ಫಲ್ಗುಣಿ ನದಿಗೆ ಎಂಆರ್ಪಿಎಲ್ ಮಾಲಿನ್ಯ ; ಪೊರಕೆ ಹಿಡಿದು ಸ್ಥಳೀಯರ ಪ್ರತಿಭಟನೆ, ಮಾಲಿನ್ಯ ನಿಯಂತ್ರಣ ಮಂಡಳಿಗೆ ಬೀಗ ಹಾಕ್ತೀವೆಂದು ಎಚ್ಚರಿಕೆ

30-09-21 04:34 pm       Mangaluru Correspondent   ಕರಾವಳಿ

ತೋಕೂರು ಹಳ್ಳ ಹಾಗೂ ಫಲ್ಗುಣಿ ನದಿಗೆ ವಿಷಕಾರಿ ತ್ಯಾಜ್ಯವನ್ನು ಹರಿಯ ಬಿಡುತ್ತಿರುವ ಎಂಆರ್ಪಿಎಲ್ ಹಾಗೂ ಬೈಕಂಪಾಡಿ ಪರಿಸರದ ಕೈಗಾರಿಕಾ ಘಟಕಗಳ ವಿರುದ್ಧ ಜೋಕಟ್ಟೆ ಪರಿಸರದ ನಾಗರಿಕರು ಪೊರಕೆ ಹಿಡಿದು ಪ್ರತಿಭಟನೆ ನಡೆಸಿದ್ದಾರೆ.

ಮಂಗಳೂರು, ಸೆ.30: ತೋಕೂರು ಹಳ್ಳ ಹಾಗೂ ಫಲ್ಗುಣಿ ನದಿಗೆ ವಿಷಕಾರಿ ತ್ಯಾಜ್ಯವನ್ನು ಹರಿಯ ಬಿಡುತ್ತಿರುವ ಎಂಆರ್ಪಿಎಲ್ ಹಾಗೂ ಬೈಕಂಪಾಡಿ ಪರಿಸರದ ಕೈಗಾರಿಕಾ ಘಟಕಗಳ ವಿರುದ್ಧ ಜೋಕಟ್ಟೆ ಪರಿಸರದ ನಾಗರಿಕರು ಪೊರಕೆ ಹಿಡಿದು ಪ್ರತಿಭಟನೆ ನಡೆಸಿದ್ದಾರೆ. ನಾಗರಿಕ ಹೋರಾಟ ಸಮಿತಿ, ಜೋಕಟ್ಟೆ ಇದರ ನೇತೃತ್ವದಲ್ಲಿ ಬೈಕಂಪಾಡಿಯ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿ ಮುಂದೆ ಪ್ರತಿಭಟನಾ ಧರಣಿ ನಡೆಯಿತು. 

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಎಂಆರ್ ಪಿಎಲ್ ಸಹಿತ ಸುತ್ತಲಿನ ಕೈಗಾರಿಕೆಗಳು ತಮ್ಮ ಕೈಗಾರಿಕಾ ತ್ಯಾಜ್ಯಗಳನ್ನು ನೇರವಾಗಿ ತೋಕೂರು ಹಳ್ಳಕ್ಕೆ ಹರಿಸುತ್ತಿರುವುದು ಆಘಾತಕಾರಿ. ಈ ಕುರಿತು ಹಲವು ಬಾರಿ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಿದರೂ ಯಾವುದೇ ಕ್ರಮ ಜರುಗಿಸಿಲ್ಲ. ಎಂಆರ್ ಪಿಎಲ್ ನಂತಹ ಸಾರ್ವಜನಿಕ ರಂಗದ ಬೃಹತ್ ಕಂಪೆನಿಯೂ ನಿರ್ಲಜ್ಜವಾಗಿ ಕುಡಿಯುವ ನೀರಿನ ಮೂಲಗಳಿಗೆ ವಿಷ ಹರಿಸುತ್ತಿದ್ದು ಯಾವುದೇ ಕಾರಣಕ್ಕೂ ಕ್ಷಮಾರ್ಹ ಅಲ್ಲ. ಈ ಬಗ್ಗೆ ಎಂ ಆರ್ ಪಿಎಲ್ ಕಂಪೆನಿ ಬೇಜವಾಬ್ದಾರಿ ಉತ್ತರಗಳನ್ನು ನೀಡಿ ಉದ್ಧಟತನ ಮೆರೆಯುತ್ತಿದೆ ಎಂದು ಹೇಳಿದರು. 

ವಿಷಕಾರಿ ಮಾಲಿನ್ಯಗಳ ಹರಿಯುವ ಕಾರಣ ತೋಕೂರು ಹಳ್ಳ, ಹಾಗೂ ಫಲ್ಗುಣಿ ನದಿಯಲ್ಲಿ ನೀರು ವಿಷವಾಗಿದೆ. ಅಂತರ್ಜಲ ಮಲಿನಗೊಂಡು ಸ್ಥಳೀಯ ಗ್ರಾಮಸ್ಥರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದೆ. ಸಾಂಪ್ರದಾಯಿಕ ಮೀನುಗಾರಿಕೆಗೆ ಹೊಡೆತ ಬಿದ್ದಿದೆ. ಇಂತಹ ಗಂಭೀರ ಅಪರಾಧ ಎಸಗುತ್ತಿರುವ ಕಂಪೆನಿಗಳ ಮೇಲೆ ಕೂಡಲೇ ಕ್ರಮ ಕೈಗೊಳ್ಳಬೇಕು. ಸ್ಥಳೀಯ ಗ್ರಾಮ ಪಂಚಾಯತ್ ಪ್ರತಿನಿಧಿಗಳು ಒಳಗೊಂಡ ತಂಡವನ್ನು ಕೈಗಾರಿಕಾ ಘಟಕಗಳಿಗೆ ಕರೆದೊಯ್ದು ಪರಿಶೀಲನೆ ನಡೆಸಬೇಕು. ಫಲ್ಗುಣಿಯನ್ನು ಮಾಲಿನ್ಯದಿಂದ ರಕ್ಷಿಸಲು ಬಿಗಿ ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಮಾಲಿನ್ಯ ನಿಯಂತ್ರ ಮಂಡಳಿ ಕಚೇರಿಗೆ ಬೀಗ ಜಡಿದು ಅನಿರ್ಧಿಷ್ಟ ಧರಣಿ ನಡೆಸುವುದಾಗಿ ಮುನೀರ್ ಕಾಟಿಪಳ್ಳ ಎಚ್ಚರಿಸಿದರು. 

ಪ್ರತಿಭಟನಾ ಸಭೆಯಲ್ಲಿ ತೋಕೂರು ಗ್ರಾಪಂ ಅಧ್ಯಕ್ಷ ಕೆವಿನ್ ಫೆರಾವೊ, ಸದಸ್ಯರಾದ ಅಬೂಬಕ್ಕರ್ ಬಾವ, ಜುಬೇದಾ, ನವಾಜ್ ಜೋಕಟ್ಟೆ, ಪಲ್ಗುಣಿ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷರಾದ ಅಬ್ದುಲ್ ತಯ್ಯೂಬ್ ಬೆಂಗ್ರೆ, ಡಿವೈಎಫ್ಐ ಮುಖಂಡರಾದ ಆಶಾ ಬೋಳೂರು, ಸಿಲ್ವಿಯಾ ಜೋಕಟ್ಟೆ, ಪಿ.ಜಿ. ರಫೀಕ್, ಹೋರಾಟ ಸಮಿತಿಯ ಮುಖಂಡರಾದ ಶೇಖರ್ ನಿರ್ಮುಂಜೆ, ಹಸೈನಾರ್, ಹನೀಫ್ ಗುಡ್ಡೆ, ಅಮೀನಮ್ಮ, ರವಿ ತೋಕೂರು, ಪುಷ್ಪಾ ಜೋಕಟ್ಟೆ ಮತ್ತಿತರರು ಉಪಸ್ಥಿತರಿದ್ದರು. ಡಿವೈಎಫ್ಐ ನಗರ ಸಮಿತಿ ಸದಸ್ಯ ಶ್ರೀನಾಥ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು. 

ಪ್ರತಿಭಟನೆಗೂ ಮುನ್ನ ಕೆಐಎಡಿಬಿ ಕಚೇರಿ ಮುಂಭಾಗದಿಂದ ಕೈಯಲ್ಲಿ ಪೊರಕೆ ಹಿಡಿದಿದ್ದ ಗ್ರಾಮಸ್ಥರು ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿ ವರೆಗೆ ಮೆರವಣಿಗೆ ನಡೆಸಿದರು. ಎಂ ಆರ್ ಪಿಎಲ್ ಹರಿಸಿದ ಪೆಟ್ರೋ ಮಾಲಿನ್ಯದಿಂದ ಕಪ್ಪು ಬಣ್ಣಕ್ಕೆ ತಿರುಗಿದ ತೈಲ ಮಿಶ್ರಿತ ತೋಕೂರು ಹಳ್ಳದ ನೀರನ್ನು ಬಾಟಲಿಯಲ್ಲಿ ತುಂಬಿಸಿ ಮಾಲಿನ್ಯ ನಿಯಂತ್ರಣ ಮಂಡಳಿ ಮುಂಭಾಗ ಪ್ರದರ್ಶಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಅಧಿಕಾರಿ ಕೀರ್ತಿ ಕುಮಾರ್ ಪ್ರತಿಭಟನಾಕಾರರಲ್ಲಿ ಮಾತುಕತೆ ನಡೆಸಿದರು. ಬಾಟಲಿಯಲ್ಲಿ ತುಂಬಿಸಿ ತಂದಿದ್ದ ತೋಕೂರು ಹಳ್ಳದ ಮಲಿನ ನೀರು ಹಾಗೂ ಮನವಿ ಪತ್ರವನ್ನು ಕೀರ್ತಿ ಕುಮಾರ್ ಗೆ ಹಸ್ತಾಂತರಿಸಿದ ಪ್ರತಿಭಟನಾಕಾರರು ವಾರದೊಳಗಡೆ ಕ್ರಮ ಕೈಗೊಳ್ಳದಿದ್ದಲ್ಲಿ ಮತ್ತೆ ಪ್ರತಿಭಟಿಸುವುದಾಗಿ ಎಚ್ಚರಿಸಿದರು.

Read: ಎಂಆರ್ ಪಿಎಲ್ ಘಟಕದಿಂದ ಪೆಟ್ರೋಲಿಯಂ ತ್ಯಾಜ್ಯ ಹೊರಕ್ಕೆ ; ಫಲ್ಗುಣಿ ನದಿ ಸೇರುತ್ತಿದೆ ವಿಷಕಾರಿ ಅಂಶ

Video: 

MRPL waste water gets phalguni river locals protest against pollution control board office in Baikampady Mangalore