ಕೇಸರಿ ಶಾಲು ಹಾಕಿದವರಿಂದ ಹಲ್ಲೆಯೆಂದು ಬಿಂಬಿಸಿ ಕೋಮು ದ್ವೇಷ ಹರಡಲು ಯತ್ನ ; ಹುಡುಗನ ಅಸಲಿ ಕೃತ್ಯ ಬಯಲು

30-06-22 10:28 pm       HK News Desk   ಕ್ರೈಂ

ಕೇಸರಿ ಶಾಲು ಹಾಕ್ಕೊಂಡಿದ್ದ ಇಬ್ಬರು ಯುವಕರು ಮದ್ರಸಾದಿಂದ ತೆರಳುತ್ತಿದ್ದ ಮುಸ್ಲಿಂ ವಿದ್ಯಾರ್ಥಿಗೆ ಹಲ್ಲೆ ಮಾಡಿದ್ದಾರೆ ಅನ್ನುವ ಸುದ್ದಿ ಕಾಟಿಪಳ್ಳ, ಕೃಷ್ಣಾಪುರದಲ್ಲಿ ಸಾಕಷ್ಟು ಆತಂಕಕ್ಕೆ ಕಾರಣವಾಗಿತ್ತು. ಇದನ್ನೇ ಮುಂದಿಟ್ಟು ಕೆಲವು ಕಿಡಿಗೇಡಿಗಳು ಹಿಂದು ಯುವಕರು ಹಲ್ಲೆ ನಡೆಸಿದ್ದಾರೆಂದು ಸಾಮಾಜಿಕ ಜಾಲತಾಣದಲ್ಲಿ ಕೋಮು ದ್ವೇಷವನ್ನೂ ಹರಡಿದ್ದರು.

ಮಂಗಳೂರು, ಜೂನ್ 30: ಕೇಸರಿ ಶಾಲು ಹಾಕ್ಕೊಂಡಿದ್ದ ಇಬ್ಬರು ಯುವಕರು ಮದ್ರಸಾದಿಂದ ತೆರಳುತ್ತಿದ್ದ ಮುಸ್ಲಿಂ ವಿದ್ಯಾರ್ಥಿಗೆ ಹಲ್ಲೆ ಮಾಡಿದ್ದಾರೆ ಅನ್ನುವ ಸುದ್ದಿ ಕಾಟಿಪಳ್ಳ, ಕೃಷ್ಣಾಪುರದಲ್ಲಿ ಸಾಕಷ್ಟು ಆತಂಕಕ್ಕೆ ಕಾರಣವಾಗಿತ್ತು. ಇದನ್ನೇ ಮುಂದಿಟ್ಟು ಕೆಲವು ಕಿಡಿಗೇಡಿಗಳು ಹಿಂದು ಯುವಕರು ಹಲ್ಲೆ ನಡೆಸಿದ್ದಾರೆಂದು ಸಾಮಾಜಿಕ ಜಾಲತಾಣದಲ್ಲಿ ಕೋಮು ದ್ವೇಷವನ್ನೂ ಹರಡಿದ್ದರು. ಇದರಿಂದ ಮುಸ್ಲಿಂ ಏರಿಯಾದಲ್ಲಿ ಆಕ್ರೋಶವೂ ಉಂಟಾಗಿತ್ತು. ಆದರೆ, ಪೊಲೀಸರ ತನಿಖೆಯ ಬಳಿಕ ಇಡೀ ಪ್ರಕರಣವೇ ಉಲ್ಟಾ ಆಗಿದ್ದು, ಹುಡುಗನದ್ದೇ ಕಾರುಬಾರು ಅನ್ನುವುದು ಬೆಳಕಿಗೆ ಬಂದಿದೆ.

ಮೊನ್ನೆ ಸೋಮವಾರ ಸಂಜೆ ಮದ್ರಸಾ ಶಿಕ್ಷಣಕ್ಕೆ ತೆರಳಿದ್ದ 13 ವರ್ಷದ ಬಾಲಕನಿಗೆ ಹಲ್ಲೆ ಮಾಡಲಾಗಿದೆ ಎಂದು ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಆ ಭಾಗದ ಸಿಸಿಟಿವಿಗಳನ್ನು ಆಧರಿಸಿ, ತನಿಖೆ ನಡೆಸಿದಾಗ ಯಾವುದೇ ಸುಳಿವು ಲಭಿಸಿರಲಿಲ್ಲ. ಆನಂತರ, ಪೊಲೀಸರು ಮದ್ರಸಾ ಶಿಕ್ಷಕರು, ಹುಡುಗನ ಹೆತ್ತವರನ್ನು ಕರೆದು ವಿಚಾರಣೆ ನಡೆಸಿದ್ದರು. ಬೇರೆ ಬೇರೆ ಆಯಾಮಗಳಲ್ಲಿ ತನಿಖೆ ನಡೆಸಿದಾಗ, ಹುಡುಗನೇ ಹಲ್ಲೆ ಘಟನೆಯ ಕತೆ ಕಟ್ಟಿದ್ದಾನೆಂದು ತಿಳಿದುಬಂದಿದೆ.

ಹುಡುಗನಿಗೆ ತಾನು ಕಪ್ಪಾಗಿದ್ದೇನೆ, ಯಾರೂ ಗಮನಿಸುತ್ತಿಲ್ಲ. ಹೆತ್ತವರು ಕಷ್ಟದಿಂದ ಕಲಿಸಿದರೂ ವಿದ್ಯೆ ತಲೆಗೆ ಹತ್ತುತ್ತಿಲ್ಲ, ಯಾರೂ ತನಗೆ ಸ್ನೇಹಿತರಿಲ್ಲ. ಮನೆಯ ಬಡತನದಿಂದಾಗಿ ಸೈಕಲ್ ಇಲ್ಲ. ಸೈಕಲ್ ಇದ್ದರೆ ಮಾತ್ರ ಫ್ರೆಂಡ್ಸ್ ಜೊತೆಗೆ ಬರ್ತಾರೆ ಎಂಬ ಕೀಳರಿಮೆ ಹೊಂದಿದ್ದ. ಇದೇ ಕಾರಣಕ್ಕಾಗಿ ಯಾರೋ ಹಲ್ಲೆ ಮಾಡಿದ್ದಾರೆಂದು ಬಿಂಬಿಸಲು ತನ್ನ ಅಂಗಿಯನ್ನು ತಾನೇ ಪೆನ್ನಿನಲ್ಲಿ ಕುಕ್ಕಿ ಹರಿದುಕೊಂಡಿದ್ದ ಅನ್ನುವುದು ತನಿಖೆಯಲ್ಲಿ ಕಂಡುಬಂದಿದೆ. ಈ ಘಟನೆಯನ್ನು ಕೋಮು ದ್ವೇಷ ಹರಡಲು ಕೆಲವರು ಪ್ರಯತ್ನ ಪಟ್ಟಿದ್ದರು. ಮದ್ರಸಾದ ಉಸ್ತಾದ್, ಹುಡುಗನ ಹೆತ್ತವರು ಮತ್ತು ವೈದ್ಯರ ಸಮ್ಮುಖದಲ್ಲಿ ಆತನ ಹೇಳಿಕೆಯನ್ನು ರೆಕಾರ್ಡ್ ಮಾಡಿಕೊಂಡಿದ್ದೇವೆ ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.

ಒಟ್ಟಿನಲ್ಲಿ ಕೋಮು ದ್ವೇಷಕ್ಕೆ ಕಾರಣವಾಗಿದ್ದ ಹಲ್ಲೆ ಘಟನೆಯ ಅಸಲಿ ಕಾರಣವನ್ನು ಪೊಲೀಸರು ಸಕಾಲದಲ್ಲಿ ಪತ್ತೆಹಚ್ಚಿ ಆಗುತ್ತಿದ್ದ ಅಪಾಯವನ್ನು ತಡೆಹಿಡಿದಿದ್ದಾರೆ.

A 6th standard madrasa going student Shayan was attacked by 2 men in bike as while he was returning back to home  at Katipalla, in Mangalore. But as per police enquiry no such incident had taken place it was a play by the student as their family was poor and he wasn't interested to go to school says police commissioner Shahi Kumar after a detailed investigation.