ಕಳ್ಳತನಕ್ಕೆ ಅಂತಾರಾಜ್ಯ ಲಿಂಕ್ ; ಫ್ಲಾಟ್ ಸೆಕ್ರೆಟರಿಯಿಂದ್ಲೇ ಸ್ಕೆಚ್, ನಾಲ್ವರ ಬಂಧನ

22-09-20 01:38 pm       Mangalore Correspondent   ಕರಾವಳಿ

ಸುರತ್ಕಲ್ ಬಳಿಯ ಮನೆಯೊಂದರಲ್ಲಿ ನಗದು ಮತ್ತು ಚಿನ್ನಾಭರಣ ಲೂಟಿ ಮಾಡಿದ್ದ ಅಂತಾರಾಜ್ಯ ಕಳ್ಳರನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ. 

ಮಂಗಳೂರು, ಸೆಪ್ಟಂಬರ್ 22: ಸುರತ್ಕಲ್ ಬಳಿಯ ಮನೆಯೊಂದರಲ್ಲಿ ನಗದು ಮತ್ತು ಚಿನ್ನಾಭರಣ ಲೂಟಿ ಮಾಡಿದ್ದ ಅಂತಾರಾಜ್ಯ ಕಳ್ಳರನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ. 

ಆಗಸ್ಟ್ 15 ರಂದು ಸುರತ್ಕಲ್ ಬಳಿಯ ಇಡ್ಯಾದಲ್ಲಿರುವ ಜಾರ್ಡಿನ್ ಅಪಾರ್ಟ್ಮೆಂಟಿನ ವಿದ್ಯಾ ಪ್ರಭು ಎಂಬವರ ಮನೆಯಿಂದ ಕಳವು ನಡೆದಿತ್ತು. ಮನೆಯಲ್ಲಿದ್ದ 51 ಲಕ್ಷ ನಗದು, 224 ಗ್ರಾಂ ಚಿನ್ನ ಕಳವಾದ ಬಗ್ಗೆ ವಿದ್ಯಾ ಪ್ರಭು ಸುರತ್ಕಲ್ ಠಾಣೆಗೆ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು, ಅಪಾರ್ಟ್ಮೆಂಟ್ ಸೆಕ್ರೆಟರಿ ನವೀನ್ ಎಂಬಾತನ ಮೇಲೆ ಸಂಶಯ ಬಂದು ತನಿಖೆ ಕೇಂದ್ರೀಕರಿಸಿದ್ದಾರೆ. ತನಿಖೆಯಲ್ಲಿ ನವೀನ್ ಕಳ್ಳತನಕ್ಕೆ ಸಂಚು ರೂಪಿಸಿದ್ದು ತಿಳಿದುಬಂದಿದ್ದಲ್ಲದೆ ನಾಲ್ವರನ್ನು ಬಂಧಿಸಿದ್ದಾರೆ. 

ಸುರತ್ಕಲ್ ನಲ್ಲಿ ಬಾರ್ ಮ್ಯಾನೇಜರ್ ಆಗಿದ್ದ ನವೀನ್ ಸೇನೆಯಲ್ಲಿ 15 ವರ್ಷ ಕೆಲಸ ಮಾಡಿ ವಾಲ್ಯುಂಟರಿ ರಿಟೈರ್ಮೆಂಟ್ ಪಡೆದು ಬಂದಿದ್ದ‌. ಪೆಟ್ರೋಲ್ ಬಂಕ್ ಮಾಲಕಿಯಾಗಿರುವ ವಿದ್ಯಾ ಪ್ರಭು ಫ್ಲಾಟ್ ಹೊಂದಿರುವುದು ಮತ್ತು ಆಗಾಗ ಬಂದು ಹೋಗುತ್ತಿದ್ದ ಮಾಹಿತಿ ಇದ್ದ ನವೀನ್ ಅಲಿಯಾಸ್ ಲೋಕನಾಥ್, ಕಳ್ಳತನಕ್ಕೆ ಪ್ಲಾನ್ ಹಾಕಿದ್ದಾನೆ. ಬಾರ್ ನಲ್ಲಿ ವೈಟರ್ ಆಗಿದ್ದ ಸಂತೋಷ್ ನೆರವು ಪಡೆದು ಕೇರಳದ ತಿರುವನಂತಪುರ ಮೂಲದ ರಘು, ಅಮೇಶ್ ಎಂಬವರ ಮೂಲಕ ಕೃತ್ಯ ನಡೆಸಿದ್ದಾನೆ. ಈ ನಾಲ್ವರನ್ನು ಪೊಲೀಸರು ಬಂಧಿಸಿದ್ದು ಆರೋಪಿಗಳಿಂದ 30.85 ಲಕ್ಷ ನಗದು ಮತ್ತು 224 ಗ್ರಾಂ ಚಿನ್ನ, ಕೃತ್ಯಕ್ಕೆ ಬಳಸಿದ್ದ ಕಾರು ವಶಕ್ಕೆ ಪಡೆದುಕೊಂಡಿದ್ದಾರೆ. ಕೃತ್ಯದಲ್ಲಿ ಕೇರಳ ಮೂಲದ ಇನ್ನಿಬ್ಬರು ಪಾಲ್ಗೊಂಡಿದ್ದು ಅವರ ಪತ್ತೆಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಮಂಗಳೂರು ಕಮಿಷನರ್ ವಿಕಾಸ್ ಕುಮಾರ್ ಮಾಹಿತಿ ನೀಡಿದ್ದಾರೆ. 

ಸುರತ್ಕಲ್ ಬಳಿ ಪೆಟ್ರೋಲ್ ಬಂಕ್ ಹೊಂದಿದ್ದ ವಿದ್ಯಾ ಪ್ರಭು ಮತ್ತು ಪತಿ ಕಡಂಬೋಡಿಯಲ್ಲಿ ಮನೆ ಹೊಂದಿದ್ದರು. ಆದರೆ, ಇನ್ನಿತರ ವ್ಯವಹಾರವನ್ನು ಫ್ಲಾಟ್ ನಲ್ಲಿದ್ದುಕೊಂಡು ಮಾಡುತ್ತಿದ್ದರು. ಪಂಪ್ ನಲ್ಲಿ ಸಂಗ್ರಹವಾಗುತ್ತಿದ್ದ ನಗದನ್ನು ಕೆಲವೊಮ್ಮೆ ಫ್ಲಾಟ್ ನಲ್ಲಿ ಇಟ್ಟು ಹೋಗುತ್ತಿದ್ದರು. ಆ ಮನೆಯಲ್ಲಿ ಬೇರೆ ಯಾರೂ ಇರುತ್ತಿರಲಿಲ್ಲ. ಈ ಬಗ್ಗೆ ಅರಿತಿದ್ದ ಫ್ಲಾಟ್ ಸೆಕ್ರೆಟರಿ ನವೀನ್ ಕಳ್ಳತನಕ್ಕೆ ಪ್ಲಾನ್ ಹಾಕಿದ್ದ. ಮಹತ್ವದ ಪ್ರಕರಣವನ್ನು ಸುರತ್ಕಲ್ ಪೊಲೀಸರು ಎಸಿಪಿ ಬೆಳ್ಳಿಯಪ್ಪ ಮಾರ್ಗದರ್ಶನದಲ್ಲಿ ಭೇದಿಸಿದ್ದಾರೆ ಎಂದು ಕಮಿಷನರ್ ವಿಕಾಸ್ ಕುಮಾರ್ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದರು.

Join our WhatsApp group for latest news updates