ಅಭಿಷೇಕ್ ಹನಿಟ್ರ್ಯಾಪ್ ಕೇಸ್ ; ನ್ಯಾಯಕ್ಕಾಗಿ ಜಾಲತಾಣದಲ್ಲಿ ಅಭಿಯಾನ, ಅಶ್ಲೀಲ ವಿಡಿಯೋ ಪ್ರಸಾರಿಸಿ ಯುವತಿಯ ಜಾತಿ ನಿಂದನೆ ಮಾಡಿದ್ದಾಗಿ ಪ್ರಕರಣ, ಕಾವೂರಿನ ಯುವಕ ಬಂಧನ 

21-10-25 08:24 pm       Mangalore Correspondent   ಕ್ರೈಂ

ಹನಿಟ್ರ್ಯಾಪ್ ಒಳಗಾಗಿ ಕಾರ್ಕಳದಲ್ಲಿ ಸಾವಿಗೆ ಶರಣಾದ ಅಭಿಷೇಕ್ ಆಚಾರ್ಯ ಪ್ರಕರಣದಲ್ಲಿ ಡೆತ್ ನೋಟ್ ನಲ್ಲಿ ಉಲ್ಲೇಖಿಸಲ್ಪಟ್ಟಿದ್ದ ಲೇಡಿಗೋಷನ್ ನರ್ಸ್ ನಿರೀಕ್ಷಾ ತನ್ನ ಅಶ್ಲೀಲ ವಿಡಿಯೋಗಳನ್ನು ಜಾಲತಾಣದಲ್ಲಿ ಪ್ರಸಾರ ಮಾಡಿ ತೇಜೋವಧೆ ಮಾಡುತ್ತಿದ್ದಾರೆಂದು ಕದ್ರಿ ಠಾಣೆಯಲ್ಲಿ ದೂರು ನೀಡಿದ್ದಾಳೆ. ಪ್ರಕರಣ ಸಂಬಂಧಿಸಿ ತನಿಖೆ ಆರಂಭಿಸಿರುವ ಪೊಲೀಸರು ಆಕಾಶಭವನ ನಿವಾಸಿ ನಿಖಿಲ್ ರಾಜ್ ಎಂಬಾತನನ್ನು ಬಂಧಿಸಿದ್ದಾರೆ. 

ಮಂಗಳೂರು, ಅ.21 : ಹನಿಟ್ರ್ಯಾಪ್ ಒಳಗಾಗಿ ಕಾರ್ಕಳದಲ್ಲಿ ಸಾವಿಗೆ ಶರಣಾದ ಅಭಿಷೇಕ್ ಆಚಾರ್ಯ ಪ್ರಕರಣದಲ್ಲಿ ಡೆತ್ ನೋಟ್ ನಲ್ಲಿ ಉಲ್ಲೇಖಿಸಲ್ಪಟ್ಟಿದ್ದ ಲೇಡಿಗೋಷನ್ ನರ್ಸ್ ನಿರೀಕ್ಷಾ ತನ್ನ ಅಶ್ಲೀಲ ವಿಡಿಯೋಗಳನ್ನು ಜಾಲತಾಣದಲ್ಲಿ ಪ್ರಸಾರ ಮಾಡಿ ತೇಜೋವಧೆ ಮಾಡುತ್ತಿದ್ದಾರೆಂದು ಕದ್ರಿ ಠಾಣೆಯಲ್ಲಿ ದೂರು ನೀಡಿದ್ದಾಳೆ. ಪ್ರಕರಣ ಸಂಬಂಧಿಸಿ ತನಿಖೆ ಆರಂಭಿಸಿರುವ ಪೊಲೀಸರು ಆಕಾಶಭವನ ನಿವಾಸಿ ನಿಖಿಲ್ ರಾಜ್ ಎಂಬಾತನನ್ನು ಬಂಧಿಸಿದ್ದಾರೆ. 

ಯುವತಿ ದೂರಿನಂತೆ ಅ.18ರಂದು ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಅ.ಕ್ರ 146/2025 ಕಲಂ 79, 190 ಬಿ.ಎನ್.ಎಸ್, 66(ಎ), 67 ಐಟಿ ಆಕ್ಟ್ ಮತ್ತು 3(1)(w)(i)(ii) ಎಸ್.ಸಿ/ಎಸ್.ಟಿ ಆಕ್ಟ್ ಅಡಿ ಪ್ರಕರಣ ದಾಖಲಾಗಿದೆ. ಸಾವಿಗೂ ಮುನ್ನ ಅಭಿಷೇಕ್ ಆಚಾರ್ಯ ಅಶ್ಲೀಲ ವಿಡಿಯೋ ಮತ್ತು ಫೋಟೋಗಳನ್ನು ವಾಟ್ಸಪ್ ಗ್ರೂಪ್ ಗಳಲ್ಲಿ ಹಂಚಿದ್ದು ಅದು ವೈರಲ್ ಆಗಿತ್ತು. ಅಭಿಷೇಕ್ ಆತ್ಮಹತ್ಯೆಗೂ ಮುನ್ನ ನೇಣು ಹಾಕುತ್ತಿರುವ ಫೋಟೋಗಳನ್ನು ಯುವತಿಗೆ ಕಳುಹಿಸಿ ಬೆದರಿಸಿದ್ದ. ಅಲ್ಲದೆ, ತನ್ನ ಸಾವಿಗೆ ಈಕೆ ಮತ್ತು ಜೊತೆಗಿದ್ದ ನಾಲ್ವರು ಕಾರಣವಾದ ಬಗ್ಗೆ ಏಳು ಪುಟಗಳ ಮರಣ ಪತ್ರವನ್ನೂ ಬರೆದಿಟ್ಟು ಸಾವಿಗೆ ಶರಣಾಗಿದ್ದ. 

ಘಟನೆಯಿಂದ ಆಕ್ರೋಶಿತರಾಗಿದ್ದ ಅಭಿಷೇಕ್ ಆಚಾರ್ಯ ಕುಟುಂಬಸ್ಥರು ಹಾಗೂ ಗೆಳೆಯರು ಡೆತ್ ನೋಟ್ ಮತ್ತು ಆಕೆಯ ಫೋಟೋಗಳನ್ನು ಜಾಲತಾಣದಲ್ಲಿ ಹಂಚಿ ನ್ಯಾಯ ಕೇಳಿದ್ದರು.‌ ಘಟನೆ ಸಂಬಂಧಿಸಿ ಯುವತಿ ನಿರೀಕ್ಷಾ ತನ್ನ ದೂರಿನಲ್ಲಿ, ಅಭಿಷೇಕ್ ತಮ್ಮ ಅಭಿಜಿತ್ ಹಾಗೂ ಇತರರು ತನ್ನ ಅಶ್ಲೀಲ ಫೋಟೊ, ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಮಾಡಿ ತೇಜೋವಧೆ ಮಾಡಿ ಮಾನಸಿಕ ಹಿಂಸೆ ನೀಡಿರುತ್ತಾರೆ. ತಾನು ಪರಿಶಿಷ್ಟ ಜಾತಿಗೆ ಸೇರಿದ್ದು, ಅಶ್ಲೀಲ ಭಾವಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿ ಜಾತಿ ನಿಂದನೆ ಮಾಡಿರುವುದಾಗಿ ದೂರು ನೀಡಿದ್ದು ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.   

ಸದರಿ ಪ್ರಕರಣದ ತನಿಖೆಯಲ್ಲಿ ಅಭಿಷೇಕ್ ಸಾವಿನ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ರವಾನಿಸಿದ್ದ ಸಂದೇಶಕ್ಕೆ ಪೂರಕವಾಗಿ ಜಾತಿ ನಿಂದನೆಯ ಶಬ್ದವನ್ನು ಬಳಸಿದ ಸಾಕ್ಷ್ಯ ಲಭ್ಯವಾದ ಹಿನ್ನೆಲೆಯಲ್ಲಿ ಕಾವೂರು ಆಕಾಶಭವನ ನಿವಾಸಿ ನಿಖಿಲ್ ರಾಜ್ (27) ಎಂಬಾತನನ್ನು ಅ.21ರಂದು ಮಂಗಳೂರು ಕೇಂದ್ರ ಉಪ ವಿಭಾಗದ ಎಸಿಪಿ ಪ್ರತಾಪ್ ಸಿಂಗ್ ಥೋರಟ್ ನೇತೃತ್ವದಲ್ಲಿ ದಸ್ತಗಿರಿ ಮಾಡಿ, ಆತನ ಮೊಬೈಲನ್ನು ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ. ‌ಸದರಿ ಪ್ರಕರಣವು ಎಸ್.ಸಿ/ಎಸ್.ಟಿ ಕಾಯ್ದೆಯಡಿಯಲ್ಲಿ ದಾಖಲಾಗಿ ತನಿಖೆ ನಡೆಯುತ್ತಿದ್ದು, ಈ ರೀತಿಯ ಕೃತ್ಯದಲ್ಲಿ ಭಾಗಿಯಾದವರ ವಿರುದ್ದ ಗಂಭೀರ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ಎಚ್ಚರಿಸಿದ್ದಾರೆ.

In connection with the death of Abhishek Acharya from Karkala, who was allegedly trapped in a honeytrap scandal, police have arrested Nikhil Raj (27) of Kavoor, Mangaluru. The arrest follows a complaint by Lady Goshen nurse Niriksha, named in Abhishek’s death note, alleging that obscene videos of her were circulated online along with caste-based insults.