ಬ್ರೇಕಿಂಗ್ ನ್ಯೂಸ್
17-01-21 03:16 pm Mangalore Correspondent ಕ್ರೈಂ
ಮಂಗಳೂರು, ಜ.17: ಆತನ ವಯಸ್ಸು ಇನ್ನೂ 24 ಮುಗಿದಿಲ್ಲ. ಆದರೆ, ಆತನ ಆಟಾಟೋಪ, ಮಾಡಿದ ಕತರ್ನಾಕ್ ಕೆಲಸಗಳನ್ನು ನೋಡಿದರೆ ಪೊಲೀಸರೇ ಗಾಬರಿ ಪಡುವಷ್ಟಿದೆ. ಹೌದು.. ಮೂಲತಃ ಉಡುಪಿ ಜಿಲ್ಲೆಯ ಮಣಿಪಾಲದ ಅನಂತನಗರದ ನಿವಾಸಿಯಾಗಿರುವ ಸ್ವರೂಪ್ ಶೆಟ್ಟಿ ಎಂಬ ಆಸಾಮಿ ಯುವಕನ ಕತೆ ಕೇಳಿದರೆ, ಜನಸಾಮಾನ್ಯರಲ್ಲ ಕತ್ತಿ, ತಲವಾರು ಇಟ್ಟುಕೊಂಡು ಬೀದಿ ಕಾಳಗ ಮಾಡಿ ಜೀವ ತೇಯುವ ಮಂದಿಯೇ ಹೌಹಾರಬೇಕು. ಯಾಕಂದ್ರೆ, ಈ ಸ್ವರೂಪ್ ಶೆಟ್ಚಿ ಎನ್ನುವಾತ ಸಣ್ಣ ಪ್ರಾಯದಲ್ಲೇ ಎಸಗಿರುವ ಹರಾಮಿ ಕೆಲಸಗಳು ರೌಡಿ, ದಗಾಕೋರರಿಗಿಂತ ತೀರಾ ವಿಭಿನ್ನವಾಗಿರೋ ಕ್ರಿಮಿನಲ್ ಅನ್ನುವಷ್ಟರ ಮಟ್ಟಿಗಿದೆ.
ಕಾರ್ಕಳದ ನಿಟ್ಟೆಯಲ್ಲಿ ಬೈಕ್ ರೆಂಟ್ ಕೊಡುವ ಬಿಸಿನೆಸ್ ಇಟ್ಟುಕೊಂಡಿದ್ದ ಸ್ವರೂಪ್ ಶೆಟ್ಟಿ, ಅಲ್ಲಿಂದಲೇ ಪಾತಕ ಲೋಕಕ್ಕೆ ಎಂಟ್ರಿ ಕೊಟ್ಟಿದ್ದ. ಐಷಾರಾಮಿ ಬೈಕ್ ಗಳನ್ನು ಬಾಡಿಗೆ ಪಡೆದು ಹೋಗುವ ಮಂದಿಯಿಂದ ಖಾಲಿ ಸ್ಟಾಂಪ್ ಪೇಪರಿಗೆ ಸಹಿ ಹಾಕಿಸಿಕೊಂಡು ಕಳಿಸುತ್ತಿದ್ದ ಸ್ವರೂಪ್, ಬೈಕ್ ಎತ್ತಿಕೊಂಡು ಹೋಗುವ ಯುವಕರನ್ನು ನಿಧಾನಕ್ಕೆ ತನ್ನ ಜಾಲಕ್ಕೆ ಬೀಳಿಸತೊಡಗಿದ್ದ. ಮೊದಲಿಗೆ, ಸಿರಿವಂತ ಯುವಕರನ್ನು ದೋಸ್ತಿಯಾಗಿಸ್ಕೊಂಡು ಬ್ಯಾಂಕ್ ಬ್ಯಾಲೆನ್ಸ್, ಮನೆಯವರ ಬಗ್ಗೆ ಮಾಹಿತಿ ಪಡೀತಿದ್ದ ಸ್ವರೂಪ್, ತನ್ನ ಬಿಸಿನೆಸ್ಸಿಗೆ ಹೂಡಿಕೆ ಮಾಡುವ ನೆಪದಲ್ಲಿ ಲಕ್ಷಾಂತರ ರೂಪಾಯಿ ಪಡೆಯುತ್ತಿದ್ದ. ಆನಂತ್ರ ಮೊದಲೇ ಸಹಿ ಹಾಕಿಸಿ ಖಾಲಿ ಪೇಪರ್ ಮುಂದಿಟ್ಟು, ಹರೆಯದ ಯುವಕರನ್ನು ಬ್ಲಾಕ್ ಮೇಲ್ ಮಾಡುತ್ತಿದ್ದ. ತಿರುಗಿ ಹಣ ಕೇಳಿದರೆ, ಕೊಲ್ಲುವ ಬೆದರಿಕೆ ಒಡ್ಡುತ್ತಿದ್ದ. ಪೊಲೀಸ್ ದೂರು ನೀಡದಂತೆ, ಪೊಲೀಸರ ಹೆಸರಲ್ಲೇ ಕರೆ ಮಾಡಿಸಿ ಯಾಮಾರಿಸುತ್ತಿದ್ದ.
ಪೊಲೀಸರ ಹೆಸರಲ್ಲೇ ಕರೆ ಮಾಡಿ ಬೆದರಿಕೆ
ಸ್ವರೂಪ್ ಶೆಟ್ಟಿ ಜೊತೆಗೆ ಮೂರು ಮಂದಿ ಖಾಸಾ ದೋಸ್ತಿಗಳಿದ್ದರು. ಹಣ ಪಡೆದು ಮೋಸ ಹೋಗುವ ಯುವಕರು, ಅವರ ಹೆತ್ತವರಿಗೆ ಈ ದೋಸ್ತಿ ಹುಡುಗರಿಂದಲೇ ಬೇರೆ ಬೇರೆ ಟೋನ್ ಗಳಲ್ಲಿ ಫೋನ್ ಮಾಡಿಸುತ್ತಿದ್ದ. ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳ ಹೆಸರಲ್ಲಿ ಕರೆ ಮಾಡಿಸಿ ತುಟಿ ಬಿಚ್ಚದಂತೆ ಮಾಡಿಕೊಂಡಿದ್ದ. ಇದೇ ರೀತಿಯ ಬ್ಲಾಕ್ ಮೇಲ್ ದುಡ್ಡಿನಿಂದ ಕಾರ್ಕಳದ ನಿಟ್ಟೆ, ಮಣಿಪಾಲ, ಶಿವಮೊಗ್ಗ, ಮಂಗಳೂರು, ಬೆಂಗಳೂರು ಹೀಗೆ ಹಲವು ಕಡೆಗಳಲ್ಲಿ ರೆಂಟಲ್ ಬೈಕ್ ಶಾಖೆಗಳನ್ನು ಆರಂಭಿಸಿದ್ದಾನೆ ಎನ್ನಲಾಗುತ್ತಿದ್ದು, ಎಲ್ಲ ಕಡೆಯೂ ಹಲವಾರು ಮಂದಿಗೆ ಟೋಪಿ ಹಾಕಿದ್ದಾನೆ.
ಒಂದ್ಕಡೆ ರೆಂಟಲ್ ಬೈಕ್ ಬಿಸಿನೆಸ್ ಜೊತೆಗೇ ಐಷಾರಾಮಿ ಹೊಟೇಲ್ ಗಳಲ್ಲಿ ಇದ್ದುಕೊಂಡು ಅಲ್ಲಿನ ಸಿಬಂದಿಯನ್ನು ಯಾಮಾರಿಸುತ್ತಿದ್ದ. ಮಣಿಪಾಲದ ಸ್ಟಾರ್ ಹೊಟೇಲ್ ಒಂದರಲ್ಲಿ 2019ರಲ್ಲಿ ಮೂರು ತಿಂಗಳ ಕಾಲ ಉಳಿದುಕೊಂಡಿದ್ದ ಸ್ವರೂಪ್ ಶೆಟ್ಟಿ, ಅಲ್ಲಿನ ಸಿಬಂದಿಯನ್ನು ದೋಸ್ತಿ ಮಾಡಿಕೊಂಡಿದ್ದ. ತನ್ನಲ್ಲಿ ಕೋಟಿ ರೂಪಾಯಿ ಬ್ಯಾಂಕ್ ಬ್ಯಾಲೆನ್ಸ್ ಇರುವುದನ್ನು ತೋರಿಸಿಕೊಂಡು ಅವರನ್ನು ಜಾಲಕ್ಕೆ ಬೀಳಿಸುತ್ತಿದ್ದ. ಬೆಂಗಳೂರು, ಮಂಗಳೂರಿನಲ್ಲಿ ದೊಡ್ಡ ಸ್ಟಾರ್ ಹೊಟೇಲ್ ಮಾಲಕರ ಪರಿಚಯ ಇದೆ, ನಿಮಗೆ ಅಲ್ಲಿ ಕೆಲಸ ಕೊಡಿಸುತ್ತೇನೆಂದು ಹೇಳಿ ಹಣ ಪಡೆಯುತ್ತಿದ್ದ. ಇದೇ ವೇಳೆ, ಅರ್ಶದ್ ಎಂಬ ಯುವಕನನ್ನು ದೋಸ್ತಿ ಮಾಡಿಕೊಂಡು ತನಗೆ ಕೇರಳದ ಸ್ವಾಮೀಜಿ ಒಬ್ಬರಿಂದ 24 ಲಕ್ಷ ಬರಲಿಕ್ಕಿದೆ. ಅದನ್ನು ಖಾತೆಗೆ ಹಾಕಿಸಲು ಟ್ಯಾಕ್ಸ್ ಸೇರಿ ಐದು ಲಕ್ಷ ಖರ್ಚಿದೆ ಎಂದು ಹೇಳಿ ನಂಬಿಸಿದ್ದಾನೆ. ಆನಂತರ ಅರ್ಶದ್ ಬಳಿಯಿಂದ 5 ಲಕ್ಷ ಹಣ ಪಡೆದು, ನಿನಗೆ ಡಬಲ್ ಹಣ ಹಿಂತಿರುಗಿಸುವುದಾಗಿ ನಂಬಿಸಿದ್ದ.
ಕೊಠಡಿಯಲ್ಲಿ ಕೂಡಿಹಾಕಿ ಚಿತ್ರಹಿಂಸೆ !
ಆದರೆ, ಅರ್ಶದ್ ಹಣ ಕೇಳಿದಾಗ, ಏನೇನೋ ಉಪಾಯ ಹೇಳಿಕೊಂಡು ತಪ್ಪಿಸುತ್ತಿದ್ದ. ಬಳಿಕ ಹಣ ಕೊಡುವುದಾಗಿ ಬೆಂಗಳೂರಿಗೆ ಕರೆಸಿಕೊಂಡಿದ್ದ ಸ್ವರೂಪ್, ಕಾಡುಗೋಡಿ ಠಾಣೆ ವ್ಯಾಪ್ತಿಯ ಅಪಾರ್ಟ್ಮೆಂಟ್ ಒಂದರಲ್ಲಿ ಅರ್ಶದ್ ನನ್ನು ಮೂರು ತಿಂಗಳ ಕಾಲ ಕೂಡಿಹಾಕಿದ್ದಾನೆ. ಕೊಠಡಿಯಲ್ಲಿ ಕೂಡಿಹಾಕಿದ್ದಲ್ಲದೆ, ಕೊಡಬಾರದ ಹಿಂಸೆ ಕೊಟ್ಟಿದ್ದಾನೆ. ಅಲ್ಲದೆ, ತಪ್ಪೊಪ್ಪಿಗೆ ನೀಡುವ ರೀತಿ ಹೇಳಿಸಿಕೊಂಡು ಮೊಬೈಲ್ ನಲ್ಲಿ ವಿಡಿಯೋ ರೆಕಾರ್ಡ್ ಮಾಡಿದ್ದಾನೆ. ಆದರೆ, ಕಳೆದ ಆಗಸ್ಟ್ ತಿಂಗಳಲ್ಲಿ ಹೇಗೋ ಅಪಾರ್ಟ್ಮೆಂಟಿನಿಂದ ತಪ್ಪಿಸಿಕೊಂಡಿದ್ದ ಅರ್ಶದ್, ಅಲ್ಲಿಂದ ಕಾಡುಗೋಡು ಠಾಣೆಗೆ ತೆರಳಿ ಪೊಲೀಸರಿಗೆ ದೂರು ನೀಡಿದ್ದ. ಆನಂತ್ರ ಕಾಡುಗೋಡಿ ಪೊಲೀಸರು ಬಂಧಿಸಿದ್ದೂ ಆಗಿತ್ತು. ಜಾಮೀನಲ್ಲಿ ಹೊರಬಂದಿದ್ದೂ ಆಗಿತ್ತು.
ಸಾಫ್ಟ್ ವೇರ್ ಕೆಲಸದ ಆಮಿಷಕ್ಕೆ 28 ಲಕ್ಷ ಖೋತಾ !
ಬೆಂಗಳೂರಿನ ಕಾಡುಗೋಡಿ ಠಾಣೆಯಲ್ಲಿ ಇಂಥದ್ದೇ ಮತ್ತೊಂದು ಪ್ರಕರಣ ದಾಖಲಾಗಿದೆ. ಸ್ಟಾರ್ ಹೊಟೇಲ್ ಒಂದರಲ್ಲಿ ಇದ್ದುಕೊಂಡು ತನ್ನನ್ನು ಎಂಎನ್ ಸಿ ಕಂಪನಿಯೊಂದರ ಸಿಇಓ ಎಂದು ಪರಿಚಯಿಸಿಕೊಂಡಿದ್ದ ಸ್ವರೂಪ್ ಶೆಟ್ಟಿ, ಅಲ್ಲಿನ ಸಿಬಂದಿಯನ್ನೂ ಯಾಮಾರಿಸಿದ್ದಾನೆ. ಸ್ವರೂಪ್ ಸಿಇಓ ಅನ್ನೋದನ್ನು ನಂಬಿದ್ದ ಹೊಟೇಲ್ ಮ್ಯಾನೇಜರ್ ಕಿರಣ್ ಎಂಬಾತ ತನ್ನ ಸೋದರನಿಗೆ ಕೆಲಸ ಕೊಡಿಸುವಂತೆ ಕೇಳಿಕೊಂಡಿದ್ದ. ಅದಕ್ಕಾಗಿ ಆರಂಭದಲ್ಲಿ 2.5 ಲಕ್ಷ ಹಣವನ್ನು ಪಡೆದಿದ್ದ ಸ್ವರೂಪ್, ನಿಧಾನಕ್ಕೆ ಬೇರೆ ಬೇರೆ ಕಾರಣ ಮುಂದಿಟ್ಟು ಒಟ್ಟು 28 ಲಕ್ಷ ರೂಪಾಯಿ ಪೀಕಿಸಿಕೊಂಡಿದ್ದ. ಸೋದರನಿಗೆ ಸಾಫ್ಟ್ ವೇರ್ ಇಂಜಿನಿಯರ್ ಕೆಲಸ ಕೊಡಿಸುತ್ತಾನೆಂದು ನಂಬಿ, ಸ್ವರೂಪ್ ಶೆಟ್ಟಿಯ ಬಣ್ಣದ ಮಾತುಗಳಿಗೆ ಮರುಳಾಗಿ ಕಿರಣ್ ಲಕ್ಷಾಂತರ ಹಣವನ್ನು ಕೊಟ್ಟುಬಿಟ್ಟಿದ್ದ. ಆದರೆ, ಕೊನೆಗೆ ಕೆಲಸವೂ ಇಲ್ಲ, ಹಣವೂ ಇಲ್ಲ ಎಂಬ ವಿಷಯ ತಿಳಿಯುತ್ತಿದ್ದಂತೆ, ಮೋಸದ ಸ್ವರೂಪದ ಅರಿವಾಗುತ್ತಲೇ ನಾಲ್ಕು ದಿನಗಳ ಹಿಂದೆ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ.
ಮಂಗಳೂರಿನಲ್ಲಿ ಏಳು ಪ್ರಕರಣ, ಉಡುಪಿಯಲ್ಲಿ ಐದಕ್ಕೂ ಹೆಚ್ಚು ಪ್ರಕರಣ, ಬೆಂಗಳೂರು, ಮುಂಬೈ, ಪುಣೆಯಲ್ಲೂ ವಿವಿಧ ಪ್ರಕರಣಗಳನ್ನು ಎದುರಿಸುತ್ತಿರುವ ಸ್ವರೂಪ್ ಅಲಿಯಾಸ್ ಹರಾಮಿ ತನ್ನ ಅತಿ ಸಣ್ಣ ಪ್ರಾಯದಲ್ಲೇ ಕರಾವಳಿಯ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಆಗಿ ಬದಲಾಗಿದ್ದೇ ಅಚ್ಚರಿ. ಪೊಲೀಸರು ಮತ್ತು ಪಾತಕ ಲೋಕದ ನಂಟನ್ನೂ ಹೊಂದಿರುವ ಈತ ಕರಾವಳಿಯಲ್ಲಿ ಹುಟ್ಟಿ ಬೆಳೆದ ಅದೆಷ್ಟೋ ಪಾತಕಿಗಳಿಗಿಂತಲೂ ತೀರಾ ಭಿನ್ನ ರೀತಿಯ ಕ್ರಿಮಿನಲ್. ಯಾಕಂದ್ರೆ, ಉಡುಪಿ, ಮಣಿಪಾಲದಲ್ಲಿ ಈತನ ಕಪಟತನಕ್ಕೆ ಅದೆಷ್ಟೋ ಮಂದಿ ಹಣ ಕಳಕೊಂಡವರಿದ್ದಾರೆ. 2019ರಲ್ಲಿ ಮಣಿಪಾಲ ಒಂದರಲ್ಲೇ ಮೂರು ತಿಂಗಳ ಅವಧಿಯಲ್ಲಿ ಸುಮಾರು 80 ಲಕ್ಷಕ್ಕೂ ಹೆಚ್ಚು ಮೋಸ ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು. ನಂಬಿಕಸ್ಥನಾಗಿ ನಟಿಸಿ ಬೆದರಿಸಿ, ದರೋಡೆ ಮಾಡಿರುವ ಬಗ್ಗೆಯೂ ದೂರುಗಳಿವೆ.
ಆತನ ಮೋಸದ ಜಾಲ ಉಡುಪಿ, ಮಂಗಳೂರು, ಶಿವಮೊಗ್ಗ, ಬೆಂಗಳೂರು ಹೀಗೆ ಎಲ್ಲೆಡೆಯೂ ಇದ್ದು, ಹೆಚ್ಚಿನ ಮಂದಿ ಆತನ ಭಯದಿಂದ ದೂರು ಕೊಡುವುದಕ್ಕೇ ಮುಂದಾಗಿಲ್ಲ. ಈಗಷ್ಟೇ ಕೆಲವು ಪ್ರಕರಣಗಳು ನಿಧಾನಕ್ಕೆ ಹೊರಬರುತ್ತಿವೆ. ಬರೀಯ ಮೂರ್ನಾಲ್ಕು ವರ್ಷದಲ್ಲಿ ಸ್ವರೂಪ ತನ್ನ ಸ್ವರೂಪವನ್ನೇ ಹೊರಜಗತ್ತಿಗೆ ಹರವಿಟ್ಟಿದ್ದಾನೆ. ಸದ್ಯಕ್ಕೆ ಪುಣೆ ಪೊಲೀಸರ ವಶದಲ್ಲಿರುವ ಸ್ವರೂಪ್ ನನ್ನು ಬೆಂಗಳೂರಿನ ಕಾಡುಗೋಡಿ ಪೊಲೀಸರು ಬಾಡಿ ವಾರೆಂಟ್ ಪಡೆಯಲು ಮುಂದಾಗಿದ್ದಾರೆ.
The detailed criminal history of Notorious Fraudster Swaroop Shetty from Manipal, Udupi by Headline Karnataka. Swaroop was also the founder of Wheels to Go bike rental.
09-06-25 04:41 pm
HK News Desk
BK Hariprasad, Suhas Shetty, NIA: ರೌಡಿಗಳಿಗೆಲ್...
09-06-25 03:02 pm
Union Minister Prahlad Joshi, Mangalore SP Ar...
09-06-25 02:00 pm
Suhas Shetty Murder, NIA, Home Minister: ಸುಹಾ...
09-06-25 12:35 pm
ಕಾಲ್ತುಳಿತ ಸಂತ್ರಸ್ತರಿಗೆ ಒಂದು ತಿಂಗಳ ವೇತನ ಬಿಟ್ಟು...
08-06-25 06:03 pm
09-06-25 05:16 pm
HK News Desk
# Arrest kohli ಹ್ಯಾಶ್ ಟ್ಯಾಗ್ ಟ್ವಿಟರ್ ನಲ್ಲಿ ಟ್...
07-06-25 09:54 pm
Starlink, Elon Musk: ಇಂಟರ್ನೆಟ್ ಸಿಗದ ಹಳ್ಳಿಗಳಿಗ...
07-06-25 07:10 pm
ಜಗತ್ತಿನ ಅತಿ ಎತ್ತರದ ರೈಲ್ವೇ ಸೇತುವೆ ಉದ್ಘಾಟಿಸಿದ ಮ...
06-06-25 11:08 pm
ತಂದೆ ಮುಸ್ಲಿಂ - ತಾಯಿ ಹಿಂದು ; ಮಗನಿಗೆ ಇಸ್ಲಾಂ ಅನು...
05-06-25 07:54 pm
09-06-25 11:03 pm
Mangalore Correspondent
Mangalore BY Vijayendra, BJP: ಕಾಂಗ್ರೆಸ್ ಆಡಳಿತ...
09-06-25 09:56 pm
Suhas Shetty Murder, NIA, Mangalore: ಸುಹಾಸ್ ಶ...
08-06-25 10:51 pm
Suhas Sheety Murder, NIA, Mangalore: ಸುಹಾಸ್ ಶ...
08-06-25 05:24 pm
ಮುಸ್ಲಿಂ ವಾಟ್ಸಪ್ ಗ್ರೂಪಿನಲ್ಲಿ ಸ್ಪೀಕರ್ ಖಾದರ್, ಸಿ...
07-06-25 11:02 pm
09-06-25 09:20 pm
HK News Desk
ತನ್ನನ್ನು ಕಾರ್ಡಿಯೋಲಜಿಸ್ಟ್ ಅಂತ ಹೇಳಿಕೊಂಡು 50ಕ್ಕೂ...
08-06-25 10:29 pm
ಸ್ಟಾಕ್ ಮಾರ್ಕೆಟ್ ಹುಚ್ಚಾಟ ; ಬ್ಯಾಂಕಿನ ಹಿರಿಯ ಗ್ರಾ...
08-06-25 03:59 pm
ಆನ್ಲೈನ್ ಟ್ರೇಡಿಂಗ್ನಲ್ಲಿ ಹಣ ಹೂಡಿಕೆ ; ಇನ್ ಸ್ಟಾ...
08-06-25 02:58 pm
Mangalore Crime, Yeyyadi Stabbing, Bar, Polic...
07-06-25 10:39 pm