಪೊಲೀಸರಿಂದ ತಪಾಸಣೆ ಇರಲಿದೆ. ದಿನದ 24 ಗಂಟೆಯೂ ಪೊಲೀಸರು ಪ್ರಯಾಣಿಕರನ್ನು ತಪಾಸಣೆ ನಡೆಸಲಿದ್ದು, ಅಗತ್ಯ ಇದ್ದರೆ ಟೆಸ್ಟಿಂಗ್ ನಡೆಸಲು ಅಲ್ಲಿಯೂ ಅವಕಾಶ ಇರಲಿದೆ. ಇನ್ನು ಡೈಲಿ ಬರುವ ಉದ್ಯೋಗಿಗಳು ಮತ್ತು ವಿದ್ಯಾರ್ಥಿಗಳು 15 ದಿನಕ್ಕೊಮ್ಮೆ ಆರ್ ಟಿಪಿಸಿಆರ್ ಟೆಸ್ಟ್ ಮಾಡಿಸಬೇಕು ಎಂದು ಹರಿರಾಮ್ ಶಂಕರ್ ತಿಳಿಸಿದ್ದಾರೆ.  

ಗ್ರಾಮಾಂತರದಲ್ಲಿ ಹತ್ತು ಕಡೆ ಚೆಕ್ಕಿಂಗ್

ಕಮಿಷನರೇಟ್ ಹೊರತುಪಡಿಸಿ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿ ಕೇರಳ ಗಡಿಭಾಗದ ಹತ್ತು ಕಡೆ ಹೆಚ್ಚುವರಿ ಚೆಕ್ ಪೋಸ್ಟ್ ಹಾಕಲಾಗಿದೆ. ಅಲ್ಲಿಯೂ ದಿನದ 24 ಗಂಟೆ ಪೊಲೀಸರನ್ನು ನಿಯೋಜಿಸಿದ್ದು, ತಪಾಸಣೆ ಕಾರ್ಯ ನಡೆಸಲಿದ್ದಾರೆ. ವಿಟ್ಲ ಠಾಣೆ ವ್ಯಾಪ್ತಿಯ ಸಾರಡ್ಕ, ಸಾಲೆತ್ತೂರು, ಕನ್ಯಾನದಲ್ಲಿ ಚೆಕ್ ಪೋಸ್ಟ್ ಇರಲಿದೆ. ಹಾಗೆಯೇ ಪುತ್ತೂರು ಗ್ರಾಮಾಂತರ ವ್ಯಾಪ್ತಿಯ ಮೇನಾಲ, ಸ್ವರ್ಗ, ಸುಳ್ಯ ಪದವು ಎಂಬ ಗಡಿ ಪ್ರದೇಶದಲ್ಲಿಯೂ ಚೆಕ್ ಪೋಸ್ಟ್ ಹಾಕಲಾಗಿದೆ. ಸುಳ್ಯ ಠಾಣೆ ವ್ಯಾಪ್ತಿಯ ಮಂಡೆಕೋಲು, ಮೂರೂರು, ಬಡ್ಡಡ್ಕ, ಕನ್ನಡಿತೋಡು ಪ್ರದೇಶಗಳಲ್ಲಿ ಚೆಕ್ ಪೋಸ್ಟ್ ಹಾಕಲಾಗಿದೆ ಎಂದು ಎಸ್ಪಿ ಋಷಿಕುಮಾರ್ ಸೋನವಾಣೆ ತಿಳಿಸಿದ್ದಾರೆ. 

Covid Third-wave fears Mangalore-Kasargod borders on high alert. 16 check posts implemented by Mangalore Police for checking.