Kadri Temple, Mangalore, Crime: ಕದ್ರಿ ದೇವಸ್ಥಾನದ ಒಳಕ್ಕೆ ಬೈಕ್ ನುಗ್ಗಿಸಿ ಯುವಕನ ರಂಪಾಟ ; ಧರ್ಮದೇಟು ನೀಡಿ ಪೊಲೀಸರಿಗೊಪ್ಪಿಸಿದ ಸಿಬಂದಿ, ಮಾನಸಿಕ ಅಸ್ವಾಸ್ಥ್ಯದಿಂದ ದುರ್ವರ್ತನೆಯೆಂದು ಸಮಜಾಯಿಷಿ

09-07-24 04:12 pm       Mangalore Correspondent   ಕ್ರೈಂ

ಯುವಕನೊಬ್ಬ ಕದ್ರಿ ಮಂಜುನಾಥ ದೇವಸ್ಥಾನದ ಒಳಗಡೆ ಬೈಕನ್ನು ನುಗ್ಗಿಸಿ ದಾಂಧಲೆ ನಡೆಸಿರುವ ಘಟನೆ ಮಂಗಳವಾರ ಬೆಳಗ್ಗೆ ನಡೆದಿದ್ದು, ಸ್ಥಳೀಯರು ಆತನನ್ನು ಹಿಡಿದು ಥಳಿಸಿ ಕದ್ರಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ಮಂಗಳೂರು, ಜುಲೈ 9: ಯುವಕನೊಬ್ಬ ಕದ್ರಿ ಮಂಜುನಾಥ ದೇವಸ್ಥಾನದ ಒಳಗಡೆ ಬೈಕನ್ನು ನುಗ್ಗಿಸಿ ದಾಂಧಲೆ ನಡೆಸಿರುವ ಘಟನೆ ಮಂಗಳವಾರ ಬೆಳಗ್ಗೆ ನಡೆದಿದ್ದು, ಸ್ಥಳೀಯರು ಆತನನ್ನು ಹಿಡಿದು ಥಳಿಸಿ ಕದ್ರಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ಮಂಗಳವಾರ ಬೆಳಗ್ಗೆ 7.20ರ ಸುಮಾರಿಗೆ ಘಟನೆ ನಡೆದಿದ್ದು ಯುವಕನೊಬ್ಬ ತನ್ನ ಬೈಕನ್ನು ಕದ್ರಿ ದೇವಸ್ಥಾನದ ಎದುರಿನ ಗೇಟ್ ತಳ್ಳಿಕೊಂಡು ಒಳಬಂದಿದ್ದಾನೆ. ಬಳಿಕ ದೇವಸ್ಥಾನದ ಮುಂದಿನ ದ್ವಾರದ ಮೂಲಕ ನೇರವಾಗಿ ಒಳಗಡೆ ನುಗ್ಗಿಸಿ ಗರ್ಭಗುಡಿ ಮುಂದೆ ನಿಲ್ಲಿಸಿದ್ದಾನೆ. ಅರ್ಚಕರು ಕೂಡಲೇ ಗರ್ಭಗುಡಿಗೆ ಬಾಗಿಲು ಹಾಕಿದ್ದು, ಆತ ನೇರವಾಗಿ ಅಣ್ಣಪ್ಪನ ಗುಡಿಯ ಒಳಗೆ ಹೋಗಿ ಅಲ್ಲಿಂದ ಮೇಲಿನ ಮಹಡಿಗೆ ಹೋಗಿ ಹಂಚಿನ ಮಾಡಿನ ಮೇಲೆ ಬಂದಿದ್ದಾನೆ. ಆನಂತರ, ಎದುರು ಭಾಗದ ಚಪ್ಪರ ಮಾದರಿಯ ಮರದ ಹಲಗೆಯ ಮೇಲ್ಗಡೆ ನಿಂತು ಅದನ್ನು ಕೈಯಲ್ಲಿದ್ದ ಹರಿತ ಆಯುಧದಲ್ಲಿ ತಿವಿಯಲು ಮುಂದಾಗಿದ್ದಾನೆ. 

ಅಷ್ಟರಲ್ಲಿ ಅಲ್ಲಿದ್ದ ಭಕ್ತರು, ಅರ್ಚಕರು ಬೊಬ್ಬೆ ಹಾಕಿದ್ದು, ಸೆಕ್ಯುರಿಟಿ ಗಾರ್ಡ್ ಎಲ್ಲ ಸೇರಿ ಹಗ್ಗದಲ್ಲಿ ಕಟ್ಟಿ ನೆಲಕ್ಕೆ ಇಳಿಸಿದ್ದಾರೆ. ಎರಡೇಟು ಬಾರಿಸಿ ಕದ್ರಿ ಪೊಲೀಸರ ಗಮನಕ್ಕೆ ತಂದಿದ್ದು ಅವರ ವಶಕ್ಕೆ ಒಪ್ಪಿಸಿದ್ದಾರೆ. ಪೊಲೀಸರು ಆರೋಪಿಯನ್ನು ಠಾಣೆಗೊಯ್ದು ವಿಚಾರಣೆ ನಡೆಸಿದ್ದಾರೆ. ಯುವಕನನ್ನು ಉಳ್ಳಾಲದ ಧರ್ಮನಗರ ನಿವಾಸಿ ಸುಧಾಕರ ಆಚಾರ್ಯ(31) ಎಂದು ಗುರುತಿಸಲಾಗಿದೆ. ವಿಚಾರಣೆ ಸಂದರ್ಭದಲ್ಲಿ ಆತನ ತಾಯಿಯೂ ಠಾಣೆಗೆ ಬಂದಿದ್ದು, ಮಗನಿಗೆ ಮಾನಸಿಕ ಸಮಸ್ಯೆ ಇರುವುದಾಗಿ ಹೇಳಿಕೊಂಡಿದ್ದಾರೆ.

ಮಾನಸಿಕ ಸಮಸ್ಯೆಗೆ ತೆಗೆದುಕೊಳ್ಳುವ ಮಾತ್ರೆಗಳ ವಿವರವನ್ನೂ ಪೊಲೀಸರಿಗೆ ನೀಡಿದ್ದಾರೆ. ವಿಚಾರಣೆ ವೇಳೆ, ಈ ಹಿಂದೆ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ, ಧರ್ಮಸ್ಥಳ ಮಂಜುನಾಥೇಶ್ವರ ದೇವಸ್ಥಾನದಲ್ಲಿಯೂ ಇದೇ ರೀತಿ ಮಾಡಿದ್ದಾನೆಂಬ ಬಗ್ಗೆ ಮಾಹಿತಿ ತಿಳಿದುಬಂದಿದೆ. ಮಾನಸಿಕ ಸಮಸ್ಯೆ ಮತ್ತು ದೈವದ ಶಾಪದಿಂದ ಈ ರೀತಿ ವರ್ತಿಸುತ್ತಿದ್ದಾನೆ ಎಂದು ಆತನ ತಾಯಿ ಪೊಲೀಸರಿಗೆ ತಿಳಿಸಿದ್ದಾರೆ. ಇದೇ ವೇಳೆ, ಕದ್ರಿ ದೇವಸ್ಥಾನದ ಆಡಳಿತದ ಪರವಾಗಿ ಆಡಳಿತಾಧಿಕಾರಿ ಜಯಮ್ಮ ಮತ್ತು ಸಿಬಂದಿ ಕದ್ರಿ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪೊಲೀಸರು ಆರೋಪಿಗೆ ಮಾನಸಿಕ ಸಮಸ್ಯೆ ಇರುವುದರಿಂದ ಎಫ್ಐಆರ್ ದಾಖಲಿಸುವುದೋ, ಬೇಡವೋ ಎಂಬ ಸಂದಿಗ್ಧದಲ್ಲಿದ್ದು, ಪಬ್ಲಿಕ್ ಪ್ರಾಸಿಕ್ಯೂಟರ್ ಅಭಿಪ್ರಾಯ ಕೇಳಿ ಕೇಸು ದಾಖಲಿಸುವುದಾಗಿ ತಿಳಿಸಿದ್ದಾರೆ. ದೇವಸ್ಥಾನದ ಒಳಗಡೆ ರಂಪಾಟ ಮಾಡಿರುವ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.

Mangalore Youth creates disturbance at Kadri temple takes bike inside creates ruckus, taken into custody by police. In a startling incident on Tuesday July 9, a youth from Dharmanagara Ullal, identified as Sudhakar Acharya, entered the historically renowned Kadri Sri Manjunatha temple and caused a disturbance. The youth rode his bike directly into the temple yard and proceeded to the Annappa Gudi, where he kicked the door and disrupted the sanctity by mishandling sacred artefacts.