ಮೂಲ್ಕಿಯ ಉದ್ಯಮಿಗೆ ಭೂಗತ ಪಾತಕಿ ಕಲಿ ಯೋಗೀಶ ಜೀವ ಬೆದರಿಕೆ ; ಹಫ್ತಾಕ್ಕಾಗಿ ಒತ್ತಡ !!

05-09-21 11:41 am       Mangaluru Correspondent   ಕ್ರೈಂ

ಭೂಗತ ಪಾತಕಿ ಕಲಿ ಯೋಗೀಶ ಎನ್ನಲಾದ ವ್ಯಕ್ತಿ ಮೂಲ್ಕಿ ಮೂಲದ ಉದ್ಯಮಿಯೊಬ್ಬರಿಗೆ ಮತ್ತೆ ಕರೆ ಮಾಡಿ, ಜೀವ ಬೆದರಿಕೆ ಒಡ್ಡಿದ್ದಾನೆ. 

ಮಂಗಳೂರು, ಸೆ.5 : ಭೂಗತ ಪಾತಕಿ ಕಲಿ ಯೋಗೀಶ ಎನ್ನಲಾದ ವ್ಯಕ್ತಿ ಮೂಲ್ಕಿ ಮೂಲದ ಉದ್ಯಮಿಯೊಬ್ಬರಿಗೆ ಮತ್ತೆ ಕರೆ ಮಾಡಿ, ಜೀವ ಬೆದರಿಕೆ ಒಡ್ಡಿದ್ದಾನೆ. 

ಮೂಲ್ಕಿ ಸಮೀಪದ ಕೊಳ್ನಾಡಿನಲ್ಲಿ ಹಾರ್ಡ್ ವೇರ್ ವ್ಯವಹಾರ ಹೊಂದಿರುವ ನಾಗರಾಜ್ ಎಂಬವರಿಗೆ ಹಫ್ತಾಕ್ಕಾಗಿ ಜೀವ ಬೆದರಿಕೆ ಒಡ್ಡಲಾಗಿದೆ. ಹಣ ನೀಡುವಂತೆ ಒತ್ತಾಯಿಸಿ, ಬೆದರಿಕೆ ಹಾಕಿದ್ದು ನಾಗರಾಜ್ ಈ ಬಗ್ಗೆ ಮೂಲ್ಕಿ ಠಾಣೆಯಲ್ಲಿ ದೂರು ನೀಡಿದ್ದಾರೆ. 

ನಾಗರಾಜ್, ಕಾಂಕ್ರೀಟ್ ಮತ್ತು ಪೈಪ್ ಇನ್ನಿತರ ಬಿಸಿನೆಸ್ ನಡೆಸಿಕೊಂಡಿದ್ದಾರೆ. ಕಳೆದ 2017 ರಲ್ಲಿಯೂ ಕಲಿ ಯೋಗೇಶ ಇದೇ ರೀತಿ ಇಂಟರ್ನೆಟ್ ಕರೆ ಮಾಡಿ ಬೆದರಿಕೆ ಒಡ್ಡಿದ್ದ.‌ ಆನಂತರ ಎರಡು ದಿನಗಳ ಬಳಿಕ ಬೈಕಿನಲ್ಲಿ ಬಂದಿದ್ದ ಇಬ್ಬರು ಆಗಂತುಕರು ನಾಗರಾಜ್ ಅವರ ಹಾರ್ಡ್ ವೇರ್ ಶಾಪ್ ಮೇಲೆ ಫೈರ್ ಮಾಡಿ ಹೋಗಿದ್ದರು. ಈ ಬಗ್ಗೆ ಮೂಲ್ಕಿ ಠಾಣೆಯಲ್ಲಿ ಕೇಸು ದಾಖಲಾಗಿತ್ತು. 

ಮೂಲತಃ ಹಳೆಯಂಗಡಿ ನಿವಾಸಿಯಾಗಿರುವ ಕಲಿ ಯೋಗೇಶ ಎಂಟು ವರ್ಷಗಳ ಹಿಂದೆ ನಾಪತ್ತೆಯಾಗಿದ್ದು ವಿದೇಶದಲ್ಲಿ ನೆಲೆಸಿದ್ದಾನೆ ಎನ್ನಲಾಗಿದೆ. ಈ ಹಿಂದೆ ಮೂಲ್ಕಿ ಠಾಣೆಯಲ್ಲಿ ಆತನ ವಿರುದ್ಧ ವಂಚನೆ, ಸುಲಿಗೆ, ಬೆದರಿಕೆ ವಿಚಾರದಲ್ಲಿ ಪ್ರಕರಣ ದಾಖಲಾಗಿತ್ತು.

Business man from Mulki Mangalore gets threat call from Underworld Kali Yogesh. A case has been registered at the Mulki police station. Kali Yogesh went missing eight years back.