ಉಳ್ಳಾಲದಲ್ಲಿ ಅಪ್ಪ- ಮಕ್ಕಳ ಕಸಾಯಿಖಾನೆ ದಂಧೆ ; ತಲಪಾಡಿ ಟೋಲ್ ನಲ್ಲಿ ದನದ ಮಾಂಸ ಸಹಿತ ನಾಲ್ವರ ಬಂಧನ, ಕೇರಳದಿಂದ ಮಾಂಸ ತರುತ್ತಿದ್ದಾಗ ಸಿಸಿಬಿ ಬಲೆಗೆ 

03-02-22 02:18 pm       Mangalore Correspondent   ಕ್ರೈಂ

ಕೇರಳದಿಂದ ಉಳ್ಳಾಲಕ್ಕೆ ಕಾರಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ದನದ ಮಾಂಸ ಮತ್ತು ನಾಲ್ವರು ಆರೋಪಿಗಳನ್ನ ಮಂಗಳೂರು ಸಿಸಿಬಿ ಪೊಲೀಸರು ತಲಪಾಡಿ ಟೋಲ್ ಪ್ಲಾಝಾದಲ್ಲಿ ಬಂಧಿಸಿದ್ದಾರೆ. 

ಉಳ್ಳಾಲ, ಫೆ.3 : ಕೇರಳದಿಂದ ಉಳ್ಳಾಲಕ್ಕೆ ಕಾರಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ದನದ ಮಾಂಸ ಮತ್ತು ನಾಲ್ವರು ಆರೋಪಿಗಳನ್ನ ಮಂಗಳೂರು ಸಿಸಿಬಿ ಪೊಲೀಸರು ತಲಪಾಡಿ ಟೋಲ್ ಪ್ಲಾಝಾದಲ್ಲಿ ಬಂಧಿಸಿದ್ದಾರೆ. 

ಇಂದು ಮುಂಜಾನೆ ತಲಪಾಡಿ ಟೋಲ್ ಪ್ಲಾಝಾದಲ್ಲಿ ಸಿಸಿಬಿ ಪೊಲೀಸರು ಇಕೋ ಕಾರಲ್ಲಿ ಕೇರಳದಿಂದ ಉಳ್ಳಾಲ ಕೋಡಿಗೆ ಸಾಗಣೆ ಮಾಡುತ್ತಿದ್ದ 160 ಕೆ.ಜಿ ದನದ ಮಾಂಸವನ್ನ ವಶಪಡಿಸಿದ್ದು ನಾಲ್ವರು ಆರೋಪಿಗಳನ್ನ ಬಂಧಿಸಿದ್ದಾರೆ. ಉಳ್ಳಾಲ ಕೋಟೆಪುರ, ಕೋಡಿ ನಿವಾಸಿಗಳಾದ ಶೋಯೆಬ್ ಅಕ್ತರ್(22), ಮಹಮ್ಮದ್ ಮುಝಮ್ಮಿಲ್(25), ಅಮೀನ್ (21) ಮತ್ತು ಚೆಂಬುಗುಡ್ಡೆಯ ಹುಸೇನ್(24) ಬಂಧಿತರಾಗಿದ್ದು ಸಿಸಿಬಿಯವರು ಉಳ್ಳಾಲ ಪೊಲೀಸರ ವಶಕ್ಕೆ ನೀಡಿದ್ದಾರೆ. 

ಕಾಸರಗೋಡು ಜಿಲ್ಲೆಯ ಬಂದ್ಯೋಡಿನ ಮೊಹಮ್ಮದ್ ಎಂಬವರಿಂದ ದನ ಖರೀದಿಸಿ, ಅವರ ಮನೆಯಲ್ಲೇ ಮಾಂಸ ಮಾಡಿ ಉಳ್ಳಾಲಕ್ಕೆ ತಂದು ಯುಸಿ ಇಬ್ರಾಹಿಂ ಕೋಡಿ ಎಂಬವರ ಕೋಡಿ ಮತ್ತು ಮುಕ್ಕಚ್ಚೇರಿಯಲ್ಲಿರುವ ಬೀಫ್ ಸ್ಟಾಲ್ ನಲ್ಲಿ ಮಾರಾಟ ಮಾಡುತ್ತಿದ್ದರು. ‌ಈಕೋ ಕಾರಿನಲ್ಲಿ ದನದ ಮಾಂಸ, ಮೂರು ತಲೆಗಳು, ದನದ ಚರ್ಮ ಪತ್ತೆಯಾಗಿದೆ. ‌

ಉಳ್ಳಾಲ ಕೋಡಿಯ ಅಪ್ಪ ಮತ್ತು ಮಕ್ಕಳು(ಇಬ್ಬರು ಗಂಡು ಮಕ್ಕಳು) ಉಪ್ಪಿನಂಗಡಿ, ಮೂಡಬಿದ್ರೆ, ಕೇರಳದಿಂದ ನಿತ್ಯವೂ ಅಕ್ರಮವಾಗಿ ಗೋವುಗಳು ಮತ್ತು ದನದ ಮಾಂಸವನ್ನ ಕೋಡಿ ಪ್ರದೇಶಕ್ಕೆ ತರಿಸಿ ಅಕ್ರಮ ಕಸಾಯಿ ಖಾನೆ ನಡೆಸುತ್ತಿದ್ದಾರೆ. ಉಳ್ಳಾಲ ಪೊಲೀಸರು ಇದನ್ನು ಕಂಡರೂ ಕಾಣದಂತೆ ವರ್ತಿಸುತ್ತಿದ್ದಾರೆಂದು ಕೋಡಿ ಪ್ರದೇಶದ ಸ್ಥಳೀಯರೇ ಹೆಡ್ ಲೈನ್ ಕರ್ನಾಟಕಕ್ಕೆ ತಿಳಿಸಿದ್ದಾರೆ.

Mangalore 160 Kilos of beef meat seized at Talapady toll gate by CCB police. The arrested are identified as Shoab Akthar, Muzamil and Ameen.