ಡಿಜಿಟಲ್ ಅರೆಸ್ಟ್ ; ಮಹಿಳೆಗೆ 15 ನಿಮಿಷದಲ್ಲಿ 50 ಲಕ್ಷ ಸಾಲ ನೀಡಿದ್ದ ಐಸಿಐಸಿಐ ಬ್ಯಾಂಕ್ ! ದಾಖಲೆಗಳಿಲ್ಲದೆ ಸಾಲ ನೀಡಿದ್ದಕ್ಕೆ ಹೈಕೋರ್ಟ್ ತರಾಟೆ, ವಂಚಕರ ಜೊತೆಗೆ ಬ್ಯಾಂಕ್ ಪಾತ್ರ ಇದೆಯೇ ಎಂದು ಪ್ರಶ್ನೆ

07-02-26 10:07 pm       HK News Desk   ಕ್ರೈಂ

ಡಿಜಿಟಲ್ ಅರೆಸ್ಟ್ ; ಮಹಿಳೆಗೆ 15 ನಿಮಿಷದಲ್ಲಿ 50 ಲಕ್ಷ ಸಾಲ ನೀಡಿದ್ದ ಐಸಿಐಸಿಐ ಬ್ಯಾಂಕ್ ! ದಾಖಲೆಗಳಿಲ್ಲದೆ ಸಾಲ ನೀಡಿದ್ದಕ್ಕೆ ಹೈಕೋರ್ಟ್ ತರಾಟೆ, ವಂಚಕರ ಜೊತೆಗೆ ಬ್ಯಾಂಕ್ ಪಾತ್ರ ಇದೆಯೇ ಎಂದು ಪ್ರಶ್ನೆ  

ಬೆಂಗಳೂರು, ಫೆ.7: ಸೈಬರ್ ವಂಚಕರಿಂದ 'ಡಿಜಿಟಲ್ ಅರೆಸ್ಟ್' ಆಗಿ ವಂಚನೆಗೀಡಾದ ಅಮಾಯಕ ಮಹಿಳೆಯೊಬ್ಬರಿಗೆ ಕೇವಲ 15 ನಿಮಿಷಗಳಲ್ಲಿ, ಯಾವುದೇ ದಾಖಲೆಗಳಿಲ್ಲದೆ 50 ಲಕ್ಷ ರೂ. ಸಾಲ ಮಂಜೂರು ಮಾಡಿದ ಐಸಿಐಸಿಐ ಬ್ಯಾಂಕ್‌ ಕ್ರಮಕ್ಕೆ ಕರ್ನಾಟಕ ಹೈಕೋರ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಅಷ್ಟೇ ಅಲ್ಲದೆ, ಸಂತ್ರಸ್ತೆಯ ವಿರುದ್ಧ ಬ್ಯಾಂಕ್ ದಾಖಲಿಸಿದ್ದ ಕ್ರಿಮಿನಲ್ ಪ್ರಕರಣಕ್ಕೆ ತಡೆ ನೀಡುವ ಮೂಲಕ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠವು ಐತಿಹಾಸಿಕ ಆದೇಶ ನೀಡಿದೆ. 

2024ರ ಸೆಪ್ಟೆಂಬರ್ 17ರಂದು 32 ವರ್ಷದ ಮಹಿಳೆಯೊಬ್ಬರಿಗೆ ಫೆಡ್‌ಎಕ್ಸ್ ಉದ್ಯೋಗಿ ಎಂದು ಕರೆಯೊಂದು ಬಂದಿತ್ತು. ಕರೆ ಮಾಡಿದ ವ್ಯಕ್ತಿ, ನಿಮ್ಮ ಆಧಾರ್ ಸಂಖ್ಯೆಯನ್ನು ಡ್ರಗ್ಸ್ (ಮಾದಕ ವಸ್ತು) ಕಳ್ಳಸಾಗಣೆಗೆ ಬಳಸಲಾಗಿದೆ ಎಂದು ಬೆದರಿಸಲಾಗಿತ್ತು. ಕರೆಯನ್ನು ಮುಂಬೈ ಪೊಲೀಸರೆಂದು ಹೇಳಿಕೊಂಡವರಿಗೆ ವರ್ಗಾಯಿಸಲಾಯಿತು. ಅಲ್ಲಿಂದ ಡಿಸಿಪಿ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ, "ನಿಮ್ಮ ಖಾತೆಯ ಹಣ ಬಳಸಿ ಎಕೆ-47 ರೈಫಲ್ ಖರೀದಿಸಲಾಗಿದೆ, ನಿಮ್ಮ ಹೆಸರಿನಲ್ಲಿ ಹಲವು ಅಕ್ರಮ ನಡೆದಿದೆ" ಎಂದು ಬೆದರಿಸಿದ್ದ. ಅಂತಿಮವಾಗಿ ಆರ್‌ಬಿಐ ಅಧಿಕಾರಿ ಎಂದು ಹೇಳಿಕೊಂಡ ವಂಚಕ, ಸ್ಕೈಪ್ ವಿಡಿಯೋ ಕರೆಯಲ್ಲಿ ಮಹಿಳೆಯನ್ನು ಸುಮಾರು 10 ಗಂಟೆಗಳ ಕಾಲ 'ಡಿಜಿಟಲ್ ಅರೆಸ್ಟ್' ಮಾಡಿ, ಮನೆಯಿಂದ ಹೊರಬರದಂತೆ ಹೇಳಿ ಕೂಡಿಹಾಕಿದ್ದ. 

ವಂಚಕರು ಬಳಿಕ ಸಹಾಯ ಮಾಡುವ ನೆಪದಲ್ಲಿ ಸಂತ್ರಸ್ತೆಗೆ ಆನ್‌ಲೈನ್ ಮೂಲಕ ತ್ವರಿತ ಸಾಲ ಪಡೆಯಲು ಒತ್ತಾಯಿಸಿದರು. ಆಶ್ಚರ್ಯ ಅಂದ್ರೆ, ಐಸಿಐಸಿಐ ಬ್ಯಾಂಕ್ ಕೇವಲ 15 ನಿಮಿಷಗಳಲ್ಲಿ ಬರೋಬ್ಬರಿ 50 ಲಕ್ಷ ರೂ.ಗಳ ಸಾಲವನ್ನು ಮಹಿಳೆಯ ಖಾತೆಗೆ ಜಮೆ ಮಾಡಿತ್ತು. ಸಾಲ ಮರು ಪಾವತಿಯಾಗದ ಬಗ್ಗೆ ಬ್ಯಾಂಕ್ ಮಹಿಳೆಯ ವಿರುದ್ಧ ಕೇಸು ದಾಖಲಿಸಿತ್ತು. 

ಇದನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದು ಪೀಠವು ಬ್ಯಾಂಕ್ ಅನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ. "ಯಾವುದೇ ದಾಖಲೆಗಳಿಲ್ಲದೆ, ಪರಿಶೀಲನೆ ಇಲ್ಲದೆ ಬ್ಯಾಂಕ್ 50 ಲಕ್ಷ ರೂಪಾಯಿಯನ್ನು ವರ್ಗಾಯಿಸಿದ್ದು ಹೇಗೆ? ಇಷ್ಟು ದೊಡ್ಡ ಮೊತ್ತದ ಸಾರ್ವಜನಿಕರ ಹಣವನ್ನು ಬ್ಯಾಂಕ್ ಈ ರೀತಿ ಬಿಡುಗಡೆ ಮಾಡಲು ಹೇಗೆ ಸಾಧ್ಯ?" ಎಂದು ನ್ಯಾಯಾಧೀಶರು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೆ, ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ್ ಕೂಡ, "ದಾಖಲೆಗಳಿಲ್ಲದೆ ಇಷ್ಟು ದೊಡ್ಡ ಮೊತ್ತ ಬಿಡುಗಡೆಯಾಗಿರುವುದು ಅರ್ಥವಾಗುತ್ತಿಲ್ಲ, ಇದರ ಹಿಂದೆ ಬ್ಯಾಂಕ್ ಸಿಬ್ಬಂದಿಯ ಕೈವಾಡವಿರಬಹುದು" ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ಬ್ಯಾಂಕ್‌ನ ಕೆಲವರು ಸೈಬರ್ ವಂಚಕರೊಂದಿಗೆ ಶಾಮೀಲಾಗಿರಬಹುದೇ ಎಂಬ ಅನುಮಾನ ವ್ಯಕ್ತವಾಗಿದೆ. 

ಸಂತ್ರಸ್ತೆಯ ಪರ ವಕೀಲ ಸೂರಜ್ ಸಂಪತ್, ವಂಚಕರು ಮಹಿಳೆಯನ್ನು ಹೇಗೆ ಸುದೀರ್ಘವಾಗಿ ಬಂಧನದಲ್ಲಿಟ್ಟಿದ್ದರು ಮತ್ತು ಬ್ಯಾಂಕ್ ಹೇಗೆ ಕಣ್ಣುಮುಚ್ಚಿ ಸಾಲ ನೀಡಿತು ಎಂಬುದನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.