ಕೊನೆಗೂ ವೆನ್ಝ್ ಅಬ್ದುಲ್ಲಾ ಕೇಸ್ ಭೇದಿಸಿದ ಪೊಲೀಸ್ ; ಏಳು ಮಂದಿ ಸೆರೆ, ಭಾವನೇ ಮಾಸ್ಟರ್ ಮೈಂಡ್ !

30-04-21 03:29 pm       Mangalore Correspondent   ಕ್ರೈಂ

ಕೈಕಂಬದಲ್ಲಿ ಸಾಮಾಜಿಕ ಕಾರ್ಯಕರ್ತರಾಗಿದ್ದ ವೆನ್ಝ್ ಅಬ್ದುಲ್ಲಾ ಮೇಲೆ ತಲವಾರು ದಾಳಿ ನಡೆಸಿದ್ದ ಪ್ರಕರಣವನ್ನು ಮಂಗಳೂರು ಸಿಸಿಬಿ ಪೊಲೀಸರು ಕೊನೆಗೂ ಭೇದಿಸಿದ್ದು, ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಮಂಗಳೂರು, ಎ.30: ಕೈಕಂಬದಲ್ಲಿ ಸಾಮಾಜಿಕ ಕಾರ್ಯಕರ್ತರಾಗಿದ್ದ ವೆನ್ಝ್ ಅಬ್ದುಲ್ಲಾ ಮೇಲೆ ತಲವಾರು ದಾಳಿ ನಡೆಸಿದ್ದ ಪ್ರಕರಣವನ್ನು ಮಂಗಳೂರು ಸಿಸಿಬಿ ಪೊಲೀಸರು ಕೊನೆಗೂ ಭೇದಿಸಿದ್ದು, ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಹಣಕಾಸು ವ್ಯವಹಾರದ ದ್ವೇಷದಲ್ಲಿ ವೆನ್ಝ್ ಅಬ್ದುಲ್ಲಾ ಅಜೀಜ್ ಅವರ ಹತ್ತಿರದ ಸಂಬಂಧಿಕ, ಭಾವನೇ ಆಗಿರುವ ನಿಜಾಮುದ್ದೀನ್ ಈ ಕೃತ್ಯಕ್ಕೆ ಸಂಚು ನಡೆಸಿದ್ದ ಎಂಬ ಮಾಹಿತಿಯನ್ನು ಪೊಲೀಸರು ಹೊರಗೆಡವಿದ್ದಾರೆ. ಪ್ರಕರಣದಲ್ಲಿ ಪ್ರಮುಖ ಸೂತ್ರಧಾರಿ ನಟೋರಿಯಸ್ ರೌಡಿಯಾಗಿರುವ ಅಬ್ದುಲ್ ಜಬ್ಬಾರ್ ಅಲಿಯಾಸ್ ಮಾರಿಪಳ್ಳ ಜಬ್ಬಾರ್, ನಝೀರ್ ಅಹ್ಮದ್ ಫರಂಗಿಪೇಟೆ, ಬಿಲಾಲ್ ಮೊಯ್ದೀನ್, ಇಬ್ರಾಹಿಂ ಶಾಕೀರ್, ಮೊಹಮ್ಮದ್ ನಿಹಾಲ್, ಅಬ್ಬಾಸ್ ಅಫ್ವಾನ್, ಮೊಹಮ್ಮದ್ ಆತಿಂ ಇಶಾಂ ಎಂಬವರನ್ನು ಬಂಧಿಸಲಾಗಿದೆ.

ಕಳೆದ 2020ರ ನವೆಂಬರ್ 15ರಂದು ವೆನ್ಝ್ ಅಬ್ದುಲ್ಲಾ ಅವರ ಮೇಲೆ ಕೈಕಂಬದ ಬಳಿಯ ಕಂದಾವರ ಮಸೀದಿ ಹೊರಭಾಗದಲ್ಲಿ ತಲವಾರು ದಾಳಿ ನಡೆದಿತ್ತು. ತಲೆ ಮತ್ತು ಕೈ, ಕಾಲುಗಳಿಗೆ ತೀವ್ರ ಗಾಯಗೊಂಡಿದ್ದ ಅಬ್ದುಲ್ಲಾ ಅವರನ್ನು ಮಂಗಳೂರಿನ ಯೂನಿಟಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ವೇಳೆ, ಆಸ್ಪತ್ರೆಯಲ್ಲಿ ಅಬ್ದುಲ್ಲಾ ಅವರನ್ನು ನೋಡಿಕೊಳ್ಳುತ್ತಿದ್ದ ಅಳಿಯ ನೌಶಾದ್ ಮೇಲೆ ನ.22ರಂದು ಮತ್ತೊಮ್ಮೆ ದಾಳಿ ನಡೆದಿತ್ತು. ಎರಡೂ ಕೃತ್ಯಗಳನ್ನು ಒಂದೇ ತಂಡ ಎಸಗಿರುವ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ಹಾಡಹಗಲೇ ಯೂನಿಟಿ ಆಸ್ಪತ್ರೆ ಮುಂಭಾಗದಲ್ಲಿ ರಕ್ತದೋಕುಳಿ ಹರಿಸಿದ್ದ ಘಟನೆ ಅಲ್ಲಿನ ಸಿಸಿಟಿವಿಯಲ್ಲಿ ದಾಖಲಾಗಿತ್ತು. ಈ ಬಗ್ಗೆ ಕದ್ರಿಯಲ್ಲಿ ಪ್ರಕರಣ ದಾಖಲಾಗಿದ್ದರೆ, ಅಬ್ದುಲ್ಲಾ ಮೇಲಿನ ದಾಳಿ ಬಜ್ಪೆಯಲ್ಲಿ ದಾಖಲಾಗಿತ್ತು.

ಹಣಕಾಸು ವ್ಯವಹಾರ ಮತ್ತು ಸ್ಥಳೀಯ ಮಸೀದಿ ಕಮಿಟಿ ಜೊತೆಗಿನ ವೈಷಮ್ಯದ ಬಗ್ಗೆ ಅಬ್ದುಲ್ ಅಜೀಜ್ ನೇರವಾಗಿ ಆರೋಪ ಮಾಡಿದ್ದರೂ, ಪೊಲೀಸರು ಪ್ರಕರಣದ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದರು. ಇದೇ ವೇಳೆ, ಕೆಲವರು ಈ ಕೇಸಿನಲ್ಲಿ ಭಾರೀ ಪ್ರಮಾಣದ ಹಣ ಕೈಬದಲಾಗಿದೆ, ಕೇಸ್ ಮುಂದುವರಿಯಲ್ಲ ಎನ್ನುವ ಆರೋಪವನ್ನೂ ಮಾಡಿದ್ದರು. ಪ್ರಕರಣದಲ್ಲಿ ಆರೋಪಿಗಳ ಪತ್ತೆಯಾಗದ ವಿಚಾರದಲ್ಲಿ ಎಸ್ ವೈ ಎಸ್ ವತಿಯಿಂದ ಪ್ರತಿಭಟನೆಯೂ ನಡೆದಿತ್ತು. ಆಗಿನ ಕಮಿಷನರ್ ವಿಕಾಸ್ ಕುಮಾರ್ ಒಟ್ಟು ಘಟನೆ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದರಿಂದ ಪ್ರಕರಣ ಮುಚ್ಚಿ ಹೋಗುವ ಹಂತಕ್ಕೆ ಬಂದು ಮುಟ್ಟಿತ್ತು.

ಆದರೆ, ಎರಡು ವಾರದ ಹಿಂದೆ ಟಿಬಿ ಗ್ಯಾಂಗ್ ಎನ್ನುವ ಹೆಸರಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ದರೋಡೆ ತಂಡ ಪೊಲೀಸರ ಕೈಗೆ ಸಿಕ್ಕಿಬಿದ್ದಿತ್ತು. ಆರೋಪಿಗಳ ಪೈಕಿ ಕೆಲವರು ವೆನ್ಝ್ ಅಬ್ದುಲ್ಲಾ ಪ್ರಕರಣದ ಬಗ್ಗೆ ಬಾಯ್ಬಿಟ್ಟಿದ್ದು, ಪೊಲೀಸರಿಗೆ ದೊಡ್ಡ ಸುಳಿವು ನೀಡಿತ್ತು. ಇದರ ಬೆನ್ನು ಬಿದ್ದ ಡಿಸಿಪಿ ಹರಿರಾಮ್ ಶಂಕರ್ ನೇತೃತ್ವದ ತಂಡ, ಈಗ ಏಳು ಮಂದಿಯನ್ನು ಬಂಧಿಸಿದ್ದಾರೆ. ಅಲ್ಲದೆ, ಘಟನೆಯ ಹಿಂದಿರುವ ವೆನ್ಝ್ ಅಬ್ದುಲ್ಲಾರ ನಿಕಟ ಸಂಬಂಧಿಗಳಿಬ್ಬರ ಹಣಕಾಸು ದ್ವೇಷದ ಬಗ್ಗೆ ಮಾಹಿತಿ ಹೊರಗೆಡವಿದ್ದಾರೆ.

ಸಂಬಂಧಿಕರ ನಡುವೆ ಹಣಕಾಸು ದ್ವೇಷ

ಮೂರು ವರ್ಷಗಳ ಹಿಂದೆ ವೆನ್ಝ್ ಅಬ್ದುಲ್ಲಾ ಹಣಕಾಸು ವಿಚಾರದಲ್ಲಿ ಪಂಚಾಯಿತಿ ಮಾಡಿದ್ದರು. ಅಬ್ದುಲ್ಲಾ ಅವರ ತಂಗಿಯ ಮಗ ಮಕ್ದೂಮ್ ಮತ್ತು ಭಾವ ನಿಜಾಮುದ್ದೀನ್ ಇಬ್ಬರೂ ಹಿಂದೆ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಕಂಪನಿಯೊಂದಕ್ಕೆ ಮ್ಯಾನ್ ಪವರ್ ನೀಡುತ್ತಿದ್ದರು. ಇದರಲ್ಲಿ ನಿಜಾಮುದ್ದೀನ್ ಕಂಪನಿ ಕಡೆಯವನಾಗಿದ್ದರೆ, ಮಕ್ದೂಮ್ ಮ್ಯಾನ್ ಪವರ್ ನೀಡುವ ಕೆಲಸ ಮಾಡುತ್ತಿದ್ದ. ಮಕ್ದೂಮ್ ಬಳಿಕ ವಿದೇಶದಿಂದ ಊರಿಗೆ ಬಂದಿದ್ದು, ಆನಂತರ ನಿಜಾಮುದ್ದೀನ್ ಕೂಡ ಮಂಗಳೂರಿಗೆ ಬಂದು ಪಾಂಡೇಶ್ವರ ಠಾಣೆಗೆ ದೂರು ನೀಡಿದ್ದ. ಮಕ್ದೂಮ್ ಒಂದೂವರೆ ಕೋಟಿ ಹಣವನ್ನು ಲೂಟಿ ಮಾಡಿಕೊಂಡು ಬಂದಿದ್ದಾಗಿ ಆರೋಪಿಸಿದ್ದ. ವಿಚಾರ ಅರಿತ ಕೈಕಂಬದ ಅಬ್ದುಲ್ ಅಜೀಜ್, ಪಾಂಡೇಶ್ವರ ಠಾಣೆಗೆ ತೆರಳಿ ಮಾತುಕತೆ ನಡೆಸಿದ್ದರು. ಆನಂತರ ಅಬ್ದುಲ್ಲಾ ಅವರು ಮಕ್ದೂಮ್ ಬಳಿಯಿಂದ 50 ಲಕ್ಷ ರೂ. ಕೊಡಿಸುವುದಾಗಿ ಹೇಳಿ ಕೇಸ್ ಕ್ಲೋಸ್ ಮಾಡಿದ್ದರು. ಆದರೆ, ಮಕ್ದೂಮ್ ಕಂಪನಿ ಕಡೆಯಿಂದ ನನಗೂ ಸಾಕಷ್ಟು ಹಣ ಬರಬೇಕು ಎಂದಿದ್ದ.

ಅಬ್ದುಲ್ಲಾ ಮತ್ತು ಮಕ್ದೂಮ್ ಟಾರ್ಗೆಟ್ !

ವರ್ಷ ಕಳೆದರೂ, ನಿಜಾಮುದ್ದೀನ್ ತನಗೆ ಬರಬೇಕಾದ ಹಣ ಸಿಗದ ಕಾರಣ ತನ್ನ ಭಾವ ವೆನ್ಝ್ ಅಬ್ದುಲ್ಲಾರಿಗೆ ವಾರ್ನ್ ಮಾಡಿದ್ದ. ಇದೇ ವೇಳೆ, ಕಂದಾವರ ಮಸೀದಿ ಕಮಿಟಿಯಲ್ಲಿ ಅಬ್ದುಲ್ಲಾ ಮತ್ತು ಅಲ್ಲಿನ ಇತರ ಸದಸ್ಯರ ಮಧ್ಯೆ ತಕರಾರು ನಡೆದಿತ್ತು. ಅಬ್ದುಲ್ಲಾರ ವಿರೋಧಿ ಪಡೆಯ ಎರಡೂ ಕಡೆಗೂ ಪರಿಚಯದವನಾಗಿದ್ದ ರೌಡಿ ಮಾರಿಪಳ್ಳ ಜಬ್ಬಾರ್, ವಿದೇಶದಲ್ಲಿದ್ದ ನಿಜಾಮುದ್ದೀನ್, ಬಾಶಿತ್ ಮತ್ತು ಸಫ್ವಾನ್ ಹುಸೇನ್ ಅವರಿಂದ ಸುಪಾರಿ ಪಡೆದು ವೆನ್ಝ್ ಅಬ್ದುಲ್ಲಾ ಮತ್ತು ಮಕ್ದೂಮ್ ಅವರನ್ನು ಮುಗಿಸಲು ಪ್ಲಾನ್ ಹಾಕಿದ್ದಾನೆ. ನ.15ರಂದು ರಾತ್ರಿ ಕಂದಾವರ ಮಸೀದಿ ಬಳಿ ಬಂದಿದ್ದ ಅಬ್ದುಲ್ಲಾ ಮೇಲೆ ಮೂವರು ಹುಡುಗರು ಸೇರಿ ದಾಳಿ ನಡೆಸಿದ್ದರು. ಬಳಿಕ ಒಂದೇ ವಾರದ ಅಂತರದಲ್ಲಿ ಮಕ್ದೂಮ್ ಎಂದು ಆಸ್ಪತ್ರೆಯ ಹೊರಗಿದ್ದ ನೌಶಾದ್ ಮೇಲೆ ಅಟ್ಯಾಕ್ ಮಾಡಿದ್ದರು. ನೌಶಾದ್ ಮೇಲೆ ಮಾರಣಾಂತಿಕ ದಾಳಿ ನಡೆದಿದ್ದು, ತಲವಾರು ಏಟಿಗೆ ತೀವ್ರ ಗಾಯಗೊಂಡಿದ್ದ.

ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ರೌಡಿ ಶೀಟರ್ ಆಗಿರುವ ಮಾರಿಪಳ್ಳ ಜಬ್ಬಾರ್ ವಿರುದ್ಧ ಕೊಲೆ, ಕೊಲೆಯತ್ನ ಸೇರಿ ಏಳು ಪ್ರಕರಣ ದಾಖಲಾಗಿವೆ. 2017ರಲ್ಲಿ ಪರಂಗಿಪೇಟೆಯಲ್ಲಿ ನಡೆದ ಡಬಲ್ ಮರ್ಡರ್ ಪ್ರಕರಣದಲ್ಲಿ ಜಬ್ಬಾರ್ ಪ್ರಮುಖ ಆರೋಪಿಯಾಗಿದ್ದ. ಆರೋಪಿ ಇಬ್ರಾಹಿಂ ಶಾಕೀರ್ ಈ ಹಿಂದೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಸಿಬಂದಿ ಮೇಲೆ ಹಲ್ಲೆಗೈದ ಪ್ರಕರಣದಲ್ಲಿ ಭಾಗಿಯಾಗಿದ್ದ. ವಿದೇಶದಲ್ಲಿ ತಲೆಮರೆಸಿಕೊಂಡಿರುವ ನಿಜಾಮುದ್ದೀನ್, ಸಫ್ವಾನ್ ಮತ್ತು ಬಾತಿಶ್ ಬಂಧನಕ್ಕೆ ಬಾಕಿಯಿರುತ್ತದೆ ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅಲ್ಲದೆ, ಮುಚ್ಚಿ ಹೋಗಿದ್ದ ಪ್ರಕರಣದ ಬೆನ್ನು ಬಿದ್ದು ತನಿಖೆ ನಡೆಸಿ, ಆರೋಪಿಗಳನ್ನು ಪತ್ತೆ ಮಾಡಿದ ಡಿಸಿಪಿ ಹರಿರಾಮ್ ಶಂಕರ್ ನೇತೃತ್ವದ ತನಿಖಾ ತಂಡಕ್ಕೆ ಪೊಲೀಸ್ ಕಮಿಷನರ್ ಶಶಿಕುಮಾರ್ ಹತ್ತು ಸಾವಿರ ರೂ. ಬಹುಮಾನ ಘೋಷಿಸಿದ್ದಾರೆ.


In connection to the Murder attempts of Businessman Abdul Aziz in Bajpe, Kandavar, and the murder attempt on Son in Law near Falnir Hospital seven persons have been arrested including Jabbar Maripalla by Mangalore city police. Commissioner Shashi Kumar has reward DCP Hariram Shankar and the team Rs 10 thousand for their commendable work.