ಪ್ರೀತಿಸುತ್ತಿದ್ದ ಹುಡುಗಿ ಜೊತೆ ನಿಶ್ಚಿತಾರ್ಥ ; ಯುವಕನನ್ನು ಕೊಲೆಗೈದು ಸುಟ್ಟು ಹಾಕಿದ್ದ ದುರುಳರಿಗೆ ಜೀವಾವಧಿ 

29-07-21 11:55 am       Mangaluru Correspondent   ಕ್ರೈಂ

ತಾನು ಪ್ರೀತಿಸುತ್ತಿದ್ದ ಯುವತಿಯನ್ನು ಮದುವೆಯಾಗುತ್ತಿದ್ದಾನೆ ಎಂದು ಯುವಕನನ್ನು ಕುತ್ತಿಗೆ ಬಿಗಿದು ಕೊಲೆಗೈದು ಶವವನ್ನು ಸುಟ್ಟು ಹಾಕಿದ ಪ್ರಕರಣದಲ್ಲಿ ಆರು ಮಂದಿ ಆರೋಪಿಗಳಿಗೆ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. 

ಬೆಳ್ತಂಗಡಿ, ಜುಲೈ 29: ತಾನು ಪ್ರೀತಿಸುತ್ತಿದ್ದ ಯುವತಿಯನ್ನು ಮದುವೆಯಾಗುತ್ತಿದ್ದಾನೆ ಎಂದು ಯುವಕನನ್ನು ಕುತ್ತಿಗೆ ಬಿಗಿದು ಕೊಲೆಗೈದು ಶವವನ್ನು ಸುಟ್ಟು ಹಾಕಿದ ಪ್ರಕರಣದಲ್ಲಿ ಆರು ಮಂದಿ ಆರೋಪಿಗಳಿಗೆ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. 

2017ರ ಎಪ್ರಿಲ್ 29ರಂದು ಕೃತ್ಯ ನಡೆದಿತ್ತು. ದಿಡುಪೆ ನಿವಾಸಿಯಾಗಿದ್ದ ಸುರೇಶ್ ನಾಯ್ಕ ನಾಪತ್ತೆ ವಿಚಾರದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾಗ ಧರ್ಮಸ್ಥಳ ಬಳಿ ಅರ್ಧ ಸುಟ್ಟ ಶವ ಪತ್ತೆಯಾಗಿತ್ತು. ಬಳಿಕ ಆತನ ಮೊಬೈಲ್ ಫೋನ್ ಕರೆ ಆಧರಿಸಿ ತನಿಖೆ ನಡೆಸಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದರು. ನಿಶ್ಚಿತಾರ್ಥ ಆಗಿದ್ದ ಯುವಕ ಸುರೇಶ್ ನಾಯ್ಕನ ಕೊಲೆಗೆ ಹುಡುಗಿ ವಿಚಾರವೇ ಕಾರಣ ಎನ್ನುವುದು ಬಯಲಾಗಿತ್ತು.

ನಾವರ ಗ್ರಾಮದ ನಿವಾಸಿ ಆನಂದ ನಾಯ್ಕ ಎಂಬಾತ ವಿವಾಹಿತನಾಗಿದ್ದರೂ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದ. ಆಕೆಯನ್ನು ಮದುವೆಯಾಗುವುದಾಗಿ ಹುಡುಗಿ ತಂದೆಯಲ್ಲಿ ವಿಷಯ ಪ್ರಸ್ತಾಪಿಸಿದ್ದು ಮನೆಯವರು ನಿರಾಕರಿಸಿದ್ದರು. ಕೆಲವು ದಿನಗಳ ಬಳಿಕ ಆ ಯುವತಿಗೆ ದಿಡುಪೆ ನಿವಾಸಿ ಸುರೇಶ ನಾಯ್ಕ ಎಂಬವರ ಜೊತೆ ಮದುವೆ ನಿಗದಿಯಾಗಿತ್ತು. ಇದನ್ನು ತಿಳಿದ ಆನಂದ ನಾಯ್ಕ, ಸುರೇಶ ನಾಯ್ಕನ ಮೊಬೈಲ್ ಸಂಖ್ಯೆಯನ್ನು ಸಂಗ್ರಹಿಸಿ ನೀನು ಮದುವೆಯಾಗೋ ಯುವತಿಯನ್ನು ನಾನು ಪ್ರೀತಿಸುತ್ತಿದ್ದೇನೆ. ಈ ಸಂಬಂಧವನ್ನು ಬಿಟ್ಟು ಬಿಡುವಂತೆ ಒತ್ತಾಯಿಸಿದ್ದಾನೆ. ಇದಕ್ಕೆ ಸುರೇಶ ನಾಯ್ಕ ಒಪ್ಪದಿದ್ದಾಗ ಜೀವ ಬೆದರಿಕೆಯನ್ನೂ ಆನಂದ ನಾಯ್ಕ ಹಾಕಿದ್ದ. 

ಆನಂತರ 2017, ಎಪ್ರಿಲ್ 29 ರಂದು ಪ್ರವೀಣ್ ನಾಯ್ಕ ಎಂಬಾತ ಸುರೇಶ ನಾಯ್ಕನಿಗೆ ಕರೆ ಮಾಡಿ ಗಂಗಾ ಕಲ್ಯಾಣ್ ಯೋಜನೆಯಡಿ ಹಣ ಸಿಗುವ ಬಗ್ಗೆ ಮಾಹಿತಿ ನೀಡಿದ್ದಲ್ಲದೇ ಈ ಬಗ್ಗೆ ಮಾತನಾಡಲು ದಾಖಲೆಗಳೊಂದಿಗೆ ಉಜಿರೆಗೆ ಬರುವಂತೆ ತಿಳಿಸಿದ್ದ. ಅದರಂತೆ ಸುರೇಶ ನಾಯ್ಕ ಉಜಿರೆಗೆ ಬಂದಿದ್ದು ಆರೋಪಿಗಳಾದ ಪ್ರವೀಣ ನಾಯ್ಕ, ವಿನಯ್, ಪ್ರಕಾಶ್, ಲೋಕೇಶ್, ನಾಗರಾಜ್ ಒಟ್ಟು ಸೇರಿ ಸುರೇಶ ನಾಯ್ಕನನ್ನು ಓಮಿನಿ ಕಾರಿನಲ್ಲಿ  ನಿಗೂಢ ಜಾಗಕ್ಕೆ ಕರೆದುಕೊಂಡು ಹೋಗಿದ್ದಾರೆ. ಈ ಸಂದರ್ಭ ಯುವತಿ ಜೊತೆಗೆ ನಿಶ್ಚಿತಾರ್ಥ ಪ್ರಸ್ತಾಪವನ್ನು ಕೈ ಬಿಡುವಂತೆ ಒತ್ತಡ ಹಾಕಿದ್ದು, ಇದಕ್ಕೆ ಸುರೇಶ ನಾಯ್ಕ ಒಪ್ಪದೇ ಇದ್ದಾಗ ನೈಲಾನ್ ಹಗ್ಗದ ಮೂಲಕ ಕುತ್ತಿಗೆ ಬಿಗಿದು ಸುರೇಶ ನಾಯ್ಕನನ್ನು ಕೊಲೆ ಮಾಡಿದ್ದಾರೆ. 

ಬಳಿಕ ಮೃತದೇಹವನ್ನು ಧರ್ಮಸ್ಥಳದ ಅವೆಕ್ಕಿ ಎಂಬಲ್ಲಿ ಕೊಂಡೊಯ್ದು ಗೋಣಿ ಚೀಲದಲ್ಲಿ ಹಾಕಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಗುರುತು ಸಿಗದಂತೆ ಸುಟ್ಟು ಹಾಕಿದ್ದರು. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯ ಅ.ಕ್ರ. 72/ 2017 ಕಲಂ 147, 148, 201, 120(ಬಿ), 302 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿತ್ತು. ಬೆಳ್ತಂಗಡಿ ಪೊಲೀಸ್ ವೃತ್ತ ನಿರೀಕ್ಷಕರಾದ ನಾಗೇಶ್ ಕದ್ರಿ ಮತ್ತು ಅಂದಿನ ಧರ್ಮಸ್ಥಳ ಪೊಲೀಸ್ ಉಪ ನಿರೀಕ್ಷಕ ಕೊರಗಪ್ಪ ನಾಯ್ಕ ಅವರ ತಂಡ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.

ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು ಆರೋಪ ಸಾಬೀತಾಗಿದ್ದು ಮಂಗಳೂರು 1ನೇ ಹೆಚ್ಚವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಟಿ.ಪಿ ರಾಮಲಿಂಗೇ ಗೌಡ ಶಿಕ್ಷೆ ಘೋಷಣೆ ಮಾಡಿದ್ದಾರೆ. ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 15 ಸಾವಿರ ರು. ದಂಡ ವಿಧಿಸಿದ್ದು, ಮೃತನ ಕುಟುಂಬಕ್ಕೆ 1,00,000 ರೂ. ಪರಿಹಾರ ನೀಡುವಂತೆ ಆದೇಶ ಹೊರಡಿಸಿದ್ದಾರೆ. 

ಪ್ರಕರಣದಲ್ಲಿ ಬಂಟ್ವಾಳ ಪೊಲಿಸ್ ಉಪಾಧೀಕ್ಷಕರಾಗಿದ್ದ ರವೀಶ್ ಸಿ.ಆರ್ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ಪೊಲೀಸ್ ವೃತ್ತ ನಿರೀಕ್ಷಕರಾದ ನಾಗೇಶ್ ಕದ್ರಿಯವರು ತನಿಖೆ ನಡೆಸಿದ್ದರು. ಪ್ರಕರಣದ ತನಿಖೆಯಲ್ಲಿ ಧರ್ಮಸ್ಥಳ ಪಿ ಎಸ್ ಐ ಕೊರಗಪ್ಪ ನಾಯ್ಕ, ಸಿಬ್ಬಂದಿಗಳಾದ ಬೆನ್ನಿಚ್ಚನ್ , ಸ್ಯಾಮುವೆಲ್, ವಿಜು, ಪ್ರಮೋದ್ ನಾಯ್ಕ್, ರಾಹುಲ್ ರಾವ್, ವೃತ್ತ ಕಚೇರಿಯ ಸಿಬ್ಬಂದಿಗಳಾದ ವೆಂಕಟೇಶ್ ನಾಯ್ಕ್, ಪ್ರವೀಣ್ ದೇವಾಡಿಗ, ನವಾಝ್ ಬುಡ್ಕಿ ಮತ್ತು ಜಿಲ್ಲಾ ಗಣಕ ಯಂತ್ರ ವಿಭಾಗದ ಸಿಬ್ಬಂದಿಗಳಾದ ಸಂಪತ್ ಮತ್ತು ದಿವಾಕರ್ ಸಹಕರಿಸಿದ್ದರು. ಸರಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಶೇಖರ್ ಶೆಟ್ಟಿ  ಹಾಗೂ ರಾಜು ಪೂಜಾರಿ ವಾದಿಸಿದ್ದರು.

The first additional district and sessions court judge T P Ramalinge Gowda awarded life imprisonment and fine to the convicts in the murder case of Suresh Naika which took place on April 29, 2017. Praveen along with other accused Vinay, Prakash, Lokesh and Nagaraj kidnapped Suresh in an Omni van from the spot. After kidnapping Suresh, the accused threatened him to drop the marriage proposal with the girl. As Suresh refused to act as per their demand, the accused strangled him to death using a rope. Later, his dead body was burnt iat Aveki under Dharmasthala police station limits.