ಸಿಂಪಲ್ ಸ್ಟಾರ್, ಮಿನಿಸ್ಟರ್ ಆಗುತ್ತಿದ್ದಂತೆ ವಿರೋಧ ಪಕ್ಷದಿಂದಲೂ ಅಭಿಮಾನ ! ಬ್ಯಾನರ್ ಹಾಕಿದ ಕಾಂಗ್ರೆಸ್ ಕಾರ್ಯಕರ್ತರು

06-08-21 02:05 pm       Udupi Correspondent   ಕರಾವಳಿ

ಕೋಟರನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿದ್ದು ಕರಾವಳಿಯಲ್ಲಿ ಅವರ ಅಭಿಮಾನಿಗಳಿಗೆ ಮಾತ್ರವಲ್ಲ, ವಿರೋಧ ಪಕ್ಷದ ಅಭಿಮಾನಿಗಳಿಗೂ ಖುಷಿಯಾಗಿದೆ.‌

ಉಡುಪಿ, ಆಗಸ್ಟ್ 6: ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಈ ಬಾರಿ ಸಚಿವ ಸ್ಥಾನವೇ ಸಿಗಲ್ಲ ಎನ್ನಲಾಗಿತ್ತು. ಆದರೆ ಕೊನೆಕ್ಷಣದಲ್ಲಿ ಕೋಟರನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿದ್ದು ಕರಾವಳಿಯಲ್ಲಿ ಅವರ ಅಭಿಮಾನಿಗಳಿಗೆ ಮಾತ್ರವಲ್ಲ, ವಿರೋಧ ಪಕ್ಷದ ಅಭಿಮಾನಿಗಳಿಗೂ ಖುಷಿಯಾಗಿದೆ.‌ ಎಷ್ಟರಮಟ್ಟಿಗೆ ಅಂದರೆ, ರಾಜಕೀಯ ವಿರೋಧಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಕೂಡ ಬ್ಯಾನರ್ ಹಾಕಿ ಶುಭ ಹಾರೈಕೆ ಮಾಡಿದ್ದಾರೆ. 

ಹೀಗಾಗಿ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಬಿಜೆಪಿಯಲ್ಲಿ ಮಾತ್ರವಲ್ಲ. ವಿರೋಧ ಪಕ್ಷಗಳಲ್ಲೂ ಅಭಿಮಾನಿಗಳಿದ್ದಾರೆ ಅನ್ನುವಂತಾಗಿದೆ. ಹೆಬ್ರಿ ತಾಲೂಕಿನ ಶೇಡಿಮನೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಎಂದೇ ನಮೂದಿಸಿ ಕೋಟ ಶ್ರೀನಿವಾಸ ಪೂಜಾರಿಗೆ ಶುಭಾಶಯ ಕೋರಿ ಬ್ಯಾನರ್ ಹಾಕಿದ್ದಾರೆ. ಸದ್ಯ ಈ ಫೊಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. 

ಎಷ್ಟೇ ಕಚ್ಚಾಡಿದರೂ ವಿರೋಧಿ ಪಕ್ಷಗಳ ರಾಜಕೀಯ ನಾಯಕರು ಪರಸ್ಪರ ಮುಖಾಮುಖಿಯಾದರೆ ಕುಶಲೋಪರಿ ಮಾತನಾಡಿ ಖುಷಿ ಪಡೋದನ್ನು ನೋಡಿದ್ದೇವೆ, ಆದರೆ ಕಾರ್ಯಕರ್ತರು ಮಾತ್ರ ಕಚ್ಚಾಡಿಕೊಂಡೇ ಇರ್ತಾರೆ. ಕೋಟ ಶ್ರೀನಿವಾಸರ ವಿಚಾರದಲ್ಲಿ ಮಾತ್ರ ಹಾಗಲ್ಲ, ಅನ್ಯ ಪಕ್ಷಗಳ ಕಾರ್ಯಕರ್ತರೂ ಬಹಿರಂಗವಾಗಿ ಅಭಿಮಾನ ತೋರಿಸುತ್ತಿರುವುದು ಎಲ್ಲರ ಗಮನಸೆಳೆದಿದೆ. 

ಕೋಟ ಶ್ರೀನಿವಾಸ ಪೂಜಾರಿ ಇತರ ರಾಜಕಾರಣಿಗಳ ರೀತಿಯಲ್ಲ. ಅತ್ಯಂತ ಸರಳ ಜೀವಿಯೆಂದೇ ಹೆಸರು ಮಾಡಿರುವ ಪೂಜಾರಿ ಕಳೆದ ಬಾರಿ ಯಡಿಯೂರಪ್ಪ ಸರಕಾರದಲ್ಲಿ ಮುಜರಾಯಿ, ಮೀನುಗಾರಿಕೆ ಸಚಿವರಾಗಿ, ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೆಲಸ ಮಾಡಿದ್ದರು. ಈ ವೇಳೆ, ಪಕ್ಷ ಭೇದ ಇಲ್ಲದೆ ಯಾವುದೇ ಸಾಮಾನ್ಯ ಕಾರ್ಯಕರ್ತ ಭೇಟಿಗೆ ಬಂದರೂ ಅಹವಾಲು ಕೇಳುತ್ತಿದ್ದ ಪರಿ ಅವರನ್ನು ಜನಮಾನಸದಲ್ಲಿ ವಿನೀತ ಭಾವ ಸೃಷ್ಟಿಸಿದೆ. ಇದಕ್ಕಾಗಿಯೇ ಬಿಜೆಪಿ ಹೊರತಾಗಿಯೂ ಶ್ರೀನಿವಾಸ ಪೂಜಾರಿಗೆ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ.

Udupi Congress members place banners congratulating Kota Poojary for being appointed into Cabinet. Kota simplicity has gained huge fans even in congress party.