ಅಪ್ರಾಪ್ತ ಯುವತಿಯ ಅತ್ಯಾಚಾರ, ಗರ್ಭಪಾತ ; ಕಡಬ ಪೊಲೀಸ್ ಪೇದೆ ಪೋಕ್ಸೋ ಕಾಯ್ದೆಯಡಿ ಅರೆಸ್ಟ್

28-09-21 02:12 pm       Mangaluru Correspondent   ಕ್ರೈಂ

 ಅಪ್ರಾಪ್ತ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದಲ್ಲದೆ ಆಕೆ ಗರ್ಭಿಣಿಯಾದಾಗ ಗರ್ಭಪಾತ ಮಾಡಿಸಿದ ಪ್ರಕರಣದಲ್ಲಿ ಕಡಬ ಪೊಲೀಸ್ ಠಾಣೆಯ ಪೇದೆಯನ್ನು ಬಂಧಿಸಿದ್ದಾರೆ. ‌

ಪುತ್ತೂರು, ಸೆ.28: ಅಪ್ರಾಪ್ತ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದಲ್ಲದೆ ಆಕೆ ಗರ್ಭಿಣಿಯಾದಾಗ ಗರ್ಭಪಾತ ಮಾಡಿಸಿದ ಪ್ರಕರಣದಲ್ಲಿ ಆರೋಪಿ ಕಡಬ ಪೊಲೀಸ್ ಠಾಣೆಯ ಪೇದೆಯನ್ನು ಅದೇ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ‌

ಯುವತಿ ತಂದೆ ಕಡಬ ಠಾಣೆಗೆ ದೂರು ನೀಡಿ ಶಿವರಾಜ್‌ ವಿರುದ್ಧ ಪ್ರಕರಣ ದಾಖಲಿಸಲು ಕೇಳಿಕೊಂಡಿದ್ದರು. ಈ ಹಿಂದೆ ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತೆಯಾಗಿದ್ದ ನನ್ನ ಮಗಳು ಅಪ್ರಾಪ್ತೆಯಾಗಿದ್ದು, ಆಕೆಯನ್ನು ತನ್ನ ಕಾಮದಾಟಕ್ಕೆ ಬಳಸಿಕೊಂಡ ಶಿವರಾಜ್ ವಿರುದ್ಧ ಕ್ರಮ ಜರುಗಿಸಲು ಒತ್ತಾಯಿಸಿದ್ದರು. ಮಗಳನ್ನು ಗರ್ಭಿಣಿಯಾಗಿಸಿದ್ದಲ್ಲದೆ, ಆಕೆಯನ್ನು ಮಂಗಳೂರಿಗೆ ಕರೆದೊಯ್ದು ಗರ್ಭಪಾತ ನಡೆಸಲು ಶಿವರಾಜನೇ ಹಣ ನೀಡಿದ್ದಾನೆ ಎಂದು ಯುವತಿಯ ತಂದೆ ದೂರಿನಲ್ಲಿ ಅಪಾದಿಸಿದ್ದರು. ಈ ಬಗ್ಗೆ ದೂರು ಪಡೆದ ಪೊಲೀಸರು ಆರೋಪಿ ಶಿವರಾಜ್ ವಿರುದ್ಧ ಅತ್ಯಾಚಾರ ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ. 

ನಾನು ಮತ್ತು ನನ್ನ ಪತ್ನಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದೇವೆ. ಎರಡು ವರ್ಷಗಳ ಹಿಂದೆ ನನ್ನ ಮಗಳು ಅತ್ಯಾಚಾರಕ್ಕೊಳಗಾಗಿ ಆರು ತಿಂಗಳ ಹಿಂದೆ ಪ್ರಕರಣ ಮುಗಿದಿದೆ. ಆದರೆ ಈ ನಡುವೆ, ಮಗಳ ಪರಿಚಯ ಮಾಡಿಕೊಂಡ ಪೊಲೀಸ್ ಶಿವರಾಜ್, ಇಲ್ಲ ಸಲ್ಲದ ಕಾರಣಗಳನ್ನು ಹೇಳಿಕೊಂಡು ಮನೆಗೆ ಬರುತ್ತಿದ್ದ. ನನ್ನ ಮಗಳ ಜೊತೆ ಸಲುಗೆಯಿಂದ ವರ್ತಿಸುತ್ತಿದ್ದು ನನ್ನ ಗಮನಕ್ಕೆ ಬಂದಿತ್ತು. ಆದರೆ, ಇತ್ತೀಚೆಗೆ ಮಗಳ ದೈಹಿಕ ಬೆಳವಣಿಗೆಯಲ್ಲಿ ಬದಲಾವಣೆಗಳಾಗಿದ್ದು ಗರ್ಭಿಣಿಯಾಗಿರುವುದು ಕಂಡು ಬಂದು ಈ ಬಗ್ಗೆ ಪ್ರಶ್ನಿಸಿದಾಗ ಶಿವರಾಜ್‌ನಿಂದಾಗಿ ಗರ್ಭವತಿಯಾಗಿರುವುದನ್ನು ಮಗಳು ಒಪ್ಪಿಕೊಂಡಿದ್ದಳು. ಈ ಬಗ್ಗೆ ಶಿವರಾಜ್‌ನನ್ನು ವಿಚಾರಿಸಿದಾಗ ತಾನು ಯುವತಿಯನ್ನು ಮದುವೆಯಾಗುವುದಾಗಿ ಹೇಳಿದ್ದ. ಆದರೆ ಇತ್ತೀಚೆಗೆ ನಾನು ಮದುವೆಯಾಗುವುದಿಲ್ಲ, ಗರ್ಭಪಾತ ಮಾಡಿಸುತ್ತೇನೆ, ಅದಕ್ಕೆ ನಾನೇ ಖರ್ಚು ಭರಿಸುತ್ತೇನೆ ಎಂದು ಹೇಳಿದ್ದಾಗಿ ಸಂತ್ರಸ್ತ ಯುವತಿಯ ತಂದೆ ದೂರಿನಲ್ಲಿ ತಿಳಿಸಿದ್ದರು.

ಬಳಿಕ ನಡೆದ ಬೆಳವಣಿಗೆಯಲ್ಲಿ 18-09-21ರಂದು ನನ್ನ ಪತ್ನಿ ಹಾಗೂ ಮಗಳು ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ಮನೆಗೆ ಬಂದಿಲ್ಲ. ಪತ್ನಿ ನನಗೆ ದೂರವಾಣಿ ಮೂಲಕ ಮಾತನಾಡಿ ಮಗಳಿಗೆ ಅಬಾರ್ಷನ್ ಮಾಡಿಸಲಾಗಿದೆ. ಅದಕ್ಕೆ ಬೇಕಾದ ಖರ್ಚಿನ ಬಾಬ್ತು 35 ಸಾವಿರ ರೂ.ಗಳನ್ನು ಆನ್‌ಲೈನ್ ಮುಖಾಂತರ ಶಿವರಾಜ್ ಭರಿಸಿದ್ದಾನೆ ಎಂದು ಹೇಳಿದ್ದಾಳೆ. ನನ್ನ ಮಗಳು ಹಾಗೂ ಪತ್ನಿಯನ್ನು ಆರೋಪಿ ಶಿವರಾಜ್ ನಿಗೂಢ ಜಾಗದಲ್ಲಿ ಇರಿಸಿದ್ದು, ಅವರನ್ನು ಪತ್ತೆ ಹಚ್ಚಿ, ಶಿವರಾಜ್ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಸುದ್ದಿಯಾಗುತ್ತಿದ್ದಂತೆ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನಾವಣೆ ಕಡಬ ಠಾಣೆಗೆ ಆಗಮಿಸಿದ್ದು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲು ಸೂಚಿಸಿದ್ದರು. ಇದೇ ವೇಳೆ, ಹಿಂದು ಸಂಘಟನೆಯ ಮುಖಂಡರು ಕಡಬ ಠಾಣೆಗೆ ದೂರು ನೀಡಿದ್ದು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಯನ್ನು ಸೇವೆಯಿಂದ ವಜಾ ಮಾಡಬೇಕು. ತಪ್ಪಿದ್ದಲ್ಲಿ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.

Mangalore Kadaba police constable arrested over rape charges. The arrested has been identified as Shivaraj. He raped her and threatened her to abort the baby. Shivaraj, has been arrested based on complaint filed by the father of the girl in Kadaba police station. In the meanwhile, a social service organization from Kadaba, Neeti, handed over a complaint to the chief minister in Bengaluru on this issue, seeking action against the accused.