Shivamogga Conversion: ಶಿಕ್ಷಕಿಯಾದ ಬಳಿಕ ಪತ್ನಿ ಕ್ರಿಶ್ಚಿಯನ್ ಆಗಿ ಮತಾಂತರ ; ಮಕ್ಕಳಿಗೂ, ನನಗೂ ಏಸುವನ್ನು ಪೂಜಿಸಲು ಪೀಡನೆ, ಶಿವಮೊಗ್ಗದಲ್ಲಿ ಪೊಲೀಸ್ ದೂರು ಕೊಟ್ಟು ಪತಿರಾಯನ ಕಣ್ಣೀರು 

07-02-26 06:44 pm       HK News Desk   ಕ್ರೈಂ

ತನ್ನ ಪತ್ನಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದು ಮಕ್ಕಳನ್ನೂ ಮತಾಂತರ ಆಗಲು ಒತ್ತಾಯ ಮಾಡುತ್ತಿದ್ದಾಳೆ. ನನಗೂ ಮಾನಸಿಕ ಹಿಂಸೆ ನೀಡುತ್ತಿದ್ದಾಳೆ ಎಂದು ಭದ್ರಾವತಿಯ ಬೊಮ್ಮನಕಟ್ಟೆ ನಿವಾಸಿ ಬಿ. ವಿನಯ್ ಎಂಬವರು ಪೇಪರ್ ಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಶಿವಮೊಗ್ಗ, ಫೆ.7: ತನ್ನ ಪತ್ನಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದು ಮಕ್ಕಳನ್ನೂ ಮತಾಂತರ ಆಗಲು ಒತ್ತಾಯ ಮಾಡುತ್ತಿದ್ದಾಳೆ. ನನಗೂ ಮಾನಸಿಕ ಹಿಂಸೆ ನೀಡುತ್ತಿದ್ದಾಳೆ ಎಂದು ಭದ್ರಾವತಿಯ ಬೊಮ್ಮನಕಟ್ಟೆ ನಿವಾಸಿ ಬಿ. ವಿನಯ್ ಎಂಬವರು ಪೇಪರ್ ಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

2011 ರಲ್ಲಿ ಹಾಸನ ಜಿಲ್ಲೆಯ ಪ್ರಿಯತಾ ಎಂಬಾಕೆ ಜೊತೆ ಬೇಲೂರು ತಾಲೂಕಿನ ಹಳೇಬಿಡು ಬನಶಂಕರಿ ಕಲ್ಯಾಣ ಮಂಟಪದಲ್ಲಿ ಲಿಂಗಾಯತ ಕುಂಬಾರ ಪದ್ಧತಿಯಂತೆ ಶಾಸ್ತ್ರೋಕ್ತವಾಗಿ ಮದುವೆಯಾಗಿದ್ದು, ನಮಗೆ 14 ವರ್ಷದ ಯೋಜ್ಞಾ ಮತ್ತು 8 ವರ್ಷದ ಮನೋಜ್ಞಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. 2015ರಲ್ಲಿ ಶಿವಮೊಗ್ಗದ ಪ್ರತಿಷ್ಟಿತ ಖಾಸಗಿ ಶಾಲೆಯಲ್ಲಿ ಪ್ರಿಯತಾ ಶಿಕ್ಷಕಿಯಾಗಿ ಕೆಲಸಕ್ಕೆ ಸೇರಿದ್ದು, ಅಂದಿನಿಂದ ಅವಳು ನಮ್ಮ ಹಿಂದೂ ಸಂಪ್ರದಾಯವನ್ನು ಬಿಟ್ಟು ಕ್ರಿಶ್ಚಿಯನ್ ಧರ್ಮದ ಕಡೆ ಆಸಕ್ತಿ ಹೊಂದಿದ್ದಳು. ಅದೇ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಮರಿಯಾ ಪ್ರಿಯದರ್ಶಿನಿ ಎಂಬವರ ಸಹಾಯದಿಂದ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದಾಳೆ ಎಂದು ಪತಿ ವಿನಯ್ ಆರೋಪಿಸಿದ್ದಾರೆ.

ಮತಾಂತರ ಬಳಿಕ ಪ್ರಿಯತಾ ಚರ್ಚ್‌ಗೆ ಹೋಗುತ್ತಿದ್ದಳು. ಮನೆಯಲ್ಲಿ ಬೈಬಲ್ ತಂದು ಓದುತ್ತಿದ್ದಳು. ಈ ರೀತಿ ಮಾಡದಂತೆ ಹೇಳಿದರೂ ಕ್ರಿಶ್ಚಿಯನ್ ಧರ್ಮ ಪಾಲಿಸುತ್ತಿದ್ದೇನೆ, ನೀವು ಕೂಡ ಅದೇ ಧರ್ಮವನ್ನು ಪಾಲಿಸಿ ಎಂದು ಹೇಳುತ್ತಿದ್ದಳು. ನಾನು ಇದಕ್ಕೆ ಒಪ್ಪುತ್ತಿರಲಿಲ್ಲ. ನನ್ನ ಹಿರಿಯ ಮಗಳಿಗೂ ಕ್ರಿಶ್ಚಿಯನ್ ಧರ್ಮ ಪಾಲಿಸುವಂತೆ ಒತ್ತಾಯಿಸುತ್ತಿದ್ದಳು. ಈ ಬಗ್ಗೆ ಮನೆಯಲ್ಲಿ ದಿನವೂ ಜಗಳವಾಗುತ್ತಿತ್ತು. 

2019ರಲ್ಲಿ ಪತ್ನಿ ತವರಿಗೆ ಹೋಗಿದ್ದಳು. ಮಕ್ಕಳ ಜೀವನ ಹಾಳಾಗಬಾರದೆಂದು ಪತ್ನಿಗೆ ಮನೆಗೆ ಬರುವಂತೆ ವಿನಂತಿಸಿದ್ದು 2020ರಲ್ಲಿ ವಾಪಸ್ ಮನೆಗೆ ಬಂದಿದ್ದಳು. ಅವಳು ಬಂದಾಗಿನಿಂದ ಬೇರೆಯದ್ದೇ ರೀತಿ ವರ್ತಿಸುತ್ತಿದ್ದಳು. ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಪ್ರಾರ್ಥನೆ ಮಾಡುತ್ತಿದ್ದು ನನಗೂ ಫಾಲೋ ಮಾಡಲು ಒತ್ತಾಯಿಸುತ್ತಿದ್ದಳು ಎಂದು ಪತಿ ವಿನಯ್ ಕಣ್ಣೀರು ಹಾಕಿದ್ದಾರೆ.

ನನಗೂ ಮತಾಂತರಗೊಳ್ಳಲು ಪೀಡಿಸುತ್ತಿದ್ದು, ಒಪ್ಪದೆ ಇದ್ದುದರಿಂದ ಮಾನಸಿಕ ಹಿಂಸೆ ಮಾಡುತ್ತಿದ್ದಳು. ಅವಳ ಮಾತನ್ನು ಕೇಳದ ಕಾರಣ 2025ರಲ್ಲಿ ನನ್ನನ್ನು ಮತ್ತು ಮಕ್ಕಳನ್ನು ಬಿಟ್ಟು ತವರು ಮನೆಗೆ ಹೋದವಳು ವಾಪಸ್ ಬಂದಿಲ್ಲ. ಇದರ ಹಿಂದೆ ಯಾರಿದ್ದಾರೆ, ಯಾರ ಒತ್ತಡಕ್ಕೆ ಬಿದ್ದು ಹೀಗೆ ಮಾಡುತ್ತಿದ್ದಾಳೆಂದು ಗೊತ್ತಾಗಿಲ್ಲ ಎಂದು ಅಸಹಾಯಕತೆ ತೋರಿದ್ದಾರೆ.