ಕರಾಯದಲ್ಲಿ ಪ್ರತ್ಯೇಕ ಮನೆ ಕಳ್ಳತನ ; ನಾಲ್ವರನ್ನು ಬಂಧಿಸಿದ ಪೊಲೀಸರು

29-05-21 10:21 pm       Mangaluru Correspondent   ಕ್ರೈಂ

ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದ ಪರಿಸರದಲ್ಲಿ ನಡೆದ ಎರಡು ಪ್ರತ್ಯೇಕ ಮನೆ ಕಳವು ಪ್ರಕರಣಕ್ಕೆ ಸಂಬಂಧಿಸಿ ಉಪ್ಪಿನಂಗಡಿ ಪೊಲೀಸರು ನಾಲ್ವರು ಕಳ್ಳರನ್ನು ಬಂಧಿಸಿದ್ದಾರೆ.

ಉಪ್ಪಿನಂಗಡಿ, ಮೇ 29: ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದ ಪರಿಸರದಲ್ಲಿ ನಡೆದ ಎರಡು ಪ್ರತ್ಯೇಕ ಮನೆ ಕಳವು ಪ್ರಕರಣಕ್ಕೆ ಸಂಬಂಧಿಸಿ ಉಪ್ಪಿನಂಗಡಿ ಪೊಲೀಸರು ನಾಲ್ವರು ಕಳ್ಳರನ್ನು ಬಂಧಿಸಿದ್ದಾರೆ. ಉರುವಾಲು ಗ್ರಾಮದ ಸಂಶುದ್ದೀನ್(30), ಹಿರೇಬಂಡಾಡಿ ಗ್ರಾಮದ ನವಾಜ್ ಮಹಮ್ಮದ್ (25), ಕರಾಯ ಗ್ರಾಮದ ಸೈಯದ್ ನಿಜಾಂ ತಂಗಳ್ (27), ಇಳಂತಿಲ ಗ್ರಾಮದ ನಿವಾಸಿ ಸರ್ಫರಾಜ್ (27) ಬಂಧಿತರು.

ಕಳೆದ ಜನವರಿ 14ರಂದು ಕರಾಯ ಗ್ರಾಮದ ಕೆ.ಎನ್ ಶರತ್ ಕುಮಾರ್ ಎಂಬವರ ಮನೆಗೆ ನುಗ್ಗಿದ ಕಳ್ಳರು 3.81 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು 14 ಸಾವಿರ ನಗದನ್ನು ಕಳವು ಮಾಡಿದ್ದರು. ಅಂದು ಸಂಜೆ ಮನೆಗೆ ಬೀಗ ಹಾಕಿ ತೆರಳಿದ್ದ ಶರತ್ ಕುಮಾರ್ ಕಲ್ಲೇರಿಯಲ್ಲಿರುವ ತನ್ನ ಬೇಕರಿಯಲ್ಲಿ ವ್ಯಾಪಾರ ಮುಗಿಸಿ ರಾತ್ರಿ ಹಿಂತಿರುಗಿದ್ದರು. ಈ ವೇಳೆ, ಕಳ್ಳರು ನುಗ್ಗಿ ಮನೆಯಲ್ಲಿದ್ದ ಚಿನ್ನಾಭರಣ ದೋಚಿಕೊಂಡು ಹೋಗಿದ್ದರು.

ಇತ್ತೀಚೆಗೆ ಮೇ 17ರಂದು ಉಪ್ಪಿನಂಗಡಿ ಠಾಣೆ ವ್ಯಾಪ್ತಿಯ ಉರುವಾಲು ಗ್ರಾಮದ ಮುರಿಯಾಳ ಎಂಬಲ್ಲಿ ಮಹ್ಮದ್ ಅಶ್ರಫ್ ಎಂಬವರ ಮನೆಯಲ್ಲಿ ಕಳವು ನಡೆದಿತ್ತು. ಅಶ್ರಫ್ ಅವರ ಪತ್ನಿ ಶಾಹಿದಾ ಮನೆಗೆ ಬೀಗ ಹಾಕಿ ಕಲ್ಲಡ್ಕದ ತನ್ನ ತಾಯಿ ಮನೆಗೆ ತೆರಳಿದ್ದರು. ಮೇ 14ರಂದು ತೆರಳಿ, 17ರಂದು ಹಿಂತಿರುಗಿದ ಸಂದರ್ಭದಲ್ಲಿ ಮನೆಯಲ್ಲಿದ್ದ 1.70 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು 4 ಸಾವಿರ ನಗದನ್ನು ಕಳ್ಳರು ಮನೆಯ ಬೀಗ ಮುರಿದು ಕಳವುಗೈದಿದ್ದರು.

ಇವೆರಡೂ ಪ್ರಕರಣಗಳು ಒಂದೇ ರೀತಿಯಾಗಿ ಕಂಡಿದ್ದರಿಂದ ಎಸ್ಪಿ ಋಷಿಕುಮಾರ್ ಸೋನವಾನೆ ಕಳವು ಪ್ರಕರಣದ ತನಿಖೆಗೆ ಪ್ರತ್ಯೇಕ ತಂಡ ರಚಿಸಿದ್ದರು. ಪುತ್ತೂರು ಗ್ರಾಮಾಂತರ ಇನ್ ಸ್ಪೆಕ್ಟರ್ ಉಮೇಶ್ ಉಪ್ಪಳಿಕೆ ನೇತೃತ್ವದಲ್ಲಿ ಪೊಲೀಸರ ತಂಡ ಕಳ್ಳರ ಜಾಡು ಹಿಡಿದು ತನಿಖೆಯಲ್ಲಿ ತೊಡಗಿದ್ದಾಗ, ನೆಕ್ಕಿಲಾಡಿ ಚೆಕ್ ಪೋಸ್ಟ್ ನಲ್ಲಿ ಮೂರು ಮಂದಿ ಸಿಕ್ಕಿಬಿದ್ದಿದ್ದಾರೆ. ಕಳ್ಳರಿಂದ 5.5 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಒಂದು ಲಕ್ಷ ಮೌಲ್ಯದ ಮೂರು ಬೈಕ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳ ಪೈಕಿ ಸಂಶುದ್ದೀನ್ ವಿರುದ್ಧ ಈ ಹಿಂದೆ ಬೆಂಗಳೂರು ನಗರದ ಉಪ್ಪಾರ ಪೇಟೆ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದ್ದು, ಬಂಧಿಸಲ್ಪಟ್ಟು ಜೈಲಿನಿಂದ ಬಿಡುಗಡೆಯಾಗಿ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ. 

Belthangady Karaya Serial Theft four arrested by DK Police. 5 lakhs worth gold and 1 lakh worth Bikes have been seized by the Police.