ಜುವೆಲ್ಲರಿ ಸಿಬಂದಿ ಹತ್ಯೆ ; ದರೋಡೆ ಉದ್ದೇಶದಲ್ಲಿ ಕೊಲೆಯೇ ? ಜನನಿಬಿಡ ಪ್ರದೇಶದಲ್ಲೇ ಕೊಲೆ, ಕೃತ್ಯದ ಬಗ್ಗೆ ಹಲವು ಅನುಮಾನ

03-02-23 07:50 pm       Mangalore Correspondent   ಕ್ರೈಂ

ನಗರದ ಹಂಪನಕಟ್ಟೆಯ ಮಿಲಾಗ್ರಿಸ್ ಬಸ್ ನಿಲ್ದಾಣದ ಪಕ್ಕದಲ್ಲಿರುವ ಮಂಗಳೂರು ಜುವೆಲ್ಲರಿ ಹೆಸರಿನ ಚಿನ್ನದ ಅಂಗಡಿಗೆ ನುಗ್ಗಿದ ಆಗಂತುಕನೊಬ್ಬ ಅಲ್ಲಿನ ಸಿಬಂದಿಯನ್ನೇ ಹತ್ಯೆಗೈದಿದ್ದು, ಘಟನೆ ಬಗ್ಗೆ ಬಂದರು ಮತ್ತು ಸಿಸಿಬಿ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

ಮಂಗಳೂರು, ಫೆ.3: ನಗರದ ಹಂಪನಕಟ್ಟೆಯ ಮಿಲಾಗ್ರಿಸ್ ಬಸ್ ನಿಲ್ದಾಣದ ಪಕ್ಕದಲ್ಲಿರುವ ಮಂಗಳೂರು ಜುವೆಲ್ಲರಿ ಹೆಸರಿನ ಚಿನ್ನದ ಅಂಗಡಿಗೆ ನುಗ್ಗಿದ ಆಗಂತುಕನೊಬ್ಬ ಅಲ್ಲಿನ ಸಿಬಂದಿಯನ್ನೇ ಹತ್ಯೆಗೈದಿದ್ದು, ಘಟನೆ ಬಗ್ಗೆ ಬಂದರು ಮತ್ತು ಸಿಸಿಬಿ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

ಮಧ್ಯಾಹ್ನ 3.30ರ ವೇಳೆಗೆ ಘಟನೆ ನಡೆದಿದ್ದು, ಈ ವೇಳೆ ಕೊಲೆಯಾದ ರಾಘವೇಂದ್ರ ಆಚಾರ್ಯ ಮಾತ್ರ ಅಂಗಡಿಯಲ್ಲಿದ್ದರು. ದಿನವೂ ಜುವೆಲ್ಲರಿ ಮಾಲೀಕ ಕೇಶವ ಆಚಾರ್ಯ ಮತ್ತು ರಾಘವೇಂದ್ರ ಮಾತ್ರ ಅಂಗಡಿಯಲ್ಲಿ ಇರುತ್ತಿದ್ದರು. ಇಂದು ಮಧ್ಯಾಹ್ನ ಕೇಶವ ಆಚಾರ್ಯ 1.30ಕ್ಕೆ ಊಟಕ್ಕೆಂದು ತೆರಳಿದ್ದರು. 3.30ರ ವೇಳೆಗೆ ಕಾರಿನಲ್ಲಿ ಅಂಗಡಿಗೆ ಮರಳಿದಾಗ, ಜುವೆಲ್ಲರಿ ಮುಂದೆ ತನ್ನ ಕಾರು ನಿಲ್ಲಿಸುವ ಜಾಗದಲ್ಲಿ ಬೈಕ್ ನಿಂತಿತ್ತು. ಬೈಕನ್ನು ಅಲ್ಲಿಂದ ತೆಗೆಯುವಂತೆ ಸಿಬಂದಿ ರಾಘವೇಂದ್ರ ಅವರಿಗೆ ಫೋನ್ ಮಾಡಿದ್ದರು. ಫೋನ್ ರಿಸೀವ್ ಮಾಡಿದವರೇ ತನಗೆ ಚೂರಿ ಹಾಕಿದ್ದಾನೆಂದು ರಾಘವೇಂದ್ರ ಬೊಬ್ಬೆ ಹಾಕಿದ್ದಾರೆ.

ಕೂಡಲೇ ಕಾರನ್ನು ಬಿಟ್ಟು ಕೇಶವ ಆಚಾರ್ಯ ಅಂಗಡಿಗೆ ಬಂದಿದ್ದಾರೆ. ಈ ವೇಳೆ, ಒಬ್ಬಾತ ತಲೆಗೆ ಹೆಲ್ಮೆಟ್ ಹಾಕ್ಕೊಂಡು ಹೊರಕ್ಕೆ ಬಂದಿದ್ದು, ಬೈಕಿನಲ್ಲಿ ತೆರಳಿದ್ದಾನೆ. ಕೂಡಲೇ ಕೇಶವ ಆಚಾರ್ಯ, ರಾಘವೇಂದ್ರ ಅವರನ್ನು ಕಾರಿನಲ್ಲಿ ಹಾಕಿ ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಕುತ್ತಿಗೆಯ ಭಾಗಕ್ಕೆ ಚೂರಿ ಇರಿದಿದ್ದರಿಂದ ನರಗಳು ತುಂಡಾಗಿ ಜುವೆಲ್ಲರಿ ಅಂಗಡಿಯ ಒಳಗಡೆ ರಕ್ತ ಚೆಲ್ಲಿತ್ತು. ತೀವ್ರ ರಕ್ತಸ್ರಾವದಿಂದಾಗಿ ರಾಘವೇಂದ್ರ ಕೆಲಹೊತ್ತಿನಲ್ಲೇ ಆಸ್ಪತ್ರೆಯಲ್ಲಿ ಸಾವು ಕಂಡಿದ್ದಾರೆ.

ಸ್ಥಳಕ್ಕೆ ಪೊಲೀಸ್ ಕಮಿಶನರ್ ಶಶಿಕುಮಾರ್ ಬಂದು ಪರಿಶೀಲನೆ ನಡೆಸಿದ್ದಾರೆ. ಚಿನ್ನದ ಅಂಗಡಿಯಲ್ಲಿ ಒಂದೆರಡು ಚಿನ್ನದ ಸರ, ಉಂಗುರ ನಾಪತ್ತೆಯಾಗಿರುವ ಬಗ್ಗೆ ಮಾಲಕರು ತಿಳಿಸಿದ್ದಾರೆ. ಟೇಬಲ್ ನಲ್ಲಿ 16 ಗ್ರಾಮ್ ಸರ ಮತ್ತು ಒಂದು ಉಂಗುರ ಒಂದು ಲಕ್ಷ ರೂಪಾಯಿ ಎಸ್ಟಿಮೇಟ್ ಬಿಲ್ ಮಾಡಿರುವುದು ಕಂಡುಬಂದಿದೆ. ಪುಸ್ತಕದಲ್ಲಿಯೂ ಇದೇ ಬಿಲ್ ಬರೆದಿದ್ದು, ಇದು ಆರ್ಡರ್ ಕೊಟ್ಟಿದ್ದೇ, ಆಗಂತುಕ ಬಂದಿದ್ದಾಗ ಬಿಲ್ ಆಗಿರುವುದೇ ಗೊತ್ತಿಲ್ಲ. ಚಿನ್ನದ ಅಂಗಡಿ ಮಾಲಕರು ಒಂದೆರಡು ಚೈನ್ ಮಿಸ್ಸಿಂಗ್ ಆಗಿರುವ ಬಗ್ಗೆ ತಿಳಿಸಿದ್ದಾರೆ. ಒಳಭಾಗದಲ್ಲಿ ಸಿಸಿಟಿವಿ ಇಲ್ಲ, ವ್ಯಕ್ತಿ ಹೊರಗೆ ಹೋಗುವುದು ಸಿಸಿಟಿವಿಯಲ್ಲಿ ದಾಖಲಾಗಿದೆ. ತಲೆಗೆ ಹೆಲ್ಮೆಟ್ ಮತ್ತು ಮುಖಕ್ಕೆ ಮಾಸ್ಕ್ ಹಾಕ್ಕೊಂಡಿದ್ದ. ತನಿಖೆಯಲ್ಲಿ ನಿಜಾಂಶ ಹೊರಬರಲಿದೆ ಎಂದು ಮಾಧ್ಯಮಕ್ಕೆ ಕಮಿಷನರ್ ತಿಳಿಸಿದ್ದಾರೆ.

ಆಗಂತುಕ ದರೋಡೆ ಮಾಡುವ ಉದ್ದೇಶದಿಂದ ಈ ಕೃತ್ಯ ಎಸಗಿದ್ದಾನೆಯೇ ಅನ್ನುವುದು ದೃಢಪಟ್ಟಿಲ್ಲ. ಆದರೆ ಜನನಿಬಿಡ ಇರುವ ಪ್ರದೇಶದಲ್ಲಿ ಹಾಡಹಗಲೇ ಈ ರೀತಿ ಜುವೆಲ್ಲರಿ ಸಿಬಂದಿಯನ್ನು ಕೊಲೆಗೈದು ಪರಾರಿಯಾಗಿರುವುದು ಅನುಮಾನಕ್ಕೆ ಕಾರಣವಾಗಿದೆ. ಆಗಂತುಕ ದುರುದ್ದೇಶ ಇಟ್ಟುಕೊಂಡೇ ಬಂದಿರುವಂತೆ ಕಂಡಿದ್ದು, ಕೈಯಲ್ಲಿ ಚೂರಿ ಇಟ್ಕೊಂಡೇ ಬಂದಿರುವುದು ಅನುಮಾನ ಮೂಡಿಸಿದೆ.

ಮಂಗಳೂರು ; ಜುವೆಲ್ಲರಿ ಉದ್ಯೋಗಿಯ ಚೂರಿಯಿಂದ ಇರಿದು ಕೊಲೆ 

Mangalore Jewellery shop staff murder, was it a plot for murder or robbery, bike borne miscreants caught on CCTV. The victim is Raghavendra (54), a resident of Attavar. He was rushed to a hospital but he succumbed. It is said that the incident occurred when the sales staff was alone in the shop.It is not known if the motive was robbery. The incident came to light when the proprietor of the shop returned after having lunch