ತನ್ನ ಬಿಟ್ಟು ಬೇರೆಯವನ ಜೊತೆ ಸಂಬಂಧ ! ಪ್ರೀತಿಸುತ್ತಿದ್ದಾಕೆಯನ್ನೇ ಕೊಂದು ಬಿಟ್ಟ ಭಗ್ನಪ್ರೇಮಿ ! ಆತ್ಮಹತ್ಯೆಗೆ ಯತ್ನಿಸಿ ಜೀವನ್ಮರಣ ಹೋರಾಟ !

28-08-21 01:20 pm       Headline Karnataka News Network   ಕ್ರೈಂ

ಪ್ರೇಮ ವೈಫಲ್ಯ ಹಿನ್ನೆಲೆಯಲ್ಲಿ ಭಗ್ನ ಪ್ರೇಮಿಯೊಬ್ಬ ಪ್ರಿಯತಮೆಯನ್ನು ಕೊಲೆಗೈದು ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನೇರಲಗಿ ಬಳಿ ನಡೆದಿದೆ.

ಶಿವಮೊಗ್ಗ, ಆಗಸ್ಟ್ 28 : ಪ್ರೇಮ ವೈಫಲ್ಯ ಹಿನ್ನೆಲೆಯಲ್ಲಿ ಭಗ್ನ ಪ್ರೇಮಿಯೊಬ್ಬ ಪ್ರಿಯತಮೆಯನ್ನು ಕೊಲೆಗೈದು ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜಿಲ್ಲೆಯ ಹೊಸನಗರ ತಾಲೂಕಿನ ನೇರಲಗಿ ಬಳಿ ನಡೆದಿದೆ.

ಕೊಲೆಯಾದ ಯುವತಿಯನ್ನು ಕವಿತಾ (21) ಎಂದು ಗುರುತಿಸಲಾಗಿದ್ದು, ಆತ್ಮಹತ್ಯೆಗೆ ಯತ್ನಿಸಿದ ಭಗ್ನ ಪ್ರೇಮಿಯನ್ನು ಶಿವಮೂರ್ತಿ (21) ಎಂದು ಗುರುತಿಸಲಾಗಿದೆ. ಆತ್ಮಹತ್ಯೆಗೆ ಯತ್ನಿಸಿದ ಶಿವಮೂರ್ತಿ ಸದ್ಯ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ. 

ಹೊಸನಗರ ತಾಲೂಕಿನ ನೇರಲಗಿ ಗ್ರಾಮದ ಕವಿತಾ ಶಿವಮೊಗ್ಗದ ನಂಜಪ್ಪ ಲೈಫ್ ಕೇರ್ ನರ್ಸಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಹೊಸನಗರ ತಾಲೂಕಿನ ಕಗಲಿ ಗ್ರಾಮದ ಶಿವಮೂರ್ತಿ ರಿಪ್ಪನ್ ಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಕಾಂ ವ್ಯಾಸಂಗ ಮಾಡುತ್ತಿದ್ದನು. ಇವರು ಇಬ್ಬರೂ 7 ವರ್ಷದಿಂದ ಪ್ರೀತಿಸುತ್ತಿದ್ದರು. ಆದರೆ, ಇತ್ತೀಚಿಗೆ ಕವಿತಾ, ಶಿವಮೂರ್ತಿ ಜೊತೆಗಿನ ಪ್ರೀತಿ ತೊರೆದು ಭದ್ರಾವತಿ ಮೂಲದ ಅಂಬುಲೆನ್ಸ್ ಚಾಲಕನ ಪ್ರೇಮ ಪಾಶಕ್ಕೆ ಸಿಲುಕಿದ್ದಳು. ಆನಂತರ, ಕವಿತಾ ಹಳೆ ಪ್ರೇಮಿ ಶಿವಮೂರ್ತಿಯನ್ನು ದೂರ ಮಾಡಿದ್ದಳು. 

ಇದರಿಂದ ರೊಚ್ಚಿಗೆದ್ದ ಶಿವಮೂರ್ತಿ, ಬುಧವಾರ ಮಧ್ಯಾಹ್ನ ಕವಿತಾಳನ್ನು ನಿನ್ನ ಜೊತೆ ಮಾತನಾಡಬೇಕು ಎಂದು ನೇರಲಗಿ ಬಳಿಗೆ ಕರೆಯಿಸಿದ್ದಾನೆ. ಅಲ್ಲಿ ಇಬ್ಬರ ನಡುವೆ ಜಗಳ ನಡೆದಿದ್ದು ಕವಿತಾಳನ್ನು ಕೊಲೆಗೈದು, ನಂತರ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಅಲ್ಲದೆ ಕವಿತಾಳನ್ನು ತಾನೇ ಕೊಲೆಗೈದಿರುವುದಾಗಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ಘಟನೆ ಕುರಿತು ರಿಪ್ಪನ್ ಪೇಟೆ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

Shivamogga Youth Killed Girlfriend and Attempts Suicide.