ನಾಗರ ಪಂಚಮಿಗೆ ಕಲ್ಲಿನ ನಾಗರ ಅಲ್ಲ, ನೈಜ ನಾಗರನಿಗೇ ಆರತಿ ಎತ್ತಿ ಅಭಿಷೇಕ ಮಾಡಿದ ಅರ್ಚಕರು !! 

13-08-21 08:59 pm       Udupi Correspondent   ಕರಾವಳಿ

"ಕಲ್ಲ ನಾಗರ ಕಂಡರೆ ಹಾಲನೆರೆ ಎಂಬರು ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ" ಎನ್ನುವ ವಚನ ಒಂದಿದೆ. ಹೌದು.. ನೈಜ ನಾಗರ ಕಂಡರೆ ದೂರಕ್ಕೆ ಓಡುವವರೇ ಜಾಸ್ತಿ. ಹೀಗಾಗಿ ಕಲ್ಲಿನ ನಾಗನಿಗೆ ಮಾತ್ರ ಹಾಲೆರೆಯುವ ಪದ್ಧತಿ ಬಂದಿದೆ.

ಉಡುಪಿ, ಆಗಸ್ಟ್ 13: "ಕಲ್ಲ ನಾಗರ ಕಂಡರೆ ಹಾಲನೆರೆ ಎಂಬರು ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ" ಎನ್ನುವ ವಚನ ಒಂದಿದೆ. ಹೌದು.. ನೈಜ ನಾಗರ ಕಂಡರೆ ದೂರಕ್ಕೆ ಓಡುವವರೇ ಜಾಸ್ತಿ. ಹೀಗಾಗಿ ಕಲ್ಲಿನ ನಾಗನಿಗೆ ಮಾತ್ರ ಹಾಲೆರೆಯುವ ಪದ್ಧತಿ ಬಂದಿದೆ. ಹಾಗಂತಲೇ, ಹೆಡೆಯೆತ್ತುವ ಹಾವು ಕಂಡರೆ ಕೊಲ್ಲುವರು ಎಂದು ವಚನಕಾರರು ಹೇಳಿದ್ದರು. ಆದರೆ, ಈಗಿನ ಆಧುನಿಕ ಕಾಲದಲ್ಲಿ ಈ ವಚನ ಅಷ್ಟು ಒಗ್ಗಿಕೊಳ್ಳುವುದಿಲ್ಲವೋ ಏನೋ.. ಯಾಕಂದ್ರೆ ಇಲ್ಲೊಬ್ಬರು ನೈಜ ನಾಗನಿಗೇ ಹಾಲು, ಸೀಯಾಳ ಅಭಿಷೇಕ ಮಾಡಿ ಗಮನ ಸೆಳೆದಿದ್ದಾರೆ. 

ನಾಗರ ಪಂಚಮಿಯ ದಿನ ನಾಗನ ಕಲ್ಲಿನ ಮೂರ್ತಿಗಳಿಗೆ ಹಾಲು ಎರೆಯುವುದು ಹಿಂದಿನಿಂದಲೂ ಬಂದ ಪದ್ಧತಿ. ಕರಾವಳಿಯಲ್ಲಂತೂ ನಾಗಬನ, ನಾಗನ ಕ್ಷೇತ್ರಗಳಿಗೆ ತೆರಳಿ, ಈ ದಿನ ಕಡ್ಡಾಯವಾಗಿ ಪೂಜೆ ಸಲ್ಲಿಸುತ್ತಾರೆ. ಈ ನಡುವೆ ಉಡುಪಿಯಲ್ಲಿ ಒಂದು ವಿಚಿತ್ರ ವಿದ್ಯಮಾನ ಸಂಭವಿಸಿದೆ. ಕೇವಲ ಕಲ್ಲನಾಗರನಿಗೆ ಮಾತ್ರವಲ್ಲದೆ ನಿಜವಾದ ನಾಗನಿಗೂ ಪೂಜೆ ಸಲ್ಲಿಕೆಯಾಗಿದೆ. 

ಕಾಪು ತಾಲೂಕಿನ ಮಂಜೂರು ಎಂಬಲ್ಲಿ ವಿಶೇಷ ಪೂಜೆ ನಡೆದಿದೆ. ಇಲ್ಲಿನ ಪುರೋಹಿತ ವೃತ್ತಿ ನಡೆಸುವ ಗೋವರ್ಧನ ಭಟ್ ಗೋವಿನ ರೀತಿಯಲ್ಲೆ ನಾಗನ ಪ್ರೀತಿಯಿಂದ ನೋಡಿಕೊಂಡು ಬಂದವರು. ಗಾಯಗೊಂಡ ಹಾವುಗಳನ್ನು ಆರೈಕೆ ಮಾಡುವ ವಿಶೇಷ ಹವ್ಯಾಸ ಹೊಂದಿದ್ದಾರೆ. ಈ ಪರಿಸರದಲ್ಲಿ ಎಲ್ಲೇ ಗಾಯಾಳು ನಾಗರ ಹಾವು ಕಂಡುಬಂದರೆ, ಗೋವರ್ಧನ ಭಟ್ಟರಿಗೆ ತಿಳಿಸುತ್ತಾರೆ. ಹಾಗಾಗಿ ಇವರ ಮನೆಯಲ್ಲಿ ಯಾವತ್ತೂ ಗುಣಮುಖವಾದ ಹಾವುಗಳು ಇದ್ದೇ ಇರುತ್ತವೆ. 

ಈ ಬಾರಿ ನಾಗರಪಂಚಮಿಯ ದಿನ, ತಾವು ಮನೆಯಲ್ಲೇ ಆರೈಕೆ ಮಾಡಿದ ನಾಗರ ಹಾವುಗಳಿಗೆ ಆರತಿ ಬೆಳಗಿ, ಸೀಯಾಳ ಅಭಿಷೇಕ ಮಾಡಿ ಪೂಜೆ ಸಲ್ಲಿಸಿದ್ದಾರೆ. ಹೀಗೆ ನೈಜ ನಾಗರನಿಗೆ ಪೂಜೆ ಮಾಡುವ ವಿಡಿಯೋ ವೈರಲ್ ಆಗಿದ್ದು ಜನರು ಅಚ್ಚರಿಗೆ ಒಳಗಾಗಿದ್ದಾರೆ. ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ ಎಂಬ ವಚನವನ್ನು ಇನ್ನು ಬದಲಿಸಬೇಕು. ಹಾವು ಕಂಡರೆ ಓಡಬೇಕಿಲ್ಲ. ಅವುಗಳಿಗೂ ನೋವು ನಲಿವು ಇದೆ ಎಂಬುದನ್ನು ಕಂಡುಕೊಳ್ಳಬೇಕಿದೆ.

Real Nagara Snake worshipped at Home by Priests in Udupi for Nagara Panchami 2021.