ವಿಚ್ಛೇದಿತ ಮಹಿಳೆಗೆ ಫೇಸ್‌ಬುಕ್‌ನಲ್ಲಿ ಪ್ರೀತಿಯ ನಾಟಕ ; ಗಿಫ್ಟ್ ಹೆಸರಲ್ಲಿ 1.75 ಕೋಟಿ ರೂ. ವಂಚನೆ, ಸೀರೆ, ಚಿನ್ನ, ವಜ್ರದ ಆಸೆ ತೋರಿಸಿ ಟೋಪಿ, ಆಂಟಿ ಅಕೌಂಟ್ ಖಾಲಿ, ಸೈಬರ್ ವಂಚಕರಿಗೆ ಜಾಲಿ..ಜಾಲಿ!

28-07-26 12:28 pm       HK News Staffer   ಕ್ರೈಂ

ವಿಚ್ಛೇದಿತ ಮಹಿಳೆಯನ್ನ ಫೇಸ್​​ಬುಕ್​ನಲ್ಲಿ ಪರಿಚಯಿಸಿಕೊಂಡು ವಿಶ್ವಾಸ ಗಳಿಸಿ ಬಳಿಕ ವಿದೇಶದಿಂದ ದುಬಾರಿ ಬೆಲೆಯ ಗಿಫ್ಟ್ ಕಳುಹಿಸಿರುವುದಾಗಿ ನಂಬಿಸಿ, ಇದನ್ನ ಪಡೆಯಲು ಕಸ್ಟಮ್ ಫೀಸ್ ನೆಪದಲ್ಲಿ 1.5 ಕೋಟಿ ರೂ. ಪಡೆದು ವಂಚಿಸಿದ್ದ ಸೈಬರ್ ವಂಚಕರ ವಿರುದ್ಧ ಉತ್ತರ ವಿಭಾಗದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು, ಜುಲೈ 28: ವಿಚ್ಛೇದಿತ ಮಹಿಳೆಯನ್ನ ಫೇಸ್​​ಬುಕ್​ನಲ್ಲಿ ಪರಿಚಯಿಸಿಕೊಂಡು ವಿಶ್ವಾಸ ಗಳಿಸಿ ಬಳಿಕ ವಿದೇಶದಿಂದ ದುಬಾರಿ ಬೆಲೆಯ ಗಿಫ್ಟ್ ಕಳುಹಿಸಿರುವುದಾಗಿ ನಂಬಿಸಿ, ಇದನ್ನ ಪಡೆಯಲು ಕಸ್ಟಮ್ ಫೀಸ್ ನೆಪದಲ್ಲಿ 1.5 ಕೋಟಿ ರೂ. ಪಡೆದು ವಂಚಿಸಿದ್ದ ಸೈಬರ್ ವಂಚಕರ ವಿರುದ್ಧ ಉತ್ತರ ವಿಭಾಗದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

52 ವರ್ಷದ ಮಹಿಳೆ ನೀಡಿದ ದೂರಿನ ಮೇರೆಗೆ ಸಾಹಿಲ್ ಜುಗ್ಗಲ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ. ಗಂಡನಿಂದ ದೂರವಾಗಿ ವಿಚ್ಛೇದನ ಪಡೆದಿದ್ದ ಯಶವಂತಪುರ ನಿವಾಸಿಯಾಗಿರುವ ಮಹಿಳೆಗೆ ಕೆಲ ತಿಂಗಳ ಹಿಂದೆ ಫೇಸ್​​ಬುಕ್​​ನಲ್ಲಿ ಸಾಹಿಲ್ ಪರಿಚಯವಾಗಿದ್ದ. ಕ್ರಮೇಣ ಮೊಬೈಲ್ ನಂಬರ್ ವರ್ಗಾಯಿಸಿಕೊಂಡು ಇಬ್ಬರು ಪರಸ್ಪರ ಕರೆ ಮಾಡಿ ಮಾತನಾಡಿದ್ದಾರೆ. ಯುಕೆಯಲ್ಲಿ ತಾನು ನೆಲೆಸಿದ್ದು, ಉಡುಗೊರೆ ನೆಪದಲ್ಲಿ ಸೀರೆಯನ್ನ ಕೊರಿಯರ್ ಮಾಡಿರುವುದಾಗಿ ಸುಳ್ಳು ಹೇಳಿ ಕೊರಿಯರ್ ಮಾಡಿರುವ ನಕಲಿ ರಶೀದಿ ಕಳುಹಿಸಿದ್ದ. ಪಾರ್ಸೆಲ್​​ನಲ್ಲಿ ಚಿನ್ನ ಹಾಗೂ ವಜ್ರಾಭರಣವಿದೆ ಎಂದು ಮಹಿಳೆಯನ್ನ ನಂಬಿಸಿದ್ದ. ಬಳಿಕ ದೆಹಲಿ ಏರ್​​ಪೋರ್ಟ್​ನಲ್ಲಿ ಕಸ್ಟಮ್ ನಿಂದ ತೊಂದರೆಯಾಗಿದೆ. ಸುಂಕ ಪಾವತಿಸಿದ ಬಳಿಕ ದುಬಾರಿ ಬೆಲೆಯ ಗಿಫ್ಟ್​ಗಳನ್ನು ಪಡೆಯುವಂತೆ ಮಹಿಳೆಗೆ ಹೇಳಿದ್ದ. ದೂರುದಾರ ಮಹಿಳೆಗೆ ಏರ್​​ಪೋರ್ಟ್ ಕಸ್ಟಮ್ ಅಧಿಕಾರಿ ಸೋಗಿನಲ್ಲಿ ಸೈಬರ್ ಖದೀಮರು ಕರೆ ಮಾಡಿ, ತಮ್ಮ ಹೆಸರಿನಲ್ಲಿ ಗಿಫ್ಟ್ ಬಂದಿವೆ. ಇದನ್ನ ಬಿಡಿಸಿಕೊಳ್ಳಲು ಹಣ ಪಾವತಿಸಬೇಕು ಎಂದು ಹೇಳಿದ್ದಾರೆ. ಇದನ್ನ ನಂಬಿದ ಮಹಿಳೆಯು 40 ಲಕ್ಷ ಹಣವನ್ನ ಆರ್​​ಟಿಜಿಎಸ್ ಮೂಲಕ ಪಾವತಿಸಿದ್ದಾರೆ. ಇದಾದ ಬಳಿಕ ಮತ್ತೆ ಕರೆ ಮಾಡಿ ಇನ್ನೂ ಹೆಚ್ಚಿನ ಹಣ ನೀಡುವಂತೆ ಬೇಡಿಕೆಯಿಟ್ಟು ನಿರ್ದಿಷ್ಟ ಸ್ಥಳಕ್ಕೆ ಬರುವಂತೆ ಹೇಳಿ ಆರೋಪಿಯ ಸಹಚರರನ್ನ ಕಳುಹಿಸಿ ಹಣ ತೆಗೆದುಕೊಳ್ಳುತ್ತಿದ್ದರು. ಹೀಗೆ ಹಂತ - ಹಂತವಾಗಿ 1.75 ಕೋಟಿ ಹಣ ಪಡೆದು ವಂಚಿಸಿದ್ದಾರೆ ಎಂದು ದೂರಿನಲ್ಲಿ ಮಹಿಳೆ ಆರೋಪಿಸಿದ್ಧಾರೆ.

ಸೈಬರ್ ವಂಚನೆಗಳ ಕುರಿತು ಪೊಲೀಸ್ ಇಲಾಖೆ, ಬ್ಯಾಂಕ್‌ಗಳು ಹಾಗೂ ಮಾಧ್ಯಮಗಳು ನಿರಂತರವಾಗಿ ಜಾಗೃತಿ ಮೂಡಿಸುತ್ತಿದ್ದರೂ, ಅಪರಿಚಿತರ ಮಾತುಗಳನ್ನು ಕಣ್ಮುಚ್ಚಿ ನಂಬುವ ಪ್ರವೃತ್ತಿ ಇನ್ನೂ ಕಡಿಮೆಯಾಗಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ವಿದೇಶದಿಂದ ಉಡುಗೊರೆ, ಕಸ್ಟಮ್ಸ್ ಶುಲ್ಕ ಅಥವಾ ಲಾಟರಿ ಹೆಸರಿನಲ್ಲಿ ಹಣ ಕೇಳಿದರೆ ಅದು ಬಹುತೇಕ ವಂಚನೆಯೇ ಎಂಬ ಅರಿವು ನಾಗರಿಕರಲ್ಲಿ ಮೂಡಬೇಕಿದೆ. ಸ್ವಲ್ಪ ಎಚ್ಚರಿಕೆ ವಹಿಸಿದ್ದರೆ ಕಷ್ಟಪಟ್ಟು ಗಳಿಸಿದ ಹಣವನ್ನು   ಕಳೆದುಕೊಳ್ಳುವುದನ್ನು ತಪ್ಪಿಸಬಹುದಾಗಿದೆ. ಅಪರಿಚಿತರ ಮಾತಿಗೆ ಮರುಳಾಗುವ ಬದಲು, ಯಾವುದೇ ಹಣಕಾಸಿನ ವ್ಯವಹಾರಕ್ಕೂ ಮುನ್ನ ಪೊಲೀಸ್ ಅಥವಾ ಸೈಬರ್ ಸಹಾಯವಾಣಿಯಿಂದ ಮಾಹಿತಿ ಪಡೆದು ದೃಢಪಡಿಸಿಕೊಳ್ಳುವುದು ಅತ್ಯಗತ್ಯ.