30ಕ್ಕೂ ಹೆಚ್ಚು ಕಡೆ ಕಳ್ಳತನ ; ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದ ಖತರ್ನಾಕ್ !

20-02-21 04:26 pm       Mangalore Correspondent   ಕ್ರೈಂ

30ಕ್ಕೂ ಹೆಚ್ಚು ಕಡೆ ಕಳ್ಳತನ ನಡೆಸಿದ್ದ ಕುಖ್ಯಾತ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.

ಉಪ್ಪಿನಂಗಡಿ, ಫೆ. 20 : ದಕ್ಷಿಣ ಕನ್ನಡ, ಕೊಡಗು, ಉಡುಪಿ ಸೇರಿದಂತೆ 30ಕ್ಕೂ ಹೆಚ್ಚು ಕಡೆ ಕಳ್ಳತನ ನಡೆಸಿದ್ದ ಕುಖ್ಯಾತ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.

ಉಪ್ಪಿನಂಗಡಿ ಪೇಟೆಯಲ್ಲಿರುವ ಸತೀಶ್ ಯಾನೆ ಲಕ್ಷ್ಮೀ ನಾರಾಯಣ ನಾಯಕ್ ಎಂಬವರ ಅಂಗಡಿಯಲ್ಲಿ 2020, ನವೆಂಬರ್ 10ರ ರಾತ್ರಿ ಕಳ್ಳತನ ನಡೆದಿತ್ತು. 45 ಸಾವಿರ ನಗದು ಕದ್ದ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಪೊಲೀಸ್ ಉಪನಿರೀಕ್ಷಕರಾದ ಈರಯ್ಯ ಡಿ.ಎನ್ ನೇತೃತ್ವದಲ್ಲಿ ಅಪರಾಧಿಯ ಪತ್ತೆಗೆ ತಂಡವನ್ನು ರಚಿಸಿ, ಬಲೆ ಬೀಸಲಾಗಿತ್ತು. ಇದೀಗ ಪ್ರಕರಣ ಬೇಧಿಸಿರುವ ಉಪ್ಪಿನಂಗಡಿ ಪೊಲೀಸರು, ಬೆಳ್ತಂಗಡಿ ತಾಲೂಕಿನ ಪಡಂಗಡಿ ನಿವಾಸಿ ಹಮೀದ್ ಯಾನೆ ಕುಂಞ ಮೋನು (46) ಎಂಬಾತನನ್ನು ಬಂಧಿಸಿದ್ದಾರೆ. 

ಹಮೀದ್ ಮೇಲೆ, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ನಗರ, ಹಾಸನ, ಚಿಕ್ಕಮಗಳೂರು, ಉಡುಪಿ, ಕೊಡಗು ಜಿಲ್ಲೆಗಳಲ್ಲಿನ 15 ಪೊಲೀಸ್ ಠಾಣೆಗಳಲ್ಲಿ ಸುಮಾರು 30 ಕ್ಕಿಂತಲೂ ಹೆಚ್ಚಿನ ಕಳ್ಳತನ ಪ್ರಕರಣಗಳು ದಾಖಲಾಗಿವೆ.

ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನೋರ್ವ ಆರೋಪಿ ಬಂಟ್ವಾಳ ಸಜಿಪ ನಿವಾಸಿಯಾದ ಫಾರೂಕ್ ಯಾನೆ ಉಮ್ಮರ್ ಫಾರೂಕ್ ಎಂಬಾತನನ್ನು ಈಗಾಗಲೇ ವಿಟ್ಲ ಪೊಲೀಸರು ಬಂಧಿಸಿದ್ದು, ಈತ ನ್ಯಾಯಾಂಗ ಬಂಧನದಲ್ಲಿದ್ದಾನೆ. 

ಪೊಲೀಸ್ ಅಧೀಕ್ಷಕರಾದ ಲಕ್ಷ್ಮಿ ಪ್ರಸಾದ್ ಹಾಗೂ ಪುತ್ತೂರು ಉಪ ವಿಭಾಗದ ಉಪಾಧೀಕ್ಷಕರಾದ ಗಾನ‌ ಪಿ‌ ಕುಮಾರ್ ಅವರ ನಿರ್ದೇಶನದಲ್ಲಿ ಮತ್ತು ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕರಾದ ಉಮೇಶ್ ಉಪ್ಪಳಿಕೆ ಅವರ ಮಾರ್ಗದರ್ಶನದಲ್ಲಿ ಉಪ್ಪಿನಂಗಡಿ ಠಾಣಾ ಪಿಎಸ್‌ಐ ಈರಯ್ಯ ಡಿ ಎನ್‌ ನೇತೃತ್ವದಲ್ಲಿ ಸಿಬ್ಬಂದಿಗಳಾದ ಎಎಸ್‌ಐ ಚೋಮ ಎಂ ಪಿ , ಹರಿಶ್ಚಂದ್ರ, ಇರ್ಷಾದ್‌ ಪಿ, ಜಗದೀಶ್, ಪ್ರತಾಪ್, ಜಿಲ್ಲಾ ಗಣಕ ಯಂತ್ರದ ಸಿಬ್ಬಂದಿಗಳಾದ ದಿವಾಕರ ಮತ್ತು ಸಂಪತ್‌, ಚಾಲಕ ಕನಕರಾಜ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

Notorious thief who has more than 30 cases has been arrested by uppinangady police in Mangalore.