ಉಕ್ರೇನಲ್ಲಿ ಸಿಲುಕಿದ್ದಾರೆ ದಕ್ಷಿಣ ಕನ್ನಡ ಜಿಲ್ಲೆಯ 12 ಮಂದಿ ; ರಾಯಭಾರ ಕಚೇರಿಗೆ ಮಾಹಿತಿ  

26-02-22 10:57 pm       Mangalore Correspondent   ಕರಾವಳಿ

ಉಕ್ರೇನ್ ದೇಶದಲ್ಲಿ 150ಕ್ಕೂ ಹೆಚ್ಚು ಕನ್ನಡಿಗರಿದ್ದಾರೆ ಎನ್ನುವ ಮಾಹಿತಿಯಿದೆ. ಬೆಂಗಳೂರು ನಗರ ಒಂದರಲ್ಲೇ 30ಕ್ಕೂ ಹೆಚ್ಚು ಮಂದಿ ಉಕ್ರೇನ್ ದೇಶದಲ್ಲಿದ್ದಾರೆ ಎನ್ನಲಾಗುತ್ತಿದೆ.

ಮಂಗಳೂರು, ಫೆ.26 : ಉಕ್ರೇನ್ ದೇಶದಲ್ಲಿ 150ಕ್ಕೂ ಹೆಚ್ಚು ಕನ್ನಡಿಗರಿದ್ದಾರೆ ಎನ್ನುವ ಮಾಹಿತಿಯಿದೆ. ಬೆಂಗಳೂರು ನಗರ ಒಂದರಲ್ಲೇ 30ಕ್ಕೂ ಹೆಚ್ಚು ಮಂದಿ ಉಕ್ರೇನ್ ದೇಶದಲ್ಲಿದ್ದಾರೆ ಎನ್ನಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ 12 ಮಂದಿ ವಿದ್ಯಾರ್ಥಿಗಳು ಉಕ್ರೇನ್ ದೇಶದಲ್ಲಿದ್ದಾರೆ ಎನ್ನುವ ಮಾಹಿತಿಯನ್ನು ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ದೃಢಪಡಿಸಿದ್ದಾರೆ.

ಮಂಗಳೂರು ಸೇರಿ ದಕ್ಷಿಣ ಕನ್ನಡ ಜಿಲ್ಲೆಯ 12 ಮಂದಿ ಉಕ್ರೇನಲ್ಲಿ ಸಿಕ್ಕಿಕೊಂಡಿದ್ದಾರೆ ಎನ್ನುವ ಮಾಹಿತಿಯನ್ನು ಜಿಲ್ಲಾಧಿಕಾರಿ ನೀಡಿದ್ದಾರೆ. ಆದರೆ ಯಾರೆಲ್ಲ ಇದ್ದಾರೆ, ಎಲ್ಲಿಯವರೆಲ್ಲ ಇದ್ದಾರೆ ಎಂಬ ಬಗ್ಗೆ ಮಾಹಿತಿ ನೀಡಿಲ್ಲ. ಅದರ ಬಗ್ಗೆ ನಾವು ಮಾಹಿತಿ ನೀಡಿದರೆ, ಆಮೇಲೆ ಕೆಲವರಿಂದ ವಿರೋಧ ಬರುತ್ತದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. ಆದರೆ ಎಲ್ಲ 12 ಮಂದಿಯೂ ಸುರಕ್ಷಿತವಾಗಿದ್ದಾರೆ. ಅವರನ್ನು ರಾಯಭಾರ ಕಚೇರಿ ಮೂಲಕ ಮರಳಿ ಕರೆತರುವ ಪ್ರಯತ್ನ ನಡೆಯುತ್ತಿದೆ. ಈ ಬಗ್ಗೆ ಪ್ರಯತ್ನಗಳು ಆಗುತ್ತಿವೆ ಎಂದು ಜಿಲ್ಲಾಧಿಕಾರಿ ರಾಜೇಂದ್ರ ತಿಳಿಸಿದ್ದಾರೆ.

ಸಾಮಾನ್ಯವಾಗಿ ಒಂದು ಜಿಲ್ಲೆಯಿಂದ, ಒಂದು ರಾಜ್ಯದಿಂದ ಎಷ್ಟು ಮಂದಿ ಒಂದು ದೇಶದಲ್ಲಿ ಇದ್ದಾರೆ ಎಂಬ ಬಗ್ಗೆ ರಾಯಭಾರ ಕಚೇರಿಯಲ್ಲಿ ಮಾಹಿತಿಗಳು ಇರುತ್ತವೆ. ಈ ಬಗ್ಗೆ ಆಯಾ ಜಿಲ್ಲಾಡಳಿತಕ್ಕೂ ಮಾಹಿತಿಗಳು ಇರಬೇಕು. ಯಾವುದೇ ವ್ಯಕ್ತಿ ವಿದೇಶಕ್ಕೆ ತೆರಳುವ ಸಂದರ್ಭದಲ್ಲಿ ಎಲ್ಲಿ ಹೋಗುತ್ತಿದ್ದಾನೆ, ಏನು ಮಾಡುತ್ತಿದ್ದಾನೆ ಎನ್ನುವ ಏರ್ಪೋರ್ಟ್ ನಲ್ಲಿ ನೀಡಬೇಕಾಗುತ್ತದೆ. ಆಮೂಲಕ ಜಿಲ್ಲಾಡಳಿತ ಮಾಹಿತಿಯನ್ನು ಪಡೆದಲ್ಲಿ ಎಷ್ಟು ಮಂದಿ ಉಕ್ರೇನಲ್ಲಿದ್ದಾರೆ ಎಂಬ ಬಗ್ಗೆ ಖಚಿತ ಮಾಹಿತಿಗಳನ್ನು ಪಡೆಯಬಹುದು. ಆದರೆ, ಈಗ ಆಯಾ ಭಾಗದ ಕುಟುಂಬಸ್ಥರು ತಮ್ಮವರು ಉಕ್ರೇನಲ್ಲಿರುವ ಬಗ್ಗೆ ಮಾಹಿತಿಯನ್ನು ಸರಕಾರಕ್ಕೆ ನೀಡುತ್ತಿದ್ದಾರೆ. ಆನಂತರವಷ್ಟೇ ಅವರನ್ನು ಪಾರು ಮಾಡುವ ಕೆಲಸ ನಡೆಯುತ್ತಿದೆ. ಇದರಿಂದಾಗಿ ಕನ್ನಡಿಗರು ಎಷ್ಟಿದ್ದಾರೆ ಎಂಬ ಬಗ್ಗೆ ರಾಜ್ಯ ಸರಕಾರಕ್ಕೆ ಈಗಲೂ ಖಚಿತವಾಗಿಲ್ಲ.

12 from Dakshina Kannada stranded in Ukraine, says embassy.