ನಾರಾಯಣ ಗುರುಗಳ ಸ್ತಬ್ಧಚಿತ್ರ ತೆಗೆದು ಹಾಕಿದ್ರು, ಈಗ ಪಠ್ಯದಿಂದಲೂ ಗುರುಗಳನ್ನು ಹೊರಕ್ಕಟ್ಟಿ ಅಪಮಾನಿಸಿದ್ದಾರೆ

18-05-22 10:06 pm       Mangaluru Correspondent   ಕರಾವಳಿ

ಇಡೀ ಜಗತ್ತಿಗೆ ಒಂದೇ ಜಾತಿ, ಒಂದೇ ದೇವರು ಅನ್ನುವ ಉದಾತ್ತ ಮಂತ್ರವನ್ನು ಹೇಳಿಕೊಟ್ಟ ಗುರುಗಳನ್ನು ಬಿಜೆಪಿ ಸರಕಾರ ನಗಣ್ಯ ಮಾಡಿದೆ. ಶಿಕ್ಷಣ ಇಲಾಖೆಯ ಈ ರೀತಿಯ ನಡೆಯನ್ನು ಕಾಂಗ್ರೆಸ್ ಸಹಿಸುವುದಿಲ್ಲ ಎಂದು ಮಾಜಿ ಶಾಸಕ ಜೆ.ಆರ್. ಲೋಬೊ ಹೇಳಿದ್ದಾರೆ.

ಮಂಗಳೂರು, ಮೇ 19: ಕಳೆದ ಬಾರಿ ನಾರಾಯಣ ಗುರುಗಳ ಸ್ತಬ್ಧಚಿತ್ರ ತೆಗೆದು ಹಾಕಿ ಕೇಂದ್ರ ಸರಕಾರ ಗುರುಗಳಿಗೆ ಅವಮಾನ ಮಾಡಿತ್ತು. ಈ ಬಾರಿ ರಾಜ್ಯ ಸರಕಾರ ಹತ್ತನೇ ತರಗತಿಯ ಪಠ್ಯದಲ್ಲಿ ನಾರಾಯಣ ಗುರುಗಳ ಪಠ್ಯವನ್ನೇ ತೆಗೆದು ಹಾಕಿದ್ದು, ಇಡೀ ಸಮಾಜಕ್ಕೆ ಅಪಮಾನ ಮಾಡಿದೆ. ಇಡೀ ಜಗತ್ತಿಗೆ ಒಂದೇ ಜಾತಿ, ಒಂದೇ ದೇವರು ಅನ್ನುವ ಉದಾತ್ತ ಮಂತ್ರವನ್ನು ಹೇಳಿಕೊಟ್ಟ ಗುರುಗಳನ್ನು ಬಿಜೆಪಿ ಸರಕಾರ ನಗಣ್ಯ ಮಾಡಿದೆ. ಶಿಕ್ಷಣ ಇಲಾಖೆಯ ಈ ರೀತಿಯ ನಡೆಯನ್ನು ಕಾಂಗ್ರೆಸ್ ಸಹಿಸುವುದಿಲ್ಲ ಎಂದು ಮಾಜಿ ಶಾಸಕ ಜೆ.ಆರ್. ಲೋಬೊ ಹೇಳಿದ್ದಾರೆ.

ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಲೋಬೊ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹುಟ್ಟಿ ಇಡೀ ದೇಶಕ್ಕೆ ಹರಡಿದ ವಿಜಯಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಕಾರ್ಪೋರೇಶನ್ ಬ್ಯಾಂಕಿನ ಹೆಸರನ್ನೇ ಅಳಿಸಿ ಹಾಕಿದ್ದು, ಈ ನೆಲದ ಅಸ್ಮಿತೆಯ ಬ್ಯಾಂಕುಗಳು ಅನ್ನುವುದನ್ನೇ ಮರೆಮಾಚಲಾಗಿದೆ. ಆನಂತರ ಕರಾವಳಿ ನೆಲದಲ್ಲಿ ನಡೆದಾಡಿದ ದೇವರು ಎಂದೇ ಪರಿಗಣಿಸಲ್ಪಟ್ಟ ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ಗಣರಾಜ್ಯ ದಿವಸಕ್ಕೆ ಪರಿಗಣಿಸದೆ, ಗುರುಗಳ ಬದಲಿಗೆ ಶಂಕರಾಚಾರ್ಯರ ಟ್ಯಾಬ್ಲೋ ಬೇಕೆಂದು ಹೇಳಿ ಅವಮಾನ ಮಾಡಲಾಗಿತ್ತು. ಅದೇನೋ ಕಣ್ತಪ್ಪಿನಿಂದ ಆಗಿಹೋಗಿದೆ ಎಂದು ಹೇಳಬಹುದಿತ್ತು. ಆದರೆ, ಈಗ ಕರ್ನಾಟಕದ ಶಿಕ್ಷಣ ಇಲಾಖೆಯು ಪಠ್ಯದಲ್ಲಿ ಬದಲಾವಣೆ ತರುವ ನೆಪದಲ್ಲಿ ಉದಾತ್ತ ತತ್ವಗಳನ್ನು ಹೇಳಿಕೊಟ್ಟ ನಾರಾಯಣ ಗುರುಗಳ ಪಠ್ಯವನ್ನು ತೆಗೆದು ಹಾಕಿದೆ. ಇದನ್ನು ನಾವು ಖಂಡಿಸುತ್ತೇವೆ ಎಂದು ಹೇಳಿದರು.

ಸಾಮಾಜಿಕ ನ್ಯಾಯ, ಸಮಾನತೆಯನ್ನು ಹೇಳಿಕೊಟ್ಟು ಸಮಾಜದಲ್ಲಿದ್ದ ಕಂದಕಗಳನ್ನು ನಿವಾರಿಸಿ, ಹಿಂದುಳಿದವರ ಏಳ್ಗೆಗಾಗಿ ದುಡಿದ ನಾರಾಯಣ ಗುರುಗಳು ಮೊದಲ ಬಾರಿಗೆ ಮಂಗಳೂರಿಗೆ ಬಂದಿಳಿದ ರೈಲು ನಿಲ್ದಾಣಕ್ಕೆ ಗುರುಗಳ ಹೆಸರಿಡಬೇಕು ಎನ್ನುವ ಒತ್ತಾಯವನ್ನು ಕಾಂಗ್ರೆಸ್ ಮಾಡಿತ್ತು. ಆದರೆ, ನಮ್ಮ ಮನವಿಗೆ ಕೇಂದ್ರ ಸರಕಾರ ಸ್ಪಂದಿಸಿಲ್ಲ. ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯರ ಹೆಸರಿಡಬೇಕೆಂಬ ಒತ್ತಾಯಕ್ಕೂ ಮನ್ನಣೆ ನೀಡಿಲ್ಲ. ಈ ಭಾಗದ ಜನರ ಪ್ರತಿಭಟನೆ, ಒತ್ತಾಯಕ್ಕೂ ಬೆಲೆ ಸಿಕ್ಕಿಲ್ಲ. ಕಳೆದ ಬಾರಿ ನಾರಾಯಣ ಗುರುಗಳ ಸ್ತಬ್ಧಚಿತ್ರ ಕೈಬಿಟ್ಟಾಗಲೂ ಜನರು ಪ್ರತಿಭಟನೆ ನಡೆಸಿದ್ದರು. ತಮ್ಮ ನೋವನ್ನು ವ್ಯಕ್ತಪಡಿಸಿದ್ದರು. ನಾರಾಯಣ ಗುರುಗಳು ಸಾಮಾನ್ಯ ವ್ಯಕ್ತಿಯಲ್ಲ. ಒಂದೇ ಜಾತಿ, ಒಂದೇ ಧರ್ಮ ಎಂದು ಸಾರಿದ ಗುರುಗಳು ದೊಡ್ಡ ದಾರ್ಶನಿಕರು. ಅವರ ತತ್ವಗಳನ್ನು ಸಾರುವ ಪಠ್ಯವನ್ನು ಕೈಬಿಟ್ಟು ಬಿಜೆಪಿ ಸರಕಾರ ಸಮಾಜಕ್ಕೆ ಯಾವ ಸಂದೇಶ ನೀಡುತ್ತಿದೆ ಎಂದು ಜೆ.ಆರ್. ಲೋಬೊ ಪ್ರಶ್ನೆ ಮಾಡಿದರು.

ಉತ್ತರ ಕರ್ನಾಟಕದಲ್ಲಿ ಮಾನವೀಯ ಧರ್ಮವನ್ನು ಸಾರಿದ ಬಸವಣ್ಣ, ಕೇರಳದಲ್ಲಿ ಕ್ರಾಂತಿಕಾರಿ ನಡೆಗಳನ್ನು ಹೇಳಿಕೊಟ್ಟ ಪೆರಿಯಾರ್ ಕುರಿತ ಪಠ್ಯಗಳನ್ನೂ ಕೈಬಿಡಲಾಗಿದೆ ಎನ್ನುವ ಮಾಹಿತಿಗಳಿವೆ. ಮಹಾಪುರುಷರ ಕುರಿತು ಮಕ್ಕಳು ಓದಿಕೊಂಡು ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಲು ಇಂಥ ಪಠ್ಯಗಳು ಬೇಕಾಗುತ್ತವೆ. ಆದರೆ, ಬಿಜೆಪಿ ಸರಕಾರ ಅವನ್ನೇ ತೆಗೆದು ಹಾಕಿದ್ದು, ಬೇರೆ ಇನ್ಯಾರದೋ ಹೊಸಬರ ಪಠ್ಯಗಳನ್ನು ಶಾಲಾ ಪಠ್ಯದಲ್ಲಿ ಸೇರಿಸಿದೆ. ಕೂಡಲೇ ನಾರಾಯಣ ಗುರುಗಳ ಪಠ್ಯವನ್ನು ಮತ್ತೆ ಸೇರಿಸದಿದ್ದರೆ ಕಾಂಗ್ರೆಸ್ ಚಳವಳಿ ನಡೆಸಲಿದೆ ಎಂದು ಲೋಬೋ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಶಾಹುಲ್ ಹಮೀದ್, ಉಮೇಶ್ ದಂಡೆಕೇರಿ, ಅಬ್ದುಲ್ ಸಲೀಂ, ಟಿ.ಕೆ.ಸುಧೀರ್, ರಮಾನಂದ ಪೂಜಾರಿ, ಚಂದ್ರಕಲಾ, ಹೇಮಂತ್ ಪೂಜಾರಿ, ನಜೀರ್ ಬಜಾಲ್ ಮತ್ತಿತರಿದ್ದರು. 

Brahmashri Narayana Guru is not a common man, but a great spiritual leader. Instead of honouring a great social reformer, the BJP-led union and state governments are dishonouring him," said former MLA J R Lobo. He was addressing a press meet at Congress Bhavan here on Wednesday May 18. Lobo alleged that the state government has dropped a chapter on Narayana Guru from the class 10 textbook. "Though we have demanded to name Mangaluru railway station after Narayana Guru and Mangaluru International Airport after Koti-Chennayya, the union government is not showing any response for the demand."