ಕ್ಷಿಪ್ರ ಕಾರ್ಯಾಚರಣೆ ; ಕೆಲವೇ ಗಂಟೆಗಳಲ್ಲಿ  ಪಕ್ಕದ್ಮನೆಯಲ್ಲಿದ್ದ ಆರೋಪಿ ಸೆರೆ, ಒಡವೆ ವಶಕ್ಕೆ 

13-07-21 09:49 pm       Mangaluru Correspondent   ಕ್ರೈಂ

ಪಣಂಬೂರು ಠಾಣೆ ವ್ಯಾಪ್ತಿಯ ಕೆಳಗಿನ ತೋಕೂರು ಎಂಬಲ್ಲಿ ನಡೆದಿದ್ದ ಮನೆ ಕಳ್ಳತನ ಪ್ರಕರಣದಲ್ಲಿ ದೂರು ವರದಿಯಾದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು, ಜುಲೈ 13: ಪಣಂಬೂರು ಠಾಣೆ ವ್ಯಾಪ್ತಿಯ ಕೆಳಗಿನ ತೋಕೂರು ಎಂಬಲ್ಲಿ ನಡೆದಿದ್ದ ಮನೆ ಕಳ್ಳತನ ಪ್ರಕರಣದಲ್ಲಿ ದೂರು ವರದಿಯಾದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕೆಳಗಿನ ತೋಕೂರು ಎಂಬಲ್ಲಿ ಮನೆಯ ಹಂಚು ತೆಗೆದು ಕಳ್ಳರು ನುಗ್ಗಿ ಚಿನ್ನಾಭರಣ ಕಳವುಗೈದ ಬಗ್ಗೆ ಜುಲೈ 12ರಂದು ದೂರು ನೀಡಲಾಗಿತ್ತು. ಪೊಲೀಸರು ವಿಚಾರಣೆ ನಡೆಸಿ, ನೆರೆಮನೆಯಲ್ಲೇ ಇದ್ದ ಕಳ್ಳನನ್ನು ಬಂಧಿಸಿದ್ದಾರೆ. ಆರೋಪಿಯನ್ನು ದಾವೂದ್ ಹಕೀಂ (30) ಎಂದು ಗುರುತಿಸಲಾಗಿದೆ.

ಆರೋಪಿ ಸಾಕಷ್ಟು ಕೈಸಾಲ ಮಾಡಿಕೊಂಡಿದ್ದು, ಹಣಕಾಸಿನ ತೊಂದರೆಯಲ್ಲಿದ್ದ. ಇದೇ ಕಾರಣಕ್ಕಾಗಿ ಕಳವು ಕೃತ್ಯಕ್ಕೆ ಪ್ಲಾನ್ ಹಾಕಿದ್ದ. ನೆರೆಮನೆಯವರ ಜೊತೆ ಪರಿಚಯದಲ್ಲಿದ್ದ ಆರೋಪಿ, ಅನ್ಯೋನ್ಯದಲ್ಲಿ ಇರುವಂತೆ ನಟಿಸಿದ್ದ. ಪಕ್ಕದ ಮನೆಯವರು ಮೊನ್ನೆ ಬೇರೆ ಕಡೆಗೆ ತೆರಳಿದ್ದ ಸಂದರ್ಭದಲ್ಲಿ ಮನೆಯ ಹಂಚು ತೆಗೆದು ಒಳನುಗ್ಗಿ ಚಿನ್ನಾಭರಣ ಕಳವುಗೈದಿದ್ದ.

ದೂರು ನೀಡಿದ ಕೂಡಲೇ ಸಂಶಯದಿಂದ ಪೊಲೀಸರು ತಪಾಸಣೆ ನಡೆಸಿದಾಗ, ಪಕ್ಕದ್ಮನೆಯಲ್ಲಿದ್ದ ಕಳ್ಳನ ಕಾರುಬಾರು ಪತ್ತೆಯಾಗಿದೆ. ಕಳವಾಗಿದ್ದ 248.600 ಗ್ರಾಮ್ ತೂಕದ ಚಿನ್ನಾಭರಣ (11.6 ಲಕ್ಷ ಮೌಲ್ಯ) ಪತ್ತೆಯಾಗಿದ್ದು, ಅವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣ ವರದಿಯಾದ ಕೆಲವೇ ಗಂಟೆಗಳಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ. 

Panambur police have arrested a man in connection with a robbery that occurred at Thokur in Mangaluru on Tuesday, July 13. The accused identified as Dawood Hakeem (30) was successfully nabbed within a few hours of the crime.