ಗ್ರಾಹಕನಂತೆ ನಟಿಸಿ ಉಂಗುರ ಹಿಡ್ಕಂಡು ಓಟಕ್ಕಿತ್ತ ಖದೀಮ ! ಬೆನ್ನಟ್ಟಿ ಹಿಡಿದ ಜ್ಯುವೆಲ್ಲರಿ ಶಾಪ್ ಮಾಲಕ !

05-03-21 01:19 pm       Mangalore Correspondent   ಕ್ರೈಂ

ಜ್ಯುವೆಲ್ಲರಿ ಶಾಪ್ ನಿಂದ ಹಾಡಹಗಲೇ ಆಭರಣ ಕಳವುಗೈದು ಓಡಿದ್ದು ಜ್ಯುವೆಲ್ಲರಿ ಸಿಬಂದಿ ಮತ್ತು ಮಾಲಕರೇ ಆತನನ್ನು ಬೆನ್ನಟ್ಟಿ ಹಿಡಿದ ಘಟನೆ ನಡೆದಿದೆ.

ಮಂಗಳೂರು, ಮಾ.5 : ಗ್ರಾಹಕರ ಸೋಗಿನಲ್ಲಿ ಬಂದ ಖದೀಮನೊಬ್ಬ ನಗರದ ಜ್ಯುವೆಲ್ಲರಿ ಶಾಪ್ ನಿಂದ ಹಾಡಹಗಲೇ ಆಭರಣ ಕಳವುಗೈದು ಓಡಿದ್ದು ಜ್ಯುವೆಲ್ಲರಿ ಸಿಬಂದಿ ಮತ್ತು ಮಾಲಕರೇ ಆತನನ್ನು ಬೆನ್ನಟ್ಟಿ ಹಿಡಿದ ಘಟನೆ ನಡೆದಿದೆ.

ಅರುಣ್ ಜಿ. ಶೇಟ್ ಎಂಬವರಿಗೆ ಸೇರಿದ ನಗರದ ರಥಬೀದಿಯಲ್ಲಿರುವ ಅರುಣ್ ಜಿ. ಶೇಟ್ ಜ್ಯುವೆಲ್ಲರಿ ಆ್ಯಂಡ್ ಡೈಮಂಡ್ ವರ್ಕ್ಸ್ ಶಾಪ್ ಗೆ ಗುರುವಾರ ಮಧ್ಯಾಹ 2 ಗಂಟೆ ಸುಮಾರಿಗೆ ಗ್ರಾಹಕರ ಸೋಗಿನಲ್ಲಿ ಬಂದಿದ್ದ ಖದೀಮ, ಆಭರಣವನ್ನು ಖರೀದಿಸುವಂತೆ ನಟಿಸಿದ್ದಾನೆ. ಮಾಲಕ ಅರುಣ್ ಜಿ.ಶೇಟ್ ಸ್ವತಃ ಆತನಿಗೆ ಆಭರಣ ತೋರಿಸುತ್ತಿದ್ದರು. ಆತ ಉಂಗುರ ಒಂದನ್ನು ಕೈಗೆ ಹಾಕಿ ನೋಡುತ್ತಲೇ, ಏಕಾಏಕಿ ಆಭರಣದೊಂದಿಗೆ ಹೊರಗೆ ಓಡಿದ್ದಾನೆ. 

ಆತ ಓಡುತ್ತಿರುವುದನ್ನು ಗಮನಿಸಿದ  ಜ್ಯುವೆಲ್ಲರಿ ಮಾಲಕ ಅರುಣ್ ಜಿ ಶೇಟ್ ಅವನನ್ನು ಬೆನ್ನಟಿದ್ದಾರೆ‌. ಸ್ವಲ್ಪ ದೂರ ಹೋಗುತ್ತಲೇ ಆತ ಅವರ ಕೈಗೆ ಸಿಕ್ಕಿಬಿದ್ದಿದ್ದಾನೆ. ಅಷ್ಟರಲ್ಲಾಗಲೇ ಸ್ಥಳದಲ್ಲಿದ್ದವರಿಗೆ ವಿಷಯ ತಿಳಿದಿದ್ದು, ಈ ಸಂದರ್ಭ ಅಲ್ಲಿ ಸಾಕಷ್ಟು ಜನರು ಜಮಾಯಿಸಿದ್ದಾರೆ. ಈ ಎಲ್ಲಾ ದೃಶ್ಯ ಜುವೆಲ್ಲರಿಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಬಳಿಕ ಈ ಬಗ್ಗೆ ಪೊಲೀಸ್ ದೂರು ನೀಡಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಆರೋಪಿಯನ್ನು ಬಂಧಿಸಿದ್ದಾರೆ‌. ಈ ಬಗ್ಗೆ  ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.

Video: 

Man steals a gold ring from local jewelry stores by acting as a customer in Mangalore was caught red-handed by public.