ತಲಪಾಡಿ ದೇವಿಪುರಕ್ಕೆ ಮುಂಬೈ ಉದ್ಯಮಿಯಿಂದ ನೂತನ ದ್ವಾರ ಅರ್ಪಣೆ, ಸಂಸ್ಕೃತಿಯ ಪುನರುತ್ಥಾನ ಕೆಲಸ ಎಂದ ಒಡಿಯೂರು ಶ್ರೀ 

09-05-22 04:36 pm       Mangalore Correspondent   ಕರಾವಳಿ

ತಲಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನವನ್ನು ರಾ.ಹೆ. 66ರಲ್ಲಿ ಸಂಪರ್ಕಿಸುವ ದೇವಿಪುರ ರಸ್ತೆಯಲ್ಲಿ ಉದ್ಯಮಿ, ತಲಪಾಡಿ ನಾರ್ಲ ಹೊಸಮನೆ ಭಾಸ್ಕರ ಶೆಟ್ಟಿ ಹಾಗೂ ಉಷಾ ಬಿ. ಶೆಟ್ಟಿ ಹಾಗೂ ಮಕ್ಕಳು ನಿರ್ಮಿಸಿರುವ ನೂತನ ಶಿಲಾಮಯ ಮಹಾದ್ವಾರವನ್ನ‌ ಶ್ರೀ ಕ್ಷೇತ್ರಕ್ಕೆ ಸಮರ್ಪಿಸಲಾಯಿತು. 

ಉಳ್ಳಾಲ, ಮೇ 9: ತಲಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನವನ್ನು ರಾ.ಹೆ. 66ರಲ್ಲಿ ಸಂಪರ್ಕಿಸುವ ದೇವಿಪುರ ರಸ್ತೆಯಲ್ಲಿ ಉದ್ಯಮಿ, ತಲಪಾಡಿ ನಾರ್ಲ ಹೊಸಮನೆ ಭಾಸ್ಕರ ಶೆಟ್ಟಿ ಹಾಗೂ ಉಷಾ ಬಿ. ಶೆಟ್ಟಿ ಹಾಗೂ ಮಕ್ಕಳು ನಿರ್ಮಿಸಿರುವ ನೂತನ ಶಿಲಾಮಯ ಮಹಾದ್ವಾರವನ್ನ‌ ಶ್ರೀ ಕ್ಷೇತ್ರಕ್ಕೆ ಸಮರ್ಪಿಸಲಾಯಿತು. 

ಧಾರ್ಮಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಒಡಿಯೂರು ಗುರುದೇವ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು, ಪ್ರಸ್ತುತ ಕಾಲಘಟ್ಟದಲ್ಲಿ ಶ್ರದ್ಧಾಕೇಂದ್ರಗಳು ಧಾರ್ಮಿಕ ಶಿಕ್ಷಣ ನೀಡುವ ಕೆಲಸಕ್ಕೆ ಹೆಚ್ಚಿನ‌ ಆದ್ಯತೆ ನೀಡುತ್ತಿದೆ. ಅಲ್ಲಲ್ಲಿ ಮೆರೆಯುತ್ತಿದ್ದ ಪಾಶ್ಚಾತ್ಯ ಆಚರಣೆಗಳು ಕಡಿಮೆ ಆಗಿ ಪೋಷಕರು ತಮ್ಮ ಮಕ್ಕಳನ್ನು ಭಜನೆಯ ಕಡೆ ಚಿತ್ತ ಹರಿಸುವ ಪ್ರಯತ್ನ ಮಾಡುತ್ತಿರುವುದು ಸಂತಸ ತಂದಿದೆ. ತಲಪಾಡಿಯಲ್ಲಿ ದ್ವಾರ ನಿರ್ಮಾಣದಿಂದ ಧರ್ಮ ಪುನರುತ್ಥಾನ, ಅನುಸಂಧಾನದ  ಕೆಲಸವಾಗಿದೆ ಎಂದರು.

ದ್ವಾರವೆಂದರೆ ವಯಾ ಸಂಸ್ಕೃತಿಯ ಪುನರುತ್ಥಾನ. ಸಮರ್ಪಣಾ ಭಾವ ಇದ್ದರೆ ಮಾತ್ರ ಇಂತಹ ಶ್ರೇಷ್ಠ ಕಾರ್ಯ ಸಾಧ್ಯ. ದೇವರ ನೆನಪಿಸಲು ಭಗವಂತನ ಅನುಸಂಧಾನಕ್ಕೆ ದ್ವಾರ ಅತಿ ಮುಖ್ಯವಾಗುತ್ತದೆ. ಅಂತಹ ದೊಡ್ಡ ಕಾರ್ಯ ಮಾಡಿದ ಭಾಸ್ಕರ ಶೆಟ್ಟಿ ಕುಟುಂಬಕ್ಕೆ ದೇವರು ಸದಾ ಅನುಗ್ರಹಿಸಲಿ ಎಂದರು. ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಅರ್ಚಕ ಹರಿನಾರಾಯಣ ಆಸ್ರಣ್ಣ ನೂತನ ಶಿಲಾಮಯ ಮಹಾದ್ವಾರ ಸಮರ್ಪಿಸಿದರು. ಉದ್ಯಾವರ ಮಾಡ ಶ್ರೀ ಅರಸು ಮಂಜಿಷ್ಣಾರ್ ಕ್ಷೇತ್ರದ ಮಾಜಿ ಆಡಳಿತ ಮೊಕ್ತೇಸರ ಡಾ. ಜಯಪಾಲ ಶೆಟ್ಟಿ ತಲಪಾಡಿ ದೊಡ್ಡಮನೆ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ದ್ವಾರ ಕೊಡುಗೆಯಿತ್ತ ಭಾಸ್ಕರ ಶೆಟ್ಟಿ, ಉಷಾ ಬಿ. ಶೆಟ್ಟಿ ಹಾಗೂ ಪುತ್ರ ಡಾ. ಹರ್ಷಿತ್ ಬಿ. ಶೆಟ್ಟಿ ಅವರನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಹಾಗೂ ಸಾರ್ವಜನಿಕರ ವತಿಯಿಂದ ಸನ್ಮಾನಿಸಲಾಯಿತು. ನೂತನ‌ ‌ಶಿಲಾಮಯ ಮಹಾದ್ವಾರದ ಶಿಲ್ಪಿ ಕೃಷ್ಣ , ವಿನ್ಯಾಸಗಾರ ಇಂಜಿನಿಯರ್ ವಿನೋದ್ ಶೆಟ್ಟಿ ಉಳಿಯಗುತ್ತು ಹಾಗೂ ಗುತ್ತಿಗೆದಾರ ಮೋಹನ್ ಶೆಟ್ಟಿ, ದ್ವಾರ ನಿರ್ಮಾಣಕ್ಕೆ ಸ್ಥಳದಾನಗೈದ ರಾಜಾರಾಮ ಅಡ್ಯಂತಾಯ ಹಾಗೂ ಕ್ಷೇತ್ರದ ಪ್ರಧಾನ ಅರ್ಚಕ ಗಣೇಶ್ ಭಟ್ ಅವರನ್ನು ಅಭಿನಂದಿಸಲಾಯಿತು.

ಶ್ರೀದೇವಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎ. ಸದಾನಂದ ಶೆಟ್ಟಿ , ಮುಂಬೈ ಉದ್ಯಮಿ ಅಜಿತ್ ರೈ ಮುಲ್ಕಿ ಪಾದೆಮನೆ, ಶ್ರೀ ಕ್ಷೇತ್ರ ತಲಪಾಡಿಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ. ಮೋಹನದಾಸ್ ರೈ ಸಾಂತ್ಯಗುತ್ತು, ದಕ್ಷಿಣ ಕನ್ನಡ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಗೋಪಾಲ ಕುತ್ತಾರು, ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ಕೋಶಾಧಿಕಾರಿ ನ್ಯಾಯವಾದಿ ಪದ್ಮರಾಜ್ ಆರ್. ಉಪಸ್ಥಿತರಿದ್ದರು. ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಸದಸ್ಯ ಮೋಹನದಾಸ್ ಶೆಟ್ಟಿ ನೆತ್ತಿಲಬಾಳಿಕೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪುರುಷೋತ್ತಮ ಭಂಡಾರಿ ಹಾಗೂ ಗೋಪಾಲಕೃಷ್ಣ ಮೇಲಾಂಟ ಕಾರ್ಯಕ್ರಮ‌ ನಿರೂಪಿಸಿದರು. ನಾರ್ಲತ್ತಾಯಿ ಸೇವಾ ಸಮಿತಿಯ ಸಂತೋಷ್ ಶೆಟ್ಟಿ ವಂದಿಸಿದರು.

New dwara dedicated to Shri Durga Parameshwari Temple in Talapady by Mumbai businessmen