ತನ್ನ ಅಂಗಡಿಗೆ ತಾನೇ ಬೆಂಕಿಯಿಟ್ಟ ಮಾಲೀಕ ; ಧಗ ಧಗನೆ ಹೊತ್ತಿ ಉರಿದ ಜ್ವಾಲೆ ! 

07-09-20 06:26 pm       Mangalore Reporter   ಕರಾವಳಿ

ಅಂಗಡಿ ಮಾಲಕ ತಾನು ವ್ಯಾಪಾರ ಮಾಡುತ್ತಿದ್ದ ಅಂಗಡಿಗೆ ತಾನೇ ಬೆಂಕಿ ಹಚ್ಚಿ ಭಸ್ಮ ಮಾಡಿದ ವಿಚಿತ್ರ ಘಟನೆ ದಕ್ಷಿಣ ಕನ್ನಡದ ಪುತ್ತೂರು ಸಮೀಪ ನಡೆದಿದೆ.

ಮಂಗಳೂರು, ಸೆಪ್ಟೆಂಬರ್ 7: ಅಂಗಡಿ ಮಾಲಕ ತಾನು ವ್ಯಾಪಾರ ಮಾಡುತ್ತಿದ್ದ ಅಂಗಡಿಗೆ ತಾನೇ ಬೆಂಕಿ ಹಚ್ಚಿ ಭಸ್ಮ ಮಾಡಿದ ವಿಚಿತ್ರ ಘಟನೆ ದಕ್ಷಿಣ ಕನ್ನಡದ ಪುತ್ತೂರು ಸಮೀಪ ನಡೆದಿದೆ. ಈಶ್ವರಮಂಗಲ ಸಮೀಪದ ಪಂಚೋಡಿ ಮಾವಿನಕಟ್ಟೆ ಎಂಬಲ್ಲಿ ಇಂದು ಮಧ್ಯಾಹ್ನ ನಡೆದಿದ್ದು ಈ ಘಟನೆ ಸ್ಥಳೀಯರಲ್ಲಿ ಅಚ್ಚರಿಯನ್ನು ಮೂಡಿಸಿದೆ. ಅಂಗಡಿ ಮಾಲಿಕ ತನ್ನ ಅಂಗಡಿಗೆ ತಾನೇ ಬೆಂಕಿ ಇಟ್ಟಿದೇಕೆ ಎಂಬುದು ಮಾತ್ರ ನಿಗೂಢವಾಗಿದೆ. 

ಮಾವಿನಕಟ್ಟೆ ನಿವಾಸಿ ಮಹಮ್ಮದ್ ಎಂಬವರು  ಕಳೆದ 4 ವರ್ಷಗಳಿಂದ  ಗೂಡಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದರು. ಲಾಕ್ಡೌನ್ ಬಳಿಕ ಕಳೆದ ಎರಡು ತಿಂಗಳಿನಿಂದ ಅಂಗಡಿಯಲ್ಲಿ ವ್ಯಾಪಾರ ಆರಂಭಿಸಿದ್ದರು.  ಅಂಗಡಿಯಲ್ಲಿ ಸ್ಟೇಶನರಿ ಸಾಮಾಗ್ರಿ ಮತ್ತು ಚಹಾ ಹೊಂದಿರುವ ಸಣ್ಣ ಕ್ಯಾಂಟೀನ್ ಕೂಡಾ ಅದರೊಳಗಿತ್ತು. ಇಂದು ಬೆಳಗ್ಗೆ ಎಂದಿನಂತೆ ಮಹಮ್ಮದ್ರವರು ಅಂಗಡಿ ಬಾಗಿಲು ತೆರೆದಿದ್ದರು. ಮಧ್ಯಾಹ್ನ ಆಗುತ್ತಲೇ ಅಂಗಡಿಯೊಳಗಿನಿಂದ ಹೊರಗೆ ಬಂದು ತನ್ನ ಅಂಗಡಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಅಂಗಡಿಯೊಳಗೆ ಬೆಂಕಿ ಹಾಕುತ್ತಿರುವ ದೃಶ್ಯವನ್ನು ಸ್ಥಳೀಯರು ನೋಡಿದ್ದಾರೆ. ತಕ್ಷಣವೇ ಸ್ಥಳೀಯರು ಬೆಂಕಿ ನಂದಿಸಲು ಅಂಗಡಿಯತ್ತ ಧಾವಿಸಿದ್ದು ಆ ವೇಳೆ ಬೆಂಕಿ ನಂದಿಸದಂತೆ ಮಾಲಕ ಮಹಮ್ಮದ್ ತಡೆದಿದ್ದಾರೆ ಎಂದು ಹೇಳಲಾಗಿದೆ.

ತನ್ನ ಅಂಗಡಿಗೆ ಬೆಂಕಿ ಇಟ್ಟ ಮಹಮ್ಮದ್ ನಂತರ ತನ್ನ ಮನೆಯತ್ತ ತೆರಳಿದ್ದಾರೆ. ಆದರೆ ಸ್ಥಳೀಯರು ಮಹಮ್ಮದ್ ಮನೆಗೆ ತೆರಳಿದ ಬಳಿಕ ಅಂಗಡಿಯೊಳಗಿನ ಬೆಂಕಿಯನ್ನು ನಂದಿಸಿದ್ದಾರೆ. ಅಲ್ಲದೇ ಪೊಲೀಸರಿಗೂ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸಂಪ್ಯ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.