ನೆಲ್ಯಾಡಿಯಲ್ಲಿ ಪಿಗ್ಮಿ ಸಂಗ್ರಾಹಕ ದಿಢೀರ್ ನಾಪತ್ತೆ ; ಹಲವರಿಗೆ 50 ಲಕ್ಷಕ್ಕೂ ಹೆಚ್ಚು ಪಂಗನಾಮ! ಹಣ ದ್ವಿಗುಣದ ಆಮಿಷಕ್ಕೆ ಬಿದ್ದು ತಲೆಮರೆಸಿಕೊಂಡ್ನಾ ಆಸಾಮಿ ! 

19-01-22 02:58 pm       Mangalore Correspondent   ಕ್ರೈಂ

ನೆಲ್ಯಾಡಿಯ ಸಹಕಾರಿ ಸಂಘದಲ್ಲಿ ಪಿಗ್ಮಿ ಸಂಗ್ರಾಹಕನಾಗಿದ್ದ ಕೌಕ್ರಾಡಿ ಗ್ರಾಮದ ನಿವಾಸಿಯೊಬ್ಬ ದಿಢೀರ್ ನಾಪತ್ತೆಯಾಗಿರುವ ವಿಚಾರ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಪುತ್ತೂರು, ಜ.19 : ನೆಲ್ಯಾಡಿಯ ಸಹಕಾರಿ ಸಂಘದಲ್ಲಿ ಪಿಗ್ಮಿ ಸಂಗ್ರಾಹಕನಾಗಿದ್ದ ಕೌಕ್ರಾಡಿ ಗ್ರಾಮದ ನಿವಾಸಿಯೊಬ್ಬ ದಿಢೀರ್ ನಾಪತ್ತೆಯಾಗಿರುವ ವಿಚಾರ ಹಲವು ಅನುಮಾನಗಳಿಗೆ ಕಾರಣವಾಗಿದೆ. ಹಲವರಿಂದ ಲಕ್ಷಾಂತರ ರೂ. ಸಾಲ ಪಡೆದಿದ್ದು ಅದನ್ನು ಹಿಂತಿರುಗಿಸಲು ಸಾಧ್ಯವಾಗದೆ ತಪ್ಪಿಸಿಕೊಂಡಿದ್ದಾನೆ ಎನ್ನುವ ಶಂಕೆಯೂ ಕೇಳಿಬರುತ್ತಿದೆ.‌ ಕೌಕ್ರಾಡಿ ಗ್ರಾಮದ ದೋಂತಿಲ ಎಂಬಲ್ಲಿನ ನಿವಾಸಿ ಪ್ರವೀಣ್ ಕುಮಾರ್ ನಾಪತ್ತೆಯಾಗಿರುವ ವ್ಯಕ್ತಿಯಾಗಿದ್ದು ನೆಲ್ಯಾಡಿಯ ಹಲವರಲ್ಲಿ ಲಕ್ಷಾಂತರ ರೂ. ಕೈ ಸಾಲ ಮಾಡಿಕೊಂಡಿದ್ದ.‌

ಈ ಮಧ್ಯೆ ಪತ್ರಿಕೆಯೊಂದರ ವರದಿಗಾರನಿಗೆ ವಾಟ್ಸಪ್ ಕರೆ ಮಾಡಿದ್ದು ಬಿಹಾರದಲ್ಲಿದ್ದು ಛೋಟಾ ರಾಜನ್ ಗ್ಯಾಂಗ್‌ನವರು ಅಪಹರಿಸಿದ್ದಾರೆ ಎಂದು ಹೇಳಿಕೊಂಡಿದ್ದಾನೆ. ಪ್ರವೀಣ್‌ ಕುಮಾರ್‌ 10 ವರ್ಷಗಳಿಂದ ನೆಲ್ಯಾಡಿಯಲ್ಲಿ ಪಿಗ್ಮಿ ಸಂಗ್ರಾಹಕನಾಗಿದ್ದು, ಸ್ಥಳೀಯವಾಗಿ ಅಡಿಕೆ ವ್ಯಾಪಾರಿಗಳು, ಇತರ ವ್ಯಾಪಾರಸ್ಥರು, ಉದ್ಯಮಿಗಳು ಸೇರಿದಂತೆ ಹಲವರ ವಿಶ್ವಾಸ ಗಳಿಸಿದ್ದ. ಕೆಲವರ ಮಾಹಿತಿ ಪ್ರಕಾರ, ಹಲವಾರು ಮಂದಿಯಿಂದ ಲಕ್ಷಾಂತರ ರೂ. ಕೈ ಸಾಲ ಪಡೆದಿದ್ದು ಹಿಂತಿರುಗಿಸಲಾಗದೆ ಈಗ ನಾಪತ್ತೆಯಾಗಿದ್ದಾನೆ ಎನ್ನುವ ಮಾತು ಕೇಳಿಬರುತ್ತಿದೆ. 

ಅಲ್ಲದೆ, ಚಿಟ್‌ ಫಂಡ್‌ ಇಟ್ಟು ಅದರಲ್ಲೂ ದೋಖಾ ಮಾಡಿದ್ದು ಕೈಸಾಲ ಸೇರಿ ಅಂದಾಜು 50 ಲಕ್ಷಕ್ಕೂ ಹೆಚ್ಚು ಹಣ ಹಿಂತಿರುಗಿಸಬೇಕಿದ್ದು ಅದೇ ಉದ್ದೇಶದಿಂದ ತಲೆಮರೆಸಿಕೊಂಡಿದ್ದಾನೆಯೇ ಎಂಬ ಅನುಮಾನ ಬಂದಿದೆ. ಆರೋಪಿ ಜ.3ರಿಂದ ನಾಪತ್ತೆಯಾಗಿದ್ದು, ಮೊಬೈಲ್ ಸ್ವಿಚ್​​​ ಆಫ್ ಆಗಿತ್ತು. ಆನಂತರ ಕುಟುಂಬಸ್ಥರು ಹುಡುಕಾಟ ನಡೆಸಿ, ಕೊನೆಗೆ ಜ.8 ರಂದು ಉಪ್ಪಿನಂಗಡಿ ಠಾಣೆಗೆ ದೂರು ನೀಡಿದ್ದರು.‌ 

ಜ.18 ರಂದು ವ್ಯಕ್ತಿಯೊಬ್ಬರಿಗೆ ಕರೆ ಮಾಡಿ, ತಾನು ಬಿಹಾರದಲ್ಲಿರುವುದಾಗಿ ಹೇಳಿಕೊಂಡಿದ್ದ.‌ ಒಂದು ವರ್ಷದ ಹಿಂದೆ ಹಣ ದ್ವಿಗುಣಗೊಳಿಸುವ ಆಮಿಷವೊಡ್ಡಿ ಸಂಪರ್ಕ ಮಾಡಿತ್ತು. ಹಣ ದ್ವಿಗುಣದ ಹೆಸರಲ್ಲಿ ನನ್ನಿಂದ ಸುಮಾರು 35 ಲಕ್ಷ ರೂ., ಪಡೆದಿದ್ದಾರೆ. ಇದಕ್ಕೆ 70 ಲಕ್ಷ ರೂ. ವಾಪಸು ನೀಡುವುದಾಗಿ ಹೇಳಿ ಜ.3ರಂದು ನನ್ನನ್ನು ಶಿವಮೊಗ್ಗಕ್ಕೆ ಬರಲು ಹೇಳಿದ್ದರು. ಅದರಂತೆ ಶಿವಮೊಗ್ಗಕ್ಕೆ ಹೋಗಿದ್ದಾಗ ಅಲ್ಲಿಂದ ನನ್ನನ್ನು ಬಿಹಾರಕ್ಕೆ ಕರೆದುಕೊಂಡು ಹೋಗಿದ್ದಾರೆ. ಈಗ ನಾವು ಛೋಟಾ ರಾಜನ್ ಗ್ಯಾಂಗ್‌ನವರು ಎಂದು ಅವರು ನನ್ನಲ್ಲಿ ಹೇಳುತ್ತಿದ್ದು , ಅವರ ಕಣ್ಣು ತಪ್ಪಿಸಿ ಕರೆ ಮಾಡುತ್ತಿರುವುದಾಗಿ ಹೇಳಿದ್ದಾರೆ. ಆದರೆ ನೆಲ್ಯಾಡಿಯಲ್ಲಿ ಹಲವರಿಂದ ಲಕ್ಷಾಂತರ ರೂ. ಪಡೆದು ವಂಚಿಸಿದ್ದರಿಂದ ಪ್ರವೀಣ್ ಕುಮಾರ್‌ ನಾಪತ್ತೆ ಪ್ರಕರಣ ಅನುಮಾನಕ್ಕೂ ಕಾರಣವಾಗಿದೆ.  

ಪ್ರವೀಣ್ ಕುಮಾರ್ ನಾಪತ್ತೆಯಾದ ಎರಡು ದಿನದ ಬಳಿಕ ಆತನ ಕೋಣೆಯಲ್ಲಿ ಶಿವಮೊಗ್ಗಕ್ಕೆ ಚಿಕಿತ್ಸೆಗೆಂದು ಹೋಗುವುದಾಗಿ ಬರೆದಿದ್ದ ಚೀಟಿ ಪತ್ತೆಯಾಗಿತ್ತು. ಈ ಬಗ್ಗೆ ಸೋದರ ರವಿ ಬಳಿ ಕೇಳಿದಾಗ, ನರ ಸಂಬಂಧಿ ಕಾಯಿಲೆಗೆ ಪ್ರವೀಣ್ ಚಿಕಿತ್ಸೆ ಪಡೆಯುತ್ತಿದ್ದ. ಇದಕ್ಕಾಗಿ ಚಿಕಿತ್ಸೆಗೆ ಹೋಗಿರಬಹುದೆಂದು ಶಿವಮೊಗ್ಗಕ್ಕೆ ತೆರಳಿ ಹಲವು ಆಸ್ಪತ್ರೆಗಳಲ್ಲಿ ವಿಚಾರಿಸಿದ್ದೇವೆ. ಯಾವುದೇ ಸುಳಿವು ಸಿಗಲಿಲ್ಲ. ಆನಂತರ ಪೊಲೀಸ್ ದೂರು ನೀಡಿದ್ದೇವೆ ಎಂದು ಹೇಳಿದ್ದಾರೆ.

Puttur Pigmy collector flees with 50 lakhs money case filed. Police are now investigating the case.