ಬಿಜೆಪಿ ಸರಕಾರದ್ಧೇ ಬ್ಯಾರಿ ಭವನ, ಬಿಜೆಪಿಗರಿಂದಲೇ ವಿರೋಧ ; ಘೆರಾವ್ ನಡುವೆಯೇ ಮೂರನೇ ಬಾರಿಗೆ ಶಿಲಾನ್ಯಾಸ ! ಸರಕಾರದ ಎಡವಟ್ಟಿಗೆ ಶಾಸಕ ಖಾದರ್ ಗೆ ತರಾಟೆ ! 

26-02-22 05:26 pm       Mangalore Correspondent   ಕರಾವಳಿ

ತೊಕ್ಕೊಟ್ಟಿನ ಕೇಂದ್ರ ಬಸ್ ನಿಲ್ದಾಣದ ಬಳಿ ಸಂಘಟನೆಗಳ ತೀವ್ರ ಪ್ರತಿರೋಧದ ನಡುವೆಯೂ ಇಂದು ಮೂರನೇ ಬಾರಿಗೆ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ನೂತನ ಕಚೇರಿ ಕಟ್ಟಡಕ್ಕೆ ಶಾಸಕ ಯು.ಟಿ. ಖಾದರ್ ಶಿಲಾನ್ಯಾಸ ನೆರವೇರಿಸಿದ್ದು, ಕಾಮಗಾರಿ ತಡೆಯುವಂತೆ ಬಿಜೆಪಿಗರು ಕಾಂಗ್ರೆಸ್ ಶಾಸಕ ಖಾದರ್ ಅವರನ್ನು ತರಾಟೆಗೆ ತೆಗೆದುಕೊಂಡು ಅಪಹಾಸ್ಯಕ್ಕೆ ಗುರಿಯಾಗಿದ್ದಾರೆ. 

ಉಳ್ಳಾಲ, ಫೆ.26 : ತೊಕ್ಕೊಟ್ಟಿನ ಕೇಂದ್ರ ಬಸ್ ನಿಲ್ದಾಣದ ಬಳಿ ಸಂಘಟನೆಗಳ ತೀವ್ರ ಪ್ರತಿರೋಧದ ನಡುವೆಯೂ ಇಂದು ಮೂರನೇ ಬಾರಿಗೆ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ನೂತನ ಕಚೇರಿ ಕಟ್ಟಡಕ್ಕೆ ಶಾಸಕ ಯು.ಟಿ. ಖಾದರ್ ಶಿಲಾನ್ಯಾಸ ನೆರವೇರಿಸಿದ್ದು, ಕಾಮಗಾರಿ ತಡೆಯುವಂತೆ ಬಿಜೆಪಿಗರು ಕಾಂಗ್ರೆಸ್ ಶಾಸಕ ಖಾದರ್ ಅವರನ್ನು ತರಾಟೆಗೆ ತೆಗೆದುಕೊಂಡು ಅಪಹಾಸ್ಯಕ್ಕೆ ಗುರಿಯಾಗಿದ್ದಾರೆ. 

ತೊಕ್ಕೊಟ್ಟಿನ ಕೇಂದ್ರ ಬಸ್ ನಿಲ್ದಾಣದ ಬಳಿಯ ಅಬ್ಬಕ್ಕ ಭವನ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದ ಪಕ್ಕದಲ್ಲಿ ಬ್ಯಾರಿ ಭವನ ನಿರ್ಮಾಣಕ್ಕೆ ರಾಜ್ಯ ಬಿಜೆಪಿ ಸರಕಾರವು ಜಾಗ ಮಂಜೂರು ಮಾಡಿತ್ತು. ಈ ಹಿಂದೆ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದಾಗ ನೀರುಮಾರ್ಗದ ಬೈತುರ್ಲಿ ಎಂಬಲ್ಲಿ ಬ್ಯಾರಿ ಭವನ ನಿರ್ಮಾಣಕ್ಕೆ ಮೂಡಾದಿಂದ ಜಮೀನು ಖರೀದಿಸಲಾಗಿತ್ತು. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ರಹೀಂ ಉಚ್ಚಿಲ್ ಅವರು ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದು ಜನ ಸಂದಣಿ ಇಲ್ಲದ ಬೈತುರ್ಲಿ ಪ್ರದೇಶವು ಬ್ಯಾರಿ ಭವನ ನಿರ್ಮಾಣಕ್ಕೆ ಸೂಕ್ತ ಪ್ರದೇಶವಲ್ಲ.‌ ಬದಲಿ ಜಾಗ ಬೇಕೆಂದು ಸರಕಾರಕ್ಕೆ ಒತ್ತಾಯಿಸಿದ್ದರು. ಅದರಂತೆ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ಜಿಲ್ಲಾಡಳಿತವು ಬ್ಯಾರಿ ಭವನ ನಿರ್ಮಾಣಕ್ಕೆ ತೊಕ್ಕೊಟ್ಟು ಕೇಂದ್ರ ಬಸ್ಸು ನಿಲ್ದಾಣದ ಬಳಿಯ ಕಂದಾಯ ಇಲಾಖೆಯ ಜಮೀನಿನಲ್ಲಿ ಜಾಗ ಒದಗಿಸಿದಲ್ಲದೆ, ಸರಕಾರದಿಂದ ಅನುದಾನವೂ ಮಂಜೂರಾಗಿತ್ತು.

ಬ್ಯಾರಿ ಭವನ ನಿರ್ಮಾಣಕ್ಕೆ ಮೊದಲ ಬಾರಿ ಶಿಲಾನ್ಯಾಸ ನಡೆಸಲು ಮುಂದಾದಾಗ ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಸೇರಿದಂತೆ ಹಿಂದು ಸಂಘಟನೆಗಳ ವಿರೋಧ ಬಂದು ಶಿಲಾನ್ಯಾಸ ಕಾರ್ಯಕ್ರಮ ರದ್ದಾಗಿತ್ತು. ಬ್ಯಾರಿ ಭವನ ನಿರ್ಮಾಣಕ್ಕೆ ವಿರೋಧ ವ್ಯಕ್ತ ಆಗಿದ್ದರಿಂದ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್ ಅವರು ಕಳೆದ ಜನವರಿ 3 ರಂದು ಯಾರಿಗೂ ತಿಳಿಯದೆ ಶಿಷ್ಟಾಚಾರ ಉಲ್ಲಂಘಿಸಿ ತೊಕ್ಕೊಟ್ಟಿನಲ್ಲಿ ಏಕಾಏಕಿ ಬಂದು ಬ್ಯಾರಿ ಸಾಹಿತ್ಯ ಅಕಾಡೆಮಿ ಕಚೇರಿ ಕಟ್ಟಡಕ್ಕೆ ಅರ್ಚಕರಿಂದ ಭೂಮಿಪೂಜೆ ನೆರವೇರಿಸಿ ತೆರಳಿದ್ದರು. 

ಇಂದು ಮತ್ತೆ ಶಿಷ್ಟಾಚಾರದ ಪ್ರಕಾರ ಸಂಸದ ನಳಿನ್, ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್, ಶಾಸಕ ಯು.ಟಿ ಖಾದರ್ ಸೇರಿದಂತೆ ಗಣ್ಯರನ್ನ ಆಮಂತ್ರಿಸಿ ಮೂರನೇ ಬಾರಿ ಶಿಲಾನ್ಯಾಸವನ್ನ ರಹೀಂ ಉಚ್ಚಿಲ್ ತೊಕ್ಕೊಟ್ಟಿನಲ್ಲಿ ಆಯೋಜಿಸಿದ್ದರು. ಶಿಲಾನ್ಯಾಸ ಕಾರ್ಯಕ್ರಮ ವಿರೋಧಿಸಿ ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ, ತುಳುನಾಡ ಜವನೆರು ಕುಡ್ಲ, ಅಖಿಲ ಭಾರತ ಹಿಂದೂ ಮಹಾಸಭಾದವರು ಒಗ್ಗೂಡಿ‌ ತೊಕ್ಕೊಟ್ಟಿನಲ್ಲಿ ಇಂದು ಬೆಳಗ್ಗೆ ಪ್ರತಿಭಟನಾ ಧರಣಿ ಕುಳಿತಿದ್ದರು. 

ಅಬ್ಬಕ್ಕ ಉತ್ಸವ ಸಮಿತಿಯ ಪ್ರಮುಖರು, ಮಾಜಿ ಶಾಸಕರಾದ ಜಯರಾಮ ಶೆಟ್ಟಿ ಮಾತನಾಡಿ ಅಬ್ಬಕ್ಕ ಭವನ ನಿರ್ಮಾಣಕ್ಕೆ ಶಿಲಾನ್ಯಾಸ ನಡೆಸಿ ವರ್ಷಗಳೇ ಉರುಳಿವೆ. ಭವನ ನಿರ್ಮಿಸಲು 8 ಕೋಟಿ ಅನುದಾನ ಮಂಜೂರಾಗಿದ್ದು ಜಿಲ್ಲಾಧಿಕಾರಿಗಳ ನಿಧಿಯಲ್ಲಿದೆ. ಅಬ್ಬಕ್ಕ ಸಮಿತಿಯ ಗೌರವಾಧ್ಯಕ್ಷರಾದ ಶಾಸಕ ಯು.ಟಿ ಖಾದರ್ ಅವರಿಗೆ ಅಬ್ಬಕ್ಕ ಭವನ ನಿರ್ಮಿಸಲು ಆಸಕ್ತಿ ಇಲ್ಲ. ಅದರ ನಡುವೆ ಈ ಪ್ರದೇಶದಲ್ಲಿ ಬ್ಯಾರಿ ಅಕಾಡೆಮಿ ಕಟ್ಟಡ ನಿರ್ಮಾಣವಾಗುವುದು ಸರಿಯಲ್ಲ. ಅಬ್ಬಕ್ಕ ಭವನವೂ ನಿರ್ಮಾಣಗೊಂಡ ನಂತರ ಭವಿಷ್ಯದಲ್ಲಿ ಇಲ್ಲಿ ಕೋಮು ಸಾಮರಸ್ಯತೆಗೆ ಧಕ್ಕೆ ಬರುವ ಸಂಭವವಿದೆ. ಬ್ಯಾರಿ ಭವನ ನಿರ್ಮಾಣಕ್ಕೆ ನಮ್ಮ ಅಡ್ಡಿ , ಆಕ್ಷೇಪಗಳಿಲ್ಲ. ಆದರೆ ಅದಕ್ಕೆ ಈ ಪ್ರದೇಶದಲ್ಲಿ ಎಷ್ಟೋ ಸೂಕ್ತ ಪ್ರದೇಶಗಳಿವೆ. ಅಲ್ಲಿ ಮಾಡುವುದೇ ಉತ್ತಮ‌ ಎಂದರು. 

ಪ್ರತಿಭಟನಾ ಸ್ಥಳಕ್ಕೆ ಬಿಜೆಪಿ ಮುಖಂಡರಾದ ಸಂತೋಷ್ ಕುಮಾರ್ ಬೋಳಿಯಾರ್, ರವೀಂದ್ರ ಶೆಟ್ಟಿ ಉಳಿದೊಟ್ಟು, ಚಂದ್ರಹಾಸ್ ಪಂಡಿತ್ ಹೌಸ್ ಅವರು ಭೇಟಿ ನೀಡಿದ್ದಾರೆ. ಪ್ರತಿಭಟನಾ ನಿರತ ಬಿಜಪಿ ಪಕ್ಷದ ಕಾರ್ಯಕರ್ತ ಭಗವಾನ್ ದಾಸ್ ಅವರು ಮುಖಂಡರನ್ನುದ್ದೇಶಿಸಿ, ನೀವು ನಮ್ಮ ನಾಯಕರು. ಇಲ್ಲಿ ಬ್ಯಾರಿ ಭವನ ನಿರ್ಮಿಸಿ ನಾಳೆ ಅನಾಹುತಗಳು ಸಂಭವಿಸಿದರೆ ನೀವು ಇರೋಲ್ಲ. ಬದಲಾಗಿ ಹಿಂದೂ ಸಮಾಜದ ಅಮಾಯಕ ಯುವಕರು ಬಲಿಯಾಗುತ್ತಾರೆ ಎಂದರು. ಬ್ಯಾರಿ ಭವನ ಶಿಲಾನ್ಯಾಸಕ್ಕೆ ಆಗಮಿಸಿದ ಶಾಸಕ‌ ಯು.ಟಿ ಖಾದರ್ ಅವರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಈ ವೇಳೆ ಖಾದರ್ ಮತ್ತು ಬಿಜೆಪಿ ಮುಖಂಡರ ನಡುವೆ ವಾಗ್ವಾದ ನಡೆದಿದೆ. ತಮ್ಮದೇ ಸರಕಾರ ರಾಜ್ಯದಲ್ಲಿ ಅಧಿಕಾರದಲ್ಲಿದ್ದರೂ ಸಹ ಬಿಜೆಪಿ ಮುಖಂಡರಾದ ಸಂತೋಷ್ ಬೋಳಿಯಾರ್ ಅವರು ಬ್ಯಾರಿ ಭವನ ಶಿಲಾನ್ಯಾಸ ತಡೆಯುವಂತೆ ಖಾದರ್ ಅವರಲ್ಲಿ ಆಗ್ರಹಿಸಿ ಅಸಹಾಯಕತೆ ಪ್ರದರ್ಶಿಸಿದ್ದಾರೆ. 

ತಾನು ಕ್ಷೇತ್ರದ ಶಾಸಕನಾಗಿ ಅಕಾಡೆಮಿ ಕಟ್ಟಡದ ಶಿಲಾನ್ಯಾಸ ಕಾರ್ಯದಲ್ಲಿ ಭಾಗವಹಿಸುವುದು ಕರ್ತವ್ಯ. ನಿಮ್ಮ ಬಿಜೆಪಿ ಸರಕಾರವೇ ಬ್ಯಾರಿ ಅಕಾಡೆಮಿಗೆ ಜಾಗ ಮಂಜೂರು ಮಾಡಿದ್ದೇ ಹೊರತು ನಾನಲ್ಲ ಎಂದರು ಖಾದರ್. ಅಬ್ಬಕ್ಕ ಭವನ ಕಾಮಗಾರಿ ಅತೀ ಶೀಘ್ರದಲ್ಲಿ ಅರಂಭವಾಗುತ್ತದೆ.‌ ಅಬ್ಬಕ್ಕ ಭವನ ನಿರ್ಮಾಣ ವಿಳಂಬಕ್ಕೆ ಕಾರಣರಾದವರ ವಿರುದ್ಧ ಕ್ರಮ ಖಂಡಿತ ಜರುಗಿಸುತ್ತೇವೆ ಎಂದರು. 

ಅಬ್ಬಕ್ಕ ಉತ್ಸವ ಸಮಿತಿ, ಹಿಂದೂ ಸಂಘಟನೆಗಳ ತೀವ್ರ ವಿರೋಧದ ನಡುವೆಯೇ ಖಾದರ್ ಅವರು ಪಕ್ಕದಲ್ಲಿ ಬ್ಯಾರಿ ಸಾಹಿತ್ಯ ಅಕಾಡೆಮಿಯ ಶಿಲಾನ್ಯಾಸ ನೆರವೇರಿಸಿದ್ದಾರೆ. ಶಿಲಾನ್ಯಾಸ ಸಮಾರಂಭಕ್ಕೆ ಪ್ರವೇಶಿಸಿ ಪ್ರತಿಭಟಿಸಲು ಮುಂದಾದವರನ್ನ ಪೊಲೀಸರು ತಡೆದಿದ್ದಾರೆ. ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಖಾದರ್ ಅವರು ಅನಾವಶ್ಯಕ ಗೊಂದಲಗಳನ್ನ ಬಿಜೆಪಿ ಸೃಷ್ಟಿಸುತ್ತಿದೆ. ಇಲ್ಲಿ ಸುಡು ಬಿಸಿಲಲ್ಲಿ ಪ್ರತಿಭಟನೆ ನಡೆಸುತ್ತಿರುವವರೆಲ್ಲರೂ ತಮ್ಮ ನಾಯಕರ ಷಡ್ಯಂತ್ರಕ್ಕೆ ಬಲಿಯಾಗದೆ ನೇರವಾಗಿ ಹೋಗಿ ನಿಮ್ಮದೇ ಪಕ್ಷದ ಉಸ್ತುವಾರಿ ಸಚಿವರ ಮುಂದೆಯೇ ಧರಣಿ ಕೂತ್ಕೊಳ್ಳಿ ಎಂದರು. 

ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್ ಮಾತನಾಡಿ ಅಕಾಡೆಮಿ ಕಟ್ಟಡ ಕಟ್ಟಲು ನಮಗೆ ಬಿಜೆಪಿ ಸಂಘ ಪರಿವಾರದವರು ಬೇಕಾದ ಸಹಕಾರ ನೀಡಿದ್ದಾರೆ. ಆದರೆ ಅಬ್ಬಕ್ಕ ಉತ್ಸವ ಸಮಿತಿ ಅಧ್ಯಕ್ಷ ದಿನಕರ್ ಉಳ್ಳಾಲ್ ಮಾತ್ರ ಕೋಮುವಾದದಿಂದ ಕೆಲವರನ್ನ ಪ್ರಚೋದಿಸಿ ಪ್ರತಿಭಟನೆಯಂತಹ ಹೇಯ ಕೃತ್ಯ ನಡೆಸುತ್ತಾ ಬಂದಿದ್ದಾರೆ. ಇದನ್ನ ಮುಸ್ಲಿಂ‌ ಸಮಾಜ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು. 

ಬಿಜೆಪಿಯದ್ದೇ ಸರಕಾರ, ಸರಕಾರದ್ದೇ ಅಕಾಡೆಮಿ ಕಟ್ಟಡ ಶಿಲಾನ್ಯಾಸ, ಬಿಜೆಪಿಯವರದ್ದೇ ಪ್ರತಿರೋಧದ ನಡುವಲ್ಲಿ ನಡೆದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪ್ರೇಕ್ಷಕರೇ ಇಲ್ಲದೆ ಕುರ್ಚಿಗಳೆಲ್ಲ ಖಾಲಿಯಾಗಿದ್ದು ಪೊಲೀಸರು ಮತ್ತು ಮಾಧ್ಯಮದವರಿಗೆ ಮಾತ್ರ ಕಾರ್ಯಕ್ರಮ ಸೀಮಿತವಾಗಿತ್ತು.

Mangalore Foundation laying ceremony that was held at Thokottu by Rahim Uchil for Beary Bhavana was interrupted by own BJP members. The BJP members who intervened in the middle of the program tried to stop it. Later Even MLA Khader who reached the spot was slammed by the members.