ಪ್ರೇಯಸಿಗಾಗಿ 5 ಲಕ್ಷ ರೂ. ಸಾಲ ; ಸಮಾಧಿ ಸೇರಿದ ಯುವತಿ, ಜೈಲು ಪಾಲಾದ ಪ್ರಿಯತಮ !

17-09-21 10:59 pm       Headline Karnataka News Network   ಕ್ರೈಂ

ಪ್ರೀತಿಸಿದ ಹುಡುಗಿಗಾಗಿ ಐದು ಲಕ್ಷ ರೂ. ಸಾಲ ಮಾಡಿದ್ದ ಕಾಲೇಜು ವಿದ್ಯಾರ್ಥಿ. ದುರಾದೃಷ್ಟವಶಾತ್ ಆತನ ಪ್ರೇಯಸಿ ಇತ್ತೀಚೆಗೆ ಅಪಘಾತದಲ್ಲಿ ಸಾವನ್ನಪ್ಪಿದ್ದಳು. ಆಕೆಗಾಗಿ ಮಾಡಿದ್ದ ಸಾಲ ತೀರಿಸಲು ಅಪಹರಣ ನಾಟಕವಾಡಿ ಐದು ಲಕ್ಷ ರೂ. ಪಡೆದು ಸಿಕ್ಕಿಬಿದ್ದಿರುವ ಅಪರೂಪದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರು, ಸೆ. 17: ಪ್ರೀತಿಸಿದ ಹುಡುಗಿಗಾಗಿ ಐದು ಲಕ್ಷ ರೂ. ಸಾಲ ಮಾಡಿದ್ದ ಕಾಲೇಜು ವಿದ್ಯಾರ್ಥಿ. ದುರಾದೃಷ್ಟವಶಾತ್ ಆತನ ಪ್ರೇಯಸಿ ಇತ್ತೀಚೆಗೆ ಅಪಘಾತದಲ್ಲಿ ಸಾವನ್ನಪ್ಪಿದ್ದಳು. ಆಕೆಗಾಗಿ ಮಾಡಿದ್ದ ಸಾಲ ತೀರಿಸಲು ಅಪಹರಣ ನಾಟಕವಾಡಿ ಐದು ಲಕ್ಷ ರೂ. ಪಡೆದು ಸಿಕ್ಕಿಬಿದ್ದಿರುವ ಅಪರೂಪದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಕುರುಬರಹಳ್ಳಿ ನಿವಾಸಿ, ಗುತ್ತಿಗೆದಾರ ಗಣಿಸಾಬ್ ಅವರ ಪುತ್ರ ಮಕ್ತುಮ್ ಅಪಹರಣ ನಾಟಕವಾಡಿ ಪೊಲೀಸರಿಗೆ ಸಿಕ್ಕಿಬಿದ್ದ ಯುವಕ. ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ ಮಕ್ತಮ್, ಆಕೆ ಕೇಳಿದ್ದನ್ನು ಕೊಡಿಸುತ್ತಿದ್ದ. ಆಕೆ ಇಷ್ಟ ಪಟ್ಟ ಉಡುಗೊರೆಗಳನ್ನು ನೀಡಿ ಖುಷಿ ಪಡಿಸುತ್ತಿದ್ದ. ಇದಕ್ಕಾಗಿ ಮನೆಯಲ್ಲಿ ಮಕ್ತಮ್‌ಗೆ ಹಣ ಕೊಡುತ್ತಿರಲಿಲ್ಲ. ಹೀಗಾಗಿ ತನ್ನ ಸ್ನೇಹಿತರ ಬಳಿ ಸಾಲ ಮಾಡಿದ್ದ. ಸಾಲದಿದ್ದಕ್ಕೆ ಫೈನಾನ್ಸಿ ಕಂಪನಿಯಲ್ಲಿ ಸ್ನೇಹಿತರ ಕೆಟಿಎಂ ಬೈಕ್ ಹಾಗೂ ಕಾರು ಅಡವಿಟ್ಟು ಸಾಲ ಮಾಡಿದ್ದ.

ದುರದಾಷ್ಟವಶಾತ್ ಮಕ್ತಮ್‌ನ ಪ್ರೇಯಸಿ ಕೆಲವು ತಿಂಗಳ ಹಿಂದೆ ನಡೆದ ಅಪಘಾತದಲ್ಲಿ ಸಾವನ್ನಪ್ಪಿದ್ದಳು. ಇದರಿಂದ ಖಿನ್ನತೆಗೆ ಒಳಗಾಗಿದ್ದ ಮಕ್ತಮ್ ಗೆ ಸಾಲ ವಾಪಸು ಕೊಡುವಂತೆ ಸ್ನೇಹಿತರು ಒತ್ತಡ ಹಾಕುತ್ತಿದ್ದರು. ಫೈನಾನ್ಸ್ ಕಂಪನಿಯವರು ಸಾಲ ತೀರಿಸುವಂತೆ ಧಮಕಿ ಹಾಕುತ್ತಿದ್ದರು. ಸಾಲ ತೀರಿಸಲು ಉಪಾಯ ಹುಡುಕಿದ ಮಕ್ತಮ್, ಅಪಹರಣ ನಾಟಕವಾಡಿ ತಂದೆಯಿಂದಲೇ ಹಣ ಪಡೆದು ಸಾಲ ತೀರಿಸಲು ಪ್ಲಾನ್ ಮಾಡಿದ್ದಾನೆ.

ಅದರಂತೆ ಕಳೆದ ಭಾನುವಾರ ರಾತ್ರಿ ಸ್ನೇಹಿತರನ್ನು ಭೇಟಿ ಮಾಡಿ ಬರುವುದಾಗಿ ಹೇಳಿ ಹೊರಟ ಮಕ್ತಮ್ ವಾಪಸು ಬಂದಿರಲಿಲ್ಲ. ಆ ಬಳಿಕ ಸೋಮವಾರ ಮಧ್ಯಾಹ್ನದ ವರೆಗೂ ಮಕ್ತಮ್ ಮನೆಗೆ ಬಂದಿರಲಿಲ್ಲ. ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ತನ್ನ ತಂದೆಯ ಮೊಬೈಲ್‌ಗೆ ವಾಯ್ಸ್ ಸಂದೇಶ ಕಳುಹಿಸಿ, ನನ್ನನ್ನು ಅಪಹರಣಕಾರರು ಅಪಹರಿಸಿದ್ದಾರೆ. ಐದು ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಹೇಳಿದ್ದ. ಇದರಿಂದ ಗಾಬರಿಗೊಂಡ ಗಣಿಸಾಬ್ ವಾಯ್ಸ್ ಸಂದೇಶ ಆಧರಿಸಿ ಮಹಾಲಕ್ಷ್ಮೀ ಲೇಔಟ್ ಪೊಲೀಸರಿಗೆ ದೂರು ನೀಡಿದ್ದರು. ದೂರನ್ನಾಧರಿಸಿ ತನಿಖೆ ಆರಂಭಿಸಿದ ಮಹಾಲಕ್ಷ್ಮೀ ಲೇಔಟ್ ಪೊಲೀಸರು, ಮಕ್ತಮ್‌ನ ಸ್ನೇಹಿತರು, ಮೊಬೈಲ್ ಟವರ್ ಲೊಕೇಷನ್ ಆಧರಿಸಿ ಪತ್ತೆ ಮಾಡಲು ಯತ್ನಿಸಿದ್ದಾರೆ. ಮಕ್ತಮ್ ಬಾಡಿಗೆ ಪಡೆದಿದ್ದ ಜೂಮ್ ಕಾರಿನ ವಿವರ ಕಲೆ ಹಾಕಿ ತಿರುಪತಿಯ ಲಾಡ್ಜ್ ನಲ್ಲಿ ಇರುವುದು ಗೊತ್ತಾಗಿದೆ. ಅಲ್ಲಿಗೆ ತೆರಳಿದ ಪೊಲೀಸರು ಮಕ್ತಮ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಬೆಂಗಳೂರಿಗೆ ಕರೆತಂದಿದ್ದಾರೆ.

ತನ್ನ ಪ್ರೇಯಸಿಗಾಗಿ ಸ್ನೇಹಿತರಿಂದ ಸಾಲ ಮಾಡಿದ್ದೆ. ಅದನ್ನು ತೀರಿಸಲು ಆಗಿರಲಿಲ್ಲ. ಸ್ನೇಹಿತರ ದ್ವಿಚಕ್ರ ವಾಹನ ಮತ್ತು ಕಾರನ್ನು ಫೈನಾನ್ಸ್ ಕಂಪನಿಯಲ್ಲಿ ಅಡವಿಟ್ಟಿದ್ದು, ಅದನ್ನು ಬಿಡಿಸಲು ಬೇರೆ ದಾರಿ ಕಾಣದೇ ಅಪಹರಣ ನಾಟಕವಾಡಿದೆ. ನಮ್ಮ ತಂದೆಯ ಬಳಿ ಹಣ ಪಡೆದು ಸಾಲ ತೀರಿಸಲು ಪ್ಲಾನ್ ಮಾಡಿದ್ದಾಗಿ ತಿಳಿಸಿದ್ದಾನೆ. ಮಕ್ತಮ್ ಹೇಳಿಕೆ ದಾಖಲಿಸಿಕೊಂಡಿರುವ ಮಹಾಲಕ್ಷ್ಮೀ ಲೇಔಟ್ ಪೊಲೀಸರು ಆತನನ್ನು ಪೋಷಕರಿಗೆ ಒಪ್ಪಿಸಿದ್ದಾರೆ. ಈ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಉತ್ತರ ವಿಭಾಗದ ಡಿಸಿಪಿ ಧಮೇಂದ್ರ ಕುಮಾರ್ ಮೀನಾ, ಮಕ್ತಮ್ ತನ್ನ ಪ್ರೇಯಸಿಗೆ ದುಬಾರಿ ಬೆಲೆಯ ಉಡುಗೊರೆ ಕೊಡಲು ಸಾಲ ಮಾಡಿದ್ದ. ಸಾಲ ತೀರಿಸಲು ಅಪಹರಣ ನಾಟಕವಾಡಿ ಜೂಮ್ ಕಾರ್ ಬಾಡಿಗೆ ಪಡೆದು ಆಂಧ್ರ ಪ್ರದೇಶಕ್ಕೆ ತೆರಳಿದ್ದಾನೆ. ಅಲ್ಲಿ ಲಾಡ್ಜ್ ನಲ್ಲಿ ತಂಗಿರುವುದನ್ನು ತಾಂತ್ರಿಕ ಸಾಕ್ಷಾಧಾರ ಆಧರಿಸಿ ಪತ್ತೆ ಮಾಡಿ ಪೋಷಕರಿಗೆ ಒಪ್ಪಿಸಿದ್ದೇವೆ ಎಂದು ತಿಳಿಸಿದ್ದಾರೆ. ದುರಂತವೆಂದರೆ, ಮಕ್ತುಮ್‌ನ ಪ್ರೇಯಿಸಿ ಅಪಘಾತದಲ್ಲಿ ಕೆಳ ತಿಂಗಳ ಹಿಂದೆ ಸಾವನ್ನಪ್ಪಿರುವ ಕಥೆ ಕೇಳಿ ಪೊಲೀಸರೇ ದಂಗಾಗಿದ್ದಾರೆ.

Bangalore Youth Borrows loan of 5 lakhs for his lover, girls dies by accident boy creates drama to repay money caught by Bengaluru police.