ಉಲ್ಟಾ ಹೊಡೆದ ಕೊರಗಜ್ಜನ ಕಟ್ಟೆ ಅಪವಿತ್ರ ಸುದ್ದಿ ; ಬಂಧಿಸದೆ ಬಿಟ್ಟ ಪೊಲೀಸರು ! ರಕ್ತಕಾರಿದ ಕತೆಯೇ ಗೋತಾ !!  

07-04-21 06:48 pm       Mangaluru Crime Correspondent   ಕ್ರೈಂ

ವಶಕ್ಕೆ ಪಡೆದಿದ್ದ ಇಬ್ಬರು ವ್ಯಕ್ತಿಗಳನ್ನೂ ಎರಡೇ ದಿನದಲ್ಲಿ ಬಿಟ್ಟು ಕಳುಹಿಸಲಾಗಿತ್ತಂತೆ. ವಿಚಾರಣೆಯಲ್ಲಿ ತಾವು ತಪ್ಪು ಮಾಡಿಲ್ಲ. ಕೊರಗಜ್ಜನ ಕಟ್ಟೆಯ ಅಪವಿತ್ರ ಪ್ರಕರಣದಲ್ಲಿ ನಮ್ಮ ಪಾತ್ರ ಇಲ್ಲವೆಂದು ಹೇಳಿದ್ದಾರೆ. ಹೀಗಾಗಿ ಪೊಲೀಸರು ವಿಚಾರಣೆ ಮಾಡಿ ಎರಡು ದಿನಗಳ ಬಳಿಕ ಬಿಟ್ಟು ಕಳುಹಿಸಿದ್ದಾರೆ.

ಮಂಗಳೂರು, ಎ.7: ಕೊರಗಜ್ಜನ ಕೋಪಕ್ಕೆ ಗುರಿಯಾಗಿ ರಕ್ತಕಾರಿ ಸತ್ತ ಎಂಬ ಸುದ್ದಿ ಕರಾವಳಿಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಸತ್ತಿದ್ದ ವ್ಯಕ್ತಿಗೆ ಏಡ್ಸ್ ಇತ್ತು. ಒಂದು ವರ್ಷದ ಹಿಂದೆಯೇ ಎಚ್ಐವಿ ಪಾಸಿಟಿವ್ ಆಗಿತ್ತು ಎನ್ನುವ ಕುಟುಂಬಸ್ಥರ ಹೇಳಿಕೆಗಳೂ ಬಂದಿದ್ದವು. ಪೊಲೀಸ್ ಕಮಿಷನರ್ ಸುದ್ದಿಯನ್ನು ಮಾಧ್ಯಮಕ್ಕೆ ಕೊಡುವಾಗ, ಸರಿಯಾಗಿ ವಿಚಾರಿಸದೆ ಅವಸರದಲ್ಲಿ ಹೇಳಿಕೆ ಕೊಟ್ಟಿದ್ದರು ಅನ್ನೋದ್ರ ಬಗ್ಗೆ ಟೀಕೆಯೂ ಕೇಳಿಬಂದಿತ್ತು. ಆದರೆ, ಒಂದು ವಾರ ಕಳೆಯುವಷ್ಟರಲ್ಲಿ ಆ ಸುದ್ದಿಯೇ ಉಲ್ಟಾ ಹೊಡೆದಿದೆ.

ಕಳೆದ ಮಾ.31ರಂದು ಮಂಗಳೂರಿನ ಎಮ್ಮೆಕೆರೆಯ ಕೊರಗಜ್ಜನ ಸ್ಥಾನದಲ್ಲಿ ಕೋಲ ಇತ್ತು. ಅಲ್ಲಿಗೆ ಇಬ್ಬರು ಬಂದಿದ್ದು, ಕಾಣಿಕೆ ಹಾಕುತ್ತೇವೆ, ಪ್ರಸಾದ ಕೊಡುವಂತೆ ಹೇಳಿದ್ದರು. ಈ ವೇಳೆ, ಏನೆಲ್ಲಾ ತಪ್ಪುಗಳನ್ನು ಹೇಳಿಕೊಂಡಿದ್ದರು ಅನ್ನೋದು ಸರಿಯಾಗಿ ಗೊತ್ತಿಲ್ಲ. ಮರುದಿನ ದೈವಸ್ಥಾನದ ಕಮಿಟಿಯವರು ಹೇಳಿದ ಪ್ರಕಾರ, ಕಾಂಡೋಮ್ ಹಾಕಿದ ಪ್ರಕರಣದಲ್ಲಿ ತಪ್ಪು ಕಾಣಿಕೆ ಹಾಕಲು ಬಂದಿದ್ದರು ಎನ್ನಲಾಗಿತ್ತು. ಅದೇ ರಾತ್ರಿ ಪಾಂಡೇಶ್ವರ ಪೊಲೀಸರು ಆ ಇಬ್ಬರನ್ನೂ ವಶಕ್ಕೆ ಪಡೆದಿದ್ದರು.

ಇಬ್ಬರು ತಪ್ಪುಕಾಣಿಕೆ ಹಾಕಿದ ವಿಚಾರ ಸುದ್ದಿಯಾಗುತ್ತಲೇ ಕರಾವಳಿಯಲ್ಲಿ ಸಂಚಲನ ಎಬ್ಬಿಸಿದೆ. ಇಬ್ಬರು ಬಂಧಿತರು ಏನು ಹೇಳಿದ್ದಾರೆ, ಅವರು ನಿಜಕ್ಕೂ ತಪ್ಪು ಒಪ್ಪಿಕೊಂಡಿದ್ದಾರೆಯೇ ಎಂಬ ಬಗ್ಗೆ ಮಾಧ್ಯಮಗಳು ಪೊಲೀಸ್ ಕಮಿಷನರ್ ಬಳಿ ಹೇಳಿಕೆ ಪಡೆಯಲು ಮುಂದಾಗಿದ್ದವು. ಈ ವೇಳೆ, ಮಾಧ್ಯಮಕ್ಕೆ ಹೇಳಿಕೆ ನೀಡಿದ್ದ ಕಮಿಷನರ್ ಶಶಿಕುಮಾರ್, ಇಬ್ಬರು ವ್ಯಕ್ತಿಗಳು ತಪ್ಪು ಒಪ್ಪಿಕೊಂಡಿದ್ದು, ವಿವಿಧೆಡೆ ನಡೆದಿರುವ ದೈವಸ್ಥಾನಗಳ ಅಪವಿತ್ರ ಪ್ರಕರಣದಲ್ಲಿ ಇಬ್ಬರ ಕೈವಾಡ ಸಾಬೀತಾಗಿದೆ. ಒಂದು ತಿಂಗಳ ಹಿಂದೆ ನವಾಜ್ ಎಂಬಾತ ರಕ್ತಕಾರಿಕೊಂಡು ಸತ್ತಿದ್ದು ಆನಂತರ ಭಯಗೊಂಡು ಇಬ್ಬರು ಕೊರಗಜ್ಜನ ದೈವಸ್ಥಾನಕ್ಕೆ ಬಂದಿದ್ದಾರೆ. ನವಾಜ್ ಮಂತ್ರವಾದಿಯಾಗಿದ್ದ. ಇಬ್ಬರನ್ನು ವಶಕ್ಕೆ ಪಡೆದು ಇನ್ನಷ್ಟು ವಿಚಾರಣೆ ನಡೆಸುತ್ತಿದ್ದೇವೆ ಎಂದು ಹೇಳಿದ್ದರು.

ಪೊಲೀಸರ ಮೂಲಗಳ ಪ್ರಕಾರ, ವಶಕ್ಕೆ ಪಡೆದಿದ್ದ ಇಬ್ಬರು ವ್ಯಕ್ತಿಗಳನ್ನೂ ಎರಡೇ ದಿನದಲ್ಲಿ ಬಿಟ್ಟು ಕಳುಹಿಸಲಾಗಿತ್ತಂತೆ. ವಿಚಾರಣೆಯಲ್ಲಿ ತಾವು ತಪ್ಪು ಮಾಡಿಲ್ಲ. ಕೊರಗಜ್ಜನ ಕಟ್ಟೆಯ ಅಪವಿತ್ರ ಪ್ರಕರಣದಲ್ಲಿ ನಮ್ಮ ಪಾತ್ರ ಇಲ್ಲವೆಂದು ಹೇಳಿದ್ದಾರೆ. ಹೀಗಾಗಿ ಪೊಲೀಸರು ವಿಚಾರಣೆ ಮಾಡಿ ಎರಡು ದಿನಗಳ ಬಳಿಕ ಬಿಟ್ಟು ಕಳುಹಿಸಿದ್ದಾರೆ. ಯಾವುದೇ ಎಫ್ಐಆರ್ ಕೂಡ ಮಾಡಿಲ್ಲ. ಮೂಲಗಳ ಪ್ರಕಾರ, ವಶಕ್ಕೆ ಪಡೆದ ಇಬ್ಬರಲ್ಲಿ ಅಬ್ದುಲ್ ರಹೀಂ ಮಾಟ, ಮಂತ್ರ ಮಾಡಿಕೊಂಡಿದ್ದ ವ್ಯಕ್ತಿಯಂತೆ. ಆತನ ಜೊತೆಗಿದ್ದ ಇನ್ನೊಬ್ಬ ಯುವಕನಿಗೆ ಎಚ್ಐವಿ ಪಾಸಿಟಿವ್ ಆಗಿದೆ ಎನ್ನಲಾಗಿದ್ದು, ಆತನಿಗೆ ಭಯ ಶುರುವಾಗಿತ್ತು. ಬಾಯಲ್ಲಿ ರಕ್ತ ಬರುತ್ತಿದ್ದುದರಿಂದ ಭಯಗೊಂಡಿದ್ದ. ಇದರಿಂದ ಮಂತ್ರವಾದಿ ಅಬ್ದುಲ್ ರಹೀಂ ಕೊರಗಜ್ಜನ ಸ್ಥಾನಕ್ಕೆ ಬಂದು ಕೇಳಿಕೊಂಡರೆ ರೋಗ ವಾಸಿಯಾದೀತು ಎಂದು ನಂಬಿಸಿ ಯುವಕನನ್ನು ಕೋಲಕ್ಕೆ ಕರೆದುಕೊಂಡು ಬಂದಿದ್ದನಂತೆ.

ಆದರೆ, ಅಲ್ಲಿ ತಲುಪುತ್ತಲೇ ಭಾರೀ ಸಂಖ್ಯೆಯಲ್ಲಿ ಹಿಂದು ಸಂಘಟನೆಗಳ ಕಾರ್ಯಕರ್ತರು ಸೇರಿದ್ದರು. ವಿವಿಧೆಡೆ ನಡೆದಿರುವ ಕಾಂಡೋಮ್ ಹಾಕಿದ ಪ್ರಕರಣದಲ್ಲಿ ಇಬ್ಬರು ತಪ್ಪೊಪ್ಪಿಗೆ ಹಾಕಲು ಬರುತ್ತಿದ್ದಾರೆನ್ನುವ ಗುಸು ಗುಸು ಹರಿದಾಡಿದ್ದರಿಂದ ಸಹಜವಾಗೇ ಜನ ಸೇರಿದ್ದರು. ಇದರ ಬಗ್ಗೆ ಗೊತ್ತಿರದ ಇಬ್ಬರು ವ್ಯಕ್ತಿಗಳು ಅಲ್ಲಿಗೆ ಬಂದು ಕೊರಗಜ್ಜನ ಮುಂದೆ ನಿಂತಿದ್ದಾರೆ. ಇಷ್ಟಾಗುತ್ತಲೇ ತಪ್ಪು ಕಾಣಿಕೆ ಹಾಕಿದ್ದಾರೆಂಬ ಸುದ್ದಿ, ಫೋಟೋಗಳು ವಾಟ್ಸಪಲ್ಲಿ ಹರಿದಾಡಿತ್ತು. ಸುದ್ದಿ ಭಾರೀ ಸದ್ದು ಮಾಡುತ್ತಲೇ ಕರಾವಳಿಯಲ್ಲಿ ಹೈಪ್ ಕ್ರಿಯೇಟ್ ಆಗಿದೆ. ಕೊರಗಜ್ಜನ ಭಕ್ತರು, ಅಜ್ಜ ಕೊನೆಗೂ ಮುನಿದು ಬಿಟ್ಟ ಎಂದಿದ್ದರು. ಹೌದು.. ಅದು ಅಜ್ಜನ ಕಾರಣಿಕವೂ ಅಂಥದ್ದೇ. ಕಮಿಷನರ್ ಕೂಡ ವಿಷ್ಯ ತಿಳಿದು ರಾತ್ರಿಯೇ ಅಲ್ಲಿಗೆ ಧಾವಿಸಿದ್ದಾರೆ.

ಕೋಲ ನಡೆಯುವಲ್ಲಿಂದಲೇ ಅಬ್ದುಲ್ ರಹೀಂ ಮತ್ತು ಇನ್ನೊಬ್ಬನನ್ನು ಪೊಲೀಸರು ವಶಕ್ಕೆ ಪಡೆದು ಕರೆದೊಯ್ದಿದ್ದರು. ಬಳಿಕ ತೀವ್ರ ವಿಚಾರಣೆಯನ್ನೂ ನಡೆಸಿದ್ದರು. ವಿಚಾರಣೆ ವೇಳೆ, ತಾವು ತಪ್ಪು ಮಾಡಿಲ್ಲ ಎಂದೇ ಹೇಳಿಕೆ ನೀಡಿದ್ದರು ಎನ್ನಲಾಗಿದೆ. ಆದರೆ, ಈ ನಡುವೆ ಪೊಲೀಸ್ ಕಮಿಷನರ್ ಶಶಿಕುಮಾರ್ ಮಾತ್ರ, ತಪ್ಪು ಒಪ್ಪಿಕೊಂಡಿದ್ದಾಗಿ ಮಾಧ್ಯಮಗಳಿಗೆ ಹೇಳಿಕೆ ಕೊಟ್ಟು ಎಡವಟ್ಟು ಮಾಡಿಕೊಂಡಿದ್ದಾರೆ. ಅಲ್ಲದೆ ಇಬ್ಬರನ್ನು ಬಂಧಿಸಿದ್ದಾಗಿ ಹೇಳಿಕೆ ನೀಡಿ ಮುಜುಗರಕ್ಕೆ ಸಿಲುಕಿದ್ದಾರೆ. ಇದರ ಜೊತೆಗೆ ಭಾವನಾತ್ಮಕ ವಿಚಾರದಲ್ಲಿ ಕಮಿಷನರ್ ಸಮಾಜಕ್ಕೆ ತಪ್ಪು ಸಂದೇಶ ನೀಡಿದ್ದಾರೆಯೇ ಎನ್ನುವ ಪ್ರಶ್ನೆ ಉದ್ಭವಿಸಿದೆ.

ನಿಜಕ್ಕಾದರೆ, ಕೊರಗಜ್ಜನ ಕಟ್ಟೆ, ಬಬ್ಬುಸ್ವಾಮಿ ದೈವಸ್ಥಾನ ಅಪವಿತ್ರ ಪ್ರಕರಣದಲ್ಲಿ ಇನ್ನೂ ನೈಜ ಆರೋಪಿಗಳನ್ನು ಬಂಧಿಸಿಲ್ಲ. ಅದಕ್ಕಾಗಿ ಟೀಮ್ ರೆಡಿ ಮಾಡಿದ್ದೇವೆ ಎಂದು ಕಮಿಷನರ್ ಹೇಳಿದ್ದರೂ, ಅದು ಯಾವುದೇ ಕಾರ್ಯಾಚರಣೆಯನ್ನೇ ಮಾಡಿಲ್ಲ. ಯಾವಾಗ ಇಬ್ಬರನ್ನು ಬಂಧಿಸಿದ್ದೇವೆ ಎಂದು ಹೇಳಿಕೆ ನೀಡಿದ್ದರೋ ಎರಡೇ ದಿನದಲ್ಲಿ ದೈವಸ್ಥಾನ ಅಪವಿತ್ರ ಪ್ರಕರಣ ಮತ್ತೆ ಮರುಕಳಿಸಿದೆ. ನಿನ್ನೆ-ಮೊನ್ನೆಯೂ ಕೊಣಾಜೆ ವ್ಯಾಪ್ತಿಯಲ್ಲಿ ಎರಡು ಕಡೆ ಅಪವಿತ್ರ ಪ್ರಕರಣ ನಡೆದಿದೆ. ಹಿಂದು ಭಾವನೆಯೊಂದಿಗೆ ಚೆಲ್ಲಾಟವಾಡುತ್ತಾ ಗಲಭೆಗೆ ಹುನ್ನಾರ ನಡೆಸುವ ಷಡ್ಯಂತ್ರ ಇದರ ಹಿಂದಿದ್ದು, ಕುತ್ಸಿತ ಭಾವದ ಕೆಲವು ವ್ಯಕ್ತಿಗಳು ಶಾಮೀಲಾಗಿದ್ದಾರೆ ಎಂಬ ಭಾವನೆ ಬಲಗೊಳ್ಳುತ್ತಿದೆ. ಹಿಂದು ಸಂಘಟನೆಗಳು ಪಾದಯಾತ್ರೆ, ಪ್ರಾರ್ಥನೆಯ ಮೊರೆ ಹೋಗಿದ್ದರೆ, ಆಡಳಿತ ಪಕ್ಷದ ಬಿಜೆಪಿ ಶಾಸಕರು ಇದರ ಗೊಡವೆಯೇ ಇಲ್ಲದಂತೆ ಮೌನಕ್ಕೆ ಶರಣಾಗಿದ್ದಾರೆ.

ಧಾರ್ಮಿಕ ಭಾವನೆಗೆ ಘಾಸಿ ಮಾಡುವಂತಹ ಗಂಭೀರ ಪ್ರಕರಣಗಳಲ್ಲಿ ಪೊಲೀಸರು ಸಂಯಮ ಕಳೆದುಕೊಳ್ಳದೆ ನಡೆದುಕೊಳ್ಳಬೇಕು. ಅಷ್ಟೇ ವೇಗ ಮತ್ತು ಚುರುಕಿನ ಕಾರ್ಯಾಚರಣೆಯೂ ಆಗಬೇಕು. ಇಲ್ಲದಿದ್ದರೆ ಇಂಥ ಪ್ರಕರಣಗಳು ಸಮಾಜವನ್ನು ರೊಚ್ಚಿಗೆಬ್ಬಿಸಲು ಕಾರಣವಾಗುತ್ತವೆ ಎನ್ನುವುದನ್ನು ಮರೆಯಬಾರದು. ಜಾಲತಾಣದಲ್ಲಿ ಹರಡುವ ವದಂತಿಗೆ ಪ್ರತಿಕ್ರಿಯಿಸಿ, ಐಪಿಎಸ್ ಅಧಿಕಾರಿಗಳು ಸಿಕ್ಕಿಕೊಳ್ಳುವ ಪ್ರಮೇಯ ಬರಬಾರದು. 

ಕಿಡಿಗೇಡಿಗಳಿಗೆ ಕೊರಗಜ್ಜನೇ ಕೊಟ್ಟ ಶಿಕ್ಷೆ ; ರಕ್ತಕಾರಿ ಸತ್ತ  ಮಂತ್ರವಾದಿ ! ತಪ್ಪು ಹೇಳಿಕೊಂಡು ಬಂದು ಸಿಕ್ಕಿಬಿದ್ದ ಯುವಕರು !

Raheem and Taufiq who were arrested on the charges of Putting Condoms in Koragajja Temple are now set free by police for no evidence. It was briefed by Mangalore Police Commissioner Shashi Kumar stating Fearing God’s curse, Raheem and Taufiq confess of urinating, putting condom in temple’s Hundi after their accomplice Nawaz died mysteriously.