ಮಾವನೆಂದು ನಂಬಿ ಕೆಟ್ಟ ಫೊಟೋಗ್ರಾಫರ್ ! ನೋಡಿಕೊಳ್ಳಲು ಕೊಟ್ಟಿದ್ದ ಜಮೀನನ್ನೇ ಮಾರಿದ್ದ ಧೂರ್ತ! ಮನೆಗೆ ಬಂದವನಿಗೆ ಊಟ ಕೊಟ್ಟು ಚಟ್ಟ ಕಟ್ಟಿದ್ದ !!

30-11-21 11:03 pm       Mangaluru Correspondent   ಕ್ರೈಂ

ಜಾಗದ ಮೇಲೆ ಪವರ್ ಆಫ್ ಅಟಾರ್ನಿಯನ್ನೂ ಕೊಡಿಸಿದ್ದ. ಸಂಬಂಧದಲ್ಲಿ ಮಾವನೇ ಆಗಿದ್ದರಿಂದ ತುಸು ಹೆಚ್ಚೇ ನಂಬಿಕೆ ಇರಿಸಿ, ಮಧ್ಯಾಹ್ನ ಆತನ ಮನೆಗೇ ಊಟಕ್ಕೂ ಹೋಗಿದ್ದ. ಆದರೆ, ತಾನು ನಂಬಿದ್ದ ಮಾವನೇ ಅಳಿಯನಾಗುವ ವ್ಯಕ್ತಿಗೇ ಚಟ್ಟವನ್ನೇ ಕಟ್ಟಿದ್ದ !

ಪುತ್ತೂರು, ನ.30: ನಂಬಿಕಸ್ಥ ವ್ಯಕ್ತಿಯೆಂದು ಆತ ಎಲ್ಲವನ್ನೂ ನಂಬಿದ್ದ. ಹೊಸತಾಗಿ ಜಾಗವನ್ನು ಖರೀದಿಸಿ ಅದನ್ನು ನೋಡಿಕೊಳ್ಳಲೆಂದು ಕೊಟ್ಟಿದ್ದ. ಅಷ್ಟೇ ಅಲ್ಲಾ, ಜಾಗದ ಮೇಲೆ ಪವರ್ ಆಫ್ ಅಟಾರ್ನಿಯನ್ನೂ ಕೊಡಿಸಿದ್ದ. ಸಂಬಂಧದಲ್ಲಿ ಮಾವನೇ ಆಗಿದ್ದರಿಂದ ತುಸು ಹೆಚ್ಚೇ ನಂಬಿಕೆ ಇರಿಸಿ, ಮಧ್ಯಾಹ್ನ ಆತನ ಮನೆಗೇ ಊಟಕ್ಕೂ ಹೋಗಿದ್ದ. ಆದರೆ, ತಾನು ನಂಬಿದ್ದ ಮಾವನೇ ಅಳಿಯನಾಗುವ ವ್ಯಕ್ತಿಗೇ ಚಟ್ಟವನ್ನೇ ಕಟ್ಟಿದ್ದ !  

ಹೌದು.. ಪುತ್ತೂರಿನಲ್ಲಿ ವಾರದ ಹಿಂದೆ ಬೆಳಕಿಗೆ ಬಂದ ಮೈಸೂರಿನ ಫೋಟೋಗ್ರಾಫರ್ ಕೊಲೆ ಪ್ರಕರಣದ ಹಿಂದಿನ ಮಿಸ್ಟರಿ ಒಂದೊಂದಾಗಿ ಹೊರಬಿದ್ದಿದೆ. ಮೈಸೂರಿನಲ್ಲಿ ಫೋಟೋಗ್ರಾಫರ್ ಆಗಿ ಹೆಸರು ಮಾಡಿದ್ದ ಮಂಗಳೂರು ಮೂಲದ ಜಗದೀಶ್ ಎಂಬವರು ನ.18ರಂದು ಪುತ್ತೂರಿಗೆ ಬಂದವರು ನಾಪತ್ತೆಯಾಗಿದ್ದರು. ಆನಂತರ, ಜಗದೀಶ್ ಸೋದರನ ದೂರಿನಂತೆ ಪುತ್ತೂರು ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ನಡೆಸಿದಾಗ, ಕೊಲೆ ಪ್ರಕರಣ ಬೆಳಕಿಗೆ ಬಂದಿತ್ತು. ನ.24ರಂದು ಪುತ್ತೂರಿನ ಈಶ್ವರಮಂಗಲದ ಬಳಿಯ ಕಾಡಿನಲ್ಲಿ ಜಗದೀಶ್ ಅವರನ್ನು ಕೊಲೆಗೈದು ಹೂತು ಹಾಕಿದ್ದು ಬಯಲಾಗಿತ್ತು.

ಪ್ರಕರಣದಲ್ಲಿ ಪೊಲೀಸರು ನಾಲ್ವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಕೊಲೆಯ ಹಿಂದಿನ ಕಾರಣವೂ ಬಯಲಾಗಿದೆ. ಸಂಬಂಧದಲ್ಲಿ ಮಾವ ಆಗಬೇಕಿದ್ದ ಬಾಲಕೃಷ್ಣ ರೈ, ನಂಬಿಕೆಯಿರಿಸಿ ನೋಡಿಕೊಳ್ಳಲು ಕೊಟ್ಟಿದ್ದ ಜಾಗವನ್ನೇ ಮಾರಲು ಹೋಗಿದ್ದೇ ಕೊಲೆಗೆ ಕಾರಣ ಅನ್ನೋ ವಿಚಾರ ಬೆಳಕಿಗೆ ಬಂದಿದೆ. ಜಗದೀಶ್ ನಾಲ್ಕು ವರ್ಷಗಳ ಹಿಂದೆ ಪುತ್ತೂರಿನ ಆರ್ಯಾಪು ಗ್ರಾಮದ ಕುಂಜೂರುಪಂಜದಲ್ಲಿ ಮತ್ತು ಪಡುವನ್ನೂರು ಗ್ರಾಮದ ಪಡ್ಲಡ್ಕದಲ್ಲಿ ತಲಾ ಎರಡೂವರೆ ಎಕ್ರೆ ಜಮೀನು ಖರೀದಿಸಿದ್ದರು. ಪಟ್ಲಡ್ಕದಲ್ಲಿ ಖರೀದಿಸಿದ್ದ ಭೂಮಿಯನ್ನು ಮಾವ ಬಾಲಕೃಷ್ಣ ರೈ ಯಾನೆ ಸುಬ್ಬಯ್ಯ ರೈ ಅಲ್ಲಿಯೇ ಹತ್ತಿರದ ನಿವಾಸಿಯೆಂದು ಅವರಿಗೆ ನೋಡಿಕೊಳ್ಳಲು ಬಿಡಲಾಗಿತ್ತು. ಅಲ್ಲದೆ, ಜಾಗದ ಪವರ್ ಆಫ್ ಅಟಾರ್ನಿಯನ್ನೂ ಕೊಟ್ಟು ಕೃಷಿ ಮಾಡಲು ಹೇಳಿದ್ದರು.

ಈ ನಡುವೆ, ಜಾಗವನ್ನು ತನ್ನ ಹೆಸರಿಗೆ ಮಾಡಿಸಲು ಜಗದೀಶ್ ಶೆಟ್ಟಿ ಪುತ್ತೂರಿಗೆ ಬಂದು ಪ್ರಯತ್ನ ಮಾಡಿದ್ದರೂ, ಅದು ಸಾಧ್ಯವಾಗಿರಲಿಲ್ಲ. ರಜೆಯಲ್ಲಿ ಜಗದೀಶ್ ಪ್ರತಿ ಬಾರಿ ಪತ್ನಿಯ ಜೊತೆಗೆ ಪುತ್ತೂರಿನ ಜಾಗವನ್ನು ನೋಡಲೆಂದು ಓಮ್ನಿ ಕಾರಿನಲ್ಲಿ ಬಂದು ಹೋಗುತ್ತಿದ್ದರು. ಮೈಸೂರಿನ ಸುಬ್ರಹ್ಮಣ್ಯ ಪುರದಲ್ಲಿ ನೆಲೆಸಿದ್ದರೂ, ತಿಂಗಳಿಗೊಮ್ಮೆ ಊರಿಗೆ ಬರುತ್ತಿದ್ದಾಗ ಪುತ್ತೂರಿಗೆ ಹೋಗಿ ಬರುತ್ತಿದ್ದರು. ಈ ಬಾರಿಯೂ ಅದೇ ರೀತಿ, ಜಾಗವನ್ನು ನೋಡಲೆಂದು ಜಗದೀಶ್ ಒಬ್ಬಂಟಿಯಾಗೇ ಬಂದಿದ್ದಾರೆ. ಕಾರನ್ನು ಬಿಟ್ಟು ಬಸ್ಸಿನಲ್ಲಿಯೇ ಬಂದು ಕಾವುನಲ್ಲಿ ಇಳಿದು ಮೊದಲಿಗೆ ಕುಂಜೂರುಪಂಜಕ್ಕೆ ತೆರಳಿದ್ದಾರೆ. ಆಬಳಿಕ ಪಡುವನ್ನೂರು ಗ್ರಾಮದ ಪಟ್ಲಡ್ಕದ ಬಾಲಕೃಷ್ಣ ರೈ ಮನೆಗೆ ತೆರಳಿದ್ದಾರೆ. ಅಲ್ಲಿ ಅವರೊಂದಿಗೆ ಮಧ್ಯಾಹ್ನದ ಊಟವನ್ನೂ ಮಾಡಿದ್ದ ಜಗದೀಶ್, 2.30ಕ್ಕೆ ಪತ್ನಿ ಫೋನ್ ಮಾಡಿದ್ದಾಗ ಇನ್ನು ಕೆಲವೇ ಕ್ಷಣದಲ್ಲಿ ಮೈಸೂರಿಗೆ ಹೊರಡುತ್ತೇನೆ ಎಂದು ಹೇಳಿದ್ದರು. ಆದರೆ, ಹೀಗೆ ಹೇಳಿದ್ದ ಜಗದೀಶ್ ಫೋನ್ ಸ್ವಿಚ್ ಆಫ್ ಆಗಿತ್ತು. ಮೈಸೂರಿಗೆ ಬರದೇ ಜಗದೀಶ್ ನಾಪತ್ತೆಯಾಗಿದ್ದರು.

ಮೈಸೂರು, ಬೆಂಗಳೂರಿನಲ್ಲಿ ಮೊಬೈಲ್ ಟ್ರೇಸ್

ಮರುದಿನ ಬೆಳಗ್ಗೆ ಬಾಲಕೃಷ್ಣ ರೈ ಅವರಲ್ಲಿ ಪತ್ನಿ ಶರ್ಮಿಳಾ ಕೇಳಿದಾಗ, ಜಗದೀಶ ನಿನ್ನೆಯೇ ಮೈಸೂರಿಗೆ ತೆರಳಿದ್ದಾನೆಂದು ಹೇಳಿದ್ದರು. ಮಿಸ್ಸಿಂಗ್ ಆಗಿದ್ದರಿಂದ ಪೊಲೀಸರಿಗೆ ದೂರು ನೀಡಲಾಗಿತ್ತು. ಪೊಲೀಸರು ಮೊಬೈಲ್ ಟ್ರೇಸ್ ಮಾಡಿದಾಗ, ಅದು ಮೈಸೂರಿನಲ್ಲಿ ಲೊಕೇಶನ್ ತೋರಿಸಿದ್ದು ಮತ್ತಷ್ಟು ಶಂಕೆಗೆ ಕಾರಣವಾಗಿತ್ತು. ಆನಂತರ, ಮೊಬೈಲ್ ಬೆಂಗಳೂರು ದಾರಿಯಲ್ಲಿ ಹೋಗಿದ್ದು ಲೊಕೇಶನ್ ಕಾಣಿಸಿತ್ತು. ಹೀಗಾಗಿ ಜಗದೀಶ್ ಮೈಸೂರಿನಿಂದ ಬೆಂಗಳೂರಿಗೆ ತೆರಳಿದ್ದಾರೆಯೇ ಅನ್ನುವ ಸಂಶಯ ಬಂದಿತ್ತು. ಆಮೇಲೆ ನೋಡಿದರೆ, ತನಿಖೆಯ ದಿಕ್ಕು ತಪ್ಪಿಸಲು ಮೊಬೈಲನ್ನು ಮೈಸೂರಿನಿಂದ ಬೆಂಗಳೂರಿಗೆ ತೆರಳುವ ಲಾರಿಯಲ್ಲಿ ಹಾಕಲಾಗಿತ್ತು ಅನ್ನೋದು ತನಿಖೆಯಲ್ಲಿ ಕಂಡುಬಂದಿದೆ.

ತಲೆಗೆ ಸುತ್ತಿಗೆಯಿಂದ ಹೊಡೆದು ಕೊಂದಿದ್ದರು !

ಬಾಲಕೃಷ್ಣ ರೈ ಅವರ ಮನೆಯಲ್ಲಿ ಮಾತನಾಡುತ್ತಿದ್ದಾಗಲೇ, ಅಲ್ಲಿನ ಎರಡೂವರೆ ಎಕ್ರೆ ಜಾಗವನ್ನು 35 ಲಕ್ಷ ರೂ.ಗೆ ಬೇರೊಬ್ಬ ವ್ಯಕ್ತಿಗೆ ಮಾರಾಟ ಮಾಡಿದ್ದು ಜಗದೀಶ್ ಅವರಿಗೆ ತಿಳಿದುಬಂದಿತ್ತು. ಅದರಂತೆ ಜಗದೀಶ್ ಹಣವನ್ನು ನೀಡುವಂತೆ ಕೇಳಿದ್ದು, ಅದಕ್ಕಾಗಿ ಬಾಲಕೃಷ್ಣ ರೈ ಮೊದಲೇ ಕೊಲೆಗೆ ಪ್ಲಾನ್ ಮಾಡಿದ್ದ. ತನ್ನ ಮಗ ಪ್ರಶಾಂತ್ ಮತ್ತು ನೆರೆಮನೆಯ ನಿವಾಸಿ ಜೀವನ್ ಪ್ರಸಾದ್ ಬಳಿ ಈ ಬಗ್ಗೆ ಮೊದಲೇ ಹೇಳಿದ್ದರು. ಜೀವನ್ ಬಳಿಯಿದ್ದ ಕಾರಿನಲ್ಲಿ ಪುತ್ತೂರಿಗೆಂದು ಜಗದೀಶ್ ಗೆ ಹಣ ಕೊಡಲೆಂದು ಜೊತೆಗೆ ನಾಲ್ವರೂ ಬಂದಿದ್ದು, ಕಾರಿನಲ್ಲಿ ಹೋಗುತ್ತಲೇ ಸುತ್ತಿಗೆಯಿಂದ ತಲೆಗೆ ಬಡಿದಿದ್ದಾರೆ. ಆನಂತರ, ಚೂರಿಯಿಂದ ಹೊಟ್ಟೆಗೆ ತಿವಿದು ಕಾರಿನಲ್ಲಿಯೇ ಜಗದೀಶ ಅವರನ್ನು ಕೊಲೆ ಮಾಡಿದ್ದಾರೆ. ಕೊಲೆಗೈದು ಶವವನ್ನು ಮರಳಿ ಮನೆಗೇ ಒಯ್ದಿದ್ದು, ಮರುದಿನ ಮನೆಯಿಂದ ಮುನ್ನೂರು ಮೀಟರ್ ದೂರದಲ್ಲಿರುವ ಸರಕಾರಿ ಕಾಡಿನಲ್ಲಿ ಗುಂಡಿ ತೆಗೆದು ಹೂತು ಹಾಕಿದ್ದಾರೆ. ಅಲ್ಲಿಗೆ ಜಗದೀಶನ ಕತೆ ಮುಗಿದೇ ಹೋಯ್ತು ಎಂದು ಬಾಲಕೃಷ್ಣ ರೈ ತಮ್ಮ ಪಾಡಿಗೆ ಇದ್ದರು.

ಆದರೆ, ಜಗದೀಶ್ ಅವರ ಸೋದರ ಶಶಿಧರ್, ಮಾವ ಬಾಲಕೃಷ್ಣ ರೈ ಮನೆಯವರ ಬಗ್ಗೆಯೇ ಸಂಶಯ ವ್ಯಕ್ತಪಡಿಸಿದ್ದರು. ಜಾಗದ ಮಾರಾಟ ವಿಚಾರ ತಿಳಿಯದೇ ಇದ್ದರೂ, ಅವರ ಮನೆಗೆ ಹೋಗಿದ್ದಾಗಲೇ ನಾಪತ್ತೆಯಾಗಿದ್ದರಿಂದ ಆತನಿಗೆ ಮಾಹಿತಿ ಇರಬಹುದು ಎಂದು ಪೊಲೀಸರಲ್ಲಿ ತನಿಖೆ ನಡೆಸುವಂತೆ ಒತ್ತಡ ಹೇರಿದ್ದರು. ಪೊಲೀಸರು ಬಾಲಕೃಷ್ಣ ರೈ ಮತ್ತು ಆತನ ಪತ್ನಿಯನ್ನು ವಿಚಾರಣೆ ನಡೆಸಿದಾಗ, ನಿಜ ವಿಚಾರ ಹೊರಬಿದ್ದಿದೆ. ಜಾಗದ ಮಾರಾಟದ ವಿಚಾರದಲ್ಲಿ ಕೊಲೆ ನಡೆದಿರುವುದನ್ನು ಆರೋಪಿಗಳು ಒಪ್ಪಿಕೊಂಡಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಸೆಲೆರಿಯೋ ಮತ್ತು ಆಲ್ಟೋ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೃತ್ಯಕ್ಕೆ ಸಂಚು ರೂಪಿಸಿದ್ದ ಹಳೆ ಅಪರಾಧಿ ಅಣಿಲೆ ಜಯಪ್ರಕಾಶ್ ಶೆಟ್ಟಿ ಸೇರಿದಂತೆ, ವಿಶ್ವಾಸವಿಟ್ಟು ಜಾಗ ಬಿಟ್ಟಿದ್ದವನನ್ನೇ ಕೊಂದುಬಿಟ್ಟ ಬಾಲಕೃಷ್ಣ ರೈ, ಆತನ ಪತ್ನಿ ಜಯಲಕ್ಷ್ಮಿ, ಮಗ ಪ್ರಶಾಂತ್, ನೆರೆಮನೆ ನಿವಾಸಿ ಜೀವನ್ ಪ್ರಸಾದ್ ಜೈಲು ಕಂಬಿ ಎಣಿಸುತ್ತಿದ್ದಾರೆ.

ಅಣಿಲೆ ಜಯರಾಜ್ ಶೆಟ್ಟಿ ಈ ಹಿಂದೆ ತಿಂಗಳಾಡಿಯ ಉಮೇಶ್ ರೈ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ. ಆನಂತರ, ಸೂಕ್ತ ಸಾಕ್ಷ್ಯ ಸಿಗದೆ ಪ್ರಕರಣದಲ್ಲಿ ಖುಲಾಸೆಗೊಂಡಿದ್ದು ಇದೀಗ ಆರೋಪಿಗಳಿಗೆ ನೆರವಿತ್ತ ಆರೋಪದಲ್ಲಿ ಮತ್ತೆ ಜೈಲು ಸೇರಿದ್ದಾನೆ. ಪ್ರಶಾಂತ್ ಸುಳ್ಯದಲ್ಲಿ ಸರ್ವಿಸ್ ಸ್ಟೇಶನ್ ಹೊಂದಿದ್ದರೆ, ಜೀವನ್ ಪ್ರಸಾದ್ ಸುಳ್ಯದಲ್ಲಿ ವಿಡಿಯೋ ಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದ. ಈಗ ಎಲ್ಲರೂ ಮಾಡಿದ್ದುಣ್ಣೋ ಮಹರಾಯ ಎನ್ನುವಂತೆ ಮಣ್ಣು ತಿನ್ನೋ ಕೆಲಸ ಮಾಡಿ ಜೇಲು ಸೇರಿದ್ದಾರೆ. ಮಾವನೆಂದು ಹೆಚ್ಚು ನಂಬಿಕೆ ಇರಿಸಿ, ಜಾಗವನ್ನೇ ಬಿಟ್ಟುಕೊಟ್ಟಿದ್ದ ಅಮಾಯಕ ಫೋಟೋಗ್ರಾಫರ್ ಜಗದೀಶ್ ಮಸಣ ಸೇರಿದ್ದಾರೆ. ಪುತ್ತೂರು ಗ್ರಾಮಾಂತರ ಪೊಲೀಸರು ಒಂದೇ ವಾರದಲ್ಲಿ ಕಾರ್ಯಾಚರಣೆ ನಡೆಸಿ, ಹಂತಕರ ಹೆಡೆಮುರಿ ಕಟ್ಟಿದ್ದಾರೆ.

ಮೈಸೂರಿನ ಫೋಟೊಗ್ರಾಫರ್ ನಾಪತ್ತೆ ಪ್ರಕರಣ ; ಪುತ್ತೂರಿನಲ್ಲಿ ತೋಟ ನೋಡಲು ಹೋಗಿದ್ದ ವೇಳೆ ಕೊಲೆ! ಹತ್ಯೆಗೈದು ಕಾಡಿನಲ್ಲಿ ಹೂತು ಹಾಕಿದ್ದ ಅತ್ತೆ, ಮಾವ !

The Puttur Rural Police arrested four persons said to be involved in the abduction and murder of a photographer from Mysuru. The police gave the names of the arrested persons as Balakrishna alias Subbaih Rai, his son Prashant, Prashant’s wife Jayalakshmi and their neighbour Jeevan Prasad. According to the police, the photographer, 58-year-old Jagadish, had taken a two-acre agriculture land in Aryapu village of Puttur taluk on lease three years ago and had allowed his uncle Balakrishna to cultivate it.