ಬುದ್ದಿಮಾಂದ್ಯ ಮಹಿಳೆ ಮೇಲೆ ಅತ್ಯಾಚಾರ ; ಆಸ್ಪತ್ರೆಯಲ್ಲೇ ವಿಕೃತ ಕಾಮಿಯ ಕೌರ್ಯ..!

10-07-21 11:11 am       Headline Karnataka News Network   ಕ್ರೈಂ

ಮೈಸೂರಿನ ಕೆ.ಆರ್. ಆಸ್ಪತ್ರೆಯ ವಾರ್ಡ್ ನಲ್ಲಿ ಬುದ್ದಿಮಾಂದ್ಯ ಮಹಿಳೆ ಮೇಲೆ ಅತ್ಯಾಚಾರ ಎಸಗಿರುವ ಪೈಶಾಚಿಕ ಕೃತ್ಯ ಇದೀಗ ಬೆಳಕಿಗೆ ಬಂದಿದೆ.

ಮೈಸೂರು, ಜುಲೈ 10: ನಗರದ ಕೆ.ಆರ್. ಆಸ್ಪತ್ರೆಯ ವಾರ್ಡ್ ನಲ್ಲಿ ಬುದ್ದಿಮಾಂದ್ಯ ಮಹಿಳೆ ಮೇಲೆ ಅತ್ಯಾಚಾರ ಎಸಗಿರುವ ಪೈಶಾಚಿಕ ಕೃತ್ಯ ಇದೀಗ ಬೆಳಕಿಗೆ ಬಂದಿದೆ.

ಅಪರಿಚಿತ ವ್ಯಕ್ತಿಯೊಬ್ಬ ವಾರ್ಡ್ ಕಿಟಕಿ ಗ್ರಿಲ್ ಕಿತ್ತು ಹೊಳ ನುಗ್ಗಿ 30 ವರ್ಷದ ಬುದ್ದಿಮಾಂದ್ಯ ಮಹಿಳೆ ಮೇಲೆ ಅಮಾನುಷ ಕೃತ್ಯ ನಡೆಸಿದ್ದಾನೆ ಎಂದು ತಿಳಿದುಬಂದಿದೆ. ಆದರೆ, ಪ್ರಕರಣದ ವಿರುದ್ಧ ಕಠಿಣ ಕ್ರಮ ಜರುಗಿಸಬೇಕಾಗಿದ್ದ ಆಸ್ಪತ್ರೆ ವೈದ್ಯಾಧಿಕಾರಿಗಳು ಈ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿರುವ ಹೇಯ ಘಟನೆಯೂ ಇದೀಗ ಚರ್ಚೆಗೆ ಕಾರಣವಾಗಿದೆ.

ರಾತ್ರಿ ವೇಳೆ ಕಾಮುಕ ಕಿಟಕಿ ಮೂಲಕ ನುಗ್ಗಿ ಅತ್ಯಾಚಾರ ಎಸಗಿದ್ದಾನೆ. ಈ ಬಗ್ಗೆ ಆಸ್ಪತ್ರೆಯಲ್ಲೇ ಚಿಕಿತ್ಸೆಗೆ ದಾಖಲಾಗಿರುವ ವೃದ್ದೆ ವಾರದ ಹಿಂದೆಯೇ ಆಸ್ಪತ್ರೆಯ ವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಆದರೂ, ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಲಿಲ್ಲ. ಅಲ್ಲದೆ, ಮಾಹಿತಿ ನೀಡಿದ ವೃದ್ದೆಯ ಮೇಲೆ ಹಲ್ಲೆ ಮಾಡಿ ಬಾಯಿ ಬಿಡದಂತೆ ಆಸ್ಪತ್ರೆ ಸಿಬ್ಬಂದಿಗಳು ಬೆದರಿಕೆ ಹಾಕಿದ್ದಾರೆ. ಈ ಮೂಲಕ ಅತ್ಯಾಚಾರ ಪ್ರಕರಣವನ್ನೇ ಮುಚ್ಚಿ ಹಾಕಲು ಯತ್ನಿಸಿದ್ದಾರೆ.

ಆದರೆ, ಕೊನೆಗೆ ಮಾನವ ಹಕ್ಕುಗಳ ಸೇವಾ ಸಮಿತಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಬೆಳಕಿಗೆ ತಂದಿದೆ. ಮಾನವ ಹಕ್ಕುಗಳ ಸೇವಾ ಸಮಿತಿ ನೀಡಿದ ಮಾಹಿತಿಯಿಂದ ಆಸ್ಪತ್ರೆಗೆ ದೌಡಾಯಿಸಿದ ದೇವರಾಜ ಪೊಲೀಸ್ ಠಾಣೆ ಅಧಿಕಾರಿಗಳು ಈ ಬಗ್ಗೆ ಕೇಸ್​ ದಾಖಲಿಸಿದ್ದಾರೆ. ಆದರೆ, ವಿಷಯ ಬಹಿರಂಗವಾಗುತ್ತಿದ್ದಂತೆ ಆಸ್ಪತ್ರೆ ಭದ್ರತಾ ಸಿಬ್ಬಂದಿಗಳು ನಾಪತ್ತೆಯಾಗಿದ್ದಾರೆ.

ಪೊಲೀಸರು ಬಂದರೂ ಸಹ ವೈದ್ಯರು ಹಾಗೂ ನರ್ಸ್​ಗಳು ಪರಿಶೀಲನಾ ಸ್ಥಳಕ್ಕೆ ಆಗಮಿಸಿರಲಿಲ್ಲ ಎಂದು ತಿಳಿದುಬಂದಿದೆ. ಈ ಅಮಾನವೀಯ ಕೃತ್ಯ ಕೇಳಿ ನೆರೆ ಹೊರೆ ವಾರ್ಡ್ ನ ರೋಗಿಗಳ ಪೋಷಕರು ಬೆಚ್ಚಿಬಿದ್ದಿದ್ದಾರೆ ಎನ್ನಲಾಗಿದೆ. ಆದರೆ, ಈ ಪೈಶಾಚಿಕ ಕೃತ್ಯ ಎಸಗಿದವರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

A mentally challenged woman has been allegedly raped in K R Hospital in Mysore.