'ಆಸ್ಟ್ರೇಲಿಯಾ ಟೆಸ್ಟ್‌ ಸರಣಿಯಲ್ಲಿ ಪಂತ್‌ ಸ್ಥಾನಕ್ಕೆ ಸರ್ಫರಾಝ್‌ ಖಾನ್‌ ಆಯ್ಕೆ ಮಾಡಿ'-ಫ್ಯಾನ್ಸ್‌ ಆಗ್ರಹ!

05-01-23 01:08 pm       Source: Vijayakarnataka   ಕ್ರೀಡೆ

ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರುತ್ತಿರುವ ಮುಂಬೈ ಬ್ಯಾಟ್ಸ್‌ಮನ್ ಸರ್ಫರಾಝ್‌ ಖಾನ್‌ ಅವರಿಗೆ ಭಾರತ ತಂಡದಲ್ಲಿ ಅವಕಾಶ ನೀಡಬೇಕೆಂದು ಅಭಿಮಾನಿಗಳು ಆಗ್ರಹಿಸಿದ್ದಾರೆ. ಇತ್ತೀಚೆಗೆ ರಿಷಭ್‌ ಪಂತ್‌ ಅವರು ಭೀಕರ ಕಾರು ಅಪಘಾತದಲ್ಲಿ ತೀವ್ರ ಗಾಯಗಳಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ದೇಶಿ ಕ್ರಿಕೆಟ್‌ ಟೂರ್ನಿಯಲ್ಲಿ ತಮ್ಮ ಬ್ಯಾಟಿಂಗ್‌ ಫಾರ್ಮ್‌ ಮುಂದುವರಿಸುತ್ತಿರುವ ಮುಂಬೈ ಬ್ಯಾಟ್ಸ್‌ಮನ್‌ ಸರ್ಫರಾಝ್‌ ಖಾನ್ ರನ್‌ ಹೊಳೆ ಹರಿಸುತ್ತಿದ್ದಾರೆ. ಮುಂಬೈನಲ್ಲಿ ನಡೆಯುತ್ತಿರುವ 2022-23ರ ಸಾಲಿನ ರಣಜಿ ಟ್ರೋಫಿ ಟೂರ್ನಿಯ ತಮಿಳುನಾಡು ವಿರುದ್ದದ ಪಂದ್ಯದಲ್ಲಿ ಸರ್ಫರಾಝ್‌ ಖಾನ್ ವೃತ್ತಿ ಜೀವನದ 12ನೇ ಪ್ರಥಮ ದರ್ಜೆ ಕ್ರಿಕೆಟ್‌ ಶತಕ ಸಿಡಿಸಿದ್ದಾರೆ.

ತಮಿಳುನಾಡು ತಂಡ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ 144 ರನ್‌ಗಳಿಗೆ ಆಲ್‌ಔಟ್‌ ಆದ ಬಳಿಕ ಪ್ರಥಮ ಇನಿಂಗ್ಸ್‌ ಆರಂಭಿಸಿದ ಮುಂಬೈ ತಂಡ 113 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಪೃಥ್ವಿ ಶಾ (35) ಹಾಗೂ ಅಜಿಂಕ್ಯ ರಹಾನೆ ಸಿಕ್ಕ ಉತ್ತಮ ಆರಂಭದಲ್ಲಿ ದೊಡ್ಡ ಮೊತ್ತವನ್ನು ಕಲೆ ಹಾಕುವಲ್ಲಿ ಎಡವಿದರು. ಆದರೆ, ಸರ್ಫರಾಝ್‌ ಖಾನ್‌ ತಮ್ಮ ಅಮೋಘ ಬ್ಯಾಟಿಂಗ್ ಬಲದಿಂದ ಪಂದ್ಯದ ದಿಕ್ಕನ್ನು ಬದಲಿಸಿದರು.

Rishabh Pant's replacement for Australia Tests should be Sarfaraz Khan" - Fans  make demands of BCCI as Sarfaraz hits another Ranji Trophy 100

28 ರನ್‌ ಗಳಿಸಿದ ಶ್ಯಾಮ್ಸ್‌ ಮುಲಾನಿ ಸ್ವಲ್ಪ ಹೊತ್ತು ಸರ್ಫರಾಝ್‌ ಖಾನ್‌ಗೆ ಸಾಥ್‌ ನೀಡಿದ್ದರು. ಆದರೆ, ಅವರು 35ನೇ ಓವರ್‌ನಲ್ಲಿ ನಿರ್ಗಮಿಸಿದ ಬಳಿಕ ಮುಂಬೈ 166 ರನ್‌ಗಳಿಗೆ 6 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ನಂತರ ಸರ್ಫರಾಝ್‌ ಖಾನ್ ಹಾಗೂ ತನುಷ್‌ ಕೋಟಿಯನ್‌ (71 ರನ್‌) ಜೋಡಿ 7ನೇ ವಿಕೆಟ್‌ಗೆ 167 ರನ್‌ ನಿರ್ಣಾಯಕ ಜೊತೆಯಾಟವನ್ನು ಆಡಿತ್ತು. ಆ ಮೂಲಕ ಮುಂಬೈ ತಂಡದ ದೊಡ್ಡ ಮೊತ್ತದ ಮುನ್ನಡೆಗೆ ಕಾರಣರಾದರು.

ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಸೊಗಸಾಗಿ ಬ್ಯಾಟ್‌ ಮಾಡಿದ ಸರ್ಫರಾಝ್‌ ಖಾನ್‌ ತಮಿಳುನಾಡು ಬೌಲರ್‌ಗಳನ್ನು ಬೆಂಡೆತ್ತಿದರು. 220 ಎಸೆತಗಳನ್ನು ಎದುರಿಸಿದ ಅವರು, ಎರಡು ಭರ್ಜರಿ ಸಿಕ್ಸರ್‌ ಹಾಗೂ 19 ಮನಮೋಹಕ ಬೌಂಡರಿಗಳೊಂದಿಗೆ 162 ರನ್‌ ಗಳಿಸಿ ನೆರೆದಿದ್ದ ಅಭಿಮಾನಿಗಳನ್ನು ರಂಜಿಸಿದರು. ಆ ಮೂಲಕ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ತಮ್ಮ 12ನೇ ಶತಕವನ್ನು ಪೂರ್ಣಗೊಳಿಸಿದರು ಹಾಗೂ ತಂಡದ ಮೊತ್ತವನ್ನು 400ರ ಗಡಿ ದಾಟಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.

ಸರ್ಫರಾಝ್‌ ಖಾನ್‌ ವಿಕೆಟ್‌ ಒಪ್ಪಿಸಿದ ಬಳಿಕ ಕೊನೆಯ ಹಂತದಲ್ಲಿ ಮೋಹಿತ್‌ ಅವಾಸ್ತಿ (69 ರನ್‌) ಹಾಗೂ ಸಿದ್ದಾರ್ಥ್‌ ರಾವತ್ (31*) ಅವರು ನಿರ್ಣಾಯಕ ಕೊಡುಗೆ ನೀಡಿದರು. ಆ ಮೂಲಕ ಮುಂಬೈ ಪ್ರಥಮ ಇನಿಂಗ್ಸ್‌ನಲ್ಲಿ 106.4 ಓವರ್‌ಗಳಿಗೆ 481 ರನ್‌ ಗಳಿಸಿ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು. ಇದರೊಂದಿಗೆ 337 ರನ್ ಬೃಹತ್ ಮುನ್ನಡೆಯನ್ನು ಪಡೆಯಿತು.

ಇಲ್ಲಿಯವರೆಗೂ 35 ಪ್ರಥಮ ದರ್ಜೆ ಪಂದ್ಯಗಳಾಡಿರುವ ಸರ್ಫರಾಝ್‌ ಖಾನ್‌ 77.43ರ ಸರಾಸರಿಯಲ್ಲಿ 3175 ರನ್‌ ಸಿಡಿಸಿದ್ದಾರೆ. 2019-20ರ ಸಾಲಿನ ರಣಜಿ ಟ್ರೋಫಿ ಟೂರ್ನಿಯಲ್ಲಿ ಉತ್ತರ ಪ್ರದೇಶ ವಿರುದ್ಧ ಸಿಡಸಿದ್ದ 301* ರನ್‌ ಬಲಗೈ ಬ್ಯಾಟ್ಸ್‌ಮನ್‌ನ ವೃತ್ತಿ ಜೀವನದ ಶ್ರೇಷ್ಠ ಇನಿಂಗ್ಸ್ ಆಗಿದೆ. ಅಂದಹಾಗೆ ತಮಿಳುನಾಡು ವಿರುದ್ಧ ಸರ್ಫರಾಝ್‌ ಖಾನ್‌ ಶತಕ ಸಿಡಿಸಿದ ಬಳಿಕ ಅಭಿಮಾನಿಗಳು ಮುಂಬೈ ಬ್ಯಾಟ್ಸ್‌ಮನ್‌ಗೆ ಭಾರತ ತಂಡದಲ್ಲಿ ಅವಕಾಶ ನೀಡಬೇಕೆಂದು ಆಗ್ರಹಿಸಿದ್ದಾರೆ.

ಇತ್ತೀಚೆಗೆ ಭಾರತ ತಂಡದ ವಿಕೆಟ್‌ ಕೀಪರ್‌ ರಿಷಭ್‌ ಪಂತ್ ಅವರು ಕಾರು ಅಪಘಾತದಲ್ಲಿ ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಫೆಬ್ರವರಿಯಿಂದ ಆರಂಭವಾಗುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ ಸರಣಿಗೆ ಲಭ್ಯರಾಗುವುದು ಬಹುತೇಕ ಅನುಮಾನ. ಈ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ಸರ್ಫರಾಝ್‌ ಖಾನ್‌ಗೆ ಅವಕಾಶ ನೀಡಬೇಕೆಂದು ಅಭಿಮಾನಿಗಳು ಟ್ವಿಟರ್‌ನಲ್ಲಿ ಆಗ್ರಹಿಸಿದ್ದಾರೆ.

Ind Vs Aus Rishabh Pants Replacement For Australia Tests Should Be Sarfaraz Khan Fans Make Demands Of Bcci As Sarfaraz Hits Another Ranji Trophy 100.