ಧರ್ಮಸ್ಥಳ ಬುರುಡೆ ಅಗೆದಿದ್ದೇ ಬಂತು..! ಹತ್ತು ತಿಂಗಳು ಕಳೆದರೂ ಜೆಸಿಬಿ, ಕಾರ್ಮಿಕರ ಬಿಲ್ ಪಾವತಿಯಿಲ್ಲ ; ಹೊಣೆ ಬಗ್ಗೆ ಪಂಚಾಯತ್, ಎಸ್ಐಟಿ ನಡುವೆ ಗೊಂದಲ

12-05-26 01:11 pm       HK News Staffer   ಕ್ರೈಂ

ದೇಶವ್ಯಾಪಿ ಗಮನ ಸೆಳೆದಿದ್ದ "ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ” ಎಂಬ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಎಸ್‌ಐಟಿ ತನಿಖೆ ಸಲುವಾಗಿ 17 ಸ್ಥಳಗಳಲ್ಲಿ ಅಗೆಯಲು ಬಳಸಿದ್ದ ಜೆಸಿಬಿ ಮತ್ತು ಕಾರ್ಮಿಕರ ವೆಚ್ಚವನ್ನು ಇನ್ನೂ ಪಾವತಿಸಿಲ್ಲ ಎಂಬ ಆರೋಪ ಕೇಳಿಬಂದಿದೆ.

ಮಂಗಳೂರು, ಮೇ 12 : ದೇಶವ್ಯಾಪಿ ಗಮನ ಸೆಳೆದಿದ್ದ "ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ” ಎಂಬ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಎಸ್‌ಐಟಿ ತನಿಖೆ ಸಲುವಾಗಿ 17 ಸ್ಥಳಗಳಲ್ಲಿ ಅಗೆಯಲು ಬಳಸಿದ್ದ ಜೆಸಿಬಿ ಮತ್ತು ಕಾರ್ಮಿಕರ ವೆಚ್ಚವನ್ನು ಇನ್ನೂ ಪಾವತಿಸಿಲ್ಲ ಎಂಬ ಆರೋಪ ಕೇಳಿಬಂದಿದೆ.

2025ರ ಜುಲೈ 29ರಿಂದ ಆಗಸ್ಟ್ 13ರ ವರೆಗೆ ನಡೆದ ಈ ಕಾರ್ಯಾಚರಣೆಯಲ್ಲಿ ಜೆಸಿಬಿ ಮತ್ತು ಕೂಲಿಯಾಳುಗಳನ್ನು ಬಳಸಿ ಮಳೆ, ಬಿಸಿಲು ಲೆಕ್ಕಿಸದೇ ಕೆಲಸ ಮಾಡಿಸಲಾಗಿತ್ತು. ಇದಾಗಿ 10 ತಿಂಗಳು ಕಳೆದರೂ ಜೆಸಿಬಿ ಬಾಡಿಗೆ, ವಾಹನ ಬಾಡಿಗೆ ಹಾಗೂ ಕಾರ್ಮಿಕರ ಕೂಲಿ ಸೇರಿ ಲಕ್ಷಾಂತರ ಬಿಲ್ ಬಾಕಿ ಉಳಿದಿದೆ. ಹಿಟಾಚಿ ಯಂತ್ರ ಬಳಕೆ, ಶಾಮಿಯಾನ, ಹಾರೆ, ಪಿಕಾಸು, ಕುಡಿಯುವ ನೀರು ವ್ಯವಸ್ಥೆ ಸೇರಿದಂತೆ ಹಲವು ವೆಚ್ಚಗಳಿಗೆ ಪಾವತಿ ಇನ್ನೂ ಆಗಿಲ್ಲ ಎಂದು ತಿಳಿದುಬಂದಿದೆ.

ಲಭ್ಯ ಮಾಹಿತಿಯ ಪ್ರಕಾರ, ಉತ್ಖನನ ಕಾರ್ಯಕ್ಕೆ ಸುನೀಲ್ ಕನ್ಯಾಡಿ ಎಂಬವರ ಹಿಟಾಚಿ ಯಂತ್ರ ಬಳಸಲಾಗಿತ್ತು. ಕೇವಲ 10 ದಿನಗಳಷ್ಟೇ ಯಂತ್ರವನ್ನು ಬಳಸಲಾಗಿದ್ದರೂ, ಬಳಕೆಯಾದ ದಿನಗಳಿಗಷ್ಟೇ ಬಿಲ್ ಪಾವತಿಸಬೇಕೆಂದು ಮಾಲಕರು ಮನವಿ ಮಾಡಿದ್ದರು. ಆದರೆ 9 ತಿಂಗಳಿಗೂ ಹೆಚ್ಚು ಕಾಲ ಕಳೆದರೂ ಯಾವುದೇ ಹಣ ದೊರೆತಿಲ್ಲ ಎಂಬುದು ಆರೋಪವಾಗಿದೆ.

ಬಿಲ್ ಪಾವತಿ ವಿಚಾರದಲ್ಲಿ ಧರ್ಮಸ್ಥಳ ಗ್ರಾಮ ಪಂಚಾಯತ್ ಹಾಗೂ ಎಸ್‌ಐಟಿ ನಡುವೆ ಗೊಂದಲ ಉಂಟಾಗಿದೆ ಎನ್ನಲಾಗುತ್ತಿದೆ. ಪಂಚಾಯತ್ ಅಧಿಕಾರಿಗಳು ಎಸ್‌ಐಟಿ ಕಡೆಗೆ ಬೆರಳು ತೋರಿಸುತ್ತಿದ್ದು, ಎಸ್‌ಐಟಿ ಮಾತ್ರ ನವೆಂಬರ್‌ನಲ್ಲೇ ಬಿಲ್ ಪಾವತಿಸಲಾಗಿದೆ ಎಂದು ಹೇಳುತ್ತಿರುವುದು ವಿವಾದಕ್ಕೆ ಕಾರಣವಾಗಿದೆ. ಇದೇ ವೇಳೆ, ಉತ್ಖನನ ಸಂದರ್ಭದಲ್ಲಿ ಇದ್ದ ಪಂಚಾಯತ್ ಪಿಡಿಒ ಈಗ ನಿವೃತ್ತರಾಗಿದ್ದು ಯಾರನ್ನು ಕೇಳುವುದೆಂಬ ಗೊಂದಲ ಉಂಟಾಗಿದೆ.