Manish kottary, Marriage Fraud, Mangalore: ಮ್ಯಾಟ್ರಿಮನಿ ಕಂತ್ರಿ ಬಳಿಕ ಮತ್ತೊಬ್ಬ ಕುತಂತ್ರಿ ಬಗ್ಗೆ ಕುಡ್ಲದಲ್ಲಿ ಭಾರೀ ಸುದ್ದಿ ; ಫೇಸ್ಬುಕ್ ನಲ್ಲೇ ಟಿಕ್ ಟಾಕ್ ಮಾಡಿ ಯುವತಿಯರಿಗೆ ಮೋಡಿ, ಲವ್ ಹೆಸರಲ್ಲಿ ದೋಖಾ ಮಾಡಿದ್ದಾಗಿ ಪತ್ನಿಯಿಂದಲೇ ದೂರು 

15-02-26 05:08 pm       Mangaluru Staffer   ಕ್ರೈಂ

ಮ್ಯಾಟ್ರಿಮನಿಯಲ್ಲಿ ಯುವತಿಯರಿಗೆ ಗಾಳ ಹಾಕಿ ವಂಚಿಸುತ್ತಿದ್ದ ಕತರ್ನಾಕ್ ಸುಂದರಾಂಗನ ಪ್ರಕರಣದ ಬೆನ್ನಲ್ಲೇ ಮತ್ತೊಬ್ಬ ಮನ್ಮಥ ರಾಜನ ವೈಯ್ಯಾರಗಿತ್ತಿ ಸುದ್ದಿ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ.‌

ಮಂಗಳೂರು, ಫೆ.15: ಮ್ಯಾಟ್ರಿಮನಿಯಲ್ಲಿ ಯುವತಿಯರಿಗೆ ಗಾಳ ಹಾಕಿ ವಂಚಿಸುತ್ತಿದ್ದ ಕತರ್ನಾಕ್ ಸುಂದರಾಂಗನ ಪ್ರಕರಣದ ಬೆನ್ನಲ್ಲೇ ಮತ್ತೊಬ್ಬ ಮನ್ಮಥ ರಾಜನ ವೈಯ್ಯಾರಗಿತ್ತಿ ಸುದ್ದಿ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ.‌ ವಿದೇಶದಲ್ಲಿ ಕುಳಿತೇ ಮಂಗಳೂರು ಮೂಲದ ಯುವತಿಯರಿಗೆ ಗಾಳ ಹಾಕುತ್ತಿದ್ದಾನೆ, ಈಗಾಗಲೇ ಮೂರ್ನಾಲ್ಕು ಮದುವೆಯಾಗಿ ವಂಚಿಸಿದ್ದಾನೆಂದು ಮಂಗಳೂರಿನ ಯುವಕನೊಬ್ಬನ ಬಗ್ಗೆ ಆತನ ಪತ್ನಿಯೇ ದೂರು ನೀಡಿ ಸುದ್ದಿಯಾಗಿದ್ದಾರೆ. 

ಗಂಡನ ಪ್ರೀತಿ ಮತ್ತು ಮದುವೆ ಹೆಸರಿನ ಕಳ್ಳಾಟಕ್ಕೆ ಸುಸ್ತಾಗಿರುವ ಯುವತಿ ಇದೀಗ ಆರೋಪಿ, ಬಜಪೆ ನಿವಾಸಿ ಮನೀಶ್ ಕೊಟ್ಟಾರಿ ಎಂಬಾತನ ವಿರುದ್ಧ ಮಂಗಳೂರು ನಗರದ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಫೇಸ್ ಬುಕ್ ನಲ್ಲಿ ಮನೀಶ್ ಮತ್ತು ದೂರುದಾರ ಯುವತಿಯ ಪರಿಚಯವಾಗಿದ್ದು ಆನಂತರ ಆತನೇ ಬೆನ್ನು ಬಿದ್ದು ಬ್ಲಾಕ್ ಮೇಲ್ ಮಾಡಿ ಮದುವೆಯಾಗಿದ್ದಾನೆಂದು ಯುವತಿ ಆರೋಪಿಸಿದ್ದಾಳೆ. 

ಮದುವೆಗೆ ಮೂರು ದಿನ ಇರುವಾಗ ಆತ್ಮಹತ್ಯೆ ಯತ್ನದ ನಾಟಕವಾಡಿದ್ದ. ಮದುವೆಗೆ ಹಣ ಇಲ್ಲ, ನೀವೇ ಏನಾದ್ರೂ ಮಾಡಬೇಕೆಂದು ಕಳ್ಳಾಟ ತೋರಿಸಿದ್ದ. ಆಬಳಿಕ ಮದುವೆಯ ಎಲ್ಲಾ ಖರ್ಚನ್ನು ನಮ್ಮ ಪೋಷಕರೇ ಹಾಕಿ ಮದುವೆ ಮಾಡಿಸಿದ್ದರು. ನನ್ನ ತಂದೆ ಪೈಂಟರ್ ಆಗಿದ್ದು ಕಷ್ಟಪಟ್ಟು ದುಡಿದ ಹಣದಲ್ಲಿ ಮದುವೆ ಮಾಡಿಸಿದ್ದರು‌. ಆದರೆ ಆತನಿಗೆ ಹಣದ ಬೆಲೆ ಗೊತ್ತಿಲ್ಲ. ಮದುವೆ ಬಳಿಕ ಎರಡು ಲಕ್ಷ ಕೊಟ್ಟು ವಿದೇಶದಲ್ಲಿ ಕೆಲಸ ಕೊಡಿಸುವುದಕ್ಕೂ ಸಹಾಯ ಮಾಡಿದ್ದೆ. ಆದರೆ, ದುಬೈಗೆ ಹೋದ ಬಳಿಕ ಬದಲಾಗಿದ್ದು ಅಲ್ಲಿ ಬಹರೇನ್ ನಲ್ಲಿರುವ ಮಂಗಳೂರು ಮೂಲದ ಮಹಿಳೆಯ ಜೊತೆ ಪ್ರೀತಿ ನಾಟಕ ಶುರು ಮಾಡಿದ್ದಾನೆ. ಇದರ ಬಗ್ಗೆ ತಿಳಿಯುತ್ತಲೇ ಮನೀಶ್ ಇತಿಹಾಸ ಕೆದಕಿದಾಗ, ಮದುವೆಗೂ ಮುನ್ನ ಈತ ಹಲವು ಯುವತಿಯರ ಜೊತೆ ಆಫೇರ್ ಹೊಂದಿದ್ದುದು ಬಯಲಾಗಿದೆ. ಅವರೆಲ್ಲರ ಬಳಿಯೂ ಹಣ ಪಡೆದು ಮೋಸ ಮಾಡಿದ್ದಾಗಿ ಯುವತಿ ಮಾಹಿತಿ ಸಂಗ್ರಹಿಸಿದ್ದಾಳೆ. 

ಹಣ ವಾಪಸ್ ಕೇಳಿದ್ರೆ ಎಲ್ಲಾ ಯುವತಿಯರ ಬಳಿ ಒಂದೇ ರೀತಿಯ ನಾಟಕ ಮಾಡ್ತಿದ್ದ. ತನಗೆ ಬ್ರೈನ್ ಟ್ಯೂಮರ್ ಇದೆ ಎಂದು ಹೇಳಿ ಹಣ ಕೊಡದೇ ಲವ್ ಬ್ರೇಕ್ ಅಪ್ ಮಾಡುತ್ತಿದ್ದ. ಆನಂತರ, ಟಿಕ್ ಟಾಕ್ ಮಾಡಿ ಹೊಸ ಯುವತಿಯರಿಗೆ ಗಾಳ ಹಾಕಿ ಬಲೆಗೆ ಹಾಕುತ್ತಿದ್ದ ಎಂದು ಆತನ ಪತ್ನಿ ಈಗ ಆರೋಪ ಮಾಡಿದ್ದಾಳೆ. ಇಂತಹ ಗಂಡ ತನಗೆಂದೂ ಬೇಡ, ಮತ್ತೆ ಯಾರೊಬ್ಬ ಯುವತಿಯೂ ಈತನಿಂದ ಮೋಸ ಹೋಗಬಾರದು ಎಂದು ಹೇಳಿ ಪೊಲೀಸ್ ದೂರು ನೀಡುತ್ತಿರುವುದಾಗಿ ಮಾಧ್ಯಮಕ್ಕೆ ತಿಳಿಸಿದ್ದಾಳೆ.

Close on the heels of a recent matrimony fraud case, another shocking incident has surfaced in Mangaluru, where a woman has filed a police complaint against her husband, Manish Kottari, accusing him of cheating several women in the name of love and marriage. The complaint has been registered at the women’s police station in Pandeshwar. The accused, identified as Manish Kottari, a resident of Bajpe, allegedly befriended the complainant through Facebook. According to the woman, he pursued her persistently, emotionally manipulated and blackmailed her, and eventually married her.