ವಾರೆಂಟ್ ಪ್ರಕರಣ ; ಸ್ಟ್ರೆಚರಲ್ಲಿ ಮಲಗಿದ್ದ ವ್ಯಕ್ತಿಯನ್ನು ಕೋರ್ಟಿಗೆ ಎಳೆತಂದಿದ್ದ ಪೊಲೀಸರಿಗೆ ಬಿಲ್ಡರನ್ನು ಎತ್ತಿತರಲು ಕಷ್ಟವಾದೀತೇ ?

27-08-21 05:39 pm       Mangaluru Correspondent   ಕ್ರೈಂ

ಹಳೆ ಪ್ರಕರಣ ಒಂದರಲ್ಲಿ ವಾರಂಟ್ ಇತ್ತೆಂದು ಬೆಡ್ಡಿನಲ್ಲಿ ಮಲಗಿದ್ದ ವ್ಯಕ್ತಿಯನ್ನೇ ಕೋರ್ಟಿಗೆ ಸ್ಟ್ರೆಚರ್ ನಲ್ಲಿ ಹೊತ್ತುಕೊಂಡು ಬರುವಂತೆ ಸೂಚಿಸಿದ್ದ ಕಂಕನಾಡಿ ಪೊಲೀಸರ ಬಗ್ಗೆ ನ್ಯಾಯಾಧೀಶರೇ ಗರಂ ಆಗಿದ್ದು ಸುದ್ದಿಯಾಗಿತ್ತು

ಮಂಗಳೂರು, ಆಗಸ್ಟ್ 27: ಕೆಲವೊಮ್ಮೆ ಪೊಲೀಸರ ವರ್ತನೆ, ಕಾನೂನು ಇರುವುದೇ ಉಳ್ಳವರ ಪರವೋ ಎನ್ನುವಂತಿರುತ್ತದೆ. ಕೆಲವೊಂದು ಪ್ರಕರಣದಲ್ಲಿ ಶ್ರೀಮಂತನಿಗೊಂದು ನ್ಯಾಯ, ಬಡವನಿಗೊಂದು ನ್ಯಾಯ ಅನ್ನುವ ರೀತಿ ವರ್ತಿಸುತ್ತಾರೆ. ಇತ್ತೀಚೆಗೆ, ಹಳೆ ಪ್ರಕರಣ ಒಂದರಲ್ಲಿ ವಾರಂಟ್ ಇತ್ತೆಂದು ಬೆಡ್ಡಿನಲ್ಲಿ ಮಲಗಿದ್ದ ವ್ಯಕ್ತಿಯನ್ನೇ ಕೋರ್ಟಿಗೆ ಸ್ಟ್ರೆಚರ್ ನಲ್ಲಿ ಹೊತ್ತುಕೊಂಡು ಬರುವಂತೆ ಸೂಚಿಸಿದ್ದ ಕಂಕನಾಡಿ ಪೊಲೀಸರ ಬಗ್ಗೆ ನ್ಯಾಯಾಧೀಶರೇ ಗರಂ ಆಗಿದ್ದು ಸುದ್ದಿಯಾಗಿತ್ತು. ಆದರೆ, ಅಂತಹದ್ದೇ ವಾರೆಂಟ್ ಪ್ರಕರಣದಲ್ಲಿ ಆರೋಪಿ ಬಲಾಢ್ಯನಾಗಿದ್ದರೆ ಪೊಲೀಸರು ಎಷ್ಟು ನಿರ್ಲಕ್ಷ್ಯ ವಹಿಸುತ್ತಾರೆ ಎನ್ನುವುದಕ್ಕೆ ಇಲ್ಲೊಂದು ಸಾಕ್ಷಿ ಸಿಕ್ಕಿದೆ.

ಪಾಂಡೇಶ್ವರ ಠಾಣೆಯ ಪಕ್ಕದಲ್ಲೇ ಇರುವ ಅಪಾರ್ಟ್ಮೆಂಟ್ ಒಂದರ ಜಟಾಪಟಿ ಪ್ರಕರಣವದು. ಪಾಂಡೇಶ್ವರದ ಕೆ2 ಹ್ಯಾಬಿಟೇಟ್ ಎನ್ನುವ ಅಪಾರ್ಟ್ಮೆಂಟಿನಲ್ಲಿ ನಿವೃತ್ತ ಬ್ಯಾಂಕ್ ಉದ್ಯೋಗಿ ಶ್ಯಾಮಲಾ ಕಾಮತ್ ದಂಪತಿಯ ಫ್ಲಾಟ್ ನಲ್ಲಿ ಮನೆಯ ಮೂಲ ಸೌಕರ್ಯದ ಬಗ್ಗೆ ಸಮಸ್ಯೆ ಉಂಟಾಗಿ, ಕೊನೆಗೆ ಕಂಪ್ಲೇಂಟ್ ಆಗಿ ಆ ಮನೆಗೆ ನೀರನ್ನೇ ಕಡಿತಗೊಳಿಸಿದ್ದ ವಿಚಾರ ಗ್ರಾಹಕರ ನ್ಯಾಯಾಲಯಕ್ಕೆ ಹೋಗಿತ್ತು. ಕೋರ್ಟಿನಲ್ಲಿ ಐದಾರು ವರ್ಷಗಳಿಂದ ಪ್ರಕರಣ ನಡೆಯುತ್ತಿದ್ದು, ಅಪಾರ್ಟ್ಮೆಂಟ್ ಅಸೋಸಿಯೇಶನ್ ಮತ್ತು ಕಟ್ಟಡದ ಬಿಲ್ಡರ್ ವಿರುದ್ಧ ಸದ್ರಿ ಮನೆಯ ಸಮಸ್ಯೆಯನ್ನು ಸರಿಪಡಿಸುವಂತೆ ಮೇಲಿಂದ ಮೇಲೆ ಆರ್ಡರ್ ಬಂದಿತ್ತು. ಆದರೆ, ಬಿಲ್ಡರ್ ಮತ್ತು ಅಸೋಸಿಯೇಶನ್ ಅಧ್ಯಕ್ಷ ಕೋರ್ಟಿನ ಸೂಚನೆಯನ್ನು ನಿರ್ಲಕ್ಷಿಸುತ್ತಾ ಬಂದಿದ್ದರು.

ಇದೀಗ ಕೋರ್ಟಿನಿಂದ ಬಂಧನ ವಾರೆಂಟ್ ಜಾರಿಯಾಗಿದ್ದು, ಅಸೋಸಿಯೇಶನ್ ಅಧ್ಯಕ್ಷ ಮತ್ತು ಕಟ್ಟಡದ ಬಿಲ್ಡರ್ ತಲೆಮರೆಸಿಕೊಳ್ಳುವ ಹಂತಕ್ಕೆ ಬಂದಿದ್ದಾರೆ. ವಿಚಿತ್ರ ಏನಂದ್ರೆ, ಬಿಲ್ಡರ್ ವಿರುದ್ಧ ಎರಡು ಬಾರಿ ವಾರೆಂಟ್ ಜಾರಿಯಾಗಿದ್ದರೂ, ಆತನನ್ನು ಬಂಧಿಸಿ ಕೋರ್ಟಿಗೆ ಹಾಜರುಪಡಿಸಬೇಕಿದ್ದ ಪೊಲೀಸರು ನೆಪ ಹುಡುಕುತ್ತಿದ್ದಾರೆ. ಕಳೆದ ಎಪ್ರಿಲ್ 26ರಂದು ಬಿಲ್ಡರ್ ಆಗಿರುವ ಪಿ.ಎಂ. ಅಬ್ದುಲ್ ಬಶೀರ್ ಎಂಬವರನ್ನು ಪೊಲೀಸರು ಬಂಧಿಸಿ ಕೋರ್ಟಿಗೆ ಹಾಜರು ಪಡಿಸಬೇಕಿತ್ತು. ಆದರೆ, ಬಿಲ್ಡರ್ ಬಂಧನ ಆಗುವುದನ್ನು ತಪ್ಪಿಸಲು ಪೊಲೀಸರೇ ನೆಪ ಹುಡುಕಿದ ರೀತಿ, ಕೋರ್ಟಿಗೆ ಹಿಂಬರಹ ಕೊಟ್ಟಿದ್ದರು. ಆರೋಪಿಯನ್ನು ಬಂಧಿಸಲು ತೆರಳಿದ್ದಾಗ ಸದ್ರಿ ವಿಳಾಸದಲ್ಲಿ ಆತ ಇಲ್ಲದೇ ಇದ್ದುದರಿಂದ ಬಂಧಿಸಲು ಸಾಧ್ಯವಾಗಿಲ್ಲ ಎಂದು ಲಿಖಿತವಾಗಿ ಬರೆದುಕೊಟ್ಟಿದ್ದರು.

ಅದೇ ದಿನ, ಆರೋಪಿ ಪರ ವಕೀಲರು ಕೋರ್ಟಿಗೆ ಬೇರೆಯದ್ದೇ ಹಿಂಬರಹ ಕೊಟ್ಟಿದ್ದರು. ಸದ್ರಿ ವ್ಯಕ್ತಿಗೆ ಅನಾರೋಗ್ಯ ಇರುವುದರಿಂದ ಕೋರ್ಟಿಗೆ ಬರಲು ಸಾಧ್ಯವಾಗುತ್ತಿಲ್ಲ. ಜಾಮೀನು ರಹಿತ ವಾರಂಟಿನಿಂದ ವಿನಾಯ್ತಿ ನೀಡುವಂತೆ ಕೋರ್ಟಿಗೆ ಅಪೀಲು ಹಾಕಿದ್ದರು. ಪೊಲೀಸರು ಆತ ಸದ್ರಿ ವಿಳಾಸದಲ್ಲಿಯೇ ಇಲ್ಲ ಎಂದಿದ್ದರೆ, ಆರೋಪಿ ಪರ ವಕೀಲ ತನ್ನ ಕಕ್ಷಿದಾರನಿಗೆ ಅನಾರೋಗ್ಯ ಎಂದು ನೆಪ ಹೇಳಿ ತಪ್ಪಿಸಲು ಯತ್ನಿಸಿದ್ದರು. ಹಣ ಇದ್ದವನನ್ನು ಕಾನೂನು ತೆಕ್ಕೆಯಿಂದ ತಪ್ಪಿಸಲು ಪೊಲೀಸರು ಮತ್ತು ವಕೀಲರು ಇಬ್ಬರೂ ಪ್ರಯತ್ನ ನಡೆದಿದ್ದು ಇಲ್ಲಿ ಕಂಡುಬರುತ್ತದೆ.

ಈ ನಡುವೆ, ಅಸೋಸಿಯೇಶನ್ ಅಧ್ಯಕ್ಷನ ವಿರುದ್ಧವೂ ಕಳೆದ ಆಗಸ್ಟ್ 5ರಂದು ವಾರೆಂಟ್ ಇತ್ತು. ಅಂತೂ ಅಧ್ಯಕ್ಷನನ್ನು ಪೊಲೀಸರು ಬಂಧಿಸಿ, ಕೋರ್ಟಿಗೆ ಹಾಜರು ಪಡಿಸಿದ್ದರು. ಕೋರ್ಟ್ ಆದೇಶ ಇದ್ಯಾಗ್ಯೂ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸದ ಅಪಾರ್ಟ್ಮೆಂಟ್ ಅಸೋಸಿಯೇಶನ್ ಅಧ್ಯಕ್ಷನಿಗೆ ಕೋರ್ಟ್ ಛೀಮಾರಿ ಹಾಕಿದ್ದು, ನ್ಯಾಯಾಂಗ ಬಂಧನ ವಿಧಿಸಿತ್ತು. ಇದೀಗ ಅಪಾರ್ಟ್ಮೆಂಟ್ ಕಟ್ಟಡದ ಬಿಲ್ಡರ್ ಅಬ್ದುಲ್ ಬಶೀರ್ ವಿರುದ್ಧ ಮತ್ತೆ ಬಂಧನ ವಾರೆಂಟ್ ಜಾರಿಯಾಗಿದೆ. ಮುಂದಿನ ಸೆಪ್ಟಂಬರ್ 6ರ ಒಳಗೆ ಕೋರ್ಟಿಗೆ ಹಾಜರು ಪಡಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿದೆ.

ಒಂದು ವೃದ್ಧ ಕುಟುಂಬಕ್ಕೆ ನೀರು ಕಡಿತಗೊಳಿಸಿದ್ದಲ್ಲದೆ, ಸಂತ್ರಸ್ತ ಕುಟುಂಬ ಗ್ರಾಹಕರ ನ್ಯಾಯಾಲಯಕ್ಕೆ ಹೋಗಿ ಕದ ತಟ್ಟಿದರೂ, ನ್ಯಾಯ ಮರೀಚಿಕೆ ಅನ್ನುವಂತಾಗಿದೆ. ಅಪಾರ್ಟ್ಮೆಂಟ್ ಮನೆಯಲ್ಲಿನ ಸಮಸ್ಯೆ ಸರಿಪಡಿಸಲು ಕೋರ್ಟ್ ಆದೇಶ ಮಾಡಿದ್ದರೂ, ಬಿಲ್ಡರ್ ನಿರ್ಲಕ್ಷ್ಯ ತೋರುತ್ತಾನೆ. ಅಸೋಸಿಯೇಶನ್ ಪದಾಧಿಕಾರಿಗಳು ಕೂಡ ಬಿಲ್ಡರ್ ಪರ ನಿಲ್ಲುತ್ತಾರೆ. ಕೊನೆಗೆ, ಆರೋಪಿಗಳ ಬಂಧನಕ್ಕೆ ಸೂಚಿಸಿದ್ದರೆ, ಪೊಲೀಸರು ಅವರನ್ನು ಬಚಾವ್ ಮಾಡಲು ಏನೆಲ್ಲ ಅಸ್ತ್ರಗಳಿರುತ್ತವೋ ಅವನ್ನು ಹುಡುಕಿ ಕೋರ್ಟ್ ಮುಂದಿಡುತ್ತಾರೆ. ಯಾಕಂದ್ರೆ, ನ್ಯಾಯ ದೇವತೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡಿರುತ್ತಾರಲ್ಲಾ.. ಸ್ಟ್ರೆಚರಲ್ಲಿ ಮಲಗಿದ್ದ ವ್ಯಕ್ತಿಯನ್ನು ಎತ್ಕೊಂಡು ಕೋರ್ಟಿಗೆ ತಂದಿದ್ದ ಪೊಲೀಸರಿಗೆ ಯಕಶ್ಚಿತ್ ಒಬ್ಬ ಬಿಲ್ಡರನ್ನು ಎತ್ತಿ ತರಲು ಕಷ್ಟವಾಗುತ್ತಾ ಹೇಳಿ.. 

Read: ಕಾಂಕ್ರೀಟ್ ಗೂಡಿನಲ್ಲಿ ನೀರೇ ಇಲ್ಲದೆ ಜೀವ  ತೇಯುತ್ತಿದೆ ವೃದ್ಧ ದಂಪತಿ! ಬಿಲ್ಡರ್ ಮಾಡಿದ ಕರ್ಮಕ್ಕೆ ಬಡ ಜೀವಗಳಿಗೆ ನೀರು ಕಡಿತದ ಶಿಕ್ಷೆ !

Court issues arrest warrant against local builder in Mangalore but police take no action. Family stays in a falt without water connection since three years at Pandeshwar suffering with mental pain.