ಬೆಂಗಳೂರು ಪೊಲೀಸರಿಂದ ಭರ್ಜರಿ ಕಾರ್ಯಚರಣೆ ;  ರಕ್ತಚಂದನ ಕದ್ದು ಮಾರಾಟ ಮಾಡುತ್ತಿದ್ದ ಗ್ಯಾಂಗ್ ಸೆರೆ,  1.75 ಕೋಟಿ ರೂ. ರೆಡ್ ಸ್ಯಾಂಡಲ್ ವಶಕ್ಕೆ ! 

04-12-25 04:18 pm       Bangalore Correspondent   ಕ್ರೈಂ

ನೆರೆಯ ರಾಜ್ಯ ಆಂಧ್ರಪ್ರದೇಶದಿಂದ ನಗರಕ್ಕೆ ವಾಮಮಾರ್ಗವಾಗಿ ರಕ್ತಚಂದನ ಮರದ ತುಂಡುಗಳನ್ನು ತಂದು, ಇಲ್ಲಿಂದ ತಮಿಳುನಾಡಿಗೆ ಮಾರಾಟ ಮಾಡುತ್ತಿದ್ದ ಪ್ರತ್ಯೇಕ ಎರಡು ಪ್ರಕರಣಗಳನ್ನು ಬೆಂಗಳೂರು ಪೊಲೀಸರು ಭೇದಿಸಿದ್ದಾರೆ. ಈ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಿ, 1.75 ಕೋಟಿ ರೂ. ಮೌಲ್ಯದ 1,897 ಕೆ.ಜಿ ರಕ್ತಚಂದನ ವಶಕ್ಕೆ ಪಡೆದಿದ್ದಾರೆ.

ಬೆಂಗಳೂರು, ಡಿ 04 : ನೆರೆಯ ರಾಜ್ಯ ಆಂಧ್ರಪ್ರದೇಶದಿಂದ ನಗರಕ್ಕೆ ವಾಮಮಾರ್ಗವಾಗಿ ರಕ್ತಚಂದನ ಮರದ ತುಂಡುಗಳನ್ನು ತಂದು, ಇಲ್ಲಿಂದ ತಮಿಳುನಾಡಿಗೆ ಮಾರಾಟ ಮಾಡುತ್ತಿದ್ದ ಪ್ರತ್ಯೇಕ ಎರಡು ಪ್ರಕರಣಗಳನ್ನು ಬೆಂಗಳೂರು ಪೊಲೀಸರು ಭೇದಿಸಿದ್ದಾರೆ. ಈ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಿ, 1.75 ಕೋಟಿ ರೂ. ಮೌಲ್ಯದ 1,897 ಕೆ.ಜಿ ರಕ್ತಚಂದನ ವಶಕ್ಕೆ ಪಡೆದಿದ್ದಾರೆ.

ಆರೋಪಿಗಳು ಅಕ್ರಮವಾಗಿ ಹಣ ಸಂಪಾದಿಸಲು ಹಾಗೂ ವ್ಯವಸ್ಥಿತ ಜಾಲದ ಮೂಲಕ ಕಾರು ಮತ್ತು ಬೊಲೆರೊ ವಾಹನದಲ್ಲಿ ಬಚ್ಚಿಟ್ಟುಕೊಂಡು ನಗರದಿಂದ ತಮಿಳುನಾಡಿಗೆ ಮಾರಾಟ ಮಾಡುವಲ್ಲಿ ನಿರತರಾಗಿದ್ದರು. ಖಚಿತ ಮಾಹಿತಿ ಅಧರಿಸಿ, ಹುಳಿಮಾವು ಹಾಗೂ ಆರ್.ಟಿ. ನಗರ ಪೊಲೀಸರು ಪ್ರತ್ಯೇಕ ಎರಡು ಪ್ರಕರಣಗಳಲ್ಲಿ 1.75 ಕೋಟಿ ಮೌಲ್ಯದ ರಕ್ತಚಂದನ ಜಪ್ತಿ ಮಾಡಿದ್ದಾರೆ. ಮೂವರು ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದರು.

ಕಾರಿನ ಡಿಕ್ಕಿಯಲ್ಲಿ ಸಾಗಾಟ: 

ಆಂಧ್ರಪ್ರದೇಶ ಕಡಪದಿಂದ ತರಿಸಿಕೊಂಡು, ನಗರದಿಂದ ಹೊಸೂರು ಮಾರ್ಗವಾಗಿ ತಮಿಳುನಾಡಿಗೆ ಹೋಗಿ ಮಾರಾಟ ಮಾಡುತ್ತಿದ್ದ ಆರೋಪಿ ಅಹಮ್ಮದ್ ಪಾಷಾ ಎಂಬಾತನನ್ನು ಹುಳಿಮಾವು ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ 1 ಕೋಟಿ ಮೌಲ್ಯದ 1,143 ಕೆ.ಜಿ ರಕ್ತಚಂದನ, ಕೃತ್ಯಕ್ಕೆ ಬಳಸಿದ್ದ ಮೂರು ಕಾರುಗಳನ್ನು ಜಪ್ತಿ ಮಾಡಲಾಗಿದೆ. ಕೃತ್ಯದಲ್ಲಿ ಶಾಮೀಲಾಗಿದ್ದ ಅಪ್ರಾಪ್ತನನ್ನೂ ವಶಕ್ಕೆ ಪಡೆದು ರಿಮ್ಯಾಂಡ್ ಹೋಮ್​ಗೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದರು.

ವೃತ್ತಿಯಲ್ಲಿ ಕಾರು ಚಾಲಕನಾಗಿರುವ ಅಹಮ್ಮದ್ ಪಾಷಾ ಥಣಿಸಂದ್ರದಲ್ಲಿ ವಾಸವಾಗಿದ್ದ. ಆರು ತಿಂಗಳ ಹಿಂದೆ ಪರಿಚಯವಾದ ವ್ಯಕ್ತಿಯಿಂದ ರಕ್ತಚಂದನ ಮಾರಾಟದ ಬಗ್ಗೆ ತಿಳಿದುಕೊಂಡಿದ್ದ. ಸುಲಭವಾಗಿ ಹಣ ಸಂಪಾದಿಸಲು ಮುಂದಾದ ಆರೋಪಿ, ಕಡಿಮೆ ಬೆಲೆಗೆ ರಕ್ತಚಂದನ ಖರೀದಿಸಿ ನಗರದ ಮೂಲಕ ತಮಿಳುನಾಡಿನಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ವಿವರಿಸಿದರು.

ರಕ್ತಚಂದನ ಕದ್ದು ನಗರಕ್ಕೆ ತಂದು ಸಾಗಾಟ: ಆಂಧ್ರಪ್ರದೇಶದ ಮದನಪಲ್ಲಿಯಿಂದ ಬೊಲೆರೊ ವಾಹನದಲ್ಲಿ ರಕ್ತಚಂದನ ತುಂಡುಗಳನ್ನು ತುಂಬಿಕೊಂಡು ನಗರಕ್ಕೆ ಬಂದು ಮಾರಾಟಕ್ಕೆ ಯತ್ನಿಸಿದ್ದ ಇಬ್ಬರು ಆರೋಪಿಗಳನ್ನು ಆರ್.ಟಿ.ನಗರ ಪೊಲೀಸರು ಬಂಧಿಸಿ, 75 ಲಕ್ಷ ರೂ. ಮೌಲ್ಯದ 754 ಕೆ.ಜಿ ರಕ್ತಚಂದನ ಮರದ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.

ರಾಜಶೇಖರ್ ಹಾಗೂ ವರಪ್ರಸಾದ್ ಬಂಧಿತ ಆರೋಪಿಗಳು. ಆಂಧ್ರಪ್ರದೇಶ ಮೂಲದ ಆರೋಪಿಗಳು ಪದವೀಧರಾಗಿದ್ದರೂ ಕೆಲಸವಿಲ್ಲದೆ ಓಡಾಡುತ್ತಿದ್ದರು. ಜೀವನ ನಿರ್ವಹಣೆಗಾಗಿ ಅಡ್ಡದಾರಿ ತುಳಿದ ಆರೋಪಿಗಳು ಮದನಪಲ್ಲಿಯ ಸುಂಡೆಪಲ್ಲಿ ಭಾಗದಿಂದ ಕಳ್ಳತನ ಮಾಡಿದ ರಕ್ತಚಂದನವನ್ನು ಬೊಲೆರೊ ವಾಹನದದಲ್ಲಿ ನಗರಕ್ಕೆ ಬಂದು ಮಾರಾಟ ಮಾಡಲು ಮುಂದಾಗಿದ್ದರು. ಆರೋಪಿಗಳ ವಿರುದ್ಧ ಬಿಎನ್​ಎಸ್ ಹಾಗೂ ಅರಣ್ಯ ಕಾಯ್ದೆಯಡಿಯ ಸೆಕ್ಷನ್​ಗಳನ್ನು ದಾಖಲಿಸಿ, ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

Bengaluru police have busted two separate red sandalwood smuggling operations involving the illegal transport of logs from Andhra Pradesh to Tamil Nadu via Bengaluru. Three accused have been arrested, and a total of 1,897 kg of red sandalwood worth ₹1.75 crore has been seized.