ಬ್ಯಾರಿ ಅಕಾಡೆಮಿ ಅಧ್ಯಕ್ಷ ಸ್ಥಾನದಿಂದ ರಹೀಂ ಉಚ್ಚಿಲ ಅವರನ್ನು ಕಿತ್ತು ಹಾಕಿದ್ದು ಯಾಕೆ ? ಉಳ್ಳಾಲ ಬಿಜೆಪಿ ನಾಯಕರ ದೂರಿನ ಫಲವೇ ?    

06-04-22 08:42 pm       Mangalore Correspondent   ಕರಾವಳಿ

ಕರ್ನಾಟಕ ಬ್ಯಾರಿ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ ಅವರನ್ನು ಅವಧಿ ಪೂರೈಸಲು ಆರು ತಿಂಗಳು ಇರುವಾಗಲೇ ತೆಗೆದು ಹಾಕಲಾಗಿದೆ. ಎ.5ರ ರಾತ್ರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿಯಿಂದ ರಹೀಂ ಉಚ್ಚಿಲ್ ಅವರನ್ನು ಪದಚ್ಯುತಿಗೊಳಿಸಿರುವ ಬಗ್ಗೆ ಆದೇಶ ಪತ್ರ ಬಂದಿದೆ.

ಮಂಗಳೂರು, ಎ.6: ಕರ್ನಾಟಕ ಬ್ಯಾರಿ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ ಅವರನ್ನು ಅವಧಿ ಪೂರೈಸಲು ಆರು ತಿಂಗಳು ಇರುವಾಗಲೇ ತೆಗೆದು ಹಾಕಲಾಗಿದೆ. ಎ.5ರ ರಾತ್ರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿಯಿಂದ ರಹೀಂ ಉಚ್ಚಿಲ್ ಅವರನ್ನು ಪದಚ್ಯುತಿಗೊಳಿಸಿರುವ ಬಗ್ಗೆ ಆದೇಶ ಪತ್ರ ಬಂದಿದೆ.

ಈ ಬಗ್ಗೆ ಹೇಳಿಕೆ ನೀಡಿರುವ ರಹೀಂ ಉಚ್ಚಿಲ, ನನಗೆ ಆದೇಶ ಪತ್ರ ಬಂದಾಗಲೇ ಪದಚ್ಯುತಿ ವಿಚಾರ ಗೊತ್ತಾಗಿದ್ದು. ನನ್ನನ್ನು ತೆಗೆದು ಹಾಕುವ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ತೆಗೆದು ಹಾಕಿರುವುದರಿಂದ ಆತ್ಮಾವಲೋಕನಕ್ಕೆ ಸಮಯ ಸಿಕ್ಕಿದೆ. ಎರಡು ಬಾರಿ ಅವಕಾಶ ಕೊಟ್ಟಿದ್ದಾರೆ. ಈ ಬಾರಿಯೂ ಎರಡೂವರೆ ವರ್ಷ ಅಧ್ಯಕ್ಷನಾಗಿರಲು ಅವಕಾಶ ಕೊಟ್ಟಿದ್ದಕ್ಕೆ ಪಕ್ಷ ಮತ್ತು ನಾಯಕರನ್ನು ಅಭಿನಂದಿಸುತ್ತೇನೆ. ಪಕ್ಷದ ಸೂಚನೆಯನ್ನು ಪಾಲಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

ಅಕಾಡೆಮಿಗಳ ಅಧ್ಯಕ್ಷ ಹುದ್ದೆಯ ಮೂರು ವರ್ಷದ ಅವಧಿ ಇದೇ ಅಕ್ಟೋಬರ್ ತಿಂಗಳಿಗೆ ಮುಗಿಯುತ್ತದೆ. ಈಗ ಹಿರಿಯ ಸಚಿವರನ್ನು ಮತ್ತು ನಿಗಮ ಮಂಡಳಿಗಳ ಅಧ್ಯಕ್ಷರನ್ನು ಕೈಬಿಟ್ಟು ಹೊಸಬರಿಗೆ ಆದ್ಯತೆ ನೀಡಬೇಕು. ಆಮೂಲಕ ಮುಂದಿನ ವರ್ಷದ ಚುನಾವಣೆಗೆ ಸಜ್ಜಾಗಬೇಕು ಎಂಬ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ಬ್ಯಾರಿ ಅಕಾಡೆಮಿ ಅಧ್ಯಕ್ಷರನ್ನು ಮಾತ್ರ ತೆಗೆದು ಹಾಕಲಾಗಿದೆ. ತುಳು, ಕೊಂಕಣಿ, ಕೊಡವ ಇನ್ಯಾವುದೇ ಅಕಾಡೆಮಿ ಅಧ್ಯಕ್ಷರನ್ನು ಪದಚ್ಯುತಿ ಮಾಡಿಲ್ಲ. ಆ ರೀತಿ ಬದಲಾವಣೆ ಸಾಧ್ಯತೆ ಇದೆಯಾ ಎಂದು ಕನ್ನಡ ಸಂಸ್ಕೃತಿ ಇಲಾಖೆಯಲ್ಲಿ ಮಾಹಿತಿ ಕೇಳಿದಾಗ, ಆ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದಿದ್ದಾರೆ.

Not even one MLA is unhappy with B S Yediyurappa: Nalin Kumar Kateel |  Deccan Herald

ಹೀಗಾಗಿ ರಹೀಂ ಉಚ್ಚಿಲ ಪದಚ್ಯುತಿ ಯಾಕೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ. ಮಂಗಳೂರಿನ ಪಕ್ಷದ ಮೂಲಗಳ ಪ್ರಕಾರ, ಉಳ್ಳಾಲ ಭಾಗದ ಬಿಜೆಪಿಯವರು ರಹೀಂ ಉಚ್ಚಿಲ ವಿರುದ್ಧ ದೂರು ನೀಡಿದ್ದರಂತೆ. ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಮತ್ತು ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಗೆ ದೂರು ನೀಡಿದ್ದರು. ಇತ್ತೀಚೆಗೆ ತೊಕ್ಕೊಟ್ಟಿನಲ್ಲಿ ಬ್ಯಾರಿ ಭವನದ ನಿರ್ಮಾಣಕ್ಕೆ ತರಾತುರಿಯಲ್ಲಿ ಶಿಲಾನ್ಯಾಸ ಕಾರ್ಯ ಮಾಡಲಾಗಿತ್ತು. ಆ ಸಂದರ್ಭದಲ್ಲಿ ತೊಕ್ಕೊಟ್ಟಿನಲ್ಲಿ ಅಬ್ಬಕ್ಕ ಭವನಕ್ಕೆ ಮೀಸಲಾಗಿದ್ದ ಜಾಗದಲ್ಲಿ ಶಿಲಾನ್ಯಾಸ ಮಾಡುವುದಕ್ಕೆ ಅಲ್ಲಿನ ಬಿಜೆಪಿ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದರು.

Karkala MLA Sunil Kumar clarifies on kickback allegations in cement deal -  Daijiworld.com

ಶಿಲಾನ್ಯಾಸ ಕಾರ್ಯಕ್ರಮಕ್ಕೆ ಉಸ್ತುವಾರಿ ಸಚಿವ ಸುನಿಲ್ ಕುಮಾರ್, ಸಂಸದ ನಳಿನ್ ಕುಮಾರ್ ಅವರನ್ನು ಕರೆದಿದ್ದರೂ ಅವರು ಹೋಗಿರಲಿಲ್ಲ. ಬದಲಿಗೆ, ಕ್ಷೇತ್ರದ ಶಾಸಕ ಯುಟಿ ಖಾದರ್ ಅಲ್ಲಿಗೆ ತೆರಳಿದ್ದರು. ಖಾದರ್ ಶಿಲಾನ್ಯಾಸ ನೆರವೇರಿಸುತ್ತಿದ್ದಾಗಲೇ ಬಿಜೆಪಿ ಕಾರ್ಯಕರ್ತರು ಘೆರಾವ್ ಹಾಕಿದ್ದು ಅದಕ್ಕೆ ಖಾದರ್ ತಿರುಗೇಟು ನೀಡಿದ್ದು ನಡೆದಿತ್ತು. ಅಲ್ಲದೆ, ಬಿಜೆಪಿ ಸರಕಾರದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಬಿಜೆಪಿ ಮಂದಿಯೇ ಪ್ರತಿಭಟನೆ ನಡೆಸಿದ್ದು ಪ್ರಹಸನದ ರೀತಿ ಆಗಿತ್ತು. ಈ ಬಗ್ಗೆ ಮಾಧ್ಯಮದಲ್ಲಿಯೂ ಟೀಕೆ ವ್ಯಕ್ತವಾಗಿತ್ತು. ತೊಕ್ಕೊಟ್ಟು ಬಿಜೆಪಿ ನಾಯಕರಿಗೂ ಈ ಘಟನೆಯಿಂದ ತೀವ್ರ ಮುಜುಗರ ಸೃಷ್ಟಿಯಾಗಿತ್ತು.

ಇದಕ್ಕೆಲ್ಲ ಕಾರಣ ಬ್ಯಾರಿ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್ ಎಂದು ಅಲ್ಲಿನ ಬಿಜೆಪಿಯವರು ಹಿರಿಯ ನಾಯಕರಿಗೆ ದೂರು ನೀಡಿದ್ದರು. ರಹೀಂ ಉಚ್ಚಿಲ ಅತಿಯಾದ ಮುತುವರ್ಜಿ ವಹಿಸಿ ಶಿಲಾನ್ಯಾಸ ಕಾರ್ಯಕ್ರಮ ನಡೆಸಿದ್ದರು. ಹೀಗಾಗಿ ನಿಗಮವೊಂದರ ಅಧ್ಯಕ್ಷರೂ ಆಗಿರುವ ಸಂತೋಷ್ ರೈ ಬೋಳ್ಯಾರ್ ನೇತೃತ್ವದಲ್ಲಿ ದೂರು ನೀಡಿ, ರಹೀಂ ಉಚ್ಚಿಲ ಬದಲಿಗೆ ಬೇರೊಬ್ಬರನ್ನು ನೇಮಕ ಮಾಡುವಂತೆ ಆಗ್ರಹ ಮಾಡಿದ್ದರು ಅನ್ನುವ ಮಾಹಿತಿಗಳಿವೆ. ಇದೇ ಕಾರಣಕ್ಕೆ ರಹೀಂ ಉಚ್ಚಿಲ ಅವರನ್ನು ಅರ್ಧದಲ್ಲೇ ಪದಚ್ಯುತಗೊಳಿಸಲಾಗಿದೆ ಎನ್ನುವ ಮಾಹಿತಿ ಪಕ್ಷದ ಮೂಲಗಳಿಂದ ಸಿಕ್ಕಿದೆ. ಇನ್ನೆರಡು ದಿನಗಳಲ್ಲಿ ಹೊಸ ಅಧ್ಯಕ್ಷರ ನೇಮಕ ಆಗಲಿದೆ ಎನ್ನಲಾಗುತ್ತಿದ್ದು ಅದಕ್ಕಾಗಿ ಮಂಗಳೂರಿನ ಕೆಲವು ಮುಸ್ಲಿಂ ಮುಖಂಡರು ಬಿಜೆಪಿ ರಾಜ್ಯಾಧ್ಯಕ್ಷರ ಮೂಲಕ ಲಾಬಿ ನಡೆಸುತ್ತಿದ್ದಾರೆ.

The state government has reportedly released an order removing Rahim Uchil from his post as the president of Karnataka Beary Sahitya Academy. The reason behind his dismissal has not been stated. The under-secretary of the Kannada and Culture Department reportedly released the aforementioned order of dismissal on Tuesday April 5.