ಉಡುಪಿಯಲ್ಲಿ ಬ್ರಾಹ್ಮಣರಿಗೇ ಪಂಗನಾಮ ; ಕಮಲಾಕ್ಷಿ ಸೊಸೈಟಿ ಹೆಸರಲ್ಲಿ ನೂರಾರು ಕೋಟಿ ವಂಚನೆ, ಸೊಸೈಟಿ ಅಧ್ಯಕ್ಷ ನಾಪತ್ತೆ, ಗ್ರಾಹಕರಿಂದ ಕಚೇರಿಗೆ ಮುತ್ತಿಗೆ    

19-12-22 03:47 pm       Udupi Correspondent   ಕ್ರೈಂ

ಸಂಘದ ಅಧ್ಯಕ್ಷ ಬಿ.ವಿ. ಲಕ್ಷ್ಮೀನಾರಾಯಣ ನಾಪತ್ತೆಯಾಗಿದ್ದು, ಮೋಸದ ವಿಚಾರ ತಿಳಿಯುತ್ತಿದ್ದಂತೆ ಗ್ರಾಹಕರು ಸೊಸೈಟಿ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ. ಸಿಬಂದಿಯನ್ನು ತರಾಟೆಗೆ ತೆಗೆದುಕೊಂಡು ತಮ್ಮ ದುಡ್ಡನ್ನು ನೀಡುವಂತೆ ಗ್ರಾಹಕರು ಆಗ್ರಹ ಮಾಡಿದ್ದಾರೆ.

ಉಡುಪಿ, ಡಿ.19: ಉಡುಪಿ ನಗರದಲ್ಲಿ ಕಚೇರಿ ಹೊಂದಿರುವ ಕಮಲಾಕ್ಷಿ ವಿವಿಧೋದ್ದೇಶ ಸಹಕಾರಿ ಸಂಘದ ಹೆಸರಲ್ಲಿ ನೂರಾರು ಗ್ರಾಹಕರಿಂದ ಕೋಟ್ಯಂತರ ರೂಪಾಯಿ ಠೇವಣಿ ಸಂಗ್ರಹಿಸಿ ಮೋಸ ಮಾಡಿರುವ ಆರೋಪ ಕೇಳಿಬಂದಿದೆ. ಸಂಘದ ಅಧ್ಯಕ್ಷ ಬಿ.ವಿ. ಲಕ್ಷ್ಮೀನಾರಾಯಣ ನಾಪತ್ತೆಯಾಗಿದ್ದು, ಮೋಸದ ವಿಚಾರ ತಿಳಿಯುತ್ತಿದ್ದಂತೆ ಗ್ರಾಹಕರು ಸೊಸೈಟಿ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ. ಸಿಬಂದಿಯನ್ನು ತರಾಟೆಗೆ ತೆಗೆದುಕೊಂಡು ತಮ್ಮ ದುಡ್ಡನ್ನು ನೀಡುವಂತೆ ಗ್ರಾಹಕರು ಆಗ್ರಹ ಮಾಡಿದ್ದಾರೆ.

50ಕ್ಕೂ ಹೆಚ್ಚು ಗ್ರಾಹಕರು ಸೊಸೈಟಿ ವಿರುದ್ಧ ಧಿಕ್ಕಾರ, ಸೊಸೈಟಿ ಅಧ್ಯಕ್ಷರಿಗೆ ಧಿಕ್ಕಾರ ಕೂಗುತ್ತಿದ್ದಂತೆ ಕಚೇರಿಯಲ್ಲಿ ಸಿಬಂದಿಯಾಗಿದ್ದ ಮಹಿಳೆಯೊಬ್ಬರು ನಿದ್ದೆ ಮಾತ್ರೆಗಳನ್ನು ನುಂಗಿ ಆತ್ಮಹತ್ಯೆ ಮಾಡಿಕೊಳ್ಳುವ ನಾಟಕ ಮಾಡಿದ್ದಾರೆ. ಆದರೆ ಬ್ಯಾಗಿನಿಂದ ಏಳೆಂಟು ಮಾತ್ರೆಗಳನ್ನು ತೆಗೆದು ನುಂಗುವ ಪ್ರಯತ್ನದಲ್ಲಿದ್ದಾಗಲೇ ಅಲ್ಲಿದ್ದ ಗ್ರಾಹಕರು ಮತ್ತು ಇತರೇ ಸಿಬಂದಿ ತರಾಟೆಗೆ ತೆಗೆದುಕೊಂಡು ಆಕೆಯ ಕೈಯಿಂದ ಮಾತ್ರೆಗಳನ್ನು ಕಿತ್ತುಕೊಂಡಿದ್ದಾರೆ. ಅಲ್ಲದೆ, ನೀವು ಹಣ ಕದ್ದಿದ್ದೀರಾ, ಮತ್ತೆ ಯಾಕೆ ನೀವು ಸುಸೈಡ್ ಮಾಡೋಕೆ ಹೋಗ್ತೀರಿ ಎಂದು ಮಹಿಳೆಯನ್ನು ತರಾಟೆಗೆತ್ತಿಕೊಂಡಿದ್ದಾರೆ.

ಆನಂತರ, ಉಡುಪಿ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಬಂದು ಗಲಾಟೆ ನಡೆಸುತ್ತಿದ್ದ ಗ್ರಾಹಕರನ್ನು ಠಾಣೆಗೆ ಬಂದು ದೂರು ನೀಡುವಂತೆ ತಿಳಿಸಿದ್ದಾರೆ. ಉಡುಪಿ ಕೃಷ್ಣ ಮಠದ ಬಳಿಯಲ್ಲೇ ಇರುವ ಕಮಲಾಕ್ಷಿ ಸೊಸೈಟಿ ಕಚೇರಿಯಲ್ಲಿ ಅತಿ ಹೆಚ್ಚು ಬ್ರಾಹ್ಮಣ ಸಮುದಾಯದವರೇ ಠೇವಣಿ ಇಟ್ಟಿದ್ದಾರೆ. ಉಡುಪಿ ಕೃಷ್ಣ ಮಠದಲ್ಲಿರುವ ಸಿಬಂದಿ ಸೇರಿದಂತೆ ಅಲ್ಲಿನ ಪ್ರಮುಖರು ಕೂಡ ಕೋಟ್ಯಂತರ ರೂಪಾಯಿ ಠೇವಣಿ ಇಟ್ಟಿದ್ದಾರೆ. ವರ್ಷಕ್ಕೆ 12 ಶೇಕಡಾ ಬಡ್ಡಿ ಕೊಡುವುದಾಗಿ ಹೇಳಿದ್ದರಿಂದ ಬಡ್ಡಿ ಆಸೆಯಲ್ಲಿ ನೂರಾರು ಮಂದಿ ಲಕ್ಷಾಂತರ ರೂಪಾಯಿ ಠೇವಣಿ ಇಟ್ಟಿದ್ದಲ್ಲದೆ ವ್ಯವಹಾರವನ್ನೂ ಮಾಡುತ್ತಿದ್ದರು. ಮೊದಲಿಗೆ, ಠೇವಣಿಗೆ ಸೂಕ್ತ ಬಡ್ಡಿಯನ್ನೂ ನೀಡುತ್ತಿದ್ದರು. ಆದರೆ ಕಳೆದ ಜೂನ್ ತಿಂಗಳಿನಿಂದ ಬಡ್ಡಿ ಸಿಗದೇ ಇದ್ದುದರಿಂದ ಗ್ರಾಹಕರು ಸಂಶಯಗೊಂಡಿದ್ದರು. ಕಚೇರಿಗೆ ಬಂದು ಪ್ರಶ್ನೆ ಮಾಡಲಾರಂಭಿಸಿದ್ದರು.

ಇದೀಗ ಒಂದಷ್ಟು ಮಂದಿ ಗ್ರಾಹಕರು ಸೇರಿ ಸೊಸೈಟಿಗೆ ಮುತ್ತಿಗೆ ಹಾಕಿದ್ದಾರೆ. ಮಹಿಳೆಯರು, ನಿವೃತ್ತರಾದವರು ಹೀಗೆ ಬಹಳಷ್ಟು ಮಂದಿ ಬಂದು ತಮ್ಮ ನೋವನ್ನು ಹೇಳಿಕೊಂಡಿದ್ದಾರೆ. ಇದೇ ವೇಳೆ, ಮಾತನಾಡಿದ ವ್ಯಕ್ತಿಯೊಬ್ಬರು ಯಾವುದೇ ಸೊಸೈಟಿ ಪ್ರತಿ ವರ್ಷ ಅಡಿಟ್ ವರದಿಯನ್ನು ಸಹಕಾರ ಇಲಾಖೆಯ ಉಪ ನಿಬಂಧಕರಿಗೆ ಸಲ್ಲಿಸಬೇಕು. ಇವರು ಮೂರು ವರ್ಷಗಳಿಂದ ಸರಕಾರಕ್ಕೆ ಅಡಿಟ್ ವರದಿ ನೀಡಿಲ್ಲ ಎನ್ನುವ ಮಾಹಿತಿಯಿದೆ. ಹಾಗಾದರೆ, ಯಾಕೆ ಸಹಕಾರ ಇಲಾಖೆ ಉಪ ನಿಬಂಧಕರು ಪ್ರಶ್ನೆ ಮಾಡಿಲ್ಲ. ಈ ಅವ್ಯವಹಾರದಲ್ಲಿ ಸಹಕಾರ ಇಲಾಖೆಯ ಅಧಿಕಾರಿಗಳು ಕೂಡ ಶಾಮೀಲಾಗಿರುವ ಸಂಶಯಗಳಿವೆ ಎಂದು ಹೇಳಿದ್ದಾರೆ.

ಅಂದಾಜು ನೂರು ಕೋಟಿಗೂ ಹೆಚ್ಚು ಹಣ ಸೊಸೈಟಿ ಹೆಸರಲ್ಲಿ ವಂಚನೆ ಎಸಗಿರುವ ಆರೋಪ ಕೇಳಿಬಂದಿದೆ. ಕಮಲಾಕ್ಷಿ ಸೊಸೈಟಿಯಲ್ಲಿ ಬಿವಿ ಲಕ್ಷ್ಮಿನಾರಾಯಣ ಅಧ್ಯಕ್ಷರಾಗಿದ್ದರೆ, ಅವರ ಕುಟುಂಬ ಸದಸ್ಯರನ್ನೇ ಬ್ಯಾಂಕಿನ ನಿರ್ದೇಶಕರನ್ನಾಗಿ ಮಾಡಲಾಗಿದೆಯಂತೆ. ಹೀಗಾಗಿ ಸಹಕಾರ ಸಂಘದ ಹೆಸರಲ್ಲಿ ಅಮಾಯಕರಿಂದ ಹಣ ಪಡೆದು ವಂಚಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಒಂದು ವರ್ಷದ ಹಿಂದೆ ಪಂಚವಟಿ ಸೊಸೈಟಿ ಹೆಸರಲ್ಲಿಯೂ ಇದೇ ರೀತಿ ವಂಚನೆ ನಡೆದಿರುವುದು ಪತ್ತೆಯಾಗಿತ್ತು. ಪಂಚವಟಿ ಸೊಸೈಟಿ ಬೆಂಗಳೂರು, ಮಂಗಳೂರು ಸೇರಿದಂತೆ ರಾಜ್ಯದ ವಿವಿಧ ಕಡೆಗಳಲ್ಲಿ ಶಾಖೆಗಳಿದ್ದು, ಭಾರೀ ಹಗರಣ ನಡೆದಿದ್ದರೂ ರಾಜ್ಯ ಸರಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡಿಲ್ಲ.

Udupi Kamalakshi multipurpose cooperative society scam, victims gherao office. The victims and customers of Kamalakshi multipurpose cooperative society here, gheraoed the office of the society, which is accused of cheating its customers of more than Rs 100 crore. The victims took to task the employees working in the society on Monday December 19. The chief of the society B V Laxminarayana has gone missing.