ಪೆಟ್ರೋಲ್ ಪಂಪ್ ಮ್ಯಾನೇಜರ್ ಮೇಲೆ ಹಲ್ಲೆಗೈದು 4.20 ಲಕ್ಷ ಹಣ ಸುಲಿಗೆ ; ಸ್ವಿಗ್ಗಿ ಸೋಗಿನಲ್ಲಿದ್ದ ಆಗಂತುಕರು

28-09-21 05:58 pm       Mangaluru Correspondent   ಕ್ರೈಂ

ಬ್ಯಾಂಕಿಗೆ ಹಣ ಕಟ್ಟಲು ತೆರಳುತ್ತಿದ್ದ ಪೆಟ್ರೋಲ್ ಪಂಪ್ ಮ್ಯಾನೇಜರ್ ಮೇಲೆ ಹಲ್ಲೆಗೈದು 4.20 ಲಕ್ಷ ರೂಪಾಯಿ ಹಣವನ್ನು ಸುಲಿಗೆ ಮಾಡಿಕೊಂಡು ಹೋದ ಘಟನೆ ನಗರದ ಚಿಲಿಂಬಿಯಲ್ಲಿ ನಡೆದಿದೆ.

ಮಂಗಳೂರು, ಸೆ.28: ಬ್ಯಾಂಕಿಗೆ ಹಣ ಕಟ್ಟಲು ತೆರಳುತ್ತಿದ್ದ ಪೆಟ್ರೋಲ್ ಪಂಪ್ ಮ್ಯಾನೇಜರ್ ಮೇಲೆ ಹಲ್ಲೆಗೈದು 4.20 ಲಕ್ಷ ರೂಪಾಯಿ ಹಣವನ್ನು ಸುಲಿಗೆ ಮಾಡಿಕೊಂಡು ಹೋದ ಘಟನೆ ನಗರದ ಚಿಲಿಂಬಿಯಲ್ಲಿ ನಡೆದಿದೆ.

ನಗರದ ಗಾಂಧಿ ನಗರದ ಆಶೀರ್ವಾದ್ ಪೆಟ್ರೋಲ್ ಪಂಪ್ ಮ್ಯಾನೇಜರ್ ಭೋಜಪ್ಪ (57) ಮಧ್ಯಾಹ್ನ 12.30ರ ಸುಮಾರಿಗೆ ಚಿಲಿಂಬಿಯ ಸಾರಸ್ವತ್ ಬ್ಯಾಂಕ್ ಶಾಖೆಗೆ ನಗದು ಕಟ್ಟಲೆಂದು 4.20 ಲಕ್ಷ ಹಣವನ್ನು ಬ್ಯಾಗಿನಲ್ಲಿ ಇಟ್ಟು ಬೈಕಿನಲ್ಲಿ ತೆರಳುತ್ತಿದ್ದರು. ಈ ವೇಳೆ, ಭೋಜಪ್ಪ ಚಿಲಿಂಬಿಯಲ್ಲಿ ಬೈಕನ್ನು ಯು ಟರ್ನ್ ಮಾಡಿ ಬರುತ್ತಿದ್ದಾಗ ಅಲ್ಲಿ ಸ್ವಿಗ್ಗಿ ಟೀ ಶರ್ಟ್ ಹಾಕ್ಕೊಂಡು ಬೈಕಿನಲ್ಲಿ ನಿಂತಿದ್ದ ಇಬ್ಬರು ಕ್ರಿಕೆಟ್ ಬ್ಯಾಟಿನಲ್ಲಿ ಹಲ್ಲೆ ನಡೆಸಿದ್ದಾರೆ.

ಭೋಜಪ್ಪ ಅವರ ತಲೆ, ಭುಜಕ್ಕೆ ಬ್ಯಾಟಿನಲ್ಲಿ ಪೆಟ್ಟು ನೀಡಿದ್ದು, ಅವರಲ್ಲಿದ್ದ ಹಣದ ಗಂಟನ್ನು ಕಿತ್ತುಕೊಂಡು ಬೈಕಿನಲ್ಲಿ ಪರಾರಿಯಾಗಿದ್ದಾರೆ. ಭೋಜಪ್ಪ ತಲೆಗೆ ಹೆಲ್ಮೆಟ್ ಹಾಕಿದ್ದರಿಂದ ಅಪಾಯದಿಂದ ಬಚಾವ್ ಆಗಿದ್ದಾರೆ. ಇಲ್ಲದಿದ್ದರೆ ತಲೆಗೆ ಪೆಟ್ಟು ಬಿದ್ದು ಅಪಾಯಕ್ಕೀಡಾಗುತ್ತಿದ್ದರು. ಭೋಜಪ್ಪ ಅವರು ಸೋಮವಾರ ಪೆಟ್ರೋಲ್ ಪಂಪಿನಲ್ಲಿ ಕಲೆಕ್ಷನ್ ಆಗಿದ್ದ 7.50 ಲಕ್ಷ ನಗದನ್ನು ಬ್ಯಾಂಕಿಗೆ ತೆರಳಿ ಕಟ್ಟಿದ್ದರು. ಇಂದು ಮಧ್ಯಾಹ್ನ ಅದೇ ರೀತಿ ಹಣ ಕಟ್ಟುವುದಕ್ಕಾಗಿ ಬ್ಯಾಂಕಿಗೆ ತೆರಳುತ್ತಿದ್ದಾಗ ಆಗಂತುಕರು ಮೊದಲೇ ಹೊಂಚು ಹಾಕಿದ್ದು ಹಲ್ಲೆಗೈದು ಹಣವನ್ನು ದರೋಡೆ ನಡೆಸಿದ್ದಾರೆ.

ಪೆಟ್ರೋಲ್ ಪಂಪ್ ಅಥವಾ ಬ್ಯಾಂಕ್ ಶಾಖೆಯಿಂದ ಈ ಬಗ್ಗೆ ಮಾಹಿತಿ ಸೋರಿಕೆಯಾಗಿದ್ದರಿಂದಲೇ ಕೃತ್ಯ ನಡೆದಿದೆ ಎನ್ನಲಾಗುತ್ತಿದೆ. ಉರ್ವಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಶೋಧ ನಡೆಸುತ್ತಿದ್ದಾರೆ. 

Mangalore Robbers snatch 4.20 lakhs cash from two after assaulting them with cricket bat near Chilimbi. The two were attacked by two persons who came on bike. Robbers had worn swiggy t-shirt. A case has been registered at the Urwa Police station.