ಅತ್ತಿಗೆಯನ್ನು ಇಷ್ಟಪಟ್ಟು ಅಣ್ಣನ ಹತ್ಯೆ ! ಸಾಂದರ್ಭಿಕ ಸಾಕ್ಷಿಗಳಿಂದಲೇ ಕೊಲೆ ಸಾಬೀತು ; ಹಂತಕರಿಗೆ ಜೀವಾವಧಿ ! 

17-02-21 10:12 pm       Mangaluru Correspondent   ಕ್ರೈಂ

ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳಿಗೆ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಪ್ರಕಟಿಸಿದೆ.

ಮಂಗಳೂರು, ಫೆ.17: ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳಿಗೆ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಪ್ರಕಟಿಸಿದೆ.

ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ದೇವರಗುಡ್ಡದ ನಿವಾಸಿ ನಾಗರಾಜ ಗೋವಿಂದಪ್ಪ ಲಮಾಣಿ (28) ಮತ್ತು ರಾಣೆಬೆನ್ನೂರು ಹನುಮಾಪುರದ ವೀರೇಶ್ ಶಿವಪ್ಪ ಲಮಾಣಿ(32) ಶಿಕ್ಷೆಗೊಳಗಾದವರು.

ಕೂಲಿ ಕಾರ್ಮಿಕನಾಗಿದ್ದ ಆರೋಪಿ ನಾಗರಾಜ ಗೋವಿಂದಪ್ಪ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಹೊಸಂಗಡಿಯ ಬಾಡಿಗೆ ಕೊಠಡಿಯಲ್ಲಿ ವಾಸವಿದ್ದ. ಈ ನಡುವೆ, ತನ್ನ ಪತ್ನಿಯ ಅಕ್ಕನ ಪತಿ ರೇಖಪ್ಪ ಲಮಾಣಿಯನ್ನು ಕೂಲಿ ಕೆಲಸಕ್ಕಾಗಿ ಹೊಸಂಗಡಿಗೆ ಕರೆದುಕೊಂಡು ಬಂದಿದ್ದ. ಈ ವೇಳೆ, ರೇಖಪ್ಪ ಲಮಾಣಿಯ ಪತ್ನಿ ಸಾವಿತ್ರಿ ಜೊತೆ ಸಂಬಂಧ ಬೆಳೆಸಲು ನಾಗರಾಜ್ ಪ್ಲಾನ್ ಹಾಕಿದ್ದ. 

ನಾಗರಾಜನ ಪ್ಲಾನ್ ತಿಳಿದು ರೇಖಪ್ಪ ಲಮಾಣಿ, 2016ರ ಸೆ.4ರಂದು ಪತ್ನಿ ಜೊತೆ ಮರಳಿ ಹಾವೇರಿಗೆ ತೆರಳಲು ಸಿದ್ಧರಾಗಿದ್ದರು. ಆಗ ನಾಗರಾಜ ಉಪಾಯ ಹೂಡಿದ್ದು ತನ್ನ ಸ್ನೇಹಿತನಾದ ವೀರೇಶ್ ಶಿವಪ್ಪ ಜೊತೆ ಸೇರಿಕೊಂಡು ರೇಖಪ್ಪ ಲಮಾಣಿಯನ್ನು ಹೊಸಂಗಡಿಯಿಂದ ಮಂಗಳೂರಿಗೆ ಕರೆದುಕೊಂಡು ಬಂದಿದ್ದ. ಮಂಗಳೂರಿನಲ್ಲಿ ಬಾರ್‌ ಒಂದರಲ್ಲಿ ಮದ್ಯ ಕುಡಿಸಿದ್ದಾರೆ. ಬಳಿಕ ಪಣಂಬೂರಿಗೆ ರಿಕ್ಷಾದಲ್ಲಿ ಕರೆದೊಯ್ದು, ಅಲ್ಲಿ ರಸ್ತೆ ಬದಿಯ ಸಾರ್ವಜನಿಕ ಸ್ಥಳದಲ್ಲಿ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ರೇಖಪ್ಪನ ಶವಕ್ಕೆ ದೊಡ್ಡ ಕಲ್ಲನ್ನು ಎತ್ತಿ ಹಾಕಿ ಗುರುತು ಸಿಗದಂತೆ ಮಾಡಿದ್ದರು. ಕೃತ್ಯ ಮುಗಿಸಿದ ಅನಂತರ ರಾತ್ರಿ ಹೊಸಂಗಡಿಗೆ ಮರಳಲು ಬೈಕಂಪಾಡಿಯಲ್ಲಿ ಬೈಕ್‌ ಸವಾರನನ್ನು ನಿಲ್ಲಿಸಿ ಡ್ರಾಪ್ ಕೇಳಿ ಕೂಳೂರು ವರೆಗೆ ಬಂದು ಅನಂತರ ಹೊಸಂಗಡಿಗೆ ತೆರಳಿದ್ದರು.

ಘಟನೆ ಎರಡು ದಿನಗಳ ನಂತರ ಸಾರ್ವಜನಿಕರ ಗಮನಕ್ಕೆ ಬಂದಿತ್ತು. ಪೊಲೀಸರು ಮೊದಲು ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸಿದ್ದರು. ಶವ ಮಹಜರು ಸಂದರ್ಭ ಸಾಕ್ಷಿದಾರರು ನೀಡಿದ ಹೇಳಿಕೆ ಮತ್ತು ಮರಣೋತ್ತರ ವರದಿಯಂತೆ ಕೊಲೆ ಪ್ರಕರಣ ದಾಖಲಿಸಿದ್ದರು. ಪಣಂಬೂರು ಠಾಣೆಯ ಅಂದಿನ ಪೊಲೀಸ್ ನಿರೀಕ್ಷಕ ಲೋಕೇಶ್ ಎ.ಸಿ ಪ್ರಕರಣದ ತನಿಖೆ ನಡೆಸಿ, 22 ಸಾಕ್ಷಿಗಳನ್ನು ಕಲೆಹಾಕಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. 

ಕೊಲೆಗೆ ಯಾವುದೇ ಪ್ರತ್ಯಕ್ಷ ಸಾಕ್ಷಿ ಇರದೇ ಇದ್ದರೂ, ಸಾಂದರ್ಭಿಕ ಸಾಕ್ಷಿಗಳೇ ಕೊಲೆಯನ್ನು ಸಾಬೀತು ಮಾಡಿದೆ. ಮೋಟಾರ್ ಸೈಕಲ್‌ನಲ್ಲಿ ಡ್ರಾಪ್ ನೀಡಿದ ವ್ಯಕ್ತಿ, ಕೂಳೂರಿನಿಂದ ಪಂಪ್‌ವೆಲ್‌ಗೆ ಆಟೋ ರಿಕ್ಷಾದಲ್ಲಿ ಕರೆದುಕೊಂಡು ಹೋದ ಚಾಲಕ, ಬಾರ್‌ ಮೇಲ್ವಿಚಾರಕರು, ಮೃತರ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಹೇಳಿದ ಸಾಕ್ಷ್ಯ, ಆರೋಪಿಗಳು ಕೊಲೆಯ ಸಮಯದಲ್ಲಿ ಧರಿಸಿದ್ದ ಬಟ್ಟೆಗಳ ಮೇಲೆ ಇದ್ದ ರಕ್ತದ ಕಲೆಗಳ ಬಗ್ಗೆ ಪ್ರಾದೇಶಿಕ ವಿಧಿ ವಿಜ್ಞಾನ ಪರೀಕ್ಷೆಯಲ್ಲಿ ಸಿಕ್ಕ ಸಾಕ್ಷ, ಘಟನಾ ಸ್ಥಳದ ಮಣ್ಣು ಆರೋಪಿಗಳು ಧರಿಸಿದ ಬಟ್ಟೆಯಲ್ಲಿದ್ದ ಬಗ್ಗೆ ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯ ನೀಡಿದ ಸಾಕ್ಷ್ಯವನ್ನು ಪರಿಗಣಿಸಿ ಆರೋಪಿಗಳು ಕೊಲೆ ಮಾಡಿರುವುದನ್ನು ನ್ಯಾಯಾಧೀಶರ ಪರಿಗಣಿಸಿದ್ದು ಆರೋಪಿಗಳ ವಿರುದ್ಧ ತೀರ್ಪು ನೀಡಿದ್ದಾರೆ.

ನ್ಯಾಯಾಧೀಶರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ಪ್ರತಿಯೊಬ್ಬ ಆರೋಪಿಗೆ ತಲಾ 10,000 ರೂ. ದಂಡ ವಿಧಿಸಿದ್ದಾರೆ. ದಂಡದ ಹಣದಲ್ಲಿ 10,000 ರೂ.ಗಳನ್ನು ರೇಖಪ್ಪ ಲಮಾಣಿ ಅವರ ಪತ್ನಿಗೆ ನೀಡಲು ಆದೇಶಿಸಿದ್ದಾರೆ. ಅಲ್ಲದೆ, ರೇಖಪ್ಪ ಲಮಾಣಿ ಅವರ ಪತ್ನಿಗೆ ಸೂಕ್ತ ಪರಿಹಾರ ನೀಡಲು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಆದೇಶ ನೀಡಿದ್ದಾರೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ನಾರಾಯಣ ಸೇರಿಗಾರ್ ವಾದ ಮಂಡಿಸಿದ್ದಾರೆ.

Man gets life imprisonment by Mangalore Court for killing his own brother to seek sister in law for marriage.