ಕೊಲೆ ಪ್ರಕರಣದಲ್ಲಿ ವಿರುದ್ಧ ಸಾಕ್ಷಿ ನುಡಿಯಲು ಒತ್ತಡ ; ಗುಂಪು ಕಟ್ಟಿಕೊಂಡು ಬಂದು ಪೆಟ್ರೋಲ್ ಬಂಕ್ ಎದುರಲ್ಲೇ ಹಲ್ಲೆ !

25-08-21 11:09 am       Mangaluru Correspondent   ಕ್ರೈಂ

ಕೊಲೆ ಪ್ರಕರಣ ವಿರುದ್ಧ ಸಾಕ್ಷಿ ಹೇಳುವಂತೆ ಒತ್ತಾಯಿಸಿದ್ದ ದ್ವೇಷದಲ್ಲಿ ಆರು ಮಂದಿಯ ಗುಂಪು ಇನ್ನೋವಾ ಅಡ್ಡಗಟ್ಟಿ ಅದರ ಚಾಲಕನಿಗೆ ಹಲ್ಲೆಗೈದ ಘಟನೆ ನಡೆದಿದ್ದು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. 

ಪುತ್ತೂರು, ಆಗಸ್ಟ್ 25: ಕೊಲೆ ಪ್ರಕರಣ ಒಂದರಲ್ಲಿ ವಿರುದ್ಧ ಸಾಕ್ಷಿ ಹೇಳುವಂತೆ ಒತ್ತಾಯಿಸಿದ್ದ ದ್ವೇಷದಲ್ಲಿ ಆರು ಮಂದಿಯ ಗುಂಪು ಇನ್ನೋವಾ ಅಡ್ಡಗಟ್ಟಿ ಅದರ ಚಾಲಕನಿಗೆ ಹಲ್ಲೆಗೈದ ಘಟನೆ ನಡೆದಿದ್ದು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. 

ಪುತ್ತೂರು ತಾಲೂಕಿನ ಚಿಕ್ಕಮುಡ್ನೂರು ಗ್ರಾಮದ ರಾಧಾಕೃಷ್ಣ (44) ಎಂಬವರು ತನ್ನ ಇನೋವಾ ಕಾರಿನಲ್ಲಿ ಪುತ್ತೂರು ಪೇಟೆಗೆ ಬಂದಿದ್ದು ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ದರ್ಬೆ ಜಂಕ್ಷನ್ನಲ್ಲಿ ಪೆಟ್ರೋಲ್ ಪಂಪಿನಲ್ಲಿ ಡೀಸೆಲ್ ಹಾಕಿಸಿದ ಬಳಿಕ ಟೈರ್ ಗೆ ಗಾಳಿ ತುಂಬಿಸುತ್ತಿದ್ದರು. ಈ ವೇಳೆ, ಆರು ಜನರ ಗುಂಪು ಒಂದು ಕಾರು ಮತ್ತು ಎರಡು ಬೈಕ್ ಗಳಲ್ಲಿ ಬಂದಿದ್ದಾರೆ. ಕಿಶೋರ್ ಗೋಳ್ತಮಜಲು, ರಾಕೇಶ್ ಪಂಚೋಡಿ, ರೆಹಮತ್, ಇಬ್ರಾಹಿಂ ಕಬಕ, ದೇವಿಪ್ರಸಾದ್, ಅಶ್ರಫ್ ದೇರಾಜೆ ಎಂಬವರು ಸ್ಥಳಕ್ಕೆ ಬಂದಿದ್ದು ರಾಧಾಕೃಷ್ಣ ಮೇಲೆ ಹಲ್ಲೆ ನಡೆಸಿದ್ದಾರೆ. ‌

ಸ್ಥಳದಲ್ಲಿದ್ದ ಫೈಬರ್ ಪಾರ್ಕಿಂಗ್ ಕೋನ್, ನೋ ಪಾರ್ಕಿಂಗ್ ಬೋರ್ಡಿನ ಕಬ್ಬಿಣದ ಸ್ಟಾಂಡ್, ಹೆಲ್ಮೆಟ್ ಹಾಗೂ ಕಲ್ಲಿನಿಂದ ರಾಧಾಕೃಷ್ಣ ಅವರ ಬೆನ್ನು, ಎಡಗೈ, ಹಣೆಗೆ ಹಲ್ಲೆ ಮಾಡಿದ್ದಾರೆ. ಅಲ್ಲದೆ, ಇನೋವಾ ಕಾರಿಗೂ ಹಾನಿಗೈದಿದ್ದರು. ಬಳಿಕ ರಾಧಾಕೃಷ್ಣ ಪುತ್ತೂರು ಆಸ್ಪತ್ರೆಗೆ ದಾಖಲಾಗಿದ್ದರು. ಮಂಗಳವಾರ ರಾತ್ರಿ ಘಟನೆ ನಡೆದಿದ್ದು ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 

ಎರಡು ವರ್ಷಗಳ ಹಿಂದೆ ಕಾರ್ತಿಕ್ ಎಂಬಾತನ ಕೊಲೆ ಪ್ರಕರಣದಲ್ಲಿ ಪ್ರೀತೇಶ್ ಎಂಬಾತ ಜೈಲು ಸೇರಿದ್ದ. ಈ ಪ್ರಕರಣದಲ್ಲಿ ಪ್ರಮುಖ ಸಾಕ್ಷಿದಾರರಾಗಿದ್ದ ಕೇಶವ ಸುವರ್ಣ ಮತ್ತು ಪ್ರಮೋದ್ ಎಂಬವರು ಪ್ರೀತೇಶ್ ಪರವಾಗಿ ವಿರುದ್ಧ ಸಾಕ್ಷಿ ನುಡಿಯುವಂತೆ ರಾಧಾಕೃಷ್ಣ ಇತ್ತೀಚೆಗೆ ಒತ್ತಾಯಪಡಿಸಿದ್ದರು. ಇದೇ ವಿಚಾರದಲ್ಲಿ ಆರೋಪಿ ಕಿಶೋರ್ ಮತ್ತಿತರ ಯುವಕರ ಜೊತೆ ರಾಧಾಕೃಷ್ಣ ಪುತ್ತೂರಿನ ಬೀರಮಲೆಗುಡ್ಡೆಯಲ್ಲಿ ಮಾತುಕತೆ ನಡೆಸಿದ್ದು ಅಲ್ಲಿ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿತ್ತು. ಪ್ರಕರಣದಲ್ಲಿ ಸಾಕ್ಷಿದಾರರು ಆರೋಪಿ ಕಿಶೋರ್ ಸಂಬಂಧಿಕರಾಗಿದ್ದು ಪ್ರೀತೇಶ್ ಪರವಾಗಿ ಸಾಕ್ಷಿ ನುಡಿಯಲು ನಿರಾಕರಣೆ ಮಾಡಿದ್ದರು. ಇದರ ಬಗ್ಗೆ ದ್ವೇಷ ಉಂಟಾಗಿ ಅದೇ ಸಿಟ್ಟಿನಿಂದ ಕಿಶೋರ್ ಗುಂಪು ಕಟ್ಟಿಕೊಂಡು ಬಂದು ರಾಧಾಕೃಷ್ಣ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಪೊಲೀಸ್ ದೂರು ದಾಖಲಾಗಿದೆ. ಪುತ್ತೂರು ಪೊಲೀಸರು ಎಲ್ಲ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

Puttur Man attacked by group of miscrents to give false witness in court. In connection to this the Puttur police have arrested three persons. Victim has been identified as Radhakrishna (44).