ಅಮೆರಿಕಾದಲ್ಲಿ ಮೋದಿ ಇನ್ನು ಸ್ಟಾರ್ ಪ್ರಚಾರಕ ; ಸಂಸದ ನಳಿನ್ ಕುಮಾರ್ 

19-09-20 06:53 pm       Mangalore Reporter   ಕರಾವಳಿ

ನಮ್ಮ ಪ್ರಧಾನಿ ಮೋದಿ ಅಮೇರಿಕಾದಲ್ಲೂ ಸ್ಟಾರ್ ಪ್ರಚಾರಕರಾಗಿ ಹೊರಹೊಮ್ಮಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಮಂಗಳೂರು, ಸೆ.19: ಪ್ರಧಾನಿ ಮೋದಿಯ ಪ್ರಸಿದ್ಧಿ ಯಾವ ಪರಿ ಇದೆ ಎಂದರೆ, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಅಧಿಕಾರಕ್ಕೇರುವುದಕ್ಕಾಗಿ ಮೋದಿಯನ್ನು‌ ಕೇಳುತ್ತಿದ್ದಾರೆ. ಪ್ರಚಾರಕ್ಕೆ ಬಂದು ತನ್ನನ್ನು ಗೆಲ್ಲಿಸಿದರೆ ಅಮೇರಿಕವನ್ನು ನಾನು ಭಾರತವನ್ನಾಗಿಸುತ್ತೇನೆ ಎಂದು ಹೇಳುತ್ತಿದ್ದಾರೆ. ಆ ಮೂಲಕ ನಮ್ಮ ಪ್ರಧಾನಿ ಮೋದಿ ಅಮೇರಿಕಾದಲ್ಲೂ ಸ್ಟಾರ್ ಪ್ರಚಾರಕರಾಗಿ ಹೊರಹೊಮ್ಮಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಶನಿವಾರ ಮುಡಿಪು ಬಳಿಯ ಚೇಳೂರಿನಲ್ಲಿ 7 ಕೋಟಿ 14 ಲಕ್ಷ ವೆಚ್ಚದ ಸಂಸದರ ಗ್ರಾಮ ಸಡಕ್ ಯೋಜನೆಯ ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ಚೇಳೂರು - ಇರಾ ರಸ್ತೆ ಕಾಮಗಾರಿ, ಸಚಿವ ಕೋಟ ಶ್ರೀನಿವಾಸ್ ಪೂಜಾರಿಯವರ ವಿಧಾನ ಪರಿಷತ್ತಿನ 25 ಲಕ್ಷ ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ಪಡೀಲ್ - ಭಟ್ರಬೈಲ್ ರಸ್ತೆಯ ಶಿಲಾನ್ಯಾಸ, ವೃಕ್ಷಾರೋಹಣ ನೆರವೇರಿಸಿ ನಳಿನ್ ಕುಮಾರ್ ಮಾತನಾಡಿದರು. 

ಶಿಲಾನ್ಯಾಸ ಬಳಿಕ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಂತೋಷ್ ರೈ ಬೋಳಿಯಾರ್ ಅವರ ಕುರ್ನಾಡಿನ ಮನೆಯಲ್ಲಿ ನಡೆದ ಬಿಜೆಪಿ ಕುರ್ನಾಡು ಮಹಾಶಕ್ತಿ ಕೇಂದ್ರದ ಕಾರ್ಯಕರ್ತರ ಕುಟುಂಬ ಮಿಲನ ಕಾರ್ಯಕ್ರಮದಲ್ಲಿ ಮೋದಿ ಗುಣಗಾನ ಮಾಡಿದ್ದಾರೆ. ದೇಶ ಪರಿವರ್ತನೆ ಮಾಡಿದ ಆದರ್ಶ ರಾಜಕಾರಣಿ ಮಾಜಿ ಪ್ರಧಾನಿ ವಾಜಪೇಯಿ ಅವರನ್ನ ನೆನೆಯುವ ದಿನ ಇದು. ಗಾಂಧೀಜಿಯವರ ಕನಸಿನ ಗ್ರಾಮಗಳ ಸಂಪರ್ಕ, ಚತುಷ್ಪಥ ರಸ್ತೆಗಳ ಕನಸುಗಳನ್ನು ನನಸು ಮಾಡಿದ ಕೀರ್ತಿ ವಾಜಪೇಯಿಗೆ ಸಲ್ಲಬೇಕು. ಯುಪಿಎ ಕಾಲಘಟ್ಟದಲ್ಲಿ ಗ್ರಾಮ ಸಡಕ್ ಯೋಜನೆಗೆ ಅನುದಾನ ಬರಲಿಲ್ಲ. ಅನುದಾನ ಬಿಡುಗಡೆಯೂ ಆಗುತ್ತಿರಲಿಲ್ಲ. ಕೇವಲ ಸಂಸದರ ನಿಧಿಯಿಂದ ಕೆಲಸ ಮಾಡುವ ಅನಿವಾರ್ಯತೆ ಇತ್ತು. ಆದರೆ ಇಂದು ಮೋದಿ ಆಡಳಿತದಲ್ಲಿ ನಾವು ಕಂಡ ಕನಸುಗಳು ಸಾಕಾರಗೊಳ್ಳುತ್ತಿವೆ ಎಂದರು.

ಈ ವೇಳೆ ಅಗಲಿದ ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಕ್ಷೇತ್ರಾಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್ , ಜಿಲ್ಲಾ ಉಪಾಧ್ಯಕ್ಷರಾದ ಸಂತೋಷ್ ಕುಮಾರ್ ಬೋಳಿಯಾರ್, ಈಶ್ವರ್ ಕಟೀಲ್, ಪ್ರ.ಕಾ .ಕಸ್ತೂರಿ ಪಂಜ, ಕಾರ್ಯದರ್ಶಿ ಸತೀಶ್ ಕುಂಪಲ, ಮುಖಂಡರಾದ ಚಂದ್ರಶೇಖರ್ ಉಚ್ಚಿಲ್, ರಾಜ್ಯಕಾರ್ಯಕಾರಿಣಿ ಸದಸ್ಯರಾದ ರವೀಂದ್ರ ಶೆಟ್ಟಿ ಉಳಿದೊಟ್ಟು , ಕ್ಷೇತ್ರ ಪ್ರ.ಕಾ. ಹೇಮಂತ್ ಶೆಟ್ಟಿ,ಕುರ್ನಾಡು ಮಹಾಶಕ್ತಿ ಕೇಂದ್ರದ ಪ್ರಭಾರಿ ಮೋಹನ್ ರಾಜ್ ಕೆ.ಆರ್, ಸುರೇಶ್ ಬಂಗೇರ , ಬಿಜೆಪಿ ಮಂಗಳೂರು ಮಂಡಲ ಮಾದ್ಯಮ ಪ್ರಮುಖ್ ಪುರುಷೋತ್ತಮ್ ಕಲ್ಲಾಪು ಇದ್ದರು.

Join our WhatsApp group for latest news updates