ಉಕ್ರೇನ್ ದೇಶದಲ್ಲಿ ಸಿಲುಕಿರುವ ಮಂಗಳೂರಿನ ವಿದ್ಯಾರ್ಥಿಗಳ ಮನೆಗೆ ಸಂಸದ ನಳಿನ್ ಭೇಟಿ ; ವಾರದೊಳಗೆ ಎಲ್ಲರನ್ನೂ ಕರೆತರುವ ಭರವಸೆ 

02-03-22 06:57 pm       Mangalore Correspondent   ಕರಾವಳಿ

ಯುದ್ಧ ಪೀಡಿತ ಉಕ್ರೇನ್ ದೇಶದಲ್ಲಿ ಸಿಲುಕಿರುವ ಮಂಗಳೂರಿನ ವೈದ್ಯಕೀಯ ವಿದ್ಯಾರ್ಥಿನಿಯರ ಮನೆಗೆ ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಭೇಟಿ ನೀಡಿದ್ದು ಮನೆಯವರ ಜೊತೆ ಮಾತುಕತೆ ನಡೆಸಿದ್ದಾರೆ. 

ಮಂಗಳೂರು, ಮಾ.2: ಯುದ್ಧ ಪೀಡಿತ ಉಕ್ರೇನ್ ದೇಶದಲ್ಲಿ ಸಿಲುಕಿರುವ ಮಂಗಳೂರಿನ ವೈದ್ಯಕೀಯ ವಿದ್ಯಾರ್ಥಿನಿಯರ ಮನೆಗೆ ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಭೇಟಿ ನೀಡಿದ್ದು ಮನೆಯವರ ಜೊತೆ ಮಾತುಕತೆ ನಡೆಸಿದ್ದಾರೆ. 

ಬಿಜೈ ನ್ಯು ರೋಡ್ ನಲ್ಲಿರುವ ವೈದ್ಯಕೀಯ ವಿದ್ಯಾರ್ಥಿನಿಯರಾದ ಅನುಷಾ ಮತ್ತು ಸಾಕ್ಷಿ ಸುಧಾಕರ್ ಅವರ ಮನೆಗೆ ಭೇಟಿ ನೀಡಿದ ನಳಿನ್ ಕುಮಾರ್, ಮನೆಯವರ ಜೊತೆ ಮಾತುಕತೆ ‌ನಡೆಸಿ ಧೈರ್ಯ ತುಂಬಿದ್ದಾರೆ. ಒಂದು ವಾರದೊಳಗೆ ರಾಜ್ಯದ ಎಲ್ಲರನ್ನೂ ಮನೆಗೆ ವಾಪಾಸ್ ಕರೆತರುವ ಭರವಸೆಯನ್ನೂ ನೀಡಿದ್ದಾರೆ. ‌

ಇದೇ ವೇಳೆ, ಮಾಧ್ಯಮಕ್ಕೆ ಮಾಹಿತಿ ನೀಡಿದ ಸಂಸದ ನಳಿನ್ ಕುಮಾರ್, ದ.ಕ ಜಿಲ್ಲೆಯ 18 ಜ‌ನರು ಸರ್ಕಾರದ ಅಂಕಿ ಅಂಶಗಳ ಪ್ರಕಾರ ಉಕ್ರೇನ್ ನಲ್ಲಿದ್ದಾರೆ. ಈಗಾಗಲೇ ಅವರ ಮನೆಯವರು ಮತ್ತು ವಿದ್ಯಾರ್ಥಿಗಳ ಜೊತೆ‌ ನಾವು ನಿರಂತರ ಸಂಪರ್ಕದಲ್ಲಿದ್ದೇವೆ.‌ ಸದ್ಯ ನಾಲ್ಕು ‌ಮಂತ್ರಿಗಳನ್ನ ನೇಮಿಸಿ ಅವರನ್ನು ಕರೆ ತರುವ ಪ್ರಯತ್ನ ಆಗ್ತಿದೆ.‌ ಕೆಲವರು ಈಗಾಗಲೇ ವಿಮಾನ ಹತ್ತಿದ್ದಾರೆ, ಇನ್ನು ಕೆಲವರು ಬಂಕರ್ ನಲ್ಲೇ ಇದ್ದಾರೆ. ಪಕ್ಷದ ವತಿಯಿಂದಲೂ ವಾರ್ ರೂಂ ತೆರೆದು ಮನೆಯವರ ಸಂಪರ್ಕ ಮಾಡ್ತಿದ್ದೇವೆ.‌ ಮಂಗಳೂರು ‌ನಗರದ ಐದು ಕುಟುಂಬದ ಬಳಿ ತೆರಳಿ ಅವರಿಗೆ ವಿಶ್ವಾಸ ತುಂಬಿದ್ದೇವೆ ಎಂದರು. 

ನಿನ್ನೆ ಅಹಿತಕರ ಮತ್ತು ದುಃಖದ ಘಟನೆ ಉಕ್ರೇನ್ ನಲ್ಲಿ‌ ನಡೆದಿದೆ. ನವೀನ್ ಎಂಬ ಯುವಕ ಬಾಂಬ್ ದಾಳಿಗೆ ಮೃತನಾಗಿರೋದು ಬೇಸರದ ವಿಚಾರ.‌ ಆ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿ ಭಗವಂತ ಕೊಡಲಿ. ಆದ್ರೆ ಉಳಿದವರು ಭಯ ಪಡುವ ಅಗತ್ಯ ಇಲ್ಲ, ನಮ್ಮ ಸರ್ಕಾರ ನಿಮ್ಮ ಜೊತೆ ಇದೆ.‌ ಸಿಎಂ ಬೊಮ್ಮಾಯಿ ಕೂಡ ನೋಡಲ್ ಆಫೀಸರ್ ನೇಮಿಸಿ ಕ್ರಮ ವಹಿಸಿದ್ದಾರೆ.‌ ನಿನ್ನೆ ನವೀನ್ ಘಟನೆ ಬಳಿಕ ಸಿಎಂ ಉದಾಸಿ ದೆಹಲಿಗೆ ಹೋಗಿದ್ದಾರೆ.‌ ನಾನು ತಕ್ಷಣ ಪ್ರಹ್ಲಾದ್ ಜೋಶಿ, ಮುಖ್ಯಮಂತ್ರಿಗಳು ಹಾಗೂ ಸಚಿವ ಜೈಶಂಕರ್ ಅವರಿಗೆ ಮಾತನಾಡಿದ್ದೇನೆ.‌ ರಾಜ್ಯದ ಆಯಾ ಭಾಗದ ಮಂತ್ರಿ ಮತ್ತು ಶಾಸಕರಿಗೆ ತಕ್ಷಣ ಎಲ್ಲರ ‌ಮನೆಗಳಿಗೆ ಹೋಗಲು ಹೇಳಿದ್ದೇನೆ. ಅವರ ಕುಟುಂಬದ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರದ ನೆರವು ನೀಡಲು ಹೇಳಿದ್ದೇನೆ.‌ 

ಪಾಸ್ ಪೋರ್ಟ್ ವಿಚಾರದಲ್ಲಿ ಯಾವುದೇ ಸಮಸ್ಯೆ ಆಗಲ್ಲ ಎಂದು ಪ್ರಧಾನಿಗಳು ಹೇಳಿದ್ದಾರೆ.‌ ಕೆಲವರು ಪಾಸ್ ಪೋರ್ಟ್ ಕಳೆದುಕೊಂಡಿರುವ ಸಾಕಷ್ಟು ಘಟನೆ ಆಗಿದೆ.‌ ಮತ್ತೆ ಕೆಲವು ಏಜೆಂಟ್ ಗಳು ಹುಟ್ಟಿಕೊಂಡಿದ್ದು, ತಲುಪಿಸುವ ಡಿಮಾಂಡ್ ಮಾಡ್ತಿದಾರೆ.‌ ಆದರೆ ಇದನ್ನ ತಂಡದ ಮೂಲಕ ಪರಿಹರಿಸುವ ಕೆಲಸ ಮಾಡಲಾಗಿದೆ.‌ ಅಲ್ಲದೆ, ಎಲ್ಲ ದೇಶಗಳಲ್ಲಿ ಪ್ರಧಾನಿ ಮನವಿ ಮೇರೆಗೆ ಪಾಸ್ಪೋರ್ಟ್ ಇಲ್ಲದೆಯೂ ನಮ್ಮ ಜನರನ್ನು ತರುವ ಕೆಲಸವನ್ನು ಎಂಬೆಸ್ಸಿ ಮಾಡುತ್ತದೆ ಎಂದು ಹೇಳಿದರು. ಸಂಸದ ನಳಿನ್ ಜೊತೆಗೆ ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ ಮತ್ತು ಬಿಜೆಪಿ ಪ್ರಮುಖರು ಇದ್ದರು.

MP Nalin Kumar Visits family of Mangalore student who is standard in Ukraine, promises of safely bringing her.