ಐಸಿಸ್ ಉಗ್ರರಿಂದ ಇಸ್ಲಾಮನ್ನು ಅರ್ಥೈಸಿದರೆ ಕೊಲ್ಲುವುದಷ್ಟೇ ಕಾಣುತ್ತದೆ ; ಝೈನಿ ಕಾಮಿಲ್

29-04-22 09:38 pm       Mangalore Correspondent   ಕರಾವಳಿ

ಇಸ್ಲಾಮನ್ನು ಸಿರಿಯಾದ ಐಸಿಸ್ ಉಗ್ರವಾದಿಗಳ ಮೂಲಕ ಅರ್ಥೈಸಲು ಪ್ರಯತ್ನಿಸುವುದೇ ಸಮಸ್ಯೆ ಸೃಷ್ಟಿಗೆ ಕಾರಣವಾಗುತ್ತಿದೆ.

ಮಂಗಳೂರು, ಎ.29: ಇಸ್ಲಾಮನ್ನು ಸಿರಿಯಾದ ಐಸಿಸ್ ಉಗ್ರವಾದಿಗಳ ಮೂಲಕ ಅರ್ಥೈಸಲು ಪ್ರಯತ್ನಿಸುವುದೇ ಸಮಸ್ಯೆ ಸೃಷ್ಟಿಗೆ ಕಾರಣವಾಗುತ್ತಿದೆ. ಐಸಿಸ್ ಉಗ್ರರು ಧರ್ಮಬಾಹಿರರನ್ನು ಗುಂಡು ಹೊಡೆದು, ತಲೆ ಕತ್ತರಿಸಿ ಕೊಲ್ಲುವಾಗ ಅಲ್ಲಾಹು ಅಕ್ಬರ್ ಘೋಷಣೆ ಕೂಗುತ್ತಾರೆ. ಇದನ್ನು ವಿಡಿಯೋದಲ್ಲಿ ನೋಡುವ ಮಂದಿ ಇದೇ ಇಸ್ಲಾಮ್ ಎಂದು ಭಾವಿಸುವುದು ಸಮಸ್ಯೆಗೆ ಕಾರಣ. ಆ ವಿಡಿಯೋ ನೋಡಿದವರು ಆಜಾನ್ ಕೂಗುವ ಸಂದರ್ಭದಲ್ಲಿ ಅಲ್ಲಾಹು ಅಕ್ಬರ್ ಕೂಗುವುದನ್ನು ಕೇಳಿ ಕೋಪದಲ್ಲಿ ಕುದಿಯುತ್ತಾರೆ. ಇದರಿಂದ ದೇಶದಲ್ಲಿ ಸಮಸ್ಯೆಗಳು ಎದುರಾಗುತ್ತಿವೆ ಎಂದು ವಿಶ್ಲೇಷಿಸಿದ್ದಾರೆ ಡಾ.ಎಂ.ಎಸ್.ಎಂ. ಝೈನಿ ಕಾಮಿಲ್.

ಬಲ್ಮಠದ ಸಹೋದಯ ಸಭಾಂಗಣದ ಬಳಿಯ ಆಲದ ಮರದಡಿಯ ಇಫ್ತಾರ್ ಮುಸ್ಸಂಜೆ ಕಾರ್ಯಕ್ರಮದಲ್ಲಿ ಸುನ್ನಿ ಯುವಜನ ಸಂಘ ಕರ್ನಾಟಕ ಇದರ ಅಧ್ಯಕ್ಷ ಝೈನಿ ಕಾಮಿಲ್ ತಮ್ಮ ಉಪನ್ಯಾಸ ನೀಡಿದರು. ಇತ್ತೀಚೆಗೆ ಕೆಲವರು ಖುರಾನಲ್ಲಿ ಕಡಿಯುವುದು, ಕೊಲ್ಲುವುದನ್ನು ಹೇಳಲಾಗುತ್ತದೆ ಎಂದು ಗುಲ್ಲೆಬ್ಬಿಸಿದ್ದರು. ಐಸಿಸ್ ಅಥವಾ ಇನ್ನಾವುದೇ ತೀವ್ರಗಾಮಿ ಗುಂಪುಗಳ ಮೂಲಕ ಇಸ್ಲಾಮನ್ನು ನೋಡಿ ಈ ರೀತಿಯ ಅರ್ಥ ಕಲ್ಪಿಸಿರುವ ಸಾಧ್ಯತೆ ಇದೆ. ಇಸ್ಲಾಮನ್ನು ಖುರಾನ್ ಅಥವಾ ಮಹಮ್ಮದ್ ಪೈಗಂಬರ್ ದೃಷ್ಟಿಯಿಂದ ನೋಡಿದರೆ ಆ ರೀತಿಯ ಅರ್ಥಗಳು ಬರುವುದಿಲ್ಲ. ಉಗ್ರರು ಅನ್ಯರನ್ನು ಕೊಲ್ಲುವ ಸಂದರ್ಭದಲ್ಲಿ ಅಲ್ಲಾಹು ಅಕ್ಬರ್ ಎಂದು ಹೇಳುವುದನ್ನು ನೋಡಿದವರು ಉಳ್ಳಾಲ, ಮಂಗಳೂರಿನಲ್ಲಿ ಆಜಾನ್ ಕೂಗುವಾಗ ಉದ್ರೇಕಗೊಳ್ಳುತ್ತಿದ್ದಾರೆ. ನೈಜ ಇಸ್ಲಾಮಿನಲ್ಲಿ ಕೊಲ್ಲುವುದನ್ನು ಹೇಳುವುದಿಲ್ಲ. ಖುರಾನಲ್ಲಿ ಕೊಲ್ಲುವುದು ನಿಷಿದ್ಧ. ಅನ್ಯರನ್ನು ಗೌರವಿಸುವುದೇ ಇಸ್ಲಾಮ್ ಧರ್ಮ ಎಂದು ಝೈನಿ ಕಾಮಿಲ್ ಹೇಳಿದರು.

ಜಗತ್ತಿನಲ್ಲಿ ಖುರಾನ್ ಅನುಸರಣೆ ಚಾಲ್ತಿಗೆ ಬಂದು ನಿನ್ನೆಗೆ 1456 ವರ್ಷ ಸಂದಿದೆ. 27ನೇ ರಂಜಾನ್ ಉಪವಾಸ ಮುಗಿದಿದ್ದು ಇನ್ನೆರಡು ಅಥವಾ ಮೂರು ದಿನಕ್ಕೆ ಪವಿತ್ರ ತಿಂಗಳು ಮುಗಿಯುತ್ತದೆ. ಬೆಳಗ್ಗೆ 4.50ರಿಂದ ಸಂಜೆ 6.45ರ ವರೆಗೆ ಉಪವಾಸ ಇದ್ದು ಸ್ವಯಂ ದಂಡನೆಗೆ ಒಳಗಾಗುವುದು, ಆಮೂಲಕ ತಮ್ಮನ್ನು ಇನ್ನಷ್ಟು ಪವಿತ್ರಗೊಳಿಸುವುದು ಇಸ್ಲಾಮ್ ಧರ್ಮ. ಆದರೆ, ಈಗ ರಾಷ್ಟ್ರ ಮಟ್ಟದಲ್ಲಿ ಧರ್ಮವನ್ನು ವ್ಯಾಪಾರ, ರಾಜಕೀಯದ ಸರಕಾಗಿ ಬಳಸುತ್ತಿರುವವರು ಹೆಚ್ಚುತ್ತಿದ್ದಾರೆ. ಮುಂಚೂಣಿಯಲ್ಲಿ ಧರ್ಮದ ಬಗ್ಗೆ  ಹೇಳಿಕೆ ನೀಡುತ್ತಿರುವವರೇ ಧಾರ್ಮಿಕ ಮುಖಂಡರು ಎಂಬಂತಾಗಿದೆ. ಧರ್ಮದ ನೈಜ ಪ್ರತಿಪಾದಕರು ಹಿನ್ನೆಲೆಗೆ ಸರಿಯುತ್ತಿರುವುದು, ಧರ್ಮವನ್ನು ಪ್ರಚಾರ, ರಾಜಕೀಯ ಮೆಟ್ಟಿಲಿಗೆ ಸರಕಾಗಿಸುವವರು ವಿಜೃಂಭಿಸುತ್ತಿರುವುದು ಅಪಾಯಕಾರಿ ಬೆಳವಣಿಗೆ ಎಂದು ಝೈನಿ ಕಾಮಿಲ್ ಹೇಳಿದರು.

ರಾಮಕೃಷ್ಣ ಮಿಶನ್ ಸಂಯೋಜಕ ರಂಜನ್ ಬೆಳ್ಳರ್ಪಾಡಿ ಮಾತನಾಡಿ, ದೀಪದಲ್ಲಿ ಐದು ಬತ್ತಿ ಇರುವಾಗ ಗಾಳಿಯ ನಡುವೆ ಒಂದೊಂದನ್ನು ಹಚ್ಚಲು ಹೋದರೆ ಹೊತ್ತಿಕೊಳ್ಳಲು ಕಷ್ಟವಾಗುತ್ತದೆ. ಎಲ್ಲ ಬತ್ತಿಗಳನ್ನು ಒಟ್ಟಾಗಿಸಿ ದೀಪ ಹಚ್ಚಿದರೆ ಸುಲಭದಲ್ಲಿ ಹೊತ್ತಿಕೊಳ್ಳುತ್ತದೆ. ಹಾಗೆಯೇ ಭಾರತದಲ್ಲಿ ಎಲ್ಲ ಧರ್ಮಗಳವರೂ ಇದ್ದಾರೆ. ಜೊತೆಯಾಗಿ ನಿಂತರೆ ಮಾತ್ರ ದೇಶ ಸೌಹಾರ್ದ ಭಾವದಲ್ಲಿ ಸಾಗುತ್ತದೆ. ಇಲ್ಲದಿದ್ದರೆ ದೇಶದಲ್ಲಿ ಸೌಹಾರ್ದ ನಾಶವಾಗುತ್ತದೆ ಎಂದು ದೃಷ್ಟಾಂತ ಸಹಿತ ವಿವರಿಸಿದರು.

ಶಾಂತಿ ಕೆಥಡ್ರಲ್ ಅಧ್ಯಕ್ಷ ರೆ.ಎಂ.ಪ್ರಭುರಾಜ್, ನಿವೃತ್ತ ಮುಖ್ಯೋಪಾಧ್ಯಾಯ ಮುನಿರಾಜ ರೆಂಜಾಳ, ಕಾರ್ಯಕ್ರಮ ಸಮನ್ವಯಕಾರ ಅರವಿಂದ ಚೊಕ್ಕಾಡಿ, ಕಾರ್ಯಕ್ರಮದ ನೇತೃತ್ವ ವಹಿಸಿದ ವಕೀಲ ದಿನೇಶ ಹೆಗ್ಡೆ ಉಳೆಪಾಡಿ ಉಪಸ್ಥಿತರಿದ್ದರು. ನೂರಕ್ಕೂ ಹೆಚ್ಚು ಮಂದಿ ಇಫ್ತಾರ್ ಸಂಜೆಯಲ್ಲಿ ಪಾಲ್ಗೊಂಡಿದ್ದರು.

Mangalore If we follow ISIS mind we will learn only killings says Dr MS Zaini Kamil.