ಪೃಥ್ವಿ ಶಾ ಬದಲು ಕೆಎಲ್ ರಾಹುಲ್ ಆರಂಭಿಕನಾಗಿ ಕಣಕ್ಕಿಳಿಯಲಿ: ಸುನಿಲ್ ಗವಾಸ್ಕರ್

21-12-20 04:46 pm       Source: MYKHEL Madhukara Shetty   ಕ್ರೀಡೆ

ಆಸ್ಟ್ರೇಲಿಯಾ ವಿರುದ್ಧದ ಮುಂದಿನ ಸರಣಿಗೆ ಟೀಮ್ ಇಂಡಿಯಾದಲ್ಲಿ ಪ್ರಮುಖ ಬದಲಾವಣೆ ಮಾಡಿಕೊಳ್ಳುವ ಬಗ್ಗೆ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಅನುಭವಿಸಿದ ಹೀನಾಯ ಸೋಲು ಹಾಗೂ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 36 ರನ್‌ಗೆ ಕುಸಿದಿರುವುದು ಸಾಕಷ್ಟು ಟೀಕೆಗೆ ಗುರಿಯಾಗಿದೆ. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧದ ಮುಂದಿನ ಸರಣಿಗೆ ಟೀಮ್ ಇಂಡಿಯಾದಲ್ಲಿ ಪ್ರಮುಖ ಬದಲಾವಣೆ ಮಾಡಿಕೊಳ್ಳುವ ಬಗ್ಗೆ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಅದರಲ್ಲೂ ಸತತವಾಗಿ ವೈಫಲ್ಯವನ್ನು ಅನುಭವಿಸುತ್ತಾ ಬಂದಿರುವ ಪೃಥ್ವಿ ಶಾ ತಂಡದಿಂದ ಹೊರಗುಳಿಯಲಿ ಎಂಬುದು ಬಲವಾಗಿ ಕೇಳಿ ಬರುತ್ತಿರುವ ಮಾತು. ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಕೂಡ ಇದೇ ಮಾತನ್ನು ವ್ಯಕ್ತಪಡಿಸಿದ್ದಾರೆ.

ಭಾರತ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್‌ಗಾಗಿ ಸಾಕಷ್ಟು ಸಕಾರಾತ್ಮಕ ಉದ್ದೇಶದೊಂದಿಗೆ ಕಣಕ್ಕಿಳಿದು ಹೊಸತನದಿಂದ ಆರಂಭಿಸಬೇಕಿದೆ ಎಂದು ಸುನಿಲ್ ಗವಾಸ್ಕರ್ ಭಾರತೀಯ ಕ್ರಿಕೆಟ್ ತಂಡಕ್ಕೆ ಸಲಹೆಯನ್ನು ನೀಡಿದ್ದಾರೆ. ಈ ಮೂಲಕ ಮೊದಲ ಟೆಸ್ಟ್‌ನ ಸೋಲನ್ನು ಮರೆತು ಕಣಕ್ಕಿಳಿಬೇಕು ಎಂದಿದ್ದಾರೆ ಗವಾಸ್ಕರ್.

ಭಾರತ ಉತ್ತಮ ಆರಂಭವನ್ನು ಪಡೆಯಬೇಕು. ಆ ಮೂಲಕ ನಡೆದ ತಂಡಕ್ಕೆ ಸಕಾರಾತ್ಮಕತೆಯನ್ನು ತುಂಬಬಹುದು. ಹೀಗಾಗಿ ಆರಂಬಿಕನಾಗಿ ಕೆಎಲ್ ರಾಹುಲ್ ಅವರನ್ನು ಪೃಥ್ವಿ ಶಾ ಬದಲಿಗೆ ಕಣಕ್ಕಿಳಿಸಬೇಕು ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ. ಇದರ ಜೊತೆಗೆ ಶುಭ್ಮನ್ ಗಿಲ್ ನಂಬರ್ 5 ಅಥವಾ ನಂಬರ್ 6ನೇ ಬ್ಯಾಟ್ಸ್‌ಮನ್ ಆಗಿ ತಂಡಕ್ಕೆ ಸೇರಿಕೊಳ್ಳಬೇಕು. ಆತ ಅತ್ಯುತ್ತಮ ಫಾರ್ಮ್‌ನಲ್ಲಿದ್ದು ತಂಡಕ್ಕೆ ಆತನಿಂದ ಕೊಡುಗೆ ದೊರೆಯಲಿದೆ ಎಂಬುದನ್ನು ಗವಾಸ್ಕರ್ ಹೇಳಿದ್ದಾರೆ. ಇನ್ನು ಇದೇ ಸಂದರ್ಭದಲ್ಲಿ ಸುನಿಲ್ ಗವಾಸ್ಕರ್ ಟೀಮ್ ಇಂಡಿಯಾದ ಫೀಲ್ಡಿಂಗ್ ಬಗ್ಗೆಗೂ ಮಾತನಾಡಿದರು. ನಾವು ಉತ್ತಮ ರೀತಿಯಲ್ಲಿ ಫೀಲ್ಡಿಂಗ್ ಹೊಂದಿದ್ದರೆ ಬಂದ ಕ್ಯಾಚ್‌ಗಳನ್ನು ಹಿಡಿಯುವ ಮೂಲಕ ಫಿಲ್ಡಿಂಗ್ ಚೆನ್ನಾಗಿ ಮಾಡಿದ್ದರೆ ದೊಡ್ಡ ಸಮಸ್ಯೆಗಳು ಬರಲಾರದು.

ಮರ್ಲಾನ್ ಲ್ಯಾಬುಶೈನ್ ಹಾಗೂ ಟಿಮ್ ಪೇನ್ ನೀಡಿದ ಕ್ಯಾಚ್‌ಗಳನ್ನು ಹಿಡಿದ್ದರೆ ಬಲುಬೇಗನೆ ವಿಕೆಟ್ ಕಳೆದುಕೊಳ್ಳುತ್ತಿದ್ದರು. ಆಗ ತಂಡಕ್ಕೆ ಕನಿಷ್ಟ 120 ರನ್‌ಗಳ ಲೀಡ್ ದೊರೆಯುತ್ತಿತ್ತು. ಆದರೆ ಆ ಕ್ಯಾಚ್‌ಗಳನ್ನು ಕೈಚೆಲ್ಲಿದ್ದರ ಪರಿಣಾಮ ಆ ಲೀಡ್ 50 ರನ್‌ಗೆ ಇಳಿಯಿತು ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ


This News Article is a Copy of MYKHEL