ನಗರ ತ್ಯಾಜ್ಯದಿಂದ ಸಾವಯಯ ಗೊಬ್ಬರ ! ಉಳ್ಳಾಲ ಪೌರಾಯುಕ್ತರ ಕೆಲಸಕ್ಕೆ ಕೃಷಿಕರು ಫಿದಾ ! ಹತ್ತು ರೂ.ಗೆ ಗೊಬ್ಬರ ರೆಡಿ 

15-07-21 09:06 pm       Richard, Mangaluru Correspondent   ಕರಾವಳಿ

ಹಸಿ ತ್ಯಾಜ್ಯದಿಂದ ಗುಣಮಟ್ಟದ ಸಾವಯವ ಗೊಬ್ಬರವನ್ನ ತಯಾರಿಸಲಾಗಿದ್ದು, ಗ್ರಾಹಕರಿಗೆ ಕೆ.ಜಿ.ಗೆ 10 ರೂಪಾಯಿಯಂತೆ ಮಿತದರದಲ್ಲಿ ಮಾರಾಟ ಮಾಡಲಾಗುತ್ತಿದೆ. 

ಉಳ್ಳಾಲ, ಜು.15: ಉಳ್ಳಾಲ ನಗರಸಭೆಯ ಪೌರಾಯುಕ್ತರ ಮುತುವರ್ಜಿಯಿಂದ ನಗರದಾದ್ಯಂತ ಸಂಗ್ರಹವಾದ ಹಸಿ ತ್ಯಾಜ್ಯದಿಂದ ಗುಣಮಟ್ಟದ ಸಾವಯವ ಗೊಬ್ಬರವನ್ನ ತಯಾರಿಸಲಾಗಿದ್ದು, ಗ್ರಾಹಕರಿಗೆ ಕೆ.ಜಿ.ಗೆ 10 ರೂಪಾಯಿಯಂತೆ ಮಿತದರದಲ್ಲಿ ಮಾರಾಟ ಮಾಡಲಾಗುತ್ತಿದೆ. 

ಎಲ್ಲಾ ಕಡೆ ಆಯಾ ಭಾಗದ ಸ್ಥಳೀಯಾಡಳಿತಗಳಿಗೆ ತಮ್ಮ ವ್ಯಾಪ್ತಿಯ ತ್ಯಾಜ್ಯ ಸಂಗ್ರಹ ನಿರ್ವಹಣೆಯೇ ತಲೆ ಬಿಸಿಯಾಗಿದ್ದರೆ, ಉಳ್ಳಾಲ ನಗರಸಭೆಯ ಪೌರಾಯುಕ್ತ ರಾಯಪ್ಪ ತ್ಯಾಜ್ಯ ಸಂಗ್ರಹಣೆಯ ಸಮರ್ಥ ನಿರ್ವಹಣೆಯ ಜೊತೆಗೆ ಕಸದಿಂದ ರಸ ತೆಗೆಯುವ ಕಾಯಕ ನಡೆಸಿದ್ದಾರೆ. ನಗರದಾದ್ಯಂತ ಸಂಗ್ರಹವಾದ ಹಸಿ ಕಸವನ್ನು ವ್ಯರ್ಥ ಮಾಡದೆ ನಗರಸಭಾ ಕಚೇರಿ ಆವರಣದಲ್ಲೇ ದೊಡ್ಡ ಗಾತ್ರದ ಕಾಂಕ್ರೀಟ್ ಬಿನ್ ಗಳಲ್ಲಿ ಪೌರ ಕಾರ್ಮಿಕರ ಶ್ರಮದಿಂದ ಕ್ವಿಂಟಾಲ್ ಗಟ್ಟಲೆ ಸಾವಯವ ಗೊಬ್ಬರವನ್ನು ತಯಾರಿಸಿದ್ದಾರೆ. ನಗರಸಭೆ ಕಚೇರಿ ಆವರಣದಲ್ಲಿ ಉತ್ಪತ್ತಿ ಮಾಡಲಾದ ಗುಣಮಟ್ಟದ ನೈಸರ್ಗಿಕ ಸಾವಯವ ಗೊಬ್ಬರವು ಕೃಷಿಗೆ ಬಹಳ ಯೋಗ್ಯವಾಗಿದ್ದು ಕೃಷಿಕರ ಅನುಕೂಲಕ್ಕಾಗಿ ಗೊಬ್ಬರವನ್ನು ಮಾರಾಟಕ್ಕೆ ಇಡಲಾಗಿದೆ. ಸಾವಯವ ಗೊಬ್ಬರಕ್ಕೆ ಕಿಲೋಗೆ ಕೇವಲ 10 ರೂಪಾಯಿ ನಿಗದಿ ಮಾಡಿದ್ದು ಗ್ರಾಹಕರು ನೈಸರ್ಗಿಕ ಗೊಬ್ಬರವನ್ನು ಖರೀದಿಸುತ್ತಿದ್ದಾರೆ. 

ನಗರ ವ್ಯಾಪ್ತಿಯ ದೊಡ್ಡ ಮಟ್ಟದ ಕೃಷಿಕರು ತಿಳಿಸಿದಲ್ಲಿ ಹಸಿ ಕಸವನ್ನು ಸಂಗ್ರಹಿಸಿ ಅವರ ತೋಟಕ್ಕೆ ಕೊಂಡೊಯ್ದು ಉಚಿತವಾಗಿ ಗಿಡಗಳಿಗೆ ಸುರಿಯುವ ಯೋಜನೆ ಕೈಗೊಳ್ಳಲಾಗಿದ್ದು ಕೃಷಿಕರು ಇದರ ಸದುಪಯೋಗ ಪಡೆಯುವಂತೆ ರಾಯಪ್ಪ ಕೋರಿದ್ದಾರೆ. ಈಗಾಗಲೇ ನಗರದ ಪಾಂಡ್ಯರಾಜ್ ಬಲ್ಲಾಳ್ ನರ್ಸಿಂಗ್ ಕಾಲೇಜಿನ ಆವರಣದ ತೆಂಗಿನ ತೋಟಕ್ಕೆ ಪೌರ ಕಾರ್ಮಿಕರ ಶ್ರಮದಿಂದ ಉಚಿತವಾಗಿ ಹಸಿ ಕಸವನ್ನ ಕೊಂಡೊಯ್ದು ಸುರಿಯಲಾಗಿದೆ.

ನಾಲ್ಕು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದಿರುವ ಪೌರಾಯುಕ್ತರು 

ತ್ಯಾಜ್ಯ ಸಂಗ್ರಹ, ನಿರ್ವಹಣೆ ಮತ್ತು ಅದರ ಮರು ಬಳಕೆಯಲ್ಲಿ ಪ್ರಸ್ತುತ ಉಳ್ಳಾಲದ ಪೌರಾಯುಕ್ತರಾಗಿರುವ ರಾಯಪ್ಪ ಅವರು ಬಹಳ ಜಾಣ್ಮೆಯುಳ್ಳವರು. ಈ ಹಿಂದೆ ಮೂಡಬಿದಿರೆಯಲ್ಲಿ ಅಧಿಕಾರಿಯಾಗಿದ್ದ ಸಂದರ್ಭದಲ್ಲಿ ಕರ್ತವ್ಯ ದಕ್ಷತೆಗೆ ಸಾಕಷ್ಟು ಪ್ರಸಿದ್ಧಿ ಪಡೆದಿದ್ದಾರೆ. ರಾಯಪ್ಪ ಅವರ ಈ ಸಾಧನೆಗೆ ನಾಲ್ಕು ಬಾರಿ ರಾಷ್ಟ್ರ ಮಟ್ಟದ ಪ್ರಶಸ್ತಿಗಳು ಒಲಿದು ಬಂದಿದ್ದಲ್ಲದೆ, ಜಲ ನಿರ್ವಹಣೆಗೆ ಒಂದು ಬಾರಿ ರಾಷ್ಟ್ರಪತಿ ಪುರಸ್ಕಾರ ಲಭಿಸಿದೆ. ಸದ್ಯ ರಾಯಪ್ಪನವರು  ಉಳ್ಳಾಲದಲ್ಲಿ ಹಸಿ ಕಸವನ್ನು ಸಂಗ್ರಹಿಸಿ ಸಾವಯವ ಗೊಬ್ಬರ ತಯಾರಿಸುವ ಪ್ರಕ್ರಿಯೆ ನಡೆಸುತ್ತಿದ್ದು ಜನರ ಪ್ರಶಂಸೆಗೆ ಪಾತ್ರವಾಗಿದೆ.

ನಗರಸಭೆ ಅಧ್ಯಕ್ಷರಿಂದಲೂ ಪೌರಾಯುಕ್ತರ ಶ್ಲಾಘನೆ 

ನಗರದಾದ್ಯಂತ ಅತ್ಯಂತ ಜಟಿಲವಾದ ತ್ಯಾಜ್ಯ ಸಂಗ್ರಹಣೆಯನ್ನು ಪೌರಾಯುಕ್ತರಾದ ರಾಯಪ್ಪನವರು ಸಮರ್ಥವಾಗಿ ನಿರ್ವಹಿಸುವುದರ ಜೊತೆಗೆ ಹಸಿ ಕಸದಿಂದ ಸಾವಯವ ಗೊಬ್ಬರ ತಯಾರಿಸುವುದು ಎಲ್ಲರಿಗೂ ಮಾದರಿಯಾಗಿದೆ ಎಂದು ಉಳ್ಳಾಲ ನಗರಸಭಾ ಅಧ್ಯಕ್ಷೆ ಚಿತ್ರಕಲಾ ಅವರು ಶ್ಲಾಘಿಸಿದ್ದಾರೆ. ಸಾವಯವ ಗೊಬ್ಬರ ತಯಾರಿಯಿಂದ ಸಮರ್ಪಕ ಕಸ ನಿರ್ವಹಣೆಯ ಜೊತೆಗೆ ಕೃಷಿಕರಿಗೂ ಗುಣಮಟ್ಟದ ಗೊಬ್ಬರ ಪೂರೈಸಲು ಅವಕಾಶ ಲಭಿಸಿದಂತಾಗಿದೆ ಎಂದಿದ್ದಾರೆ.

Mangalore Compost from city waste ready for sale an initiative by Ullal Municipal councilor Rayappa. The initiative undertaken by the municipal councilor, with the support of civic workers in the backside of the municipal office with the purpose of managing wet waste, has succeeded. The fertiliser made from waste, production of which has started on a modest scale, is now ready for sale.